ಸೋಮವಾರ, ಮೇ 13, 2013

ಬನಶಂಕರಿ ದೇವಾಲಯ - ಅಮರಗೋಳ


ಇಲ್ಲಿ ದೊರೆತಿರುವ ಒಂದೇ ಒಂದು ಶಾಸನದಲ್ಲಿ ಅಮರಗೋಳವನ್ನು ’ಆಂಬರಗೋಳ’ವೆಂದು ಕರೆಯಲಾಗಿದೆ. ಮೊದಲು ಪ್ರತ್ಯೇಕ ಊರಾಗಿದ್ದ ಅಮರಗೋಳ ಇಂದು ತನ್ನ ಅಕ್ಕಪಕ್ಕದಲ್ಲಿರುವ ಅವಳಿ ನಗರಗಳ ವ್ಯಾಪಕ ಬೆಳವಣಿಗೆಯಿಂದ ಅವುಗಳಲ್ಲಿ ಒಂದಾಗಿಹೋಗಿದೆ. ಇಲ್ಲಿರುವ ಬನಶಂಕರಿ ದೇವಾಲಯ ಭೇಟಿ ನೀಡಲು ಯೋಗ್ಯವಾದಂತಹ ಆಕರ್ಷಕ ದೇವಾಲಯ.


ಇದೊಂದು ದ್ವಿಕೂಟ ದೇವಾಲಯ. ಗರ್ಭಗುಡಿಗಳು, ಪ್ರತ್ಯೇಕ ತೆರೆದ ಅಂತರಾಳಗಳನ್ನು ಮತ್ತು ಸಾಮಾನ್ಯ ನವರಂಗವನ್ನು ಹೊಂದಿವೆ. ದೇವಾಲಯದ ಎರಡು ಮುಖಮಂಟಪಗಳು ಗರ್ಭಗುಡಿಗಳಿರುವ ದಿಕ್ಕಿಗೇ ಇವೆ ಮತ್ತು ಇವು ನವರಂಗಕ್ಕೇ ತೆರೆದುಕೊಳ್ಳುತ್ತವೆ. ಶಿಖರವು ಬಿದ್ದುಹೋಗಿದ್ದು ಹೊರಗೋಡೆಯಲ್ಲಿ ಸಣ್ಣ ಸಣ್ಣ ಗೋಪುರಗಳನ್ನು ಮತ್ತು ಖಾಲಿಯಿರುವ ದೇವಕೋಷ್ಠಗಳನ್ನು ಕಾಣಬಹುದು.


ಭಾಗಶ: ಪಾಳುಬಿದ್ದಿದ್ದ ದೇವಾಲಯವನ್ನು ಪ್ರಾಚ್ಯ ವಸ್ತು ಇಲಾಖೆ ದುರಸ್ತಿಪಡಿಸಿ ಈಗ ಚೆನ್ನಾಗಿ ಕಾಪಾಡಿಕೊಂಡಿದೆ. ದೇವಾಲಯದ ಸುತ್ತಲೂ ಸ್ಥಳವಿದ್ದು ಪ್ರಾಂಗಣ ರಚಿಸಲಾಗಿದೆ. ದೇವಾಲಯ ನೋಡಿಕೊಳ್ಳಲು ಮತ್ತು ಪ್ರವಾಸಿಗರು ಬಂದಾಗ ಗರ್ಭಗುಡಿಗಳ ಬೀಗ ತೆಗೆಯಲು ಒಬ್ಬ ನೌಕರನೂ ಇದ್ದಾನೆ.


ನವರಂಗದಲ್ಲಿ ಒಟ್ಟು ೧೬ ಕಂಬಗಳಿವೆ. ಇವುಗಳಲ್ಲಿ ನಟ್ಟನಡುವೆ, ’ನಾಟ್ಯರಂಗ’ ಎಂದು ಕರೆಯಲ್ಪಡುವ ಅರ್ಧ ಅಡಿ ಎತ್ತರವಿರುವ ವೇದಿಕೆಯ ಮೇಲಿರುವ ನಾಲ್ಕು ಕಲಾತ್ಮಕ ಕಂಬಗಳೇ ಈ ದೇವಾಲಯದ ಪ್ರಮುಖ ಆಕರ್ಷಣೆ. ಸುಂದರ ಕೆತ್ತನೆಗಳ ಮೂಲಕ ಈ ಕಂಬಗಳಿಗೆ ಅತ್ಯದ್ಭುತ ರೂಪವನ್ನು ನೀಡಲಾಗಿದೆ.


ನಾಲ್ಕೂ ಕಂಬಗಳು ಮೇಲ್ಭಾಗದಲ್ಲಿ ವಿವಿಧ ರೀತಿಯ ತೋರಣಗಳನ್ನೂ, ಮಧ್ಯಭಾಗದಲ್ಲಿ ಕುಸುರಿ ಮತ್ತು ಕಲಾತೋರಣಗಳನ್ನೂ ಹಾಗೂ ತಳಭಾಗದಲ್ಲಿ ಪ್ರಭಾವಳಿ ಕೆತ್ತನೆಗಳನ್ನು ಹೊಂದಿವೆ. ಪ್ರತಿ ಕಂಬದ ಕೆತ್ತನೆಯೂ ಆಕರ್ಷಕ, ಮನಮೋಹಕ.


ಈ ಕಂಬಗಳ ನಾಲ್ಕೂ ಪಾರ್ಶ್ವಗಳ ಕಲಾಸೌರಭವನ್ನು ಆಸ್ವಾದಿಸುವುದರಲ್ಲಿ ಸಮಯ ಸರಿದ ಅರಿವೇ ಆಗುವುದಿಲ್ಲ. ಪ್ರಭಾವಳಿ ಕೆತ್ತನೆಗಳಂತೂ ಮನಸೂರೆಗೊಳ್ಳುತ್ತವೆ.


ಬ್ರಹ್ಮ, ವಿಷ್ಣು, ವರಾಹ, ಈಶ್ವರ, ಗಣೇಶ, ಉಗ್ರನರಸಿಂಹ, ಸೂರ್ಯದೇವ, ಲಕ್ಷ್ಮೀ, ನರಸಿಂಹ, ಸರಸ್ವತಿ ಮತ್ತು ಚಾಮುಂಡಿ ಇಷ್ಟು ದೇವ ದೇವಿಯರ ಕೆತ್ತನೆಗಳನ್ನು ಈ ಕಂಬಗಳಲ್ಲಿ ಕಾಣಬಹುದು.


ಪಶ್ಚಿಮದಲ್ಲಿರುವ ಪ್ರಮುಖ ಗರ್ಭಗುಡಿಯು ಪಂಚಶಾಖಾ ದ್ವಾರವನ್ನು ಹೊಂದಿದ್ದು ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯನ್ನು ಹೊಂದಿದೆ. ಶಾಖೆಗಳಲ್ಲಿ ವಜ್ರತೋರಣ, ನಾಟ್ಯಗಾರರು, ವಾದ್ಯಗಾರರು, ಪ್ರಾಣಿಗಳು ಮತ್ತು ಬಳ್ಳಿತೋರಣಗಳ ಕೆತ್ತನೆಗಳನ್ನು ಕಾಣಬಹುದು.


ಮೂರನೇ ಶಾಖೆಯ ನಡುಭಾಗದಲ್ಲಿ ಪೂರ್ಣಕುಂಭ ಕಲಶವನ್ನು ಸರ್ವ ಅಲಂಕಾರಗಳೊಂದಿಗೆ ಸಾಂಕೇತಿಕವಾಗಿ ತೋರಿಸಿರುವುದು ಕೂಡಾ ಇಲ್ಲಿನ ವೈಶಿಷ್ಟ್ಯತೆ. ಪಂಚಶಾಖೆಗಳಿಗೆ ಸಮನಾಗಿ ದ್ವಾರದ ಮೇಲ್ಭಾಗದಲ್ಲಿ ಪಂಚಶಿಖರಗಳಿವೆ. ಇಲ್ಲಿ ಗಣೇಶ, ತ್ರಿಮೂರ್ತಿಗಳು ಮತ್ತು ದೇವಿಯೊಬ್ಬಳ ಚಿತ್ರಣವನ್ನು ನೀಡಲಾಗಿದೆ. ದ್ವಾರದ ತಳಭಾಗದಲ್ಲಿ ರತಿ ಮನ್ಮಥರನ್ನು ಅವರ ಸೇವಕ ಸೇವಕಿಯರೊಂದಿಗೆ ಚಿತ್ರಿಸಲಾಗಿದೆ.


ಉತ್ತರದಲ್ಲಿರುವ ಇನ್ನೊಂದು ಗರ್ಭಗುಡಿಯು ಅಲಂಕಾರರಹಿತ ಪಂಚಶಾಖಾ ದ್ವಾರವನ್ನು ಹೊಂದಿದ್ದು, ಲಲಾಟದಲ್ಲಿ ಗಜಲಕ್ಷ್ಮೀಯನ್ನೂ ಮತ್ತು ಮೇಲ್ಭಾಗದಲ್ಲಿ ಪಂಚಶಿಖರಗಳನ್ನೂ ಹೊಂದಿದೆ. ಇಲ್ಲೂ ಪಂಚಶಿಖರಗಳಲ್ಲಿ ಗಣೇಶ, ತ್ರಿಮೂರ್ತಿಗಳು ಮತ್ತು ದೇವಿಯೊಬ್ಬಳ ಕೆತ್ತನೆಯನ್ನು ಕಾಣಬಹುದು.


ಈ ದೇವಾಲಯದಲ್ಲಿ ಈಗ ಇರುವ ಬನಶಂಕರಿ ಮತ್ತು ಶಿವಲಿಂಗ ಇವೆರಡೂ ಮೂಲ ಮೂರ್ತಿಗಳಲ್ಲ. ಅಮರಗೋಳದಲ್ಲಿ ದೊರೆತಿರುವ ಏಕೈಕ ಶಿಲಾಶಾಸನದ (ಇಸವಿ ೧೧೨೦ರ) ಪ್ರಕಾರ ಪಶ್ಚಿಮ ಚಾಲುಕ್ಯ ದೊರೆ ಆರನೇ ವಿಕ್ರಮಾದಿತ್ಯನ ಆಳ್ವಿಕೆಯ ಕಾಲದಲ್ಲಿ ’ಜಕ್ಕರಸ’ ಎಂಬವನು ಕೇಶವ ಮತ್ತು ಭೈರವ ದೇವರ ಮೂರ್ತಿಗಳನ್ನು ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಿದನು.


ಕಾಲಕ್ರಮೇಣ ಈ ಎರಡೂ ಮೂರ್ತಿಗಳು ಇಲ್ಲಿಂದ ಕಣ್ಮರೆಯಾದವು. ತದನಂತರ ಬನಶಂಕರಿಯ ವಿಗ್ರಹವನ್ನು ಮುಖ್ಯ ಗರ್ಭಗುಡಿಯಲ್ಲಿರಿಸಿ ಪೂಜೆ ಸಲ್ಲಿಸಲಾಗುತ್ತಿದೆ. ತೀರಾ ಇತ್ತೀಚೆಗೆ (೧೦-೧೫ ವರ್ಷಗಳ ಮೊದಲು) ಶಿವಲಿಂಗವನ್ನು ಉತ್ತರದಲ್ಲಿರುವ ಗರ್ಭಗುಡಿಯಲ್ಲಿರಿಸಿ ಪೂಜೆ ಸಲ್ಲಿಸಲಾಗುತ್ತಿದೆ.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ.

2 ಕಾಮೆಂಟ್‌ಗಳು:

siddeshwar ಹೇಳಿದರು...

Nice pictures and write up.

ರಾಜೇಶ್ ನಾಯ್ಕ ಹೇಳಿದರು...

ಸಿದ್ಧೇಶ್ವರ,
ಧನ್ಯವಾದ.