ಗುರುವಾರ, ಅಕ್ಟೋಬರ್ 24, 2013

ಚಾರಣಕ್ಕೆ ಬಂದ ಕ್ರಿಕೆಟಿಗ


ಚಾರಣಕ್ಕೆ ಹೊರಡುವ ಒಂದೆರಡು ದಿನಗಳ ಮೊದಲು, ’ಯಾರೆಲ್ಲ ಬರುತ್ತಿದ್ದಾರೆ’ ಎಂದು ವಿವೇಕ್ ಬಳಿ ಕೇಳುವುದು ವಾಡಿಕೆ. ಅಂದು ನಿತಿನ್ ಬಿಲ್ಲೆಯ ಹೆಸರನ್ನು ವಿವೇಕ್ ಹೇಳಿದ ಕೂಡಲೇ ಆಶ್ಚರ್ಯವಾಯಿತು. ’ಓ’ ಎಂಬ ಉದ್ಗಾರ ತೆಗೆದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಡೆಸುವ ಧಾರವಾಡ-ಹುಬ್ಬಳ್ಳಿ ಕ್ರಿಕೆಟ್ ಲೀಗ್‍ನಲ್ಲಿ ವಿವೇಕ್ ಆಡುವ ಎಸ್‍ಡಿಎಮ್ ತಂಡದ ಪರವಾಗಿಯೇ ನಿತಿನ್ ಬಿಲ್ಲೆ ಕೂಡಾ ಆಡುವುದರಿಂದ ಇಬ್ಬರಿಗೂ ಪರಿಚಯ.


ನಿತಿನ್ ಬಿಲ್ಲೆ ಒಬ್ಬ ಕ್ರೀಡಾಳು. ಕ್ರಿಕೆಟ್ ಅವರ ಜೀವನ. ಸಣ್ಣ ವಯಸ್ಸಿನಿಂದಲೇ ಕ್ರಿಕೆಟ್ ಬಗ್ಗೆ ಒಲವು ಹೊಂದಿದ್ದ ನಿತಿನ್, ರಾಜ್ಯ ಕಿರಿಯರ ತಂಡವನ್ನು ೧೫, ೧೯ ಹಾಗೂ ೨೨ರ ವಯೋಮಿತಿಯ ಪಂದ್ಯಾವಳಿಗಳಲ್ಲಿ ಪ್ರತಿನಿಧಿಸಿದ್ದಾರೆ. ಪದವಿ ಶಿಕ್ಷಣ ಮುಗಿಸಿದ ಕೂಡಲೇ ’ಸ್ಪೋರ್ಟ್ಸ್ ಕೋಟಾ’ದಲ್ಲಿ ಇಂಡಿಯನ್ ರೈಲ್ವೇಸ್‍ನಲ್ಲಿ ಉದ್ಯೋಗ ದೊರಕಿತು. ಕಳೆದ ೩ ವರ್ಷಗಳಿಂದ ಅವರು ಹುಬ್ಬಳ್ಳಿಯಲ್ಲಿ ರೈಲ್ವೇಸ್ ಉದ್ಯೋಗಿ. ದಿನಾಲೂ ಮುಂಜಾನೆ ಐದು ಗಂಟೆಯಿಂದ ಮೂರು ತಾಸು ಧಾರವಾಡದ ಎಸ್‍ಡಿಎಮ್ ಕಾಲೇಜು ಮೈದಾನದಲ್ಲಿ ನಿತಿನ್ ಕಠಿಣ ತಾಲೀಮು ಮಾಡುತ್ತಾರೆ. ಕಟ್ಟುಮಸ್ತಾದ ಆಕರ್ಷಕ ಮೈಕಟ್ಟು ಹೊಂದಿದ್ದಾರೆ. ಮಾತಿನಲ್ಲಿ ನಯ ವಿನಯ ಗೌರವ ಎದ್ದು ಕಾಣುತ್ತದೆ. ಮಾತು ಕಡಿಮೆ. ಆಲಿಸುವುದೇ ಹೆಚ್ಚು.


ನಾನು ಕ್ರಿಕೆಟ್ ಬಗ್ಗೆ ಅದರಲ್ಲೂ ರಣಜಿ ಪಂದ್ಯಗಳ ಬಗ್ಗೆ ಮಾತನಾಡಲು ಆರಂಭಿಸಿದರೆ, ಎದುರಿದ್ದವನೇ ’ಸಾಕು’ ಎನ್ನುವವರೆಗೂ ಮಾತು ಮುಂದುವರಿಯುತ್ತದೆ. ಹಾಗಿರುವಾಗ ರಣಜಿ ಆಟಗಾರನೊಬ್ಬ ಸಿಕ್ಕಾಗ ನಾನು ಯಾವ ಪರಿ ಮಾತನಾಡಿರಬಹುದು? ನಿಜ ಹೇಳಬೇಕೆಂದರೆ ನಿತಿನ್ ಬಳಿ ಪರಿಚಯ, ಕುಶಲೋಪರಿ ಮತ್ತು ಒಂದೆರಡು ಮಾತುಗಳನ್ನು ಬಿಟ್ಟರೆ ಹೆಚ್ಚಿಗೆ ಮಾತನಾಡುವ ಗೋಜಿಗೇ ನಾನು ಹೋಗಲಿಲ್ಲ. ಕ್ರಿಕೆಟಿಗರು ಕ್ರಿಕೆಟ್ ಬಗ್ಗೆ ಹೆಚ್ಚು ಮಾತನಾಡಲು ಎಂದಿಗೂ ಉತ್ಸುಕರಾಗಿರುವುದಿಲ್ಲ. ದೈನಂದಿನ ಕ್ರಿಕೆಟ್ ಅಭ್ಯಾಸ, ತಾಲೀಮು, ಕೆಲಸ ಇವುಗಳಿಂದ ಸ್ವಲ್ಪ ಬಿಡುವು ಪಡೆಯಲು ಕ್ರಿಕೆಟಿಗರು ಬಹಳ ಅಪರೂಪಕ್ಕೆ ಪ್ರವಾಸ/ಚಾರಣಕ್ಕೆ ಹೋಗುತ್ತಾರೆ. ಅಲ್ಲಿಯೂ ಕ್ರಿಕೆಟ್ ಬಗ್ಗೆ ಮಾತನಾಡಿ ಅವರಿಗೆ ಬೋರ್ ಮಾಡುವುದು ನನಗಿಷ್ಟವಿರಲಿಲ್ಲ. ನಿತಿನ್ ಅಂದು ತನ್ನ ಜೀವನದಲ್ಲೇ ಮೊದಲ ಬಾರಿಗೆ ಚಾರಣಕ್ಕೆ ಬಂದಿದ್ದರು. ನನ್ನ ಕೊರೆತದಿಂದ ಕಂಗಾಲಾಗಿ ಅದೇ ಅವರ ಕೊನೆಯ ಚಾರಣ ಆಗಬಾರದು ಎಂಬ ಉದ್ದೇಶವೂ ಇತ್ತು!


೨೦೧೧ರಲ್ಲಿ ತನ್ನ ೨೨ನೇ ವಯಸ್ಸಿನಲ್ಲಿ ರೈಲ್ವೇಸ್ ಪರವಾಗಿ ಚೊಚ್ಚಲ ರಣಜಿ ಪಂದ್ಯವನ್ನಾಡಿದ ನಿತಿನ್, ಕಳೆದೆರಡು ಋತುಗಳಲ್ಲಿ ೯ ಪಂದ್ಯಗಳಲ್ಲಿ ಆಡಿದ್ದಾರೆ. ಸಾಧಾರಣ ಪ್ರದರ್ಶನ ನೀಡಿದ್ದಾರೆ. ಬಲಿಷ್ಠ ತಂಡಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೂ, ದುರ್ಬಲ ತಂಡಗಳ ವಿರುದ್ಧ ಹೆಚ್ಚು ಓಟಗಳನ್ನು ಗಳಿಸುವಲ್ಲಿ ನಿತಿನ್ ಯಶಸ್ಸು ಕಾಣಲಿಲ್ಲ. ಈ ಬಾರಿ ರೈಲ್ವೇಸ್ ತಂಡಕ್ಕೆ ಮತ್ತೆ ಆಯ್ಕೆಯಾಗಿರುವ ನಿತಿನ್, ಈಗ ಮಳೆಗಾಲ ಮುಗಿದ ಕೂಡಲೇ (ಬಹುಶ: ಸೆಪ್ಟೆಂಬರ್ ಕೊನೆಯ ವಾರದಲ್ಲಿ) ರೈಲ್ವೇಸ್ ತಂಡದ ಕೇಂದ್ರವಾಗಿರುವ ದೆಹಲಿಯ ಕರ್ನೈಲ್ ಸಿಂಗ್ ಕ್ರೀಡಾಂಗಣದಲ್ಲಿ ಹಾಜರಿರಬೇಕು. ರೈಲ್ವೇಸ್ ತಂಡದ ಎಲ್ಲಾ ಆಟಗಾರರೂ ಇಲ್ಲಿ ಒಂದುಗೂಡಿ ಒಂದು ತಿಂಗಳ ಕ್ಯಾಂಪ್‍ನಲ್ಲಿ ಪಾಲ್ಗೊಳ್ಳುತ್ತಾರೆ. ನವೆಂಬರ್ ಮೊದಲ ವಾರದಿಂದ ಹೊಸ ರಣಜಿ ಋತು ಆರಂಭ. ನಂತರ ಆಟ, ತಾಲೀಮು, ಪ್ರಯಾಣ, ಇತ್ಯಾದಿಗಳ ಬಿಡುವಿಲ್ಲದ ದಿನಚರಿ. ಈ ಋತುವಿನಿಂದ ಎರಡು ರಣಜಿ ಪಂದ್ಯಗಳ ನಡುವೆ ನಾಲ್ಕು ದಿನಗಳ ಅಂತರವಿಡುವ ಮಾತುಕತೆ ನಡೆಯುತ್ತಿದೆ. ಹಾಗಾದರೆ ಆಟಗಾರರಿಗೆ ಸ್ವಲ್ಪ ಬಿಡುವು ಸಿಗುತ್ತದೆ, ಇಲ್ಲವಾದಲ್ಲಿ ಈಗಿರುವ ಮೂರು ದಿನಗಳ ಅಂತರ ಏನೇನೂ ಸಾಲದು.


ನಿತಿನ್ ನೀಡಿದ ಮಾಹಿತಿಯ ಪ್ರಕಾರ ಯೆರೆ ಗೌಡ ಈಗ ರೈಲ್ವೇಸ್ ಬ್ಯಾಟಿಂಗ್ ಕೋಚ್! ಸಂಜಯ್ ಬಾಂಗರ್ ಕಳೆದ ಋತುವಿನಲ್ಲಿ ನಿವೃತ್ತಿ ಹೊಂದಿರುವುದರಿಂದ, ಈ ಋತುವಿನಲ್ಲಿ ತಂಡವನ್ನು ಮುನ್ನಡೆಸುವವರು ಮುರಳಿ ಕಾರ್ತಿಕ್. ಹೊಸ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಲಿ ಎಂದು ನಿತಿನ್ ಬಿಲ್ಲೆಗೆ ಶುಭ ಹಾರೈಕೆಗಳು.


ಚಾರಣದುದ್ದಕ್ಕೂ ಮಳೆ ಸುರಿಯುತ್ತಿದ್ದು, ತನ್ನ ಮೊದಲ ಚಾರಣವನ್ನು ನಿತಿನ್ ಆನಂದಿಸಿದರು. ಇನ್ನು ಮುಂದೆ ನಿತಿನ್ ಚಾರಣಕ್ಕೆ ಬಂದರೆ ಅವರು ಸ್ವಲ್ಪ ಎಚ್ಚರ ವಹಿಸುವುದು ಅಗತ್ಯ. ಅವರ ಅದೃಷ್ಟ ಚೆನ್ನಾಗಿತ್ತು, ಈ ಬಾರಿ ಏನೂ ಆಗದೆ ಪಾರಾದರು. ಜಲಧಾರೆಯನ್ನು ಕಂಡು ಸಂತೋಷಗೊಂಡ ನಿತಿನ್, ತನ್ನಿಬ್ಬರು ಗೆಳೆಯರೊಂದಿಗೆ ಜಲಧಾರೆಯ ಮೇಲ್ಭಾಗದಲ್ಲಿ, ನೀರು ಕೆಳಗೆ ಧುಮುಕುವಲ್ಲಿ ನಿಂತು ಬಗ್ಗಿ ಕೆಳಗೆ ನೋಡತೊಡಗಿದರು. ಇನ್ನೇನು ಹಿಂತಿರುಗಬೇಕು ಎನ್ನುವಷ್ಟರಲ್ಲಿ ಜಾರಿ ಸಮತೋಲನ ಕಳಕೊಂಡರು. ’ಅಷ್ಟು ಮುಂದೆ ಹೋಗಬೇಡಿ, ಹಿಂದೆ ಬನ್ನಿ’ ಎಂದು ಸೂಚನೆ ನೀಡುತ್ತಿದ್ದ ನಮಗೆ, ಅವರು ಜಾರಿದ್ದನ್ನು ಕಂಡು ಮೈನಡುಕ ಉಂಟಾಯಿತು. ಅವರ ಸಮೀಪದಲ್ಲೇ ಇದ್ದ ನಮ್ಮ ಮಾರ್ಗದರ್ಶಿ ಅವರನ್ನು ಹಿಡಿದಿದ್ದರಿಂದ ಕೆಳಗೆ ಬೀಳುವುದರಿಂದ ನಿತಿನ್ ಪಾರಾದರು. ಇಲ್ಲವಾದಲ್ಲಿ ಜಾರಿ ನೇರವಾಗಿ ಜಲಧಾರೆಯ ಕೆಳಗೆ ಬಿದ್ದುಬಿಡುತ್ತಿದ್ದರು.


ಕ್ರೀಡೆಯಲ್ಲಿ ಎದುರಾಳಿಯನ್ನು ಗೌರವಿಸಿದರೆ ಮಾತ್ರ ಜಯಿಸುವ ಅವಕಾಶ ಹೆಚ್ಚಾಗಿರುತ್ತದೆ. ಚಾರಣವೂ ಹಾಗೆಯೇ ತಾನೆ? ಪ್ರಕೃತಿಯನ್ನು ಗೌರವಿಸಿದರೆ ಮಾತ್ರ ಚಾರಣವನ್ನು ಸುರಕ್ಷಿತವಾಗಿ ಮುಗಿಸುವ ಅವಕಾಶ ಹೆಚ್ಚಾಗಿರುತ್ತದೆ.

ಭಾನುವಾರ, ಅಕ್ಟೋಬರ್ 20, 2013

ಬುಧವಾರ, ಅಕ್ಟೋಬರ್ 16, 2013

ಚನ್ನಕೇಶವ ದೇವಾಲಯ - ಆರಕೆರೆ


ಅರಕೆರೆಯ ಚನ್ನಕೇಶವನ ನೆಲೆ ಸಣ್ಣದಾದರೂ ಚೊಕ್ಕವಾಗಿರುವ ದೇವಾಲಯ. ಪುರಾತತ್ವ ಇಲಾಖೆ ಸುತ್ತಲೂ ಬೇಲಿ ಹಾಕಿಸಿ ದೇವಾಲಯಕ್ಕೆ ಕಾವಲುಗಾರನೊಬ್ಬನನ್ನು ನೇಮಿಸಿದ್ದು, ಚೆನ್ನಾಗಿ ನೋಡಿಕೊಳ್ಳುತ್ತಿದೆ.


ತ್ರಿಕೂಟ ಶೈಲಿಯ ಈ ದೇವಾಲಯದಲ್ಲಿ ಪ್ರಮುಖ ಗರ್ಭಗುಡಿಯ ಮೇಲೆ ಮಾತ್ರ ಗೋಪುರವಿದ್ದು, ಗೋಪುರದ ಮೇಲ್ಮೈಯಲ್ಲಿ ಯವುದೇ ಶಿಲ್ಪಕಲೆಯಿಲ್ಲ. ದೇವಾಲಯದ ಮುಖಮಂಟಪ ಬಿದ್ದುಹೋಗಿದ್ದು, ಇಕ್ಕೆಲಗಳಲ್ಲಿರುವ ೨ ಕಲ್ಲಿನ ಆಸನಗಳು ಮಾತ್ರ ಉಳಿದಿವೆ. ಎಲ್ಲಾ ೩ ಗರ್ಭಗುಡಿಗಳಿಗೆ ಸಾಮಾನ್ಯ ನವರಂಗವಿದ್ದು, ಪ್ರಮುಖ ಗರ್ಭಗುಡಿಗೆ ಮಾತ್ರ ಅಂತರಾಳವಿದೆ.


ಪ್ರಮುಖ ಗರ್ಭಗುಡಿಯಲ್ಲಿ ಚನ್ನಕೇಶವನ ಮೂರ್ತಿಯಿದೆ. ಬಲಕ್ಕಿರುವ ಗರ್ಭಗುಡಿಯಲ್ಲಿ ಲಕ್ಷ್ಮೀನರಸಿಂಹನ ಮೂರ್ತಿಯಿದ್ದು ಎಡಕ್ಕಿರುವ ಗರ್ಭಗುಡಿಯಲ್ಲಿ ವೇಣುಗೋಪಾಲನ ಮೂರ್ತಿಯಿದೆ. ಎಲ್ಲಾ ೩ ಮೂರ್ತಿಗಳು ಕರಿಕಲ್ಲಿನದ್ದಾಗಿದ್ದು ಬಹಳ ಸುಂದರವಾಗಿವೆ.


ದೇವಾಲಯದ ಹೊರಗೋಡೆಯಲ್ಲಿ ಸುಂದರ ಭಿತ್ತಿ ಶಿಲ್ಪಗಳಿವೆ. ಈ ಭಿತ್ತಿಚಿತ್ರಗಳನ್ನು ಒತ್ತೊತ್ತಾಗಿ ಕೆತ್ತಲಾಗದೆ ಸ್ವಲ್ಪ ಅಂತರದಲ್ಲಿ ಕೆತ್ತಲಾಗಿದೆ. ಈ ಕೆತ್ತನೆಗಳೇ ಈ ದೇವಾಲಯದ ಪ್ರಮುಖ ಅಂಶ.


ಲಕ್ಷ್ಮೀನರಸಿಂಹ ದೇವರ ಗರ್ಭಗುಡಿಯ ಹೊರಗೋಡೆಯಲ್ಲಿ ವಿಷ್ಣುವಿನ ಒಂಬತ್ತು ಅವತಾರಗಳನ್ನು ಬಿಂಬಿಸುವ ಕೆತ್ತನೆಗಳಿವೆ. ಸರಿಯಾದ ಮಾಹಿತಿ ನೀಡುವವರಿದ್ದರೆ ಕೆತ್ತನೆಗಳ ಬಗ್ಗೆ ತಿಳಿಕೊಳ್ಳಬಹುದಿತ್ತು.

ಬುಧವಾರ, ಅಕ್ಟೋಬರ್ 09, 2013

ಮತ್ತೆ ಸಿಕ್ಕಳು ರಕ್ಷಿತಾ!!


ಈ ಹಳ್ಳಿಗೆ ೨೦೦೫ರಲ್ಲಿ ಮೊದಲ ಬಾರಿ ತೆರಳಿದ್ದೆ. ಆಗ ನನಗೆ ಮಾರ್ಗದರ್ಶಕನಾಗಿ ಬಂದಿದ್ದ ಹನ್ಮಂತುವಿನ ಮಗಳು ರಕ್ಷಿತಾಗೆ ಎರಡು ವರ್ಷ ಪ್ರಾಯ. ಎಂಟು ವರ್ಷಗಳ ಬಳಿಕ ಮತ್ತದೇ ಹಳ್ಳಿಯತ್ತ ಚಾರಣಕ್ಕೆ ತೆರಳಿದಾಗ ರಕ್ಷಿತಾ ಮತ್ತೆ ಸಿಗುತ್ತಾಳೆ ಎಂಬ ಕಲ್ಪನೆಯೇ ಇರಲಿಲ್ಲ.


ಹಳ್ಳಿಯ ಶಾಲೆ ಬಳಿ ಸುಳಿದಾಗ ಅಲ್ಲಿನ ಮೇಷ್ಟ್ರ ಪರಿಚಯವಾಯಿತು. ಇವರೊಂದಿಗೆ ಹರಟುತ್ತ ನಾನು ಎಂಟು ವರ್ಷದ ಮೊದಲು ಬಂದ ವಿಷಯ ಮಾತನಾಡುತ್ತಿರುವಾಗ, ’ರಕ್ಷಿತಾ ಇಲ್ಲೇ ಶಾಲೆಯಲ್ಲೇ ಇದ್ದಾಳೆ, ಬನ್ನಿ’ ಎಂದು ನಮ್ಮನ್ನು ಶಾಲೆಯೊಳಗೆ ಆಮಂತ್ರಿಸಿದರು. ಒಳ ಬಂದ ಕೂಡಲೇ ’ನಮಸ್ಕಾರ ಸಾರ್..’ ಎಂದು ವಿದ್ಯಾರ್ಥಿಗಳು ನಮ್ಮನ್ನು ಸ್ವಾಗತಿಸಿದರು. ಅಲ್ಲೇ ಇದ್ದಳು ರಕ್ಷಿತಾ. ಮೇಷ್ಟ್ರ ಪರವಾನಿಗೆ ಪಡೆದು ಒಂದೆರಡು ಚಿತ್ರಗಳನ್ನು ತೆಗೆದೆವು. ಈಗ ಆಕೆ ಐದನೇ ತರಗತಿಯ ವಿದ್ಯಾರ್ಥಿನಿ.

ಗುರುವಾರ, ಅಕ್ಟೋಬರ್ 03, 2013

ಮಲ್ಲೇಶ್ವರ ದೇವಾಲಯ - ಹುಲಿಕಲ್


ಹುಲಿಕಲ್‍ನಲ್ಲಿರುವ ಕಾಲುವೆಯ ಬದಿಯಲ್ಲೇ ಸ್ವಲ್ಪ ದೂರ ಸಾಗಿದಾಗ ಸುಂದರ ಕೆರೆಯೊಂದರ ತಟದಲ್ಲಿ ಮಲ್ಲೇಶ್ವರ ದೇವಾಲಯ ಕಾಣಿಸಿತು. ದೇವಾಲಯ ಸ್ವಲ್ಪ ಕೆಳಮಟ್ಟದಲ್ಲಿರುವಂತೆ ತೋರುತ್ತಿತ್ತು. ಅಲ್ಲೇ ಕಾರು ನಿಲ್ಲಿಸಿ ಕೆರೆಯ ಅಂದವನ್ನು ಆಸ್ವಾದಿಸಿ ದೇವಾಲಯದತ್ತ ಹೆಜ್ಜೆ ಹಾಕಿದಾಗ ಆಶ್ಚರ್ಯ!


ಸಣ್ಣ ಹೊಂಡವೊಂದರಲ್ಲಿ ಈ ದೇವಾಲಯವಿದೆ. ಹಿಂದಿನ ದಿನ ಮಳೆಯಾಗಿದ್ದರಿಂದ ಹೊಂಡದಲ್ಲಿ ನೀರು ತುಂಬಿತ್ತು. ನೀರ ನಡುವೆ ಮಲ್ಲೇಶ್ವರ! ಇಲ್ಲಿ ಪ್ರಾಚ್ಯ ವಸ್ತು ಇಲಾಖೆ ಪ್ರಶಂಸನೀಯ ಕೆಲಸ ಮಾಡಿದೆ. ಶಿಥಿಲಗೊಂಡಿದ್ದ ದೇವಾಲಯವನ್ನು ಅಲ್ಲಲ್ಲಿ ತೇಪೆ ಹಾಕಿ ಮೂಲ ರೂಪಕ್ಕೆ ತರುವ ಸಫಲ ಪ್ರಯತ್ನವನ್ನು ಮಾಡಿದೆ.


ಎರಡು ಕಂಬಗಳ ಹೊರಚಾಚು ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನೊಳಗೊಂಡಿರುವ ಈ ದೇವಾಲಯದಲ್ಲಿ ದಿನಾಲೂ ಪೂಜೆ ನಡೆಯುತ್ತದೆ. ದೇವಾಲಯದ ಒಳಗೆಲ್ಲಾ ನೀರು. ಆ ನೀರಿನಲ್ಲಿ ಅರ್ಚಕರು ಹೇಗೆ ಪೂಜೆ ಸಲ್ಲಿಸುತ್ತಾರೋ...


ಗೋಪುರವನ್ನು ಎರಡು ತಾಳಗಳಲ್ಲಿ ನಿರ್ಮಿಸಲಾಗಿದ್ದು, ಮೇಲಿರುವ ಪದ್ಮದ ಮೇಲೆ ಸುಂದರ ಕಲಶವಿದೆ. ಹೊಯ್ಸಳ ಲಾಂಛನ (ಸಳ ಸಿಂಹದೊಡನೆ ಕಾದಾಡುವ ಕೆತ್ತನೆ) ಕಣ್ಮರೆಯಾಗಿದೆ. ಶಿಖರ ಲಾಂಛನ ಫಲಕದಲ್ಲಿನ ಕೆತ್ತನೆ ಅಳಿಸಿಹೋಗಿದೆ.


ದೊರಕಿರುವ ಶಿಲಾಶಾಸನವೊಂದನ್ನು ಮುಖಮಂಟಪದ ಪಾರ್ಶ್ವದಲ್ಲಿರಿಸಲಾಗಿದೆ. ಪ್ರಸ್ತುತ ನೀರು ತುಂಬಿದ ಸ್ಥಿತಿಯಲ್ಲಿ ಈ ಶಿಲಾಶಾಸನ, ನೀರಿನ ಮಟ್ಟ ಅಳೆಯುವ ಮಾಪನದಂತೆ ತೋರುತ್ತಿತ್ತು!


ದೇವಾಲಯದ ಸಮೀಪದ ಪರಿಸರ ತುಂಬಾನೇ ಚೆನ್ನಾಗಿದೆ. ಅಲ್ಲೊಂದಷ್ಟು ಸಮಯ ವಿರಮಿಸಿದರೂ ಅಲ್ಲಿಂದ ಕದಲಲು ಮನಸ್ಸೊಪ್ಪುತ್ತಿರಲಿಲ್ಲ. ಈ ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿ (ನಿರ್ಮಾತೃ ಮತ್ತು ನಿರ್ಮಾಣದ ವರ್ಷ) ನನಗೆ ದೊರಕಲಿಲ್ಲ. ಬಲ್ಲವರು ತಿಳಿಸಿದರೆ ಉಪಕಾರವಾಗುವುದು.