ಭಾನುವಾರ, ಮಾರ್ಚ್ 27, 2016

ನೀಲಕಂಠ ಕಾಳೇಶ್ವರ ದೇವಾಲಯ - ಕಾಳಗಿ

















ಶಾಸನಗಳಲ್ಲಿ ಕಾಳಗಿಯನ್ನು ’ಕಾಳುಗೆ’ ಎಂದು ಬರೆಯಲಾಗಿದೆ. ಕಲ್ಯಾಣಿ ಚಾಲುಕ್ಯ ಹಾಗೂ ಕಳಚೂರಿ ವಂಶದ ಆಳ್ವಿಕೆಯ ಕಾಲದಲ್ಲಿ ಸುತ್ತಮುತ್ತಲಿನ ಒಂದು ಸಾವಿರ ಹಳ್ಳಿಗಳಿಗೆ ಕಾಳಗಿ ರಾಜಧಾನಿಯಾಗಿತ್ತು. ಭಾರತದಲ್ಲಿರುವ ಹನ್ನೆರಡು ಜ್ಯೋತಿರ್ಲಿಂಗಗಳನ್ನು ಅವುಗಳಿರುವ ಮೂಲದಿಕ್ಕುಗಳಿಗೆ ಅನುಸಾರವಾಗಿಯೇ ಇಲ್ಲಿಯೂ ಪ್ರತಿಷ್ಠಾಪಿಸಲಾಗಿರುವುದರಿಂದ ಕಾಳಗಿಯನ್ನು ದಕ್ಷಿಣ ಕಾಶಿ ಎಂದೂ ಕರೆಯಲಾಗುತ್ತದೆ.


ಇಲ್ಲಿರುವ ನೀಲಕಂಠ ಕಾಳೇಶ್ವರ ದೇವಾಲಯವು ಬಹಳ ಪುರಾತನವಾದದ್ದು ಎಂದು ನಂಬಲಾಗಿದೆ. ಇತಿಹಾಸಕಾರರು ಈ ದೇವಾಲಯವು ೨ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ ಎನ್ನುತ್ತಾರೆ. ಇಸವಿ ೧೧೦೩ರ ಶಾಸನವೊಂದರಲ್ಲಿ ಈ ದೇವಾಲಯವನ್ನು ಸ್ವಯಂಭೂ ಕಾಳೇಶ್ವರ ಎಂದು ಸಂಬೋಧಿಸಲಾಗಿದೆ. ಇನ್ನೊಂದು ಶಾಸನದಲ್ಲಿ ಬಾಣವಂಶದ ದೊರೆ ಗೊಂಕರಸನ ತಂದೆ ವೀರ ಕಾಳರಸನು ಈ ದೇವಾಲಯಕ್ಕೆ ಭೂಮಿ ನೀಡಿದ್ದಾನೆ ಎಂದು ತಿಳಿಸಲಾಗಿದೆ. ಶಾಸನಗಳಿಂದ ತಿಳಿದುಬಂದಿರುವ ಇನ್ನೊಂದು ಮಾಹಿತಿಯೆಂದರೆ ಇಸವಿ ೧೦೯೩ರಲ್ಲಿ ಚಾಲುಕ್ಯ ದೊರೆ ತ್ರಿಭುವನಮಲ್ಲನು ಈ ದೇವಾಲಯಕ್ಕೆ ದಾನ ನೀಡಿರುವುದು.


ದೇವಾಲಯದ ಆವರಣದಲ್ಲಿ ಆಯತಾಕಾರದ ಪುಷ್ಕರಿಣಿಯಿದೆ. ಎಂದೂ ಬತ್ತದ ಗಂಗೆ ಎಂದು ಈ ಪುಷ್ಕರಿಣಿಯನ್ನು ಕರೆಯಲಾಗುತ್ತದೆ. ಇಲ್ಲಿ ಉದ್ಭವವಾಗುವ ನೀರು ನೆಲದಡಿಯಿಂದಲೇ ಹರಿದು ಸಮೀಪದಲ್ಲೇ ಹರಿಯುವ ರುದ್ರಹಳ್ಳಕ್ಕೆ ಸೇರುತ್ತದೆ. ಪುಷ್ಕರಿಣಿಯಿಂದ ಹೊರಹರಿಯುವ ನೀರು, ರುದ್ರಹಳ್ಳಕ್ಕೆ ಸೇರುವ ಸ್ವಲ್ಪ ಮೊದಲು ಶಿವಲಿಂಗವೊಂದನ್ನು ಹಾದುಹೋಗುತ್ತದೆ. ಸದಾ ನೀರಿನಲ್ಲೇ ಇರುವ ಈ ಶಿವಲಿಂಗ, ನಾನು ತೆರಳಿದ ಮುನ್ನಾ ದಿನ ಮಳೆಬಿದ್ದಿದ್ದರಿಂದ, ನೀರಿನ ಪ್ರಮಾಣ ಹೆಚ್ಚಾಗಿ, ನೀರಿನಲ್ಲಿ ಮುಳುಗಿತ್ತು ಮತ್ತು ಕಾಣುತ್ತಿರಲಿಲ್ಲ.


ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಹೊಂದಿರುವ ದೇವಾಲಯ ಕಾಲಕಾಲಕ್ಕೆ ನವೀಕರಣಗೊಂಡಿರುವುದರಿಂದ, ಆಧುನಿಕ ದೇವಾಲಯದಂತೆ ಕಾಣುತ್ತದೆ. ಮುಖಮಂಟಪದಲ್ಲಿ ಒತ್ತೊತ್ತಾಗಿ ಹಲವಾರು ಕಂಬಗಳಿವೆ. ನವರಂಗ, ಅಂತರಾಳ ಹಾಗೂ ಗರ್ಭಗುಡಿಗಳ ದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕರನ್ನು ಹಾಗೂ ಲಲಾಟದಲ್ಲಿ ಗಜಲಕ್ಷ್ಮೀಯನ್ನು ಕಾಣಬಹುದು. ಸಣ್ಣ ಉದ್ಭವ ಶಿವಲಿಂಗಕ್ಕೆ ದಿನಾಲೂ ಪೂಜೆ ನಡೆಯುತ್ತದೆ.


ನವರಂಗದಲ್ಲಿ ಚತುರ್ಮುಖ ಗಣೇಶನ ಅಪರೂಪದ ಮೂರ್ತಿಯಿದೆ. ಈ ಮೂರ್ತಿಗೊಂದು ಪ್ರಶಸ್ತ ಸ್ಥಾನ ನೀಡಿ ಪೂಜೆ ಸಲ್ಲಿಸಬಹುದು. ಆದರೆ ತೀರಾ ಸಣ್ಣದಿರುವ ನವರಂಗದ ಮೂಲೆಯಲ್ಲಿ ಈ ಮೂರ್ತಿಯಿದೆ. ಇಟ್ಟಿರುವ ಸ್ಥಳ ಎಷ್ಟು ಇಕ್ಕಟ್ಟಾಗಿದೆಯೆಂದರೆ ಈ ಚತುರ್ಮುಖ ಗಣೇಶನ ನಾಲ್ಕನೇ ಮುಖ ನೋಡುವುದು ಅಸಾಧ್ಯ! ನವರಂಗದ ಛಾವಣಿಯಲ್ಲಿ ಸುಂದರ ಕೆತ್ತನೆಯೊಂದಿದೆ.


ಈ ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮೇಲೆ ಹಾಕಿರುವ (ಪ್ರಜಾವಾಣಿಯಲ್ಲಿ ಈ ದೇವಾಲಯದ ಬಗ್ಗೆ ಬಂದ ಲೇಖನದ ತುಣುಕು) ಲೇಖನವನ್ನು ಓದಿ ತಿಳಿದುಕೊಳ್ಳಬಹುದು.


ದೇವಾಲಯಕ್ಕೆ ತಾಗಿಕೊಂಡೇ ಹರಿಯುವ ರುದ್ರಹಳ್ಳವನ್ನು ದಿಟ್ಟಿಸುತ್ತ ಕುಳಿತಿರುವಂತೆ ಗಣೇಶನ ಮತ್ತು ಬಸವನ ಮೂರ್ತಿಗಳಿವೆ. ಗಣೇಶನಿಗೆ ತಾಗಿಕೊಂಡೇ ನಾಗನ ಕಲ್ಲೊಂದು ಅಡ್ಡ ಮಲಗಿದೆ. ಹಳ್ಳಿಗರ ಅಸಡ್ಡೆ ಅದೆಷ್ಟರ ಮಟ್ಟಿಗೆ ಇದೆಯೆಂದರೆ ಈ ಮೂರ್ತಿಗಳಿಗೆ ಯಾವ ಗೌರವನೇ ಇಲ್ಲ! ಅನತಿ ದೂರದಲ್ಲಿ ಹಸ್ತಿಯ (ಹಾಗೆಂದು ನಾನು ತಿಳಿದುಕೊಂಡಿದ್ದೇನೆ) ಮೂರ್ತಿಯೊಂದು ಗಣೇಶ ಮತ್ತು ಬಸವನಂತೆ ರುದ್ರಹಳ್ಳದತ್ತ ದಿಟ್ಟಿಸಿ ನೋಡುತ್ತಿತ್ತು. ಇನ್ನೂ ಸ್ವಲ್ಪ ದೂರದಲ್ಲಿ ಚನ್ನಕೇಶವನ ಭಗ್ನ ಮೂರ್ತಿಯೊಂದು ಮಣ್ಣಿನಲ್ಲಿ ಅರ್ಧ ಹೂತುಹೋಗಿದ್ದು, ಅದೆಲ್ಲೋ ದಿಟ್ಟಿಸುವಂತೆ ತೋರುತ್ತಿತ್ತು.


ರುದ್ರಹಳ್ಳದ ಇನ್ನೊಂದು ದಡದಲ್ಲಿ ೪೦ ಗುಣಿಸು ೪೦ ಅಳತೆಯುಳ್ಳ ಚೌಕಾಕಾರದ ಪುಷ್ಕರಿಣಿಯಿದೆ. ಈ ಪುಷ್ಕರಿಣಿಯನ್ನು ಲಕ್ಷ್ಮೀನರಸಿಂಹ ತೀರ್ಥ ಎಂದು ಕರೆಯುತ್ತಾರೆ. ಈ ಲಕ್ಷ್ಮೀನರಸಿಂಹ ತೀರ್ಥದ ನಟ್ಟನಡುವೆ ನಾಲ್ಕು ದಿಕ್ಕುಗಳಿಂದ ಪ್ರವೇಶದ್ವಾರಗಳುಳ್ಳ ಸಣ್ಣ ದೇವಾಲಯವಿದೆ. ಒಳಗಡೆ ಪೀಠ ಬಿಟ್ಟರೆ ಈ ಪಾಳು ದೇವಾಲಯದಲ್ಲಿ ಯಾವುದೇ ಮೂರ್ತಿಯಿಲ್ಲ.


ಈ ಪುಷ್ಕರಿಣಿಯ ನೀರು ಶುದ್ಧವಾಗಿದ್ದು, ತಿಳಿ ನೀಲಿ ಬಣ್ಣವನ್ನು ಹೊಂದಿದೆ. ಆದರೂ ನೀರಿನಲ್ಲಿ ತೇಲುತ್ತಿರುವ ಪಾಚಿಯನ್ನು ತೆಗೆದು ಸ್ವಚ್ಛಗೊಳಿಸಿದರೆ ಪುಷ್ಕರಿಣಿ ಇನ್ನಷ್ಟು ಆಕರ್ಷಕವಾಗಿ ಕಾಣುವುದು.

ಭಾನುವಾರ, ಮಾರ್ಚ್ 20, 2016

ನರಸಿಂಹ ದೇವಾಲಯ ಮತ್ತು ಸೂರ್ಯನಾರಾಯಣ ದೇವಾಲಯ - ಮಾಗಳ


ಮಾಗಳ. ತುಂಗಭದ್ರಾ ನದಿಯ ತಟದಲ್ಲಿರುವ ಪ್ರಶಾಂತ ಸುಂದರ ಹಳ್ಳಿ. ಇಲ್ಲಿರುವ ನರಸಿಂಹ ಮತ್ತು ಸೂರ್ಯನಾರಾಯಣ ದೇವಾಲಯಗಳು ಭೇಟಿಗೆ ಯೋಗ್ಯವಾದಂತವು. ಸೂರ್ಯನಾರಾಯಣ ದೇಗುಲ ಊರ ನಡುವೆ ಇದ್ದರೆ, ನರಸಿಂಹ ದೇವಾಲಯ ಊರ ಹೊರಗೆ, ತುಂಗಭದ್ರಾ ನದಿಯ ತಟದಲ್ಲಿದೆ.



ಮೊದಲು ನದಿತಟದಲ್ಲಿರುವ ನರಸಿಂಹನ ದರ್ಶನ ಪಡೆದು ಬರೋಣವೆಂದು ತೆರಳಿದೆವು. ಮಾಗಳದ ಹೊರವಲಯದಲ್ಲಿರುವ ನರಸಿಂಹ ದೇಗುಲ ತಲುಪಬೇಕಾದರೆ ಗದ್ದೆಗಳ ನಡುವಿರುವ ರಸ್ತೆಯಲ್ಲಿ ೨ ಕಿಮಿ ದೂರ ಕ್ರಮಿಸಬೇಕು. ರಸ್ತೆಯ ಇಕ್ಕೆಲಗಳಲ್ಲಿ ನೂರಾರು ಪಕ್ಷಿಗಳ ಸಂತೆ. ಗದ್ದೆಗಳ ಏರಿಯ ಮೇಲೆ ಸಾಲಿನಲ್ಲಿ ಕುಳಿತಿದ್ದವು. ಗದ್ದೆಗಳ ಆಚೆಗೆ ಸಣ್ಣ ದಿಬ್ಬವೊಂದರ ಮೇಲೆ ಸ್ಥಿತವಾಗಿರುವ ದೇವಾಲಯದ ನೋಟ ಸುಂದರ.


ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನೊಳಗೊಂಡಿರುವ ದೇವಾಲಯ ಶಿಥಿಲಗೊಳ್ಳುತ್ತಿದೆ. ದೇವಸ್ಥಾನಕ್ಕೆ ತಾಗಿಕೊಂಡೇ ಇರುವ ಕಟ್ಟಡವೊಂದು ಸಂಪೂರ್ಣವಾಗಿ ಕುಸಿದಿದೆ. ಅದೇನೆಂದು ತಿಳಿಯಲಿಲ್ಲ. ಪುರಾತತ್ವ ಇಲಾಖೆ ಸ್ವಲ್ಪ ಮಟ್ಟಿಗೆ ದೇವಾಲಯವನ್ನು ಕಾಪಾಡಿಕೊಂಡಿದೆ. ದೇವಸ್ಥಾನದಲ್ಲಿ ಅಂತಹ ವಿಶೇಷವೇನಿಲ್ಲ. ತುಂಗಭದ್ರೆಯ ಪ್ರಶಾಂತ ಹರಿವನ್ನು ಆನಂದಿಸಬೇಕಾದಲ್ಲಿ ಇಲ್ಲಿಗೆ ಭೇಟಿ ನೀಡಬೇಕು.


ಗರ್ಭಗುಡಿಯಲ್ಲಿ ನರಸಿಂಹನು ಹಿರಣ್ಯಕಷಿಪುವಿನ ವಧೆ ಮಾಡುವ ಮೂರ್ತಿಯಿದೆ. ತ್ರಿಶಾಖಾ ದ್ವಾರದ ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ. ಅಂತರಾಳದ ದ್ವಾರವೂ ತ್ರಿಶಾಖಾ ಶೈಲಿಯದ್ದಾಗಿದ್ದು ಇಲ್ಲೂ ಲಲಾಟದಲ್ಲಿ ಗಜಲಕ್ಷ್ಮೀಯನ್ನು ಕಾಣಬಹುದು.


ದೇವಾಲಯದ ನವರಂಗದಲ್ಲಿ ಗಣೇಶನ ಮತ್ತು ಶಿವನ ಮೂರ್ತಿಯನ್ನು ಕಾಣಬಹುದು. ದೇವಾಲಯದ ದ್ವಾರವು ತ್ರಿಶಾಖಾ ಶೈಲಿಯದ್ದಾಗಿದ್ದು, ಇಕ್ಕೆಲಗಳಲ್ಲಿ ಜಾಲಂಧ್ರಗಳನ್ನು ಹಾಗೂ ಲಲಾಟದಲ್ಲಿ ಗಜಲಕ್ಷ್ಮೀಯನ್ನು ಹೊಂದಿದೆ.


ಕಲ್ಯಾಣಿ ಚಾಲುಕ್ಯರಿಂದ ನಿರ್ಮಿತಗೊಂಡಿರುವ ಈ ದೇವಾಲಯದ ಮುಂದೆ ಪ್ರವೇಶ ಗೋಪುರದಂತಹ ರಚನೆ. ಈ ತರಹದ ರಚನೆ ಬಹಳ ವಿರಳ.

 

ಬಹುಶ: ಆಗಿನ ಕಾಲದಲ್ಲಿ ತುಂಗಭದ್ರೆಯ ಹರಿವು ಈ ಪ್ರವೇಶ ಗೋಪುರದವರೆಗೆ ವ್ಯಾಪಿಸಿದ್ದು, ನದಿ ತಟದಿಂದ ದೇವಾಲಯವನ್ನು ಪ್ರವೇಶಿಸಲು ಈ ಗೋಪುರವನ್ನು ರಚಿಸಿರಬಹುದು.

 

ಈಗ ತುಂಗಭದ್ರೆ ಸುಮಾರು ೫೦ ಮೀಟರುಗಳಷ್ಟು ದೂರದಲ್ಲಿ ಹರಿಯುತ್ತಿದ್ದಾಳೆ. ಆದರೂ ಮಳೆಗಾಲದಲ್ಲಿ ದೇವಾಲಯದ ಸಮೀಪದವರೆಗೂ ನದಿಯ ಹರಿವು ವ್ಯಾಪಿಸುವಂತೆ ತೋರುತ್ತದೆ.



ಮಾಗಳ ಹಳ್ಳಿಯ ನಟ್ಟನಡುವೆ ಸೂರ್ಯನಾರಾಯಣನ ಸನ್ನಿಧಿ ಇದೆ. ಪುರಾತತ್ವ ಇಲಾಖೆಯ ಸಿಬ್ಬಂದಿ ರಜೆಯಲ್ಲಿದ್ದರಿಂದ ಪ್ರಾಂಗಣ ಮತ್ತು ದೇವಾಲಯಕ್ಕೆ ಬೀಗ ಜಡಿದಿತ್ತು. ಪ್ರಾಂಗಣದ ಗೋಡೆ ಹಾರಿ ಒಳಗೆ ತೆರಳಿದೆ. ಆದರೆ ದೇವಾಲಯವನ್ನು ಹೊರಗಿನಿಂದ ನೋಡಿಯೇ ತೃಪ್ತಿಪಡಬೇಕಾಯಿತು. ಆದರೂ ಬೇರೆ ಯಾವ ದೇವಾಲಯದಲ್ಲೂ ನಾನು ಕಾಣದ ’ಕಿಂಡಿ ರಚನೆ’ ಇಲ್ಲಿದ್ದ ಕಾರಣ, ಈ ಕಿಂಡಿಗಳ ಮೂಲಕ ದೇವಾಲಯದ ಒಳಗೆ ಇಣುಕಿ ನವರಂಗವನ್ನು ನೋಡಲು ಸಾಧ್ಯವಾಯಿತು.



ಇದೊಂದು ಗೋಪುರರಹಿತ ತ್ರಿಕೂಟಾಚಲ ದೇವಸ್ಥಾನ. ಮೊದಲಿದ್ದ ಗೋಪುರ ಈಗ ಕುಸಿದಿದೆಯೋ ಅಥವಾ ಮೊದಲಿನಿಂದಲೂ ಇರಲಿಲ್ಲವೋ ಎಂದು ಸ್ಪಷ್ಟವಾಗಿ ಹೇಳಲು ಅಸಾಧ್ಯ. ದೇವಸ್ಥಾನದ ಪ್ರಮುಖ ಬಾಗಿಲಿನ ಇಕ್ಕೆಲಗಳಲ್ಲಿ ವಿಶಿಷ್ಟ ರೀತಿಯ ಜಾಲಂಧ್ರಗಳ ರಚನೆ. ಒಟ್ಟಾರೆ ಭರ್ತಿ ೯೦ ಸಣ್ಣ ಸಣ್ಣ ಜಾಲಂಧ್ರಗಳು. ಆದರೆ ಪ್ರಮುಖ ಗರ್ಭಗುಡಿಯ ಬಾಗಿಲನ್ನೂ ಹಾಕಿದ್ದರಿಂದ ನವರಂಗದಿಂದ ಮುಂದೆ ನೋಡಲು ಸಾಧ್ಯವಾಗಲಿಲ್ಲ.



ದೇವಸ್ಥಾನ ಪ್ರವೇಶಿಸಿದೊಡನೆ ಎರಡೂ ಬದಿಗಳಲ್ಲಿ ಆಸೀನರಾಗಲು ಜಗುಲಿಯ ರಚನೆಯಿದೆ. ಈ ಜಗುಲಿಯ ಮೇಲೆ ಕಲಾತ್ಮಕ ಕೆತ್ತನೆಯಿರುವ ೪ ಕಂಬಗಳಿವೆ. ಈ ದೇವಾಲಯದ ಭುವನೇಶ್ವರಿಯಲ್ಲಿರುವ ಕೆತ್ತನೆಗಳು ಉತ್ಕೃಷ್ಟವಾಗಿದ್ದು ಜಿಲ್ಲೆಯ ಇತರ ದೇವಾಲಯಗಳಿಗಿಂತ ಶ್ರೇಷ್ಠವಾದದ್ದು ಎಂದು ಓದಿದ್ದೆ. ಆದರೆ ದೇವಾಲಯಕ್ಕೆ ಬೀಗ ಜಡಿದಿದ್ದರಿಂದ ಈ ಕೆತ್ತನೆಗಳನ್ನು ನೋಡಲು ಸಾಧ್ಯವಾಗಲಿಲ್ಲ. 



ನವರಂಗದಿಂದ ೩ ಗರ್ಭಗುಡಿಗಳಿಗೆ ಬಾಗಿಲುಗಳು ತೆರೆದುಕೊಳ್ಳುತ್ತವೆ. ಪ್ರತಿ ಗರ್ಭಗುಡಿಗೂ ಅಂತರಾಳ ಇದ್ದಂತೆ ತೋರುತ್ತಿತ್ತು.

 

ದೇವಾಲಯಕ್ಕೆ ಸುತ್ತು ಹಾಕಿದರೆ, ಅಲ್ಲಲ್ಲಿ ಕಾಲನ ದಾಳಿಗೆ ದೇವಾಲಯ ನಲುಗುತ್ತಿರುವ ಚಿಹ್ನೆಗಳನ್ನು ಕಾಣಬಹುದು. ಆದರೂ ಪುರಾತತ್ವ ಇಲಾಖೆ ದೇವಾಲಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಉತ್ತಮ ಕೆಲಸವನ್ನೇ ಮಾಡುತ್ತಿದೆ. ಮಾಗಳದಲ್ಲಿ ಇಂತಹ ವಿಶಿಷ್ಟ ವಿನ್ಯಾಸದ ದೇವಾಲಯವನ್ನು ನಾನು ನಿರೀಕ್ಷಿಸಿರಲಿಲ್ಲ.

ಸೋಮವಾರ, ಮಾರ್ಚ್ 14, 2016

ಚಾರಣ ಚಿತ್ರ - ೩೬



ಸೌಂದರ್ಯದ ಕಂಪು - ಬೇಸಿಗೆಯಲ್ಲಿ ಇಷ್ಟೇ ಸಿಕ್ಕರೆ ಸಾಕಲ್ಲವೆ?

ಸೋಮವಾರ, ಮಾರ್ಚ್ 07, 2016

ನೀಲಕಂಠೇಶ್ವರ ದೇವಾಲಯ - ಲಕ್ಕುಂಡಿ

 

ನೀಲಕಂಠೇಶ್ವರ ದೇವಾಲಯವು ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನು ಹೊಂದಿದೆ. ಶಿಥಿಲಾವಸ್ಥೆಯನ್ನು ತಲುಪಿರುವ ದೇವಾಲಯವಿದು. ನವರಂಗದ ಹೊರಗೋಡೆಗಳು ಕಣ್ಮರೆಯಾಗಿದ್ದು, ಮೂರೂ ದಿಕ್ಕುಗಳಿಂದಲೂ ನವರಂಗಕ್ಕೆ ಮುಕ್ತ ಪ್ರವೇಶ.

 

ಗರ್ಭಗುಡಿಯ ದ್ವಾರವು ಪಂಚಶಾಖೆಗಳನ್ನು ಹೊಂದಿದ್ದು, ಲಲಾಟದಲ್ಲಿ ಅದೇನೋ ವಿಶಿಷ್ಟ ಮತ್ತು ಅಪರೂಪದ ಕೆತ್ತನೆಯಿದೆ. ದ್ವಾರಕ್ಕೆ ಕೆಂಪು ಬಣ್ಣ ಬಳಿಯಲಾಗಿದ್ದರಿಂದ ಈ ಕೆತ್ತನೆ ಅದೇನೆಂದು ತಿಳಿದುಕೊಳ್ಳಲಾಗಲಿಲ್ಲ.


ಗರ್ಭಗುಡಿಯಲ್ಲಿ ಎತ್ತರದ ಪಾಣಿಪೀಠದ ಮೇಲೆ ಉದ್ದನೆಯ ಶಿವಲಿಂಗವಿದೆ. ಗರ್ಭಗುಡಿಯಲ್ಲೇ ನಂದಿಯ ಸಣ್ಣ ಮೂರ್ತಿಯಿದೆ.



 
ದೇವಾಲಯದ ಹೊರಗೋಡೆಗಳ ಕಲ್ಲಿನ ಕವಚ ಕಣ್ಮರೆಯಾಗುತ್ತಿವೆ. ಹೊರಗೋಡೆಯಲ್ಲಿ ದೊಡ್ಡ ಗೋಪುರವಿರುವ ಮಂಟಪಗಳನ್ನು ಹಾಗೂ ಕಿರುಗೋಪುರವಿರುವ ಸ್ತಂಭಗಳನ್ನು ಕಾಣಬಹುದು.



 
ಈ ದೇವಾಲಯ ಪ್ರಸಿದ್ಧಿ ಪಡೆಯಲು ಇನ್ನೊಂದು ಕಾರಣವಿದೆ. ಮುಂಗಾರು ಮಳೆ ಚಲನಚಿತ್ರದ ಹಾಡೊಂದರಲ್ಲಿ ಈ ದೇವಾಲಯದ ಹೊರಗೋಡೆ ಮತ್ತು ನವರಂಗದ ಕಂಬಗಳು ೨೧ ಸೆಕೆಂಡುಗಳ ಕಾಲ (೩:೨೧ರಿಂದ) ಮಿಂಚಿ ಕಣ್ಮರೆಯಾಗುತ್ತವೆ!