ಭಾನುವಾರ, ಜನವರಿ 26, 2014

ಮಾಂಗ್ಟೇಶ್ವರನ ಕಡಲತೀರ


ಈ ಕಡಲತೀರಕ್ಕೆ ಯಾರೂ ಬರುವುದೇ ಇಲ್ಲ. ಊರಿನವರಲ್ಲಿ ಈ ಕಡಲತೀರಕ್ಕೆ ದಾರಿ ಕೇಳಿದರೆ, ಸ್ವಲ್ಪ ದೂರದಲ್ಲಿರುವ ಇದೇ ಹೆಸರುಳ್ಳ ಇನ್ನೊಂದು ಕಡಲತೀರಕ್ಕೆ ಕಳುಹಿಸುತ್ತಾರೆ. ನಿಖರವಾಗಿ ಕೇಳಿದರೆ ಮಾತ್ರ ಈ ಕಡಲತೀರ ನೋಡುವ ಭಾಗ್ಯ. ಇದು ನನಗೆ ಲೀನಾ ನೀಡಿದ ಮಾಹಿತಿ.


ಲೀನಾ, ಇದೇ ಊರಿನಲ್ಲಿ ನಾಲ್ಕೈದು ವರ್ಷ ಇದ್ದುದರಿಂದ ನನಗೆ ಕಡಲತೀರಕ್ಕೆ ದಾರಿ ಕೇಳುವ ಪ್ರಮೇಯ ಬರಲಿಲ್ಲ. ಆದರೂ ನೋಡೋಣವೆಂದು ಎರಡು ಕಡೆ ದಾರಿ ಕೇಳಿದೆ. ಊರವರು ಮತ್ತು ಪ್ರವಾಸಿಗರು ತೆರಳುವ ಆ ಮತ್ತೊಂದು ಕಡಲತೀರಕ್ಕೇ ನನಗೆ ದಾರಿ ತೋರಿಸಲಾಯಿತು. ಮತ್ತೆ ನಿಖರವಾಗಿ ಕೇಳಿದೆ. ಆಗ ನನಗೆ ಈ ಕಡಲತೀರದ ಬಗ್ಗೆ ತಿಳಿಸಲಾಯಿತು!!


ಅದೇನೇ ಇರಲಿ. ಯಾರೂ ಬರದಿದ್ದರೆ ಒಳ್ಳೆಯದೆ ತಾನೆ? ಇಲ್ಲಿ ತೀರಗುಂಟ ಜನವಸತಿ ಪ್ರದೇಶವಾಗಿದ್ದು, ಇವರ ಮುಖ್ಯ ಕಸುಬೇ ಮೀನು ಹಿಡಿಯುವುದು. ಮಣ್ಣಿನ ನೆಲ ಮುಗಿಯುವವರೆಗೆ ಮನೆಗಳಿದ್ದು, ಮರಳಿನ ನೆಲ ಆರಂಭವಾಗುವಲ್ಲಿ ಸಾಲಾಗಿ ದೋಣಿಗಳನ್ನು ನಿಲ್ಲಿಸಲಾಗಿತ್ತು. ಇಲ್ಲಿಗೆ ಬಸ್ಸು ಸೌಕರ್ಯ ಇಲ್ಲ. ಊರಿನಿಂದ ಕೇವಲ ೩ ಕಿಮಿ ದೂರ ಇರುವ ಈ ಸ್ಥಳಕ್ಕೆ ರಿಕ್ಷಾಗಳು ಓಡಾಡುತ್ತವೆ.


ಈ ಸ್ಥಳಕ್ಕೆ ಬರಲು ಇರುವ ಒಂದೇ ಕಾರಣವೆಂದರೆ ತೀರದಿಂದ ಸುಮಾರು ನೂರು ಮೀಟರುಗಳಷ್ಟು ದೂರದಲ್ಲಿರುವ ಒಂದು ನಡುಗುಡ್ಡೆ. ಇಲ್ಲಿಗೆ ತೆರಳಲು ಕಲ್ಲುಗಳನ್ನು ಹಾಕಿ ಕಲ್ಲುಸೇತು ನಿರ್ಮಿಸಲಾಗಿದೆ. ಈ ನಡುಗುಡ್ಡೆಯಲ್ಲಿ ಸ್ಥಳೀಯರಿಗೆ ಆಪ್ತನಾಗಿರುವ ಮಾಂಗ್ಟೇಶ್ವರನ ದೇವಾಲಯವಿದೆ. ಬರತದ ಸಮಯದಲ್ಲಿ ಕಲ್ಲುಸೇತು ಮುಳುಗುವುದರಿಂದ ಈ ನಡುಗುಡ್ಡೆಗೆ ಹೋಗಲು ಸಾಧ್ಯವಿಲ್ಲ.


ಅಲ್ಲೊಬ್ಬ ಯುವಕನ ಬಳಿ ಕೇಳಿದಾಗ, ’ಬೇಗ ಹೋಗಿ ಬನ್ನಿ, ನೀರು ಬರುವ ಸಮಯ ಆಯ್ತು’ ಎಂದ. ಆಗ ಅಲ್ಲೇ ಇದ್ದ ವಯಸ್ಕರೊಬ್ಬರು, ’ಇನ್ನು ತಡಾ ಅದೆ. ಸಾವ್ಕಾಶ ಹೋಗ್ಬನ್ನಿ’ ಎಂದಾಗ ಯಾರನ್ನು ನಂಬುವುದು ಎಂದೇ ತಿಳಿಯದಾಯಿತು. ವಯಸ್ಕ ವ್ಯಕ್ತಿ ಅನುಭವದ ಆಧಾರದ ಮೇಲೆಯೇ ಮಾತನಾಡುತ್ತಿರುವಂತೆ ತೋರಿದ ಕಾರಣ, ಅವರಿಬ್ಬರಿಗೂ ಧನ್ಯವಾದ ಹೇಳಿ, ಸಾವ್ಕಾಶ ಹೋಗಿಬರುವ ನಿರ್ಧಾರ ಮಾಡಿದೆ.


ಈ ಕಲ್ಲುಸೇತುವಿನ ಕಲ್ಲುಗಳು, ಎರಡೂ ಕಡೆಯಿಂದ ಅಲೆಗಳ ಹೊಡೆತಕ್ಕೆ ಚದುರಿಕೊಂಡು ಬಿದ್ದಿವೆ. ಒಂದರ ಮೇಲೊಂದನ್ನು ಪೇರಿಸಿ ಇಡಲಾಗಿದ್ದ ಕಲ್ಲುಗಳು ಈಗ ಒಂದರ ಬದಿಯಲ್ಲಿ ಒಂದು ಇವೆ. ಒಂದು ಬದಿಯಲ್ಲಿ ಬಹುದೂರದವರೆಗೂ ಸಾಲಾಗಿ ಇಡಲಾಗಿರುವ ದೋಣಿಗಳು ಮತ್ತು ದೂರದಲ್ಲಿ ಪಶ್ಚಿಮ ಘಟ್ಟಗಳ ಸಾಲು, ಇನ್ನೊಂದೆಡೆ ನದಿಯೊಂದು ಬಂದು ಸಮುದ್ರಕ್ಕೆ ಸೇರುವ ತಾಣ ಹಾಗೂ ನಂತರ ಸಮುದ್ರಕ್ಕೆ ತಾಗಿಕೊಂಡೇ ಉದ್ದಕ್ಕೆ ಚಾಚಿರುವ ಬೆಟ್ಟಗಳು.


ಇದು ಪ್ರವಾಸೀ ತಾಣವಾಗಿರದ ಕಾರಣ, ಸ್ಥಳೀಯರಿಗೆ ಶರಧಿ ತೀರವೇ ಶೌಚಾಲಯ! ನೋಡಲು ಕಡಲತೀರ ಶುಭ್ರವಾಗಿ ಕಂಡುಬಂದರೂ, ಅಲ್ಲಲ್ಲಿ ಸ್ಥಳೀಯರು ’ಚುಕ್ಕೆ’ಗಳನ್ನು ಹಾಕಿರುತ್ತಾರೆ. ಉಬ್ಬರದ ಸಮಯದಲ್ಲಿ ಶರಧಿ ಈ ಎಲ್ಲಾ ಚುಕ್ಕೆಗಳನ್ನು ಗುಡಿಸಿ ಸಾರಿಸಿಬಿಡುತ್ತದೆ. ಆದರೂ ಸ್ವಲ್ಪ ಜಾಗರೂಕರಾಗಿ ಹೆಜ್ಜೆ ಹಾಕುವುದು ಎಂದಿಗೂ ಒಳ್ಳೆಯದು. ನಾನು ನಡೆದು ಹೋಗುತ್ತಿರಬೇಕಾದರೆ ಒಬ್ಬ ಚುಕ್ಕೆ ಹಾಕುತ್ತಿದ್ದ, ಇನ್ನೊಬ್ಬ ಹಾಕಲು ಹೋಗುತ್ತಿದ್ದ. ಹಿಂತಿರುಗಬೇಕಾದರೆ ಮಗದೊಬ್ಬ, ನಾನು ಬರುತ್ತಿರುವುದನ್ನು ಕಂಡು ನನಗೆ ಬೆನ್ನು ಮಾಡಿ ಕೂತೇಬಿಟ್ಟ!


ಕಲ್ಲಿನಿಂದ ಕಲ್ಲಿಗೆ ಜಿಗಿಯುತ್ತಾ ನಡುಗುಡ್ಡೆ ತಲುಪಿದೆ. ಅಲ್ಲಿ ಮಾಂಗ್ಟೇಶ್ವರನ ಸಣ್ಣ ದೇವಾಲಯ. ಸಮೀಪವೇ ಸಣ್ಣ ಬಾವಿ. ಬದಿಯಲ್ಲೇ ಒಂದು ಶಿವಲಿಂಗ.


ಮೊದಲು ಮಾಂಗ್ಟೇಶ್ವರನಿಗೆ ನಮಸ್ಕರಿಸಿದೆ. ಬಳಿಕ ನಡುಗುಡ್ಡೆಯಿಂದ ಕಾಣಬರುವ ದೃಶ್ಯಗಳ ಚಿತ್ರಗಳನ್ನು ತೆಗೆದೆ. ತದನಂತರ ಸುಮಾರು ೨೦ ನಿಮಿಷ ಶಿವಲಿಂಗದ ಬಳಿ ಕುಳಿತು ನನ್ನ ಜೀವನದ ಬಗ್ಗೆ ಅವಲೋಕನ ಮಾಡಿದೆ!


ಎದುರಿನಲ್ಲಿರುವ ಸಣ್ಣ ಬೆಟ್ಟಕ್ಕೆ ತೆರಳುವುದು ನನ್ನ ಮುಂದಿನ ಗುರಿಯಾಗಿತ್ತು. ಈ ಬೆಟ್ಟ ಸಮೀಪದಲ್ಲೇ ಇದ್ದರೂ, ಅಲ್ಲಿ ನದಿ ಸಮುದ್ರ ಸೇರುವ ಸ್ಥಳವಾಗಿದ್ದರಿಂದ, ಆ ಕಡೆ ದಾಟುವುದು ಅಸಾಧ್ಯ. ಇರುವ ಒಂದೇ ದಾರಿಯೆಂದರೆ, ಮರಳಿ ೩ ಕಿಮಿ ದೂರವಿರುವ ಊರಿಗೆ ಬಂದು, ನಂತರ ಮತ್ತೆ ೫ ಕಿಮಿ ಕ್ರಮಿಸಿ ಬೆಟ್ಟದ ತುದಿ ತಲುಪುವುದು.


ಈ ಬೆಟ್ಟದ ತುದಿಯಿಂದ ಸಮುದ್ರ ತೀರದ ಮತ್ತು ಮಾಂಗ್ಟೇಶ್ವರನ ನಡುಗುಡ್ಡೆಯ ವಿಹಂಗಮ ನೋಟ ಲಭ್ಯ. ಮೋಡಗಳ ಮರೆಯಿಂದ ಸೂರ್ಯದೇವ, ಮಾಂಗ್ಟೇಶ್ವರನ ವಾಸಸ್ಥಾನದ ಮೇಲೆ ಮಾತ್ರ ಬೆಳಕು ಚೆಲ್ಲುತ್ತಿರುವಂತೆ ಕಾಣುತ್ತಿತ್ತು!


ಈ ಗುಡ್ಡದ ತುದಿಯವೆರೆಗೂ ಮಣ್ಣಿನ ರಸ್ತೆಯಿದೆ. ಈ ರಸ್ತೆ ಹಾಗೇ ಮುಂದುವರೆದು ಬೆಟ್ಟದ ಇನ್ನೊಂದು ಪಾರ್ಶ್ವದ ಕೆಳಗಿರುವ ಕಡಲತೀರದ ಸಮೀಪ ಕೊನೆಗೊಳ್ಳುತ್ತದೆ.


ಬೆಟ್ಟದ ತುದಿಯಿಂದ ಮಾಂಗ್ಟೇಶ್ವರನ ಕಡಲತೀರ ಸಂಸ್ಕೃತ ಅಕ್ಷರ ’ಓಂ’ ತರಹ ಕಾಣುತ್ತದೆ. ಇಲ್ಲಿ ಸುಮಾರು ೩೦ ನಿಮಿಷಗಳಷ್ಟು ಸಮಯ ಕಳೆದೆ. ಅಲ್ಲಿ ಯಾರೂ ಇರಲಿಲ್ಲ, ಯಾರೂ ಬರಲಿಲ್ಲ. ಅಲ್ಲಿ ಕೆಳಗೆ, ಬರತದ ಸಮಯವಾಗಿದ್ದರಿಂದ ಕಡಲು ನಿಧಾನವಾಗಿ ಕಲ್ಲುಸೇತುವೆಯನ್ನು ಆವರಿಸಿಕೊಳ್ಳುತ್ತಿತ್ತು.

ಮಾಹಿತಿ: ಡಾ! ಎಸ್.ಡಿ.ನಾಯ್ಕ

ಭಾನುವಾರ, ಜನವರಿ 19, 2014

ಶಿರಸಿಯ ಪುಢಾರಿ ಹಾಗೂ ಜಲಧಾರೆ


’ಶಿರಸಿಯಲ್ಲಿ ಒಬ್ಬರ ಪರಿಚಯ ಆಗಿದೆ. ಅವರಿಗೆ ೧೨ ಫಾಲ್ಸ್ ಗೊತ್ತಿದೆಯಂತೆ. ಯಾವಾಗ ಬೇಕಾದರೂ ಬನ್ನಿ ಎಲ್ಲಾ ಮಾಹಿತಿ ಕೊಡ್ತೇನೆ ಎಂದು ಹೇಳಿದ್ದಾರೆ. ಅಲ್ಲಿ ಎಲ್ಲಾ ಫಾಲ್ಸ್ ನೋಡಿ ಮುಗಿಸಿದ್ದಾರಂತೆ’, ಎಂದು ಒಂದೇ ಉಸಿರಿಗೆ ವಿವೇಕ್ ಉಸುರಿದಾಗ ನನಗೆ ಅಚ್ಚರಿ. ’೧೨ರಲ್ಲಿ ನಾವು ನೋಡದೇ ಇರುವುದೆಷ್ಟು?’ ಎಂಬ ಪ್ರಶ್ನೆಗೆ ವಿವೇಕ್ ನೀಡಿದ ಉತ್ತರ - ’ಒಂದಾದ್ರೂ ಇರಬಹುದಲ್ವೇ’ - ಅಶಾವಾದಿಯೊಬ್ಬನದ್ದಾಗಿತ್ತು. ರಾಜಕೀಯ ಪುಢಾರಿಯಾಗಿದ್ದ ಶಿರಸಿಯ ಈ ವ್ಯಕ್ತಿಯ ಬಗ್ಗೆ ನನಗೆ ಅದೇಕೋ ಸಂಶಯ ಬರಲಾರಂಭಿಸಿತ್ತು. ನಿಗದಿತ ದಿನದಂದು ಮುಂಜಾನೆ ೭ಕ್ಕೆ ಶಿರಸಿಯ ’ನಮ್ಮೂರ ಊಟ’ದಲ್ಲಿ, ಉಡುಪಿಯಿಂದ ನಾನು ಮತ್ತು ಅತ್ತ ಧಾರವಾಡದಿಂದ ವಿವೇಕ್ ಹಾಗೂ ಇತರರು ಭೇಟಿಯಾದೆವು.


ನಾಲ್ಕಾರು ಫೋನ್ ಕಾಲ್‍ಗಳ ಬಳಿಕ, ಅಂತೂ ೮.೩೦ರ ಸಮಯಕ್ಕೆ ಆ ವ್ಯಕ್ತಿ ಆಗಮಿಸಿದರು. ಈ ರಾಜಕೀಯ ವ್ಯಕ್ತಿಗಳೆಂದರೆ ನನಗೆ ಮೊದಲೇ ಅಲರ್ಜಿ. ನಾವು ೯೦ ನಿಮಿಷಗಳಿಂದ ಅವರಿಗಾಗಿಯೇ ಕಾಯ್ತಾ ಇದ್ದೇವೆ ಎಂಬ ಅರಿವಿದ್ದರೂ, ಆ ವ್ಯಕ್ತಿ ಒಳ ಹೊಕ್ಕ ಕೂಡಲೇ ಹೋಟೇಲ್ ಮಾಲೀಕ ಕೃಷ್ಣ ಕಮಲಾಕರ ಹೆಗಡೆಯವರ (ಇವರೀಗ ಗತಿಸಿದ್ದಾರೆ) ಬಳಿ ಕೊರೆತ ಶುರುವಿಟ್ಟುಕೊಂಡರು. ಹೆಗಡೆಯವರೇ ಅವರಿಗೆ ನಮ್ಮನ್ನು ತೋರಿಸಿ, ’ಅವರು ೭ ಗಂಟೆಯಿಂದ ನಿಮಗೆ ಕಾಯ್ತಾ ಇದ್ದಾರೆ. ನಾವು ನಂತರ ಮಾತನಾಡೋಣ..’ ಎಂದು ಅವರನ್ನು ನಮ್ಮತ್ತ ಕಳಿಸಿದರು.


ನಮ್ಮ ಬಳಿ ಬಂದ ಕೂಡಲೇ ಸಂಪೂರ್ಣ ರಾಜಕೀಯ ಧಾಟಿಯಲ್ಲೇ ಶಿರಸಿಯ ಗುಣಗಾನ ಮಾಡತೊಡಗಿದರು. ಐದಾರು ನಿಮಿಷಗಳು ಮುಗಿದರೂ ಫಾಲ್ಸ್ ವಿಷಯಕ್ಕೆ ಆತ ಬರದಿದ್ದಾಗ ನಾವಾಗಿಯೇ ನಮ್ರವಾಗಿ ಜಲಪಾತಗಳ ಬಗ್ಗೆ ಕೇಳಬೇಕಾಯಿತು. ಆತ ಉಂಚಳ್ಳಿಯಿಂದ ಶುರುಮಾಡಿ, ಶಿವಗಂಗಾ ಹೆಸರು ಹೇಳಿ, ಬೆಣ್ಣೆ ಉಸುರಿ, ಬಹಳ ಕಷ್ಟದಲ್ಲಿ ವಾಟೆಹೊಳೆ ಹೆಸರು ನೆನಪು ಮಾಡಿಕೊಂಡು ಹೇಳುವಷ್ಟರಲ್ಲಿ, ’ಅವೆಲ್ಲಾ ನೋಡಿ ಆಗಿದೆ’ ಎಂಬ ನಮ್ಮ ಉತ್ತರದಿಂದ ಸುಸ್ತು ಹೊಡೆದಿದ್ದ. ನಮಗೂ ಈತನ ಬೊಕ್ಕಸ ಬರೀ ಬೊಗಳೆ ಎಂದು ಅರಿವಾಗತೊಡಗಿತ್ತು. ನಂತರ ಯಾರಿಗೋ ಕರೆ ಮಾಡಿ ಇನ್ನೆರಡು ಹೆಸರು ಹೇಳಿದ. ’ಅವನ್ನೂ ನೋಡಿ ಆಗಿದೆ’ ಎಂದಾಗ ಮತ್ತೊಂದು ಕರೆ ಮಾಡಿ ಮಗದೊಂದು ಹೆಸರು ಹೇಳಿದ. ’ಅದನ್ನೂ ನೋಡಿ ಆಗಿದೆ’ ಎಂದು ನಾವು ಹೇಳಿದಾಗ ಆತನಿಗೆ ಮಾತೇ ಹೊರಡದಂತಾಗಿತ್ತು.


ನಾವು ಎಂಟು ಮಂದಿ ಆತನನ್ನು ಎಲ್ಲಾ ದಿಕ್ಕುಗಳಿಂದ ಸುತ್ತುವರಿದು ಹೊಸ ಜಲಧಾರೆಯ ಮಾಹಿತಿ ಸಿಗಬಹುದೆಂದು ಕಣ್ಣರಳಿಸಿ ನೋಡುತ್ತಿದ್ದರೆ, ಆತ ನಮ್ಮಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದು ಸ್ಕೆಚ್ ಹಾಕತೊಡಗಿದ್ದ. ’ನನ್ನ ಮನೆಯಲ್ಲಿ ಒಂದು ಪುಸ್ತಕದಲ್ಲಿ ಶಿರಸಿ ತಾಲೂಕಿನ ಎಲ್ಲಾ ಫಾಲ್ಸ್‌ಗಳ ಲಿಸ್ಟ್ ಮಾಡಿದ್ದೇನೆ. ಅದನ್ನ ಈಗ ತಗೊಂಡು ಬರ್ತೇನೆ’ ಎಂದು ಹೊರಡಲು ಅಣಿಯಾದ. ’ವಾಪಾಸ್ ಬರ್ತೀರಾ ತಾನೆ..?’ ಎಂದು ವಿವೇಕ ಮಾರ್ಮಿಕವಾಗಿ ಕೇಳಿದಾಗ, ’ಹೀಂಗ್ ಹೋದೆ. ಹೀಂಗ್ ಬಂದೆ’ ಎಂದ ಆ ವ್ಯಕ್ತಿ ಸರಸರನೆ ಹೊರಗೆ ಹೆಜ್ಜೆ ಹಾಕಿದರು. ಒಂದೆರಡು ನಿಮಿಷಗಳ ನಂತರ ಆ ವ್ಯಕ್ತಿಯ ಮೊಬೈಲ್ ಸ್ವಿಚ್‍ಡ್ ಆಫ್!!!


ಈ ವ್ಯಕ್ತಿಯ ಬಗ್ಗೆ ನನಗೆ ಸಂಶಯವಿದ್ದುದರಿಂದ ನನ್ನ ಬಳಿ ’ಪ್ಲ್ಯಾನ್ ಬಿ’ ತಯಾರಾಗಿತ್ತು. ’ಏನ್ರೀ ಮಾಡೋದು ಈಗ..’ ಎಂದು ವಿವೇಕ್ ಚಡಪಡಿಸುತ್ತಿರುವಾಗ, ’ಪ್ಲ್ಯಾನ್ ಬಿ’ ಮಂಡಿಸಿದೆ. ಮಂಡಿಸಿದ ಕೂಡಲೇ ಕಾರ್ಯಗತಗೊಳಿಸಲು ಮುಂದಾದೆವು. ಈಗ ಪ್ರಯಾಣ, ಚಾರಣದ ಸ್ಥಾನವನ್ನು ಆಕ್ರಮಿಸಿತ್ತು. ಆ ದಿನ ಎರಡು ಜಲಧಾರೆಗಳನ್ನು ನೋಡಿದೆವು. ಎರಡಕ್ಕೂ ಚಾರಣವಿರಲಿಲ್ಲ.


ಜಲಧಾರೆಯಿರುವ ಹಳ್ಳಿಯಲ್ಲಿ ಹಿರಿಯರೊಬ್ಬರ ಭೇಟಿಯಾಯಿತು. ಅವರಲ್ಲಿ ದಾರಿ ಕೇಳಿದಾಗ ’ಅನೀಶ’ ಎಂಬ ಪೋರನನ್ನು ಮಾರ್ಗದರ್ಶಿಯಾಗಿ ಕಳುಹಿಸಿದರು. ವಯಸ್ಸು ಆರೇ ಆದರೂ ಮಾತಿನಲ್ಲಿ ತುಂಬಾ ಮುಂದೆ. ನಮ್ಮ ಬಗ್ಗೆ ಎಲ್ಲಾ ಮಾಹಿತಿ ಕೇಳಿ ಪಡಕೊಂಡ! ನಾವೆಲ್ಲರೂ ಆತನನ್ನು ಹಿಂಬಾಲಿಸಿದೆವು.


ತೋಟದ ನಡುವೆ ಅಡಗಿರುವ ಸಣ್ಣ ಜಲಧಾರೆ ಭೋರ್ಗರೆಯುತ್ತಿತ್ತು. ಸುಮಾರು ೪೦ ಅಡಿ ಎತ್ತರದಿಂದ ಧುಮುಕುವ ಈ ಹಳ್ಳ ನಂತರ ಹಾಗೇ ಮುಂದುವರೆದು ರಾಜ್ಯದ ಅತಿ ಸುಂದರ ಹಾಗೂ ಪ್ರಸಿದ್ಧ ಜಲಪಾತವೊಂದನ್ನು ನಿರ್ಮಿಸುತ್ತದೆ.


ಜಲಧಾರೆಯ ನೇರ ಮುಂದೆ ನಿಂತು ಚಿತ್ರ ತೆಗೆಯುವುದು ಅಸಾಧ್ಯವಾಗಿತ್ತು. ಬದಿಯಿಂದ ಸಮೀಪ ನುಸುಳಿ ಒಂದಷ್ಟು ಚಿತ್ರಗಳನ್ನು ತೆಗೆದೆವು.


ಜಲಧಾರೆಯ ರೌದ್ರಾವತಾರದ ಅಂದವೇ ಬೇರೆ. ಧುಮ್ಮಿಕ್ಕಿ ಹರಿಯುವಾಗ ಜಲಧಾರೆಯ ನಿಜವಾದ ಎತ್ತರದ ಅರಿವಾಗುವುದಿಲ್ಲ. ನೀರಿನ ಹರಿವು ಎತ್ತರವನ್ನು ಮರೆಮಾಚುತ್ತದೆ.


ಅಂದು ಜಲಧಾರೆಯ ಸೊಬಗನ್ನು ನಾವೆಲ್ಲಾ ಆನಂದಿಸಿದೆವು. ಶಿರಸಿಯ ’ಕಾಮೆಡಿ ಕ್ಲೋನ್’ನಿಂದ ನಿರಾಶದಾಯಕವಾಗಿ ಆರಂಭವಾದ ದಿನ ಈ ಜಲಧಾರೆ ಹಾಗೂ ಇನ್ನೊಂದು ಸಣ್ಣ ಜಲಧಾರೆಯ ಭೇಟಿಯ ಬಳಿಕ ಸಂತೋಷವಾಗಿಯೇ ಕೊನೆಗೊಂಡಿತು.

ಮಾಹಿತಿ: ರವಿ ಹೆಗಡೆ

ಭಾನುವಾರ, ಜನವರಿ 12, 2014

ತಾರಕೇಶ್ವರ ದೇವಾಲಯ - ಹೂಲಿ


ದಿಬ್ಬವೊಂದರ ಮೇಲೆ ನೆಲೆಗೊಂಡಿದ್ದಾನೆ ತಾರಕೇಶ್ವರ. ದಿಬ್ಬದ ಮೇಲೆ ತಲುಪಲು ಹೂಲಿ ಗ್ರಾಮಸ್ಥರು ಚೆನ್ನಾದ ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ. ಆಕರ್ಷಕವಾಗಿ ಕಾಣಬೇಕಾಗಿದ್ದ ದೇವಾಲಯ ಪಾಳು ಬಿದ್ದ ಮನೆಯಂತೆ ತೋರುತ್ತಿದೆ.


ಮುಖಮಂಟಪದಲ್ಲಿ ನಾಲ್ಕು ತರಹದ ವಿನ್ಯಾಸಗಳಿರುವ ಕಂಬಗಳಿವೆ ಮತ್ತು ಕಂಬಗಳು ಮಾತ್ರ ಇವೆ. ಸುತ್ತಲೂ ಇದ್ದ ಕಲ್ಲಿನ ಆಸನಗಳು ಇತಿಹಾಸವಾಗಿವೆ. ಮುಖಮಂಟಪಕ್ಕೆ ಮೂರು ದಿಕ್ಕಿನಿಂದ ದ್ವಾರಗಳಿದ್ದ ಕುರುಹುಗಳನ್ನು ಸ್ಪಷ್ಟವಾಗಿ ಕಾಣಬಹುದು. ಈಗ ಎಲ್ಲಾ ದಿಕ್ಕುಗಳಿಂದಲೂ ಪ್ರವೇಶಿಸಬಹುದು!


ಮುಖಮಂಟಪದ ಎರಡು ಕಂಬಗಳಲ್ಲಿ ಮಾತ್ರ ಆನೆ ಮತ್ತು ಮಕರಗಳ ಅಲಂಕಾರಿಕ ಕೆತ್ತನೆಗಳಿವೆ. ಅಂತೆಯೇ ಇನ್ನೆರಡು ಕಂಬಗಳಲ್ಲಿ ಕಲಶಗಳನ್ನು ಕಾಣಬಹುದು.


ಈ ದೇವಾಲಯದ ರಚನೆ ಇತರ ದೇವಾಲಯಗಳಿಗಿಂತ ಭಿನ್ನವಾಗಿದೆ. ನವರಂಗ ಪ್ರತ್ಯೇಕವಾಗಿರದೆ ಮುಖಮಂಟಪದ ನಟ್ಟನಡುವೆಯೇ ನಾಲ್ಕು ಸುಂದರ ಕಂಬಗಳ ನಡುವೆ ಇದೆ.


ಗರ್ಭಗುಡಿಯು ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯನ್ನು ಹೊಂದಿದ್ದು ಪಂಚಶಾಖ ದ್ವಾರವನ್ನು ಹೊಂದಿದೆ. ಪ್ರತಿ ತೋಳಿನಲ್ಲೂ ಪ್ರತ್ಯೇಕ ಕೆತ್ತನೆಗಳಿವೆ. ಎಂದೋ ಬಳಿದಿದ್ದ ಸುಣ್ಣವನ್ನು ಶ್ರಮವಹಿಸಿ ತಕ್ಕಮಟ್ಟಿಗೆ ಈಗ ತೆಗೆಯಲಾಗಿದ್ದರೂ ಐದನೇ ತೋಳಿನ ಸುಣ್ಣ ಹಾಗೇ ಉಳಿದುಕೊಂಡಿದೆ. ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ಇಲ್ಲಿ ದಿನಾಲೂ ಪೂಜೆ ಸಲ್ಲಿಸಲಾಗುತ್ತದೆ.


ಗಜಲಕ್ಷ್ಮೀಯ ಇಕ್ಕೆಲಗಳಲ್ಲಿ ಅಷ್ಟದಿಕ್ಪಾಲಕರಿದ್ದಾರೆ. ದಿಕ್ಪಾಲಕರ ಕೊನೆಯಲ್ಲಿ ವಾದ್ಯ ನುಡಿಸುವವರ ಜೊತೆಗೆ ದೇವರಿಗೆ ಏನೋ ಕಾಣಿಕೆ ತರುವ ಚಿತ್ರಣವಿದೆ.


ಶಾಖೆಗಳ ತಳಭಾಗದಲ್ಲಿ ಐದು ಮಾನವರೂಪದ ಕೆತ್ತನೆಗಳಿವೆ. ಶಾಖೆಗಳ ಪ್ರಮುಖ ಕೆತ್ತನೆಯೆಂದರೆ ನಾಟ್ಯಜೋಡಿಗಳದ್ದು. ಗಂಡು ಯಾವುದಾದರೂ ಸಂಗೀತ/ವಾದ್ಯ ಉಪಕರಣವನ್ನು ನುಡಿಸುತ್ತಿದ್ದರೆ ಅದಕ್ಕನುಗುಣವಾಗಿ ಹೆಣ್ಣು ನೃತ್ಯ ಮಾಡುತ್ತಿರುವುದನ್ನು ಉತ್ತಮವಾಗಿ ಕೆತ್ತಲಾಗಿದೆ. ಇನ್ನೊಂದು ಶಾಖೆಯಲ್ಲಿ ಸಂಗೀತಗಾರರನ್ನು ಮಾತ್ರ ತೋರಿಸಲಾಗಿದೆ.


ಈ ಏಕಕೂಟ ದೇವಾಲಯದ ಗೋಪುರವನ್ನು ನೋಡಿದರೆ ವ್ಯಥೆಯಾಗುತ್ತದೆ. ಒಂದಷ್ಟು ಕಲ್ಲುಗಳನ್ನು ಒಟ್ಟುಗೂಡಿಸಿ ’ಗೋಪುರ’ದ ಹಾಗೆ ಕಾಣುವಂತೆ ಪೇರಿಸಿ ಇಡಲಾಗಿದೆ. ಅತ್ಯಾಕರ್ಷವಾಗಿದ್ದ ಕದಂಬನಗರ ಶೈಲಿಯ ಗೋಪುರ ಧರಾಶಾಹಿಯಾಗಿದೆ. ಗೋಪುರದ ಮತ್ತು ಗರ್ಭಗುಡಿಯ ಹೊರಗೋಡೆಯ ಕಲ್ಲುಗಳು ಒಂದೊಂದಾಗಿ ಕಳಚಿಕೊಳ್ಳುತ್ತಿವೆ. ಗಿಡಗಂಟಿಗಳು ಬೆಳೆಯಲಾರಂಭಿಸಿವೆ. ಮೆಲ್ಛಾವಣಿಯ ಸುತ್ತಲೂ ಇದ್ದ ಕೈಪಿಡಿಯೂ ನಾಶವಾಗಿದ್ದು ಒಂದೆರಡು ಕಡೆಗಳಲ್ಲಿ ಮಾತ್ರ ಅಲ್ಪ ಸ್ವಲ್ಪ ಉಳಿದುಕೊಂಡಿದ್ದು ಅವುಗಳಲ್ಲಿ ಸುಂದರ ಕೆತ್ತನೆ ಕೆಲಸಗಳನ್ನು ಕಾಣಬಹುದು.


ಹೂಲಿಯಲ್ಲಿ ಈ ದೇವಾಲಯದಲ್ಲಿ ಮಾತ್ರ ಯಜ್ಞಕುಂಡವನ್ನು ಕಾಣಬಹುದು. ಮೂರು ಬಿಲ್ವಮರಗಳು ದೇವಾಲಯದ ಮುಂದೆನೇ ಇದ್ದು ಪರಿಸರದ ಅಂದಕ್ಕೆ ಇಂಬು ನೀಡುತ್ತದೆ. ಪಾರ್ಶ್ವದಲ್ಲೇ ಇರುವ ಬೆಟ್ಟವನ್ನು ತುಸು ಏರಿದರೆ ಯಜ್ಞಕುಂಡ ಮತ್ತು ಬಿಲ್ವಮರಗಳು ತಾರಕೇಶ್ವರ ದೇವಾಲಯವು ಸುಂದರವಾಗಿ ಕಾಣುವುದರಲ್ಲಿ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸುವುದನ್ನು ಕಾಣಬಹುದು.


ದೇವಾಲಯದ ಎಡಕ್ಕೆ ೩೦-೪೦ರಷ್ಟು ಕಂಬಗಳಿರುವ ಬಹಳ ತಗ್ಗು ಛಾವಣಿಯನ್ನು ಹೊಂದಿರುವ ಕಟ್ಟಡದ ರಚನೆಯಿದೆ. ಇದೇನೆಂದು ತಿಳಿಯಲಿಲ್ಲ. ದೂರದಿಂದ ನೋಡಿದರೆ ಬೆಟ್ಟದ ಬುಡದಲ್ಲೇ ದಿಬ್ಬವೊಂದರ ಮೇಲಿರುವ ತಾರಕೇಶ್ವರ ದೇವಾಲಯ ಅತ್ಯಾಕರ್ಷವಾಗಿ ಕಾಣುತ್ತದೆ. ಸಮೀಪ ತೆರಳಿದರೆ ಮಾತ್ರ ಅದರ ದುರವಸ್ಥೆ ಮನದಟ್ಟಾಗುವುದು.

ಅಂದು - ಇಂದು:


ಕಪ್ಪುಬಿಳುಪಿನಲ್ಲಿರುವುದು ತಾರಕೇಶ್ವರ ದೇವಾಲಯದ ೧೮೭೪ರಲ್ಲಿ ತೆಗೆದ ಚಿತ್ರ ಹಾಗೂ ವರ್ಣಚಿತ್ರ ೨೦೧೧ರದ್ದು. ದೇವಾಲಯ ಅಂದು ಯಾವ ಶಿಥಿಲ ಸ್ಥಿತಿಯಲ್ಲಿತ್ತೋ ಇಂದಿಗೂ ಅದೇ ಸ್ಥಿತಿಯಲ್ಲಿದೆ. ಕಪ್ಪುಬಿಳುಪು ಚಿತ್ರದಲ್ಲಿ ಕಾಣುವ ಸಣ್ಣ ಬಿಲ್ವಗಿಡ ಇಂದು ಮರವಾಗಿ ಬೆಳೆದಿದೆ (ಇದು ನನ್ನ ಊಹೆ ಮಾತ್ರ).