ಭಾನುವಾರ, ಜುಲೈ 27, 2014

ಬೆಟ್ಟಗಳ ನಡುವೆ ಕಡಲತೀರ


ಬೆಟ್ಟದ ಅಂಚಿನಿಂದ ಕಾಣುವ ಈ ಕಡಲತೀರದ ಮೇಲಿನ ಚಿತ್ರದಲ್ಲಿರುವ ದೃಶ್ಯವನ್ನು ಸವಿಯಲು ಕಳೆದ ಸುಮಾರು ೨೫ ವರ್ಷಗಳಲ್ಲಿ ಅದೆಷ್ಟೋ ಸಲ ಇಲ್ಲಿಗೆ ಬಂದು ತೆರಳಿದ್ದು ಇದೆ. ಆದರೆ ಒಂದೇ ಒಂದು ಸಾರಿ ಕೆಳಗಿಳಿದು ಕಡಲತೀರಕ್ಕೆ ತೆರಳುವ ಪ್ರಯತ್ನ ದೂರವಿರಲಿ, ಆ ಯೋಚನೆಯನ್ನೂ ಮಾಡಿದ್ದಿರಲಿಲ್ಲ.


ಈ ಬಾರಿ ಬೆಟ್ಟವಿಳಿದು ತೀರಕ್ಕೇ ತೆರಳಬೇಕೆಂಬ ಇರಾದೆಯಿಂದ ಮತ್ತೊಮ್ಮೆ ಈ ಕಡಲತೀರದತ್ತ ತೆರಳಿದೆ. ಬೆಟ್ಟದ ತುದಿಯಿಂದ ಬಹಳ ದೂರವಿದ್ದಂತೆ ತೋರಿದರೂ, ಕೇವಲ ಐದಾರು ನಿಮಿಷಗಳಲ್ಲಿ ನಾವು ಕೆಳಗಿಳಿದಾಗಿತ್ತು.


ಕಡಲೊಳಗೆ ನುಗ್ಗಿರುವ ಎರಡು ಬೆಟ್ಟಗಳ ನಡುವೆ ಅಡಗಿರುವ ಸುಂದರ ಸ್ಥಳವಿದು. ಕೇವಲ ೮೦೦ ಮೀಟರ್ ಉದ್ದವಿರುವ ಈ ಕಡಲತೀರದ ಬಗ್ಗೆ ಹೆಚ್ಚಿನವರಿಗೆ ಮಾಹಿತಿಯಿಲ್ಲ.


ಈ ಭಾಗದಲ್ಲಿ ’ಬೀಚ್ ಟ್ರೆಕ್’ ಮಾಡಿದವರು, ಈ ಕಡಲತೀರವನ್ನು ದಾಟಿಹೋಗುವ ಸಾಧ್ಯತೆಯಿದೆಯೇ ವಿನ:, ಬೇರೆ ಯಾರೂ ಇಲ್ಲಿಗೆ ಬರುವ ಚಾನ್ಸ್ ಇಲ್ಲ. ಸ್ಥಳೀಯರು ಕೂಡಾ ಬೆಟ್ಟದ ಅಂಚಿನಿಂದ ಕಾಣುವ ದೃಶ್ಯವನ್ನು ಆನಂದಿಸುತ್ತಾರೆಯೇ ಹೊರತು, ಕೆಳಗಿಳಿದು ಕಡಲತೀರಕ್ಕೆ ಹೋಗುವುದಿಲ್ಲ.


ಶುಭ್ರವಾಗಿದ್ದ ತೀರದ ಒಂದು ತುದಿಯಿಂದ ಇನ್ನೊಂದು ತುದಿಗೆ ವಾಕ್ ಮಾಡಿದೆವು. ಈ ಕಡಲತೀರದ ಆಕರ್ಷಣೆಯೇ ಎರಡು ತುದಿಗಳಲ್ಲಿರುವ ಸಣ್ಣ ಬೆಟ್ಟಗಳು. ಪ್ರಕೃತಿಯೇ ಎರಡು ಕಡೆ ಗೋಡೆ ರಚಿಸಿ, ನಡುವೆ ಈ ಕಡಲತೀರವನ್ನು ಬಂಧಿಸಿದೆ. ಒಂದು ಪಾರ್ಶ್ವದಲ್ಲಿರುವ ಬೆಟ್ಟವನ್ನು ಕಲ್ಲಿಗಾಗಿ ಕೊರೆಯಲಾಗುತ್ತಿದ್ದು, ಸುಮಾರಾಗಿ ನಾಶಮಾಡಲಾಗಿದೆ. ಇಲ್ಲಿನ ಸೌಂದರ್ಯಕ್ಕೆ ಇದೊಂದು ಕಪ್ಪುಚುಕ್ಕೆ. 


ಬೆಟ್ಟದ ಆ ಕಡೆ ಇರುವ ಬೀಚ್ ಸುಮಾರಾಗಿ ಪ್ರಸಿದ್ಧಿ ಪಡೆದಿದ್ದು, ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಇಲ್ಲಿ, ಪ್ರವಾಸಿಗರ ಹಾವಳಿಯಿಲ್ಲ. ಪ್ರವಾಸಿಗರಿಲ್ಲವೆಂದ ಬಳಿಕ, ಕಸಗಳಿಲ್ಲ, ಗೌಜಿಯಿಲ್ಲ, ಗಲಾಟೆಯಿಲ್ಲ. ಕೇವಲ ನಾವು ಮತ್ತು ಕಡಲಿನಲೆಗಳ ಸದ್ದು ಮಾತ್ರ.

ಭಾನುವಾರ, ಜುಲೈ 20, 2014

ನೆನಪು


ಕಲಕೇರಿಯಲ್ಲಿರುವ ದೇವಾಲಯಗಳಿಗೆ ಭೇಟಿ ನೀಡಲು ೨೦೧೧ರಲ್ಲಿ ತೆರಳಿದಾಗ ಶಿವನಂದಪ್ಪ ಕಮ್ಮಾರರ ಪರಿಚಯವಾಗಿತ್ತು. ಅಂದು ಅಲೆದಾಡಿ, ತಿರುಗಾಡಿ ಹಸಿದು ಹೈರಾಣಾಗಿದ್ದ ನನಗೆ ಹಾಗೂ ನನ್ನ ಟ್ಯಾಕ್ಸಿ ಚಾಲಕನಿಗೆ ಹೊಟ್ಟೆ ತುಂಬಾ ಊಟ ಹಾಕಿ ಆ ಋಣ ಬಾಕಿ ಉಳಿಸಿಕೊಂಡವರು ಈ ಕಮ್ಮಾರರು. ಅಂದು ಊಟದ ರೂಪದಲ್ಲಿ ಅವರು ನೀಡಿದ ಮೊಸರು, ಪಡ್ಡು, ತೆಂಗಿನಕಾಯಿ ಚಟ್ಣಿ, ರೊಟ್ಟಿ, ಶೇಂಗಾ ಚಟ್ಣಿಯ ನೆನಪು ಎಂದೂ ಮಾಸುವುದಿಲ್ಲ. ಕಲಕೇರಿಯ ಇತಿಹಾಸದ ಬಗ್ಗೆ, ಹಾವೇರಿ ಜಿಲ್ಲೆಯ ದೇವಾಲಯಗಳ ಬಗ್ಗೆ ಬಹಳಷ್ಟು ಮಾಹಿತಿ ನೀಡಿದ್ದಲ್ಲದೇ, ರಾಜ್ಯದಲ್ಲಿರುವ ಪ್ರಾಚೀನ ದೇವಾಲಯಗಳ ಬಗ್ಗೆ ಮಾಹಿತಿ ಎಲ್ಲಿ ದೊರಕುತ್ತದೆ ಎಂದು ತಿಳಿಸಿ, ನನಗೆ ತುಂಬಾ ಸಹಕರಿಸಿ ಉಪಕಾರ ಮಾಡಿದವರೂ ಈ ಕಮ್ಮಾರರೇ.


ಅವರ ಆತಿಥ್ಯ ಸವಿಯಲು ೨೦೧೩ರ ಜೂನ್ ತಿಂಗಳಲ್ಲಿ ಇನ್ನೊಮ್ಮೆ ಕಲಕೇರಿಗೆ ಹೋಗುವ ಪ್ಲ್ಯಾನ್ ಕೊನೆಯ ಹಂತದಲ್ಲಿ ರದ್ದಾಯಿತು. ಬರಲಾಗುವುದಿಲ್ಲವೆಂದು ತಿಳಿಸಿದಾಗ ಅವರು ಬೇಜಾರು ಮಾಡಿಕೊಂಡರು. ಈಗ್ಗೆ ಸುಮಾರು ನಾಲ್ಕು ತಿಂಗಳ ಹಿಂದೆ ಕಮ್ಮಾರರು ವಿಧಿವಶಗೊಂಡಿದ್ದಾರೆ ಎಂದು ಕಳೆದ ವಾರ ತಿಳಿಯಿತು. ಇದೇ ಅಗೋಸ್ಟ್ ಅಥವಾ ಸೆಪ್ಟ್ಂಬರ್ ತಿಂಗಳಲ್ಲಿ ಆ ಕಡೆ ತೆರಳುವ ಇರಾದೆಯಿದ್ದು, ಶೀಘ್ರದಲ್ಲೇ ಅವರಿಗೆ ಫೋನ್ ಮಾಡುವವನಿದ್ದೆ. ಈಗ, ತುಂಬಾನೇ ತಡಮಾಡಿಬಿಟ್ಟೆ ಎಂದೆನಿಸುತ್ತಿದೆ. ಪರಿಚಯವಿದ್ದವರು ತೀರಿಕೊಂಡಾಗ, ಅವರ ನೆನಪಿಗಾಗಿ ಹೆಸರು ಮತ್ತು ಸಂಖ್ಯೆಯನ್ನು ನಾನು ’ಡಿಲೀಟ್’ ಮಾಡುವುದಿಲ್ಲ. ಶಿವನಂದಪ್ಪ ಕಮ್ಮಾರರ ಹೆಸರು ಮತ್ತು ಮೊಬೈಲ್ ಸಂಖ್ಯೆ ನನ್ನ ಮೊಬೈಲಿನಲ್ಲಿ ಹಾಗೇ ಉಳಿಯಲಿದೆ.

ಭಾನುವಾರ, ಜುಲೈ 13, 2014

ಜೋಶಿ ಶಂಕರ ದೇವಾಲಯ ಹಾಗೂ ಅಡಿಕೆ ನಾರಾಯಣ ದೇವಾಲಯ - ಭಟ್ಕಳ


ಭಟ್ಕಳದಲ್ಲಿನ ಹೆಚ್ಚಿನ ದೇವಾಲಯಗಳನ್ನು ಸರಿಸುಮಾರು ೨೫ ವರ್ಷಗಳ (ಇಸವಿ ೧೫೪೨-೧೫೬೭) ಅಂತರದೊಳಗೆ ನಿರ್ಮಿಸಲ್ಪಟ್ಟಂಥವು. ಇವುಗಳನ್ನು ನಿರ್ಮಿಸಿದವರು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಜನರು. ಗೋವಾದಲ್ಲಿ ಪೋರ್ಚುಗೀಸರ ಹಾವಳಿ ಅತಿಯಾದಾಗ ಅಲ್ಲಿಂದ ಕರ್ನಾಟಕದ ಕರಾವಳಿ ಭಾಗಕ್ಕೆ ವಲಸೆ ಬಂದು ನೆಲೆಸಿದ ಸಮುದಾಯಗಳಲ್ಲಿ ಈ ಸಮುದಾಯವೂ ಒಂದು.

ಜೋಶಿ ಶಂಕರನಾರಾಯಣ ದೇವಾಲಯ


ಈ ದೇವಾಲಯವನ್ನು ’ಜೋಶಿ’ ಎನ್ನುವವರು ಇಸವಿ ೧೫೫೪ರಲ್ಲಿ ನಿರ್ಮಿಸಿದರು. ನಂದಿಮಂಟಪ ಮತ್ತು ಅಂತರಾಳ ಹಾಗೂ ಗರ್ಭಗುಡಿ ಮಾತ್ರ ಹೊಂದಿರುವ ಅತಿ ಸಣ್ಣ ದೇವಾಲಯವಿದು.


ನಂದಿಮಂಟಪ ಮತ್ತು ದೇವಾಲಯದ ಆಕಾರ ಮತ್ತು ಗಾತ್ರ ಒಂದೇ ರೀತಿಯಿದ್ದು, ನಂದಿಮಂಟಪ ತೆರೆದ ರಚನೆಯಾಗಿದ್ದರೆ. ದೇವಾಲಯದ ಸುತ್ತಲೂ ಹೊರಗೋಡೆಯಿದೆ.


ನಂದಿಮಂಟಪದಲ್ಲಿರಬೇಕಾಗಿದ್ದ ನಂದಿ ಕಣ್ಮರೆಯಾಗಿದೆ! ಗರ್ಭಗುಡಿಯಲ್ಲಿ ಶಂಕರನಾರಾಯಣನ ಸಣ್ಣ ಮೂರ್ತಿಯಿದೆ. ಇಲ್ಲಿ ದಿನಾಲೂ ಪೂಜೆ ಸಲ್ಲಿಸಲಾಗುತ್ತದೆ.

ಅಡಿಕೆ ನಾರಾಯಣ ದೇವಾಲಯ

 
ಅಡಿಕೆ ವ್ಯಾಪಾರಿಗಳು ನೀಡಿದ ದೇಣಿಗೆಯಿಂದ ನಿರ್ಮಿಸಲಾಗಿರುವುದರಿಂದ ಈ ದೇವಾಲಯವನ್ನು ಅಡಿಕೆ ನಾರಾಯಣ ದೇವಾಲಯವೆಂದು ಕರೆಯಲಾಗುತ್ತದೆ. ಇಸವಿ ೧೫೫೦ರಲ್ಲಿ ನಿರ್ಮಿಸಲಾಗಿರುವ ದೇವಾಲಯವು ಮುಖಮಂಟಪ, ನವರಂಗ ಮತ್ತು ಗರ್ಭಗುಡಿಯನ್ನು ಹೊಂದಿದೆ.


ದೇವಾಲಯದ ಮುಂಭಾಗದಲ್ಲಿ ದೀಪಸ್ತಂಭವಿದೆ. ದೇವಾಲಯದ ಹೊರಗೋಡೆಯ ಸುತ್ತಲೂ ಎರಡು ಅಡಿ ಅಂತರದಲ್ಲಿ ರಕ್ಷಾಕವಚದಂತೆ ಕಲ್ಲಿನ ಗೋಡೆಯಿದ್ದು, ಈಗ ಕೇವಲ ಒಂದು ಪಾರ್ಶ್ವದಲ್ಲಿ ಮಾತ್ರ ಉಳಿದುಕೊಂಡಿದೆ. ಮುಖಮಂಟಪದ ಮೆಟ್ಟಿಲುಗಳ ಬಳಿ ದ್ವಾರಪಾಲಕರನ್ನು ಕಾಣಬಹುದು.


ಗರ್ಭಗುಡಿಯ ಛಾವಣಿಯಲ್ಲಿ ಕಮಲದ ಕೆತ್ತನೆಯನ್ನೂ ಹಾಗೂ ದ್ವಾರದಲ್ಲಿ ಅಲಂಕಾರಿಕಾ ಕೆತ್ತನೆಗಳನ್ನೂ ಕಾಣಬಹುದು. ಮುಖಮಂಟಪದ ಛಾವಣಿಯಲ್ಲಿ ಅಷ್ಟದಿಕ್ಪಾಲಕರಿಂದ ಸುತ್ತುವರಿದ ಕಮಲದ ಕೆತ್ತನೆಯಿದೆ.


ಮುಖಮಂಟಪದಲ್ಲಿರುವ ನಾಲ್ಕು ಕಂಬಗಳ ಪೈಕಿ ಎರಡರಲ್ಲಿ ಹಲವಾರು ಕೆತ್ತನೆಗಳನ್ನು ಕಾಣಬಹುದು.
 

ದೇವಾಲಯದಲ್ಲಿ ನಿತ್ಯ ಪೂಜೆ ಮಾಡುವವರು ಸಮೀಪದ ಮನೆಯವರು. ಇಲ್ಲಿನ ಎಲ್ಲಾ ದೇವಾಲಯಗಳನ್ನು, ದೇವಾಲಯವಿರುವ ಪ್ರಾಂಗಣದಲ್ಲಿರುವ ಮನೆಯವರೇ ನೋಡಿಕೊಳ್ಳುತ್ತಾರೆ. ದೇವಾಲಯದ ನಿರ್ಮಾಣದ ಸಮಯದಿಂದಲೂ ಈ ಮನೆಗಳ ಪೂರ್ವಜರು ಪೂಜೆ ಸಲ್ಲಿಸುತ್ತ ಬಂದ ಸಂಪ್ರದಾಯ ಇಂದಿಗೂ ಹಾಗೇ ಮುಂದುವರಿದಿದೆ.

ಭಾನುವಾರ, ಜುಲೈ 06, 2014

ನಾಗೇಶ್ವರ ದೇವಾಲಯ ಹಾಗೂ ಚನ್ನಕೇಶವ ದೇವಾಲಯ - ಮೊಸಳೆ


ಮೊಸಳೆಯಲ್ಲಿ ಎರಡು ಪುರಾತನ ದೇವಾಲಯಗಳಿವೆ - ನಾಗೇಶ್ವರ ಹಾಗೂ ಚನ್ನಕೇಶವ. ಒಂದೇ ಪ್ರಾಂಗಣದಲ್ಲಿ ಅಕ್ಕಪಕ್ಕದಲ್ಲಿರುವ ಈ ದೇವಾಲಯಗಳು ಸಮಾನ ಗಾತ್ರ ಮತ್ತು ಆಕಾರದಲ್ಲಿದ್ದು, ಏಕಕೂಟ ಶೈಲಿಯದ್ದಾಗಿವೆ. ಇಸವಿ ೧೨೫೦ರ ಸುಮಾರಿಗೆ ಆಗಿನ ಹೊಯ್ಸಳ ದೊರೆ ವೀರ ಸೋಮೇಶ್ವರನ ದಂಡಾಧಿಪತಿಯಾಗಿದ್ದ ನಾಗಣ್ಣ ನಾಯಕನೆಂಬುವನಿಂದ ನಿರ್ಮಿಸಲಾಗಿರುವ ಈ ಅವಳಿ ದೇವಾಲಯಗಳು ಒಂದೇ ರೀತಿಯ ವಿನ್ಯಾಸವನ್ನು ಹೊಂದಿವೆ. ಎರಡೂ ದೇವಾಲಯಗಳು ಏಕಪ್ರಕಾರದ ಇಕ್ಕೆಲಗಳಲ್ಲಿ ಜಗತಿಯುಳ್ಳ ಮುಖಮಂಟಪ, ನವರಂಗ, ಅಂತರಾಳ, ಗರ್ಭಗುಡಿ ಹಾಗೂ ಶಿಖರಗಳನ್ನು ಹೊಂದಿವೆ. ಎರಡೂ ದೇವಾಲಯಗಳ ಹೊರಗೋಡೆಯಲ್ಲಿ ಹೊಯ್ಸಳ ಶಿಲ್ಪಕಲಾ ಶೈಲಿಯು ಅತ್ಯುನ್ನತವಾಗಿ ಬಿಂಬಿತವಾಗಿದೆ.

ನಾಗೇಶ್ವರ ದೇವಾಲಯ


ಮುಖಮಂಟಪದ ಇಕ್ಕೆಲಗಳಲ್ಲಿರುವ ಜಗತಿಯ ಕವಚಗಳು ಬಿದ್ದುಹೋಗಿವೆ. ಮುಖ್ಯದ್ವಾರದ ಎಲ್ಲಾ ನಾಲ್ಕು ತೋಳುಗಳು ಸುಂದರವಾಗಿರುವ ಬಳ್ಳಿ ಸುರುಳಿ ಹಾಗೂ ಇತರ ಅಲಂಕಾರಿಕಾ ಕೆತ್ತನೆಗಳನ್ನು ಹೊಂದಿವೆ. ಮೇಲ್ಭಾಗದಲ್ಲಿ ಐದು ಸಣ್ಣ ಗೋಪುರಗಳು ಮತ್ತು ನೈಪುಣ್ಯತೆಯಿಂದ ಕೆತ್ತಲಾಗಿರುವ ಹೊರಚಾಚು ಗಜಲಕ್ಷ್ಮೀಯ ಕೆತ್ತನೆಯಿದೆ. ತಳಭಾಗದಲ್ಲಿ ದ್ವಾರಪಾಲಕರಿದ್ದಾರೆ.


ಮುಖಮಂಟಪದ ಮೇಲ್ಚಾವಣಿಯಲ್ಲಿ ಚಚ್ಚೌಕದ ಒಳಗೆ ಕಮಲದ ಕೆತ್ತನೆಯಿದೆ. ಕಮಲದ ಮೊಗ್ಗು ಇರುವಲ್ಲಿ ತಾಂಡವೇಶ್ವರನನ್ನು ಕೆತ್ತಲಾಗಿದೆ. ಕಮಲದ ಸುತ್ತಲೂ ಅಷ್ಟದಿಕ್ಪಾಲಕರು, ವಾದ್ಯಗಾರರು, ನಾಟ್ಯಗಾರರು, ಮಕರತೋರಣ ಇತ್ಯಾದಿಗಳ ಚಿತ್ರಣವಿದೆ.


ಮೇಲ್ಭಾಗದಲ್ಲಿರುವ ಕೈಪಿಡಿಯ ಸುಂದರ ಕೆತ್ತನೆ ಗಮನ ಸೆಳೆಯುತ್ತದೆ. ಇಲ್ಲಿ ನೃತ್ಯರೂಪದಲ್ಲಿರುವ ಶಿವನ ಸುತ್ತಲೂ ನಾಟ್ಯಗಾರರು, ವಾದ್ಯಗಾರರು ಹಾಗೂ ಯಕ್ಷ ಯಕ್ಷಿಯರನ್ನು ತೋರಿಸಲಾಗಿದೆ. ಕೈಪಿಡಿಯ ಬಲಭಾಗದ ಕಲಶ ಮಾತ್ರ ಉಳಿದುಕೊಂಡಿದೆ.


ನವರಂಗದಲ್ಲಿರುವ ನಾಲ್ಕು ಕಂಬಗಳ ನಡುವೆ ನಂದಿಯ ಆಕರ್ಷಕ ಮೂರ್ತಿಯಿದೆ. ಮೇಲ್ಛಾವಣಿಯಲ್ಲಿ ಒಂಬತ್ತು ಪದ್ಮಗಳ ನಡುವೆ ಗಣೇಶನ ನೃತ್ಯ ರೂಪಕವನ್ನು ತೋರಿಸಲಾಗಿದೆ.


ನವರಂಗದಲ್ಲಿರುವ ದೇವಕೋಷ್ಠಗಳಲ್ಲಿ ಗಣೇಶ, ಶಾರದೆ, ಮಹಿಷಮರ್ದಿನಿ, ಕೇಶವ ಹಾಗೂ ಸಪ್ತಮಾತೃಕೆಯರ ವಿಗ್ರಹಗಳನ್ನು ಕಾಣಬಹುದು.


ಅಂತರಾಳದ ದ್ವಾರವು ಇಕ್ಕೆಲಗಳಲ್ಲಿ ಜಾಲಂಧ್ರಗಳನ್ನು ಹಾಗೂ ದ್ವಾರಪಾಲಕರನ್ನು ಹೊಂದಿದೆ. ಮೇಲ್ಭಾಗದಲ್ಲಿ ಮಕರತೋರಣದಿಂದ ಅಲಂಕೃತ ಉಮಾಮಹೇಶ್ವರನ ಚಿತ್ರಣವಿದೆ. ಉಮಾಮಹೇಶ್ವರನ ಸಮೀಪದಲ್ಲಿ ಗಣೇಶ, ಹಂಸ, ನಂದಿ ಹಾಗೂ ನಾಗದೇವರನ್ನೂ ತೋರಿಸಲಾಗಿದೆ.


ಗರ್ಭಗುಡಿಯ ದ್ವಾರವು ಸರಳವಾಗಿದ್ದು, ಮೇಲ್ಭಾಗದಲ್ಲಿ ಗಜಲಕ್ಷ್ಮೀ ಹಾಗೂ ೫ ಸಣ್ಣ ಗೋಪುರಗಳನ್ನು ಹೊಂದಿದೆ. ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೆ ನಿತ್ಯ ಪೂಜೆ ಸಲ್ಲಿಸಲಾಗುತ್ತದೆ.


ದೇವಾಲಯದ ಹೊರಗೋಡೆಯಲ್ಲಿ ಸುಂದರ ಭಿತ್ತಿಚಿತ್ರಗಳಿವೆ. ಇವುಗಳಲ್ಲಿ ಹೆಚ್ಚಿನವು ಶಿವನ ವಿವಿಧ ರೂಪಗಳು. ಉಳಿದಂತೆ ಗೌರಿ, ಮಹೇಶ್ವರಿ, ದುರ್ಗಾ, ಶ್ರೀದೇವಿ ಹಾಗೂ ಭೂದೇವಿಯರ ಕೆತ್ತನೆಗಳನ್ನೂ ಕಾಣಬಹುದು.


ದೇವಾಲಯದ ಮೂರೂ ಪಾರ್ಶ್ವಗಳಲ್ಲಿ ಕೈಪಿಡಿಯ ರಚನೆ ಹಾನಿಯಾಗದೆ ಉಳಿದಿರುವುದು ಸಂತಸದ ವಿಷಯ. ಕೈಪಿಡಿಯ ಕೆತ್ತನೆಯಿಲ್ಲದಿದ್ದರೆ ಹೊರಗೋಡೆಯ ಕೆತ್ತನೆ ಅಪೂರ್ಣ ಎನ್ನಲಾಗುತ್ತದೆ.


ದೇವಾಲಯದ ಶಿಖರವನ್ನು ಮೂರು ಸ್ತರಗಳನ್ನು ನಿರ್ಮಿಸಲಾಗಿದ್ದು, ಮೇಲ್ಭಾಗದಲ್ಲಿರುವ ಕಮಲದ ಮೇಲೆ ಆಕರ್ಷಕ ಕಲಶವಿದೆ. ಶಿಖರದ ತುಂಬಾ ಸುಂದರ ಕೆತ್ತನೆಗಳನ್ನು ಕಾಣಬಹುದು.


ಶಿಖರದ ಮುಂಭಾಗದಲ್ಲಿ ಹೊಯ್ಸಳ ಲಾಂಛನವಾದ ಸಳ ಹುಲಿಯೊಡನೆ ಹೋರಾಡುವ ಕೆತ್ತನೆಯಿದೆ. ಈ ಕೆತ್ತನೆಯ ಮುಂಭಾಗದಲ್ಲಿ ಶಿವನ ನೃತ್ಯರೂಪಕವನ್ನು ತೋರಿಸುವ ಶಿಖರ ಲಾಂಛನ ಫಲಕವಿದೆ.

ಚನ್ನಕೇಶವ ದೇವಾಲಯ


ಎರಡು ಕಂಬಗಳ ಮುಖಮಂಟಪವು ಇಕ್ಕೆಲಗಳಲ್ಲಿ ಜಗತಿಯನ್ನು ಹೊಂದಿದೆ. ಜಗತಿಯ ಹೊರಕವಚದಲ್ಲಿ ನಾಟ್ಯಗಾರರು ಮತ್ತು ಸಂಗೀತಗಾರರ ಕೆತ್ತನೆಗಳಿವೆ. ಈ ಕೆತ್ತನೆಗಳನ್ನು ಅಲಂಕಾರಿಕಾ ಬಳ್ಳಿಗಳ ಕೆತ್ತನೆಗಳಿಂದ ಆವರಿಸಲಾಗಿದೆ. ತಳಭಾಗದಲ್ಲಿ ಮಿಥುನ ಶಿಲ್ಪಗಳಿವೆ. ನಡುವೆ ಇದ್ದ ಕೆಲವು ಶಿಲ್ಪಗಳು ನಶಿಸಿರುವುದನ್ನು ಕಾಣಬಹುದು.


ನಾಲ್ಕು ತೋಳುಗಳ ಮುಖ್ಯದ್ವಾರವು ದ್ವಾರಪಾಲಕರನ್ನು ಹೊಂದಿದ್ದು, ಮೇಲ್ಭಾಗದಲ್ಲಿ ೫ ಸಣ್ಣ ಗೋಪುರಗಳನ್ನು ಹೊಂದಿದೆ. ಗಜಲಕ್ಷ್ಮೀಯ ಕೆತ್ತನೆ ನಶಿಸಿದೆ.


ಮುಖಮಂಟಪದ ಮೇಲ್ಛಾವಣಿಯಲ್ಲಿ ಅಷ್ಟದಿಕ್ಪಾಲಕರಿಂದ ಸುತ್ತುವರಿಯಲ್ಪಟ್ಟ ಕಮಲದ ಕೆತ್ತನೆಯಿದೆ. ಈ ಕಮಲದ ಸುತ್ತಲೂ ವಾದ್ಯಗಾರರ ಹಾಗೂ ನಾಟ್ಯಗಾರರ ಕೆತ್ತನೆಯನ್ನೂ ಕಾಣಬಹುದು.


ನವರಂಗದಲ್ಲಿ ನಾಲ್ಕು ಕಂಬಗಳ ನಡುವಿರುವ ಭುವನೇಶ್ವರಿಯಲ್ಲಿ ಇನ್ನೊಂದು ಆಕರ್ಷಕ ಕಮಲದ ಕೆತ್ತನೆಯನ್ನು ಕಾಣಬಹುದು. ಇದರ ಸುತ್ತಲೂ ಅಷ್ಟದಿಕ್ಪಾಲಕರು, ವಾದ್ಯಗಾರರು ಹಾಗೂ ನಾಟ್ಯಗಾರರನ್ನೂ ಕಾಣಬಹುದು.


ನವರಂಗದಲ್ಲಿರುವ ಉಳಿದ ೮ ಭುವನೇಶ್ವರಿಗಳಲ್ಲಿ ವಿಭಿನ್ನ ರೀತಿಯ ಕೆತ್ತನೆಗಳನ್ನು ಕಾಣಬಹುದು. ಒಂದಕ್ಕಿಂತ ಒಂದು ಮಿಗಿಲಾಗಿರುವ ಈ ಕೆತ್ತನೆಗಳು, ಹೊಯ್ಸಳ ಶಿಲ್ಪಿಗಳು ಭುವನೇಶ್ವರಿಗೆ ನೀಡುವ ಮಹತ್ವವನ್ನು ತಿಳಿಸುತ್ತವೆ.


ನವರಂಗದಲ್ಲಿರುವ ದೇವಕೋಷ್ಠಗಳಲ್ಲಿ ಲಕ್ಷ್ಮೀನಾರಾಯಣ, ಯೋಗನರಸಿಂಹ, ಸರಸ್ವತಿ, ಲಕ್ಷ್ಮೀ, ಗಣೇಶ ಹಾಗೂ ಪಾರ್ವತಿಯ ವಿಗ್ರಹಗಳಿವೆ.


ಅಂತರಾಳದ ದ್ವಾರವು ಜಾಲಂಧ್ರಗಳನ್ನು ಹಾಗೂ ದ್ವಾರಪಾಲಕರನ್ನು ಹೊಂದಿದೆ. ಮೇಲ್ಭಾಗದಲ್ಲಿ ಮಕರತೋರಣದಿಂದ ಅಲಂಕೃತ ವಿಷ್ಣುವಿನ ಕೆತ್ತನೆಯಿದೆ. ಮಕರಗಳ ಮೇಲೆ ಸವಾರಿ ಮಾಡುತ್ತಿರುವ ಯಕ್ಷ ಹಾಗೂ ಯಕ್ಷಿಯರನ್ನು ಕಾಣಬಹುದು. ಅಂತರಾಳದ ಭುವನೇಶ್ವರಿಯಲ್ಲಿ ಉಗ್ರನರಸಿಂಹನ ಚಿತ್ರಣವಿದೆ.


ನಾಲ್ಕುತೋಳುಗಳ ಗರ್ಭಗುಡಿಯ ದ್ವಾರವು ದ್ವಾರಪಾಲಕರನ್ನು, ಗಜಲಕ್ಷ್ಮೀಯನ್ನು ಹಾಗೂ ೫ ಸಣ್ಣ ಗೋಪುರಗಳನ್ನು ಹೊಂದಿದೆ. ದೇವಾಲಯದ ಅರ್ಚಕ ಚನ್ನಕೇಶವನ ವಿಗ್ರದ ಚಿತ್ರ ತೆಗೆಯಲು ಅನುಮತಿ ನೀಡಲಿಲ್ಲ. ಗರುಡ ಪೀಠದ ಮೇಲಿರುವ ಈ ವಿಗ್ರಹವು ಆರು ಅಡಿ ಎತ್ತರವಿದ್ದು, ಪ್ರಭಾವಳಿಯಲ್ಲಿ ದಶಾವತಾರದ ಕೆತ್ತನೆಯನ್ನು ಹೊಂದಿದೆ.


ಈ ದೇವಾಲಯದಲ್ಲೂ ಕೈಪಿಡಿ ಕೆತ್ತನೆ ನಶಿಸದೆ ಉಳಿದುಕೊಂಡಿದೆ. ಮೂರು ಪಾರ್ಶ್ವಗಳಲ್ಲಿರುವ ಕೈಪಿಡಿಯಲ್ಲಿ ವೇಣುಗೋಪಾಲನನ್ನು ತೋರಿಸಲಾಗಿದೆ.


ಹೊರಗೋಡೆಯಲ್ಲಿ ಚನ್ನಕೇಶವನ ಹಲವು ರೂಪಗಳನ್ನು ತೋರಿಸಲಾಗಿದೆ. ಲಕ್ಷ್ಮೀನರಸಿಂಹ, ವೇಣುಗೋಪಾಲ, ವರಾಹ, ಕಾಳಿಂಗಮರ್ದನ, ಉಗ್ರನರಸಿಂಹ, ನಾರಾಯಣ, ಗೋವರ್ಧನಧಾರಿ ಕೃಷ್ಣ, ಯೋಗನರಸಿಂಹ ಇತ್ಯಾದಿ ಕೆತ್ತನೆಗಳನ್ನು ಕಾಣಬಹುದು. ದೇವಾಲಯದ ತುಂಬಾ ಈ ಕೆತ್ತನೆಗಳೇ ತುಂಬಿವೆ. ಗರುಡನ ಕೆತ್ತನೆಯನ್ನೂ ಕಾಣಬಹುದು.


ಶಿಖರವನ್ನು ಮೂರು ಸ್ತರಗಳನ್ನು ನಿರ್ಮಿಸಲಾಗಿದ್ದು, ಮೇಲ್ಭಾಗದಲ್ಲಿರುವ ಕಮಲದ ಮೇಲೆ ಆಕರ್ಷಕ ಕಲಶವಿದೆ. ಶಿಖರದ ಮುಂಭಾಗದಲ್ಲಿ ಸಳ ಹುಲಿಯೊಡನೆ ಹೋರಾಡುವ ಕೆತ್ತನೆ ಹಾಗೂ ಶಿಖರ ಲಾಂಛನ ಫಲಕಗಳಿವೆ.


ಪುರಾತನ ಕಾಲದಲ್ಲಿ ಋಷಿ ಜಮದಗ್ನಿಯು ಈ ಸ್ಥಳದಲ್ಲಿ ಆಶ್ರಮವನ್ನು ಹೊಂದಿದ್ದನು ಎಂಬ ದಂತಕಥೆಯಿದೆ. ಆಗಿನ ಕಾಲದಲಿ ಈ ಸ್ಥಳವನ್ನು ’ಮುಸಳ’ ಎಂದು ಕರೆಯಲಾಗಿತ್ತಿತ್ತು. ಮುಸಳ ಎಂದರೆ ಒಂದು ಬಗೆಯ ಬೊಗಾಣಿ(ಪಾತ್ರೆ). ಸಾಂಬಾರ್ ಪದಾರ್ಥಗಳನ್ನು ಕುಟ್ಟಲು ಬಳಸುವ ಸಣ್ಣ ಪಾತ್ರೆ ಮತ್ತು ಹಿಡಿಕೆಗೆ ಮುಸಳ ಎನ್ನಲಾಗುತ್ತಿತ್ತು. ಈ ಶಬ್ದವೇ ಕಾಲಕ್ರಮೇಣ ಮೊಸಳೆಯಾಗಿ ಪರಿವರ್ತಿತವಾಗಿದೆ ಎಂದು ನಂಬಲಾಗಿದೆ.