ಭಾನುವಾರ, ಜುಲೈ 13, 2014

ಜೋಶಿ ಶಂಕರ ದೇವಾಲಯ ಹಾಗೂ ಅಡಿಕೆ ನಾರಾಯಣ ದೇವಾಲಯ - ಭಟ್ಕಳ


ಭಟ್ಕಳದಲ್ಲಿನ ಹೆಚ್ಚಿನ ದೇವಾಲಯಗಳನ್ನು ಸರಿಸುಮಾರು ೨೫ ವರ್ಷಗಳ (ಇಸವಿ ೧೫೪೨-೧೫೬೭) ಅಂತರದೊಳಗೆ ನಿರ್ಮಿಸಲ್ಪಟ್ಟಂಥವು. ಇವುಗಳನ್ನು ನಿರ್ಮಿಸಿದವರು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಜನರು. ಗೋವಾದಲ್ಲಿ ಪೋರ್ಚುಗೀಸರ ಹಾವಳಿ ಅತಿಯಾದಾಗ ಅಲ್ಲಿಂದ ಕರ್ನಾಟಕದ ಕರಾವಳಿ ಭಾಗಕ್ಕೆ ವಲಸೆ ಬಂದು ನೆಲೆಸಿದ ಸಮುದಾಯಗಳಲ್ಲಿ ಈ ಸಮುದಾಯವೂ ಒಂದು.

ಜೋಶಿ ಶಂಕರನಾರಾಯಣ ದೇವಾಲಯ


ಈ ದೇವಾಲಯವನ್ನು ’ಜೋಶಿ’ ಎನ್ನುವವರು ಇಸವಿ ೧೫೫೪ರಲ್ಲಿ ನಿರ್ಮಿಸಿದರು. ನಂದಿಮಂಟಪ ಮತ್ತು ಅಂತರಾಳ ಹಾಗೂ ಗರ್ಭಗುಡಿ ಮಾತ್ರ ಹೊಂದಿರುವ ಅತಿ ಸಣ್ಣ ದೇವಾಲಯವಿದು.


ನಂದಿಮಂಟಪ ಮತ್ತು ದೇವಾಲಯದ ಆಕಾರ ಮತ್ತು ಗಾತ್ರ ಒಂದೇ ರೀತಿಯಿದ್ದು, ನಂದಿಮಂಟಪ ತೆರೆದ ರಚನೆಯಾಗಿದ್ದರೆ. ದೇವಾಲಯದ ಸುತ್ತಲೂ ಹೊರಗೋಡೆಯಿದೆ.


ನಂದಿಮಂಟಪದಲ್ಲಿರಬೇಕಾಗಿದ್ದ ನಂದಿ ಕಣ್ಮರೆಯಾಗಿದೆ! ಗರ್ಭಗುಡಿಯಲ್ಲಿ ಶಂಕರನಾರಾಯಣನ ಸಣ್ಣ ಮೂರ್ತಿಯಿದೆ. ಇಲ್ಲಿ ದಿನಾಲೂ ಪೂಜೆ ಸಲ್ಲಿಸಲಾಗುತ್ತದೆ.

ಅಡಿಕೆ ನಾರಾಯಣ ದೇವಾಲಯ

 
ಅಡಿಕೆ ವ್ಯಾಪಾರಿಗಳು ನೀಡಿದ ದೇಣಿಗೆಯಿಂದ ನಿರ್ಮಿಸಲಾಗಿರುವುದರಿಂದ ಈ ದೇವಾಲಯವನ್ನು ಅಡಿಕೆ ನಾರಾಯಣ ದೇವಾಲಯವೆಂದು ಕರೆಯಲಾಗುತ್ತದೆ. ಇಸವಿ ೧೫೫೦ರಲ್ಲಿ ನಿರ್ಮಿಸಲಾಗಿರುವ ದೇವಾಲಯವು ಮುಖಮಂಟಪ, ನವರಂಗ ಮತ್ತು ಗರ್ಭಗುಡಿಯನ್ನು ಹೊಂದಿದೆ.


ದೇವಾಲಯದ ಮುಂಭಾಗದಲ್ಲಿ ದೀಪಸ್ತಂಭವಿದೆ. ದೇವಾಲಯದ ಹೊರಗೋಡೆಯ ಸುತ್ತಲೂ ಎರಡು ಅಡಿ ಅಂತರದಲ್ಲಿ ರಕ್ಷಾಕವಚದಂತೆ ಕಲ್ಲಿನ ಗೋಡೆಯಿದ್ದು, ಈಗ ಕೇವಲ ಒಂದು ಪಾರ್ಶ್ವದಲ್ಲಿ ಮಾತ್ರ ಉಳಿದುಕೊಂಡಿದೆ. ಮುಖಮಂಟಪದ ಮೆಟ್ಟಿಲುಗಳ ಬಳಿ ದ್ವಾರಪಾಲಕರನ್ನು ಕಾಣಬಹುದು.


ಗರ್ಭಗುಡಿಯ ಛಾವಣಿಯಲ್ಲಿ ಕಮಲದ ಕೆತ್ತನೆಯನ್ನೂ ಹಾಗೂ ದ್ವಾರದಲ್ಲಿ ಅಲಂಕಾರಿಕಾ ಕೆತ್ತನೆಗಳನ್ನೂ ಕಾಣಬಹುದು. ಮುಖಮಂಟಪದ ಛಾವಣಿಯಲ್ಲಿ ಅಷ್ಟದಿಕ್ಪಾಲಕರಿಂದ ಸುತ್ತುವರಿದ ಕಮಲದ ಕೆತ್ತನೆಯಿದೆ.


ಮುಖಮಂಟಪದಲ್ಲಿರುವ ನಾಲ್ಕು ಕಂಬಗಳ ಪೈಕಿ ಎರಡರಲ್ಲಿ ಹಲವಾರು ಕೆತ್ತನೆಗಳನ್ನು ಕಾಣಬಹುದು.
 

ದೇವಾಲಯದಲ್ಲಿ ನಿತ್ಯ ಪೂಜೆ ಮಾಡುವವರು ಸಮೀಪದ ಮನೆಯವರು. ಇಲ್ಲಿನ ಎಲ್ಲಾ ದೇವಾಲಯಗಳನ್ನು, ದೇವಾಲಯವಿರುವ ಪ್ರಾಂಗಣದಲ್ಲಿರುವ ಮನೆಯವರೇ ನೋಡಿಕೊಳ್ಳುತ್ತಾರೆ. ದೇವಾಲಯದ ನಿರ್ಮಾಣದ ಸಮಯದಿಂದಲೂ ಈ ಮನೆಗಳ ಪೂರ್ವಜರು ಪೂಜೆ ಸಲ್ಲಿಸುತ್ತ ಬಂದ ಸಂಪ್ರದಾಯ ಇಂದಿಗೂ ಹಾಗೇ ಮುಂದುವರಿದಿದೆ.

2 ಕಾಮೆಂಟ್‌ಗಳು:

Teamgsquare ಹೇಳಿದರು...

Beautiful temples, the Joshi Shankaranayana temple has now been restored just visited a week back.

ರಾಜೇಶ್ ನಾಯ್ಕ ಹೇಳಿದರು...

ಧೀರಜ್ಆಮೃತಾ,
ಮಾಹಿತಿಗಾಗಿ ಧನ್ಯವಾದ.