ಗುರುವಾರ, ಡಿಸೆಂಬರ್ 20, 2012

ನಾರಾಯಣ ದೇವಾಲಯ - ಸವಡಿ


ಶಾಸನಗಳಲ್ಲಿ ಸವಡಿಯನ್ನು ’ಸಯ್ಯಡಿ’ ಹಾಗೂ ’ಸೈವಿಡಿ’ ಎಂದು ಕರೆಯಲಾಗಿದೆ. ಪಂಚತಂತ್ರದ ಲೇಖಕ ’ದುರ್ಗಸಿಂಹ’ ಇದೇ ಊರಿನವನಾಗಿದ್ದನು. ಇಲ್ಲಿ ಎರಡು ಪುರಾತನ ದೇಗುಲಗಳಿವೆ - ನಾರಾಯಣ ಮತ್ತು ಬ್ರಹ್ಮೇಶ್ವರ. ನಾರಾಯಣ ದೇವಾಲಯದೆಡೆಗೆ ಊರವರಿಗಿರುವ ಅಸಡ್ಡೆಯನ್ನು ಕಂಡು ಅಚ್ಚರಿಯಾಗದೇ ಇರದು. ದೇವಾಲಯ ಸ್ವಚ್ಛವಾಗಿಲ್ಲ. ದೇವಾಲಯದ ಒಂದು ಪಾರ್ಶ್ವ ಕಸಕಡ್ಡಿಗಳನ್ನು ಎಸೆಯುವ ಜಾಗ. ದೇವಾಲಯದ ಗೋಡೆಗಳು ’ಸೆಗಣಿ ರೊಟ್ಟಿ’ ಒಣಗಿಸಲು ಬಳಕೆಯಾಗುತ್ತಿವೆ. ದೇವಾಲಯವನ್ನು ಹಳ್ಳಿಗರು ತಮ್ಮ ವಸ್ತುಗಳನ್ನು ಇಡಲು ಬಳಸುತ್ತಾರೆ! ನವರಂಗದಲ್ಲಿ ಮರದ ರೀಪುಗಳು, ಮರಳು, ಸೆಗಣಿ ರೊಟ್ಟಿ, ಇತ್ಯಾದಿಗಳು ಕಂಡುಬಂದವು.


ದೇವಾಲಯದ ಒಳಗೆಲ್ಲಾ ಬಾವಲಿ ಹಿಕ್ಕೆಗಳ ರಾಶಿ. ಗರ್ಭಗುಡಿ ಪ್ರವೇಶಿಸಬೇಕಾದರೆ ಬಹಳ ಧೈರ್ಯ ಮಾಡಬೇಕು. ಒಮ್ಮೆಲೇ ೨೫ಕ್ಕೂ ಮಿಕ್ಕಿ ಬಾವಲಿಗಳು ಪಟಪಟ ಶಬ್ದ ಮಾಡುತ್ತಾ ನಮ್ಮೆಡೆ ಹಾರಿಬರುತ್ತವೆ. ಅವುಗಳ ಹಿಕ್ಕೆಗಳಿಂದ ನೆಲಕ್ಕೆ ಕಪ್ಪು ಹಾಸು ಹೊದಿಸಿದಂತೆ ಕಾಣುತ್ತಿತ್ತು. ದೇವಾಲಯದ ಒಳಗೆಲ್ಲ ವಾಸನೆ. ನಾರಾಯಣನ ಸುಂದರ ಮೂರ್ತಿಗೆ ಪೂಜೆ ನಡೆಯುವುದೇ ಇಲ್ಲ. ಪೂಜೆ ನಡೆಯುವುದಿಲ್ಲ ಎಂಬ ಕಾರಣದಿಂದ ಊರವರಿಗೆ ದೇವಾಲಯದ ಬಗ್ಗೆ ಎಳ್ಳಷ್ಟೂ ಕಾಳಜಿಯಿಲ್ಲ.


ಹೂವು, ಹಾಲು, ನೀರು ಇತ್ಯಾದಿಗಳಿಂದ ಅಭಿಷೇಕಗೊಳ್ಳಬೇಕಾದ ನಾರಾಯಣನಿಗೆ ಈಗ ಫುಲ್‍ಟೈಮ್ ಬಾವಲಿ ಹಿಕ್ಕೆಗಳ ಅಭಿಷೇಕ. ದೇವರಿಗೆ ಇಂತಹ ದುರ್ಗತಿ ಬಂದ ಊರು ಉದ್ಧಾರವಾದಿತೇ? ಸವಡಿಯಲ್ಲಿ ವಿದ್ಯುತ್ ಕೈಕೊಟ್ಟರೆ ನಾಲ್ಕಾರು ತಾಸು ಬಿಡಿ, ನಾಲ್ಕಾರು ದಿನಗಳವರೆಗೆ ಬರುವುದೇ ಇಲ್ಲ. ನೀರಿಗಂತೂ ೧೦ ತಿಂಗಳು ಹಾಹಾಕಾರ. ನಳ್ಳಿಯ ಮುಂದೆ ಕೊಡಪಾನಗಳ ಸಾಲು ಕಂಡರೆ ನೈಜ ಪರಿಸ್ಥಿತಿಯ ಅರಿವಾಗುವುದು. ನೀರು ಬಂದರೂ ಎಲ್ಲರಿಗೂ ಸಿಗುವುದೂ ಇಲ್ಲ. ಅರ್ಧ ಸಾಲು ಕೊಡಪಾನಗಳು ತುಂಬುವಷ್ಟರಲ್ಲಿ ನೀರು ಬಂದ್. ಹೀಗಿರುವಾಗ ದಿನಾಲೂ ಸ್ನಾನ ಮಾಡುವುದು ಅಸಾಧ್ಯ. ಕುಡಿಯಲಿಕ್ಕೇ ನೀರಿಲ್ಲದಿರುವಾಗ ಇನ್ನು ಕಕ್ಕಸು ತೊಳಿಯಲಿಕ್ಕೆ ಎಲ್ಲಿಂದ ಬರಬೇಕು ನೀರು? ಆದ್ದರಿಂದ ಊರಿನಲ್ಲಿ ಎಲ್ಲೆಲ್ಲಿ ಖುಲ್ಲಾ ಸ್ಥಳಗಳಿವೆಯೇ ಅವೇ ಕಕ್ಕಸುಗಳಾಗಿಬಿಟ್ಟಿವೆ. ಹಾಗಾಗಿ ಊರು ತುಂಬಾ ಅದೇ ವಾಸನೆ. ಈ ಸೀಮೆಯ ಹೆಚ್ಚಿನ ಊರುಗಳಲ್ಲಿ ಜನರ ಬವಣೆ ಮತ್ತು ಪರಿಸ್ಥಿತಿ ಹೀಗೇ ಇದೆ.


ನವರಂಗ, ತೆರೆದ ಅಂತರಾಳ ಮತ್ತು ಗರ್ಭಗುಡಿಯಿರುವ ಈ ದೇವಾಲಯ, ಶಂಖಚಕ್ರಗದಾಪದ್ಮಧಾರಿಯಾಗಿರುವ ನಾರಾಯಣನ ಸುಮಾರು ೪ ಅಡಿ ಎತ್ತರದ ಆಕರ್ಷಕ ಮೂರ್ತಿಯನ್ನು ಹೊಂದಿದೆ. ನಾರಾಯಣನ ವಿಗ್ರಹವು ಪ್ರಭಾವಳಿ ಕೆತ್ತನೆ ಮತ್ತು ಇಕ್ಕೆಲಗಳಲ್ಲಿ ಶ್ರೀದೇವಿ ಹಾಗೂ ಭೂದೇವಿಯರನ್ನು ಹೊಂದಿದೆ. ಪ್ರಭಾವಳಿಯಲ್ಲಿ ದಶಾವತಾರವನ್ನು ತೋರಿಸಲಾಗಿದೆ ಎನ್ನಲಾಗುತ್ತದಾದರೂ ಅವೆಲ್ಲಾ ನಶಿಸಿಹೋಗಿರುವುದರಿಂದ ಏನೂ ಕಾಣಬರುವುದಿಲ್ಲ. ಕಾಯಕಲ್ಪವನ್ನು ಎದುರುನೋಡುತ್ತಿರುವಂತೆ ನಾರಾಯಣ ದಿಟ್ಟಿಸತೊಡಗಿದ್ದಾನೆ ಎಂದು ಭಾಸವಾಗತೊಡಗಿತ್ತು!


ಗರ್ಭಗುಡಿಯು ಉತ್ತಮ ಅಲಂಕಾರವುಳ್ಳ ಪಂಚಶಾಖಾ ದ್ವಾರವನ್ನು ಹೊಂದಿದೆ. ದ್ವಾರಕ್ಕೆ ಸುಣ್ಣ ಬಳಿಯಲಾಗಿರುವುದರಿಂದ ಅಲಂಕಾರವನ್ನು ಅಸ್ವಾದಿಸುವುದು ಅಸಾಧ್ಯವಾಗಿದೆ. ನಾಲ್ಕು ಕಂಬಗಳ ನವರಂಗವು ಮೊದಲು ಮೂರು ದ್ವಾರಗಳನ್ನು ಹೊಂದಿತ್ತು. ಈಗ ದಕ್ಷಿಣದ ದ್ವಾರ ಮಾತ್ರ ಇದೆ. ಉತ್ತರದ ದ್ವಾರವನ್ನು ಕಲ್ಲುಗಳನ್ನು ಪೇರಿಸಿ ಮುಚ್ಚಲಾಗಿದ್ದು, ದೇವಾಲಯದ ಈ ಪಾರ್ಶ್ವವನ್ನೀಗ ತಿಪ್ಪೆಗುಂಡಿಯನ್ನಾಗಿ ಬಳಸಲಾಗುತ್ತಿದೆ!

 
ಪೂರ್ವದ ದ್ವಾರವನ್ನು ಸಂಪೂರ್ಣವಾಗಿ ಮಾರ್ಪಾಡು ಮಾಡಿ ಇನ್ನೊಂದು ಗರ್ಭಗುಡಿಯನ್ನಾಗಿ ಪರಿವರ್ತಿಸಲಾಗಿದೆ. ಇದು ಶಿವಭಕ್ತರ ಕೆಲಸವಿದ್ದಿರಬೇಕು. ಯಾಕೆಂದರೆ ಈ ಗರ್ಭಗುಡಿಯಂತೆ ಭಾಸವಾಗದ ಮಾರ್ಪಾಡಿತ ಗರ್ಭಗುಡಿಯಲ್ಲಿ ಶಿವಲಿಂಗವನ್ನು ಇರಿಸಲಾಗಿದೆ. ಲಿಂಗದ ಮುಂದೆನೇ ನಂದಿಯಿದೆ. ಪಕ್ಕದಲ್ಲೇ ಸೆಗಣಿ ರೊಟ್ಟಿಗಳೂ ಇವೆ!


ನವರಂಗದಲ್ಲಿ ಉಮಾಮಹೇಶ್ವರ, ಗಣಪತಿ ಮತ್ತು ಸಪ್ತಮಾತೃಕೆಯರ ಮೂರ್ತಿಗಳಿವೆ. ಗೆಳೆಯ ಗೆಳತಿಯರು ಹೆಗಲ ಮೇಲೆ ಕೈಹಾಕಿ ಕುಳಿತಿರುವಂತೆ ಮಹೇಶ್ವರ ಮತ್ತು ಉಮೆ ಕುಳಿತಿರುವ ಈ ಮೂರ್ತಿಯನ್ನು ಕಂಡು ಸೋಜಿಗವೆನಿಸಿತು.


ನಾಲ್ಕೈದು ಅಡಿ ಎತ್ತರದ ಜಗತಿಯ ಮೇಲೆ ನಿರ್ಮಾಣಗೊಂಡಿರುವ ದೇವಾಲಯದ ಪ್ರಮುಖ ದ್ವಾರವು ಲಲಾಟದಲ್ಲಿ ಗಜಲಕ್ಷ್ಮೀಯನ್ನು ಹೊಂದಿದ್ದು ಐದು ತೋಳಿನದ್ದಾಗಿದೆ. ಪ್ರತಿ ತೋಳಿನಲ್ಲೂ ಅಲಂಕಾರಿಕ ಕೆತ್ತನೆಗಳಿವೆ. ಇಲ್ಲೂ ಸುಣ್ಣ ಬಳಿಯಲಾಗಿರುವುದರಿಂದ ನೋಟ ವಿರೂಪ.


ಊರಿನ ಐದು ಉಡಾಳ ಹುಡುಗರು ನನ್ನ ಜೊತೆಗೇ ಇದ್ದರು. ಇವರ ಪ್ರಕಾರ ಗರ್ಭಗುಡಿ ಹೊಕ್ಕರೆ ಕಣ್ಣು ಕಳಕೊಂಡೇ ಹೊರಬರಬೇಕಾಗುತ್ತದೆ! ’ಕಣ್ಣುಕುಟ್ಕ’ (ಬಾವಲಿ) ಕಣ್ಣನ್ನೇ ಕುಕ್ಕಿಬಿಡುತ್ತವೆ ಎಂದು ಅವರ ನಂಬಿಕೆ. ಹೆಸರೂ ಹಾಗೇ ಇಟ್ಟುಬಿಟ್ಟಿದ್ದಾರೆ! ಇದೇ ಕಾರಣದಿಂದ ನಾರಾಯಣನ ಸುತ್ತಲೂ ಬಿದ್ದಿರುವ ಹಿಕ್ಕೆಗಳನ್ನು ಯಾರೂ ಚೊಕ್ಕ ಮಾಡುತ್ತಿಲ್ಲ ಎಂಬ ಸಬೂಬು. ’ಅದೆಲ್ಲಾ ಸುಳ್ಳು. ಬಾವಲಿಗಳು ಕಣ್ಣು ಕುಕ್ಕೋದಿಲ್ಲ....’ ಎಂದು ನಾನು ಭಾಷಣ ಆರಂಭಿಸಿದಾಗ, ನನ್ನ ಮಾತನ್ನು ಮಧ್ಯದಲ್ಲೇ ನಿಲ್ಲಿಸಿದ ಅವರಲ್ಲೊಬ್ಬ (ನಾಮ ಹಾಕಿರುವ ಹುಡುಗ), ’ಸರ, ಧೈರ್ಯ ಇದ್ರೆ ನೀವೊಬ್ರೆ ಹೊಗ್‍ಬರ್ತೀರೇನ...?’ ಎಂದು ಸವಾಲೆಸೆದ. ಮರ್ಯಾದೆ ಪ್ರಶ್ನೆ. ಹೋಗಲೇಬೇಕಾಗಿತ್ತು. ಅಳುಕಿದರೂ ತೋರಗೊಡದೆ ನಾರಾಯಣನ ಸಮೀಪ ತೆರಳಿದೆ. ಗರ್ಭಗುಡಿ ಪ್ರವೇಶಿಸಿದ ಕೂಡಲೇ ಒಂದಷ್ಟು ಬಾವಲಿಗಳು ಹೊರಗೆ ಹಾರಿದವು. ಮಕ್ಕಳೆಲ್ಲಾ ’ಹೋ’ ಎಂದು ದೇವಾಲಯದಿಂದ ಹೊರಗೆ ಓಡಿಬಿಟ್ಟರು! ನಂತರ ನಾನು ಹೊರಬಂದಾಗ ಅವರು ನನ್ನ ಎರಡೂ ಕಣ್ಣುಗಳನ್ನು ದುರುಗುಟ್ಟಿ ನೋಡುತ್ತ ಪರೀಕ್ಷಿಸಿದ ಪರಿಯನ್ನು ನೆನೆದರೆ ನಗು ಬರುತ್ತದೆ.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ.

ಭಾನುವಾರ, ಡಿಸೆಂಬರ್ 09, 2012

ಕುಡಿಯೋದು...



’ಕುಡಿಯೋದು’ ಹಾಡನ್ನು ರಚಿಸಿ ಹಾಡಿದವರು ಸುರೇಂದ್ರ ಶೇಟ್. ಉಡುಪಿಯಲ್ಲಿ ಸ್ವಂತ ವ್ಯವಹಾರ ಮಾಡಿಕೊಂಡಿದ್ದಾರೆ. ಇವರಿಗೆ ಸಂಗೀತದ ಬಗ್ಗೆ ಅಪಾರ ಆಸಕ್ತಿ, ಒಲವು ಮತ್ತು ಪ್ರೀತಿ. ಸಂಗೀತ ಇವರ ಪ್ರವೃತ್ತಿಯೂ ಆಗಿರುವ ಪರಿಣಾಮವೇ ಈ ’ಕುಡಿಯೋದು’ ಹಾಡು. ಈ ವಿಡಿಯೋವನ್ನು ಇಲ್ಲಿ ಹಾಕಲು ಅನುಮತಿ ನೀಡಿದ ಸುರೇಂದ್ರ ಶೇಟ್ ಹಾಗೂ ಗೆಳೆಯ ಗುರುದತ್ತ ಇವರಿಬ್ಬರಿಗೆ ಧನ್ಯವಾದಗಳು.

ಮಂಗಳವಾರ, ನವೆಂಬರ್ 27, 2012

ಅಕ್ಷರ ಅವಾಂತರ ೧೨ - ’ಟ’ ಬರೆಯುವ ನೂತನ ವಿಧಾನ!


’ಇನ್ಸ್ಟಿಟ್ಯೂಟ್’ ಎಂದು ಬರೆದದ್ದು ಮೊದಲೇ ತಪ್ಪು. ’ಟ’ ಬರೆಯುವ ಹೊಸ ವಿಧಾನ ಬೇರೆ ಕಂಡುಹುಡುಕಿದ್ದಾರೆ! ಸೋಜಿಗದ ವಿಷಯವೆಂದರೆ ಇದು ’ಫ್ಲೆಕ್ಸ್ ಪ್ರಿಂಟ್’ ಆಗಿರುವುದರಿಂದ ಗಣಕಯಂತ್ರದಲ್ಲಿ ವಿನ್ಯಾಸ ಮಾಡಿದ ಬಳಿಕವೇ ಪ್ರಿಂಟ್ ತೆಗೆಯಲಾಗಿರುವುದು. ಅದ್ಯಾವ ಕನ್ನಡ ತಂತ್ರಾಂಶದಲ್ಲಿ ’ಟ’ ಹೀಗೆ ಬರೆಯಲಾಗುತ್ತದೆ?

ಗುರುವಾರ, ನವೆಂಬರ್ 15, 2012

ಭಾನುವಾರ, ನವೆಂಬರ್ 11, 2012

ತಿರುಪತೇಶ್ವರ ದೇವಾಲಯ - ಹಾನಗಲ್


ತೋಟಗಾರಿಕಾ ಇಲಾಖೆಯ ಪ್ರಾಂಗಣದೊಳಗೆ ಇರುವ ತಿರುಪತೇಶ್ವರ ದೇವಾಲಯವನ್ನು ಪ್ರಾಚ್ಯ ವಸ್ತು ಇಲಾಖೆ ಜೀರ್ಣೋದ್ಧಾರಗೊಳಿಸಿ ಮೂಲ ರೂಪಕ್ಕೆ ತಂದಿದೆ. ಮೊದಲು ಹಾನಗಲ್‍ನಲ್ಲಿದ್ದ ಕೋಟೆಯ ಪ್ರದೇಶವಾಗಿರುವ ಸ್ಥಳದಲ್ಲೇ ಈಗ ತೋಟಗಾರಿಕಾ ಇಲಾಖೆಯಿದೆ.


ಈ ಏಕಕೂಟ ದೇವಾಲಯದ ಮುಖಮಂಟಪಕ್ಕೆ ೩ ದಿಕ್ಕುಗಳಿಂದ ಪ್ರವೇಶವಿದೆ. ಮುಖಮಂಟಪದ ಸುತ್ತಲೂ ಕಕ್ಷಾಸನವಿದ್ದು, ನಟ್ಟನಡುವೆ ನಾಲ್ಕು ಸುಂದರ ಕಂಬಗಳ ನವರಂಗವಿದೆ. ಕಕ್ಷಾಸನದ ಮೇಲೆ ೧೨ ಕಂಬಗಳಿವೆ. ಅಂತರಾಳದ ಮತ್ತು ಗರ್ಭಗುಡಿಯ ದ್ವಾರಗಳಲ್ಲಿರುವ ಕೆತ್ತನೆಗಳು ನಶಿಸಿಹೋಗಿವೆ. ಅಂತರಾಳದ ದ್ವಾರದಲ್ಲಿದ್ದ ಜಾಲಂಧ್ರಗಳು ಕಣ್ಮರೆಯಾಗಿವೆ. ನಂದಿಯ ಮೂರ್ತಿಯೊಂದು ಅಂತರಾಳದಲ್ಲಿದೆ ಮತ್ತು ಗರ್ಭಗುಡಿಯಲ್ಲೊಂದು ಶಿವಲಿಂಗವಿದೆ.


ನವರಂಗದಲ್ಲಿ ೯ ಅಂಕಣಗಳಿವೆ. ಆದರೆ ಎಲ್ಲಾ ಅಂಕಣಗಳು ಸಮಾನ ಅಕಾರದಲ್ಲಿಲ್ಲ! ನಟ್ಟನಡುವೆ ಇರುವ ಅಂಕಣ ಚೌಕಾಕಾರದಲ್ಲಿದ್ದರೆ, ಇದರ ಸುತ್ತಲೂ ಇರುವ ಉಳಿದ ೮ ಅಂಕಣಗಳು ಆಯತಾಕಾರದಲ್ಲಿವೆ. ನಡುವೆ ಇರುವ ಅಂಕಣದಲ್ಲಿ ೯ ಸುಂದರ ತಾವರೆಗಳನ್ನು ಕೆತ್ತಲಾಗಿದ್ದು, ೩ ತರಹದ ತಾವರೆಗಳನ್ನು ಕಾಣಬಹುದು. ಉಳಿದ ಅಂಕಣಗಳಲ್ಲಿ ೬ ತಾವರೆಗಳನ್ನು ಕೆತ್ತಲಾಗಿದ್ದು, ೨ ರೀತಿಯ ತಾವರೆಗಳನ್ನು ಕಾಣಬಹುದು.


ಮುಖಮಂಟಪಗಳ ಛಾವಣಿಯಲ್ಲೂ ತಲಾ ೬ ತಾವರೆಗಳನ್ನು ಕೆತ್ತಲಾಗಿದೆ. ಇವುಗಳನ್ನೂ ಅಂಕಣಗಳೆಂದು ಪರಿಗಣಿಸಿದರೆ ಒಟ್ಟು ಅಂಕಣಗಳ ಸಂಖ್ಯೆ ೧೨ ಆಗುತ್ತದೆ.


ಹೊಯ್ಸಳ ಶೈಲಿಯ ಈ ದೇವಾಲಯದ ಮೂಲ ಗೋಪುರ ಶಿಥಿಲಗೊಂಡು ಬಿದ್ದುಹೋಗಿದ್ದು, ಈಗ ಅದರ ಸ್ಥಾನದಲ್ಲಿ ವಿಕಾರವಾಗಿ ಕಾಣುವ ಗೋಪುರವೊಂದಿದೆ. ದೇವಾಲಯದ ಹೊರಗೋಡೆಯಲ್ಲಿ ಕೆಲವೆಡೆ ಮಂಟಪಗಳು, ಬಳ್ಳಿಗಳು, ತಾವರೆಗಳು ಮತ್ತು ಯಕ್ಷ ಯಕ್ಷಿಯರ ಕೆತ್ತನೆಗಳನ್ನು ಕಾಣಬಹುದು. ಇಸವಿ ೧೧೫೦ರ ಬಳಿಕ ಈ ದೇವಾಲಯ ನಿರ್ಮಾಣವಾಗಿರಬಹುದೆಂದು ಇತಿಹಾಸಕಾರರ ಅಭಿಪ್ರಾಯ.


ತೋಟಗಾರಿಕೆ ಇಲಾಖೆಯ ಪ್ರಾಂಗಣಕ್ಕಿರುವ ಮುಳ್ಳುಬೇಲಿಯ ಸುತ್ತ ಪೊದೆಗಳು ಬೆಳೆದಿರುವುದರಿಂದ ಅಲ್ಲಿ ನುಸುಳಲು ಪ್ರಯತ್ನಿಸುವುದು ವ್ಯರ್ಥ. ಗೇಟಿಗೆ ಬೀಗ ಹಾಕಿ ಇದ್ದರೆ ಸುಮಾರು ೧೦ ಅಡಿ ಎತ್ತರದ ಗೇಟನ್ನು ಸ್ವಲ್ಪ ನಿಗಾವಹಿಸಿ ದಾಟಬೇಕಾಗುತ್ತದೆ. ಗೇಟಿನ ಮೇಲ್ಭಾಗದಲ್ಲಿ ಸರಳುಗಳ ಚೂಪಾದ ಈಟಿಯಂತಹ ಭಾಗವಿರುವುದರಿಂದ ಸ್ವಲ್ಪ ಕಾಲು ಜಾರಿದರೂ ಅಪಾಯ. ರಜಾದಿನಗಳಂದು ತೆರಳಿದರೆ ಗೇಟಿಗೆ ಬೀಗ ಹಾಕಿಯೇ ಇರುತ್ತದೆ.

ಅಂದು - ಇಂದು:


ಇದು ೧೮೮೫ರಲ್ಲಿ ತೆಗೆದ ತಿರುಪತೇಶ್ವರ ದೇವಾಲಯದ ಚಿತ್ರ. ದೇವಾಲಯದ ಮುಖಮಂಟಪ ಮತ್ತು ಗೋಪುರದ ಮೇಲೆ ಬೆಳೆದಿರುವ ಗಿಡ, ಪೊದೆ  ಇತ್ಯಾದಿಗಳನ್ನು ಗಮನಿಸಿ. ಮುಖಮಂಟಪವೂ ಶಿಥಿಲಗೊಂಡಿರುವುದನ್ನು ಕಾಣಬಹುದು.


ಗೋಪುರವನ್ನೇ ಆವರಿಸಿರುವ ಗಿಡ ಮತ್ತು ಬಳ್ಳಿಗಳು ಅದನ್ನೇ ಬಲಿ ತೆಗೆದುಕೊಂಡವು ಎನ್ನಬಹುದು. ಏಕೆಂದರೆ ಈಗ ಮೂಲ ಗೋಪುರವೇ ಇಲ್ಲ. ಈಗ ದೇವಾಲಯದ ಪರಿಸರ ಆಗಿನಂತಿಲ್ಲ. ಸುತ್ತಲೂ ಸ್ವಚ್ಛವಾಗಿದ್ದು, ನಿರ್ಮಲವಾಗಿದೆ.

ಭಾನುವಾರ, ನವೆಂಬರ್ 04, 2012

ಅಂದಕೇಶ್ವರ ದೇವಾಲಯ - ಹೂಲಿ


ಹೂಲಿ ಕೆರೆಯ ಸುಂದರ ನೋಟವನ್ನು ಸವಿಯುತ್ತ ಮುನ್ನಡೆದರೆ ಕೆಂಪು ರಂಗನ್ನು ಹೊತ್ತು ನಿಂತಿರುವ ಬೆಟ್ಟಗಳ ಅದ್ಭುತ ದೃಶ್ಯ. ಬೆಟ್ಟಗಳ ತಪ್ಪಲಿನಲ್ಲೇ ಅಲ್ಲಲ್ಲಿ ಸುಂದರ ಕಲಾಕೃತಿಗಳಂತೆ ತೋರುವ ದೇವಾಲಯಗಳು. ಕೆರೆಯ ಏರಿಯ ಮೇಲೆ ಮೊದಲು ಸಿಗುವುದು ಅಂದಕೇಶ್ವರನ ಪಾಳುಬೀಳುತ್ತಿರುವ ಸನ್ನಿಧಿ. ಈ ದೇವಾಲಯದ ಸುತ್ತಲೂ ಮುಳ್ಳಿನ ಪೊದೆಗಳನ್ನು ರಾಶಿ ಹಾಕಲಾಗಿತ್ತು. ಅವುಗಳನ್ನು ದಾಟಿ ದೇವಾಲಯದ ಸಮೀಪ ತೆರಳುವುದಕ್ಕೆ ಹರಸಾಹಸ ಪಡಬೇಕಾಯಿತು.


ಇದೊಂದು ಅಪರೂಪದ ದ್ವಿಕೂಟ ದೇವಾಲಯ. ಒಂದು ಗರ್ಭಗುಡಿಯಲ್ಲಿ ಮಾತ್ರ ಶಿವಲಿಂಗವಿದ್ದು ಮತ್ತು ಈ ಗರ್ಭಗುಡಿಯ ಮೇಲಿನ ಗೋಪುರ ಮಾತ್ರ ಅಲ್ಪಸ್ವಲ್ಪ ಉಳಿದುಕೊಂಡಿದೆ. ಎರಡನೇ ಗರ್ಭಗುಡಿ ಖಾಲಿಯಾಗಿದ್ದು ಅದರ ಮೇಲಿನ ಗೋಪುರ ಎಂದೋ ಬಿದ್ದುಹೋಗಿದೆ. ಅಷ್ಟೇ ಅಲ್ಲದೆ ಈ ಗರ್ಭಗುಡಿಯ ಒಳಗೆ ನಿಧಿಯ ಆಸೆಗಾಗಿ ಅಗೆಯಲಾಗಿದೆ. ಕಾಲ ಗೋಪುರವನ್ನು ವಿನಾಶಿಸಿದರೆ ಮಾನವ ಗರ್ಭಗುಡಿಯನ್ನೇ ವಿರೂಪಗೊಳಿಸಿದ. (ಎರಡನೇ ಬಾರಿ ತೆರಳಿದಾಗ ಈ ಗರ್ಭಗುಡಿಯಲ್ಲಿ ಅಗೆಯಲಾಗಿದ್ದ ಗುಂಡಿಯನ್ನು ಮುಚ್ಚಿ ಸರಿಪಡಿಸಿ ಶಿವಲಿಂಗವನ್ನು ಸ್ಥಾಪಿಸಲಾಗಿತ್ತು!) 


ದೇವಾಲಯದ ಪ್ರಮುಖ ದ್ವಾರ ನವರಂಗಕ್ಕೇ ತೆರೆದುಕೊಳ್ಳುತ್ತದೆ. ನವರಂಗದ ಎರಡೂ ಬದಿಗಳಲ್ಲಿ ದ್ವಾರರಹಿತ ಅಂತರಾಳಗಳು ಮತ್ತು ನಂತರ ಗರ್ಭಗುಡಿಗಳು. ನವರಂಗದಲ್ಲಿ ಅಲಂಕಾರಿಕ ಬಳ್ಳಿ ಕೆತ್ತನೆ ಮತ್ತು ಪ್ರಭಾವಳಿ ಕೆತ್ತನೆ ಇರುವ ನಾಲ್ಕು ಕಂಬಗಳಿವೆ. ಎರಡು ಕಂಬಗಳ ಪ್ರಭಾವಳಿ ಕೆತ್ತನೆ ಮಾತ್ರ ಉಳಿದುಕೊಂಡಿವೆ. ಈ ಕಂಬಗಳ ನಡುವೆ ಇರುವ ರಂಗಸ್ಥಳದಲ್ಲಿ ಕೂಡಾ ಅಗೆದು ಹಾಕಲಾಗಿದೆ.


ಎರಡೂ ಗರ್ಭಗುಡಿಗಳೂ ಪಂಚಶಾಖಾ ದ್ವಾರಗಳನ್ನು ಮತ್ತು ಲಲಾಟದಲ್ಲಿ ಹೊರಚಾಚು ಗಜಲಕ್ಷ್ಮೀಯನ್ನು ಹೊಂದಿವೆ. ಪೂರ್ವದ ಗರ್ಭಗುಡಿಯ ಶಾಖೆಗಳ ಕೆತ್ತನೆಗಳೆಲ್ಲಾ ನಶಿಸಿಹೋಗಿವೆ. ಆದರೆ ಪಶ್ಚಿಮದ ಗರ್ಭಗುಡಿಯ ಶಾಖೆಗಳು ಉತ್ತಮ ಕೆತ್ತನೆಗಳನ್ನು ಹೊಂದಿವೆ. ಇಲ್ಲಿ ವಜ್ರತೋರಣ, ನಾಟ್ಯಗಾರರು ವಾದ್ಯಗಾರರು, ನಾಗದೇವರು, ಸ್ತಂಭ ಮತ್ತು ವಿವಿಧ ಪ್ರಾಣಿಗಳ ಕೆತ್ತನೆಗಳನ್ನು ಕಾಣಬಹುದು.


ತಳಭಾಗದಲ್ಲಿ ಮಾನವರೂಪದ ಐದು ಕೆತ್ತನೆಗಳಿವೆ. ಇವುಗಳಲ್ಲಿ ೩ ಹೆಣ್ಣುರೂಪದಲ್ಲಿದ್ದರೆ ಉಳಿದೆರಡು ಗಂಡುರೂಪದಲ್ಲಿವೆ. ಬಹಳ ಹಿಂದೆನೇ ಬಳಿಯಲಾಗಿರುವ ಸುಣ್ಣದ (ಈಗ ಸ್ವಲ್ಪ ಮಟ್ಟಿಗೆ ಅಳಿಸಿ ತೆಗೆಯಲಾಗಿದೆ) ಪ್ರಭಾವ ಕೆತ್ತನೆಗಳ ಅಂದವನ್ನು ಹಾಳುಗೆಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ.


ಪಶ್ಚಿಮದ ಗರ್ಭಗುಡಿಯ ಅಂತರಾಳದ ಮೇಲೆ ಒಂದು ಅದ್ಭುತ ಕೆತ್ತನೆಯಿದೆ. ಮಕರತೋರಣದಿಂದ ಅಲಂಕೃತಗೊಂಡ ತ್ರಿಮೂರ್ತಿಗಳ ಅಪೂರ್ವ ಮತ್ತು ವಿಶಿಷ್ಟ ಚಿತ್ರಣವನ್ನು ಇಲ್ಲಿ ತೋರಿಸಲಾಗಿದೆ. ಶಿವನನ್ನು ತಾಂಡವೇಶ್ವರನ ರೂಪದಲ್ಲಿ ತೋರಿಸಲಾಗಿದ್ದು, ಅಕ್ಕಪಕ್ಕದಲ್ಲಿ ವಾದ್ಯ ನುಡಿಸುವವರ ಕೆತ್ತನೆಯಿದೆ. ಶಿವನ ಬಲಭಾಗದಲ್ಲಿ ಹಂಸಪೀಠದ ಮೇಲೆ ಬ್ರಹ್ಮನಿದ್ದಾನೆ. ಎಡಭಾಗದಲ್ಲಿ ಗರುಡಪೀಠದ ಮೇಲಿರುವ ವಿಷ್ಣುವಿನ ಕೆತ್ತನೆಯೇ ವಿಶಿಷ್ಟವಾಗಿದೆ. ವಿಷ್ಣುವಿಗೂ ೩ ತಲೆಗಳಿರುವಂತೆ ತೋರಿಸಲಾಗಿದೆ. ಉಗ್ರನರಸಿಂಹನ ರೂಪದ ಎರಡು ಹೆಚ್ಚುವರಿ ತಲೆಗಳನ್ನು ವಿಷ್ಣುವಿಗೆ ನೀಡಲಾಗಿದೆ!


ಯಕ್ಷ ಮತ್ತು ಯಕ್ಷಿಯರನ್ನು ಇಕ್ಕೆಲಗಳಲ್ಲಿರುವ ಎರಡೂ ಮಕರಗಳ ಮೇಲೆ ತೋರಿಸಲಾಗಿದೆ. ತ್ರಿಮೂರ್ತಿಗಳ ಮೇಲ್ಭಾಗದಲ್ಲಿ ಅಷ್ಟದಿಕ್ಪಾಲಕರನ್ನು ತಮ್ಮ ತಮ್ಮ ವಾಹನಗಳ ಸಮೇತ ತೋರಿಸಲಾಗಿದೆ. ಈ ಕೆತ್ತನೆಯ ಕೆಳಗೆ ೨-೩ ಸಾಲುಗಳಲ್ಲಿ ಬರೆದಿರುವ ಶಾಸನವಿದೆ. ಖಂಡಿತವಾಗಿಯೂ ಈ ಪಾಳುಬಿದ್ದ ದೇವಾಲಯದಲ್ಲಿ ಇಂತಹ ಸುಂದರ ಕಲಾಕೃತಿಯನ್ನು ನಾನು ನಿರೀಕ್ಷಿಸಿರಲಿಲ್ಲ.


ಅಂದಕೇಶ್ವರನ ಪ್ರಮುಖ ದ್ವಾರ ಬಹಳ ಸುಂದರವಾಗಿದ್ದು ವಿಶಿಷ್ಟ ಕೆತ್ತನೆಗಳುಳ್ಳ ಐದು ತೋಳುಗಳನ್ನು ಹೊಂದಿದೆ. ದ್ವಾರದ ತಳಭಾಗದಲ್ಲಿ ಇಕ್ಕೆಲಗಳಲ್ಲಿ ತೋಳಿಗೊಂದರಂತೆ ಮಾನವರೂಪದ ಐದು ಕೆತ್ತನೆಗಳಿವೆ. ಇವುಗಳ ಮೇಲೆ ವಜ್ರತೋರಣ, ನಾಟ್ಯಗಾರರು ವಾದ್ಯಗಾರರು, ನೃತ್ಯ ಮಾಡುತ್ತಿರುವ ಜೋಡಿ, ಸ್ತಂಭ ಮತ್ತು ಬಳ್ಳಿಕೆತ್ತನೆಗಳನ್ನು ಕಾಣಬಹುದು.


ಸ್ವಲ್ಪ ಹಾನಿಗೊಳಗಾಗಿದ್ದರೂ ಲಲಾಟದಲ್ಲಿರುವ ಗಜಲಕ್ಷ್ಮೀಯ ಕೆತ್ತನೆಯನ್ನು ನೋಡುವುದೇ ಚಂದ. ಗಜಲಕ್ಷ್ಮೀಯ ಕೆತ್ತನೆಯಲ್ಲಿ ನಾಲ್ಕು ಆನೆಗಳನ್ನು ತೋರಿಸಲಾಗಿದೆ. ಇಕ್ಕೆಲಗಳಲ್ಲಿ ಅಷ್ಟದಿಕ್ಪಾಲಕರನ್ನು ಕಾಣಬಹುದು. ದೇವಾಲಯದ ಸ್ಥಿತಿಗೆ ಹೋಲಿಸಿದರೆ ಪ್ರಮುಖ ದ್ವಾರದ ಈ ಸುಂದರ ಶಿಲ್ಪಕಲೆ ಇನ್ನೂ ಉಳಿದಿರುವುದೇ ಸೋಜಿಗ.


ಪಶ್ಚಿಮದ ಗರ್ಭಗುಡಿಯ ಹೊರಗೋಡೆ ಮಾತ್ರ ಉಳಿದುಕೊಂಡಿದೆ. ಪೂರ್ವದ ಗರ್ಭಗುಡಿಯ ಹೊರಗೋಡೆ ಎಲ್ಲಿದೆ ಎಂದು ಹುಡುಕಬೇಕಾದ ಪರಿಸ್ಥಿತಿ. ಇದೇ ಕಾರಣದಿಂದ ಹೊರಗಿನಿಂದ ನೋಡಿದಾಗ ಇದೊಂದು ಏಕಕೂಟ ದೇವಾಲಯವೆಂದೇ ನಾನು ತಿಳಿದುಕೊಂಡಿದ್ದೆ. ಒಳಗೆ ತೆರಳಿದ ಬಳಿಕವೇ ದ್ವಿಕೂಟ ದೇವಾಲಯವೆಂದು ಅರಿವಾದದ್ದು!


ಅಂದಕೇಶ್ವರ ದೇವಾಲಯದ ಇನ್ನೊಂದು ಪ್ರಮುಖ ವೈಶಿಷ್ಟ್ಯವೆಂದರೆ ದೇವಾಲಯ ನಿರ್ಮಾಣಕ್ಕೆ ಬಳಸಲಾದ ಎಲ್ಲಾ ಕಲ್ಲುಗಳ ಮೇಲೆ ಶಿಲ್ಪಿಗಳು ತಮ್ಮ ಹೆಸರನ್ನು ಬರೆದಿರುವುದು.

ಭಾನುವಾರ, ಅಕ್ಟೋಬರ್ 28, 2012

ನಾಗರಮಡಿ


ಪ್ರಜಾವಾಣಿ ಮತ್ತು ಸಂಯುಕ್ತ ಕರ್ನಾಟಕಗಳಲ್ಲಿ ನಾಗರಮಡಿ ’ಜಲಧಾರೆ’ಯ ಬಗ್ಗೆ ಲೇಖನಗಳು ಬಂದಿದ್ದವು. ೨೦೦೭ ಗಾಂಧಿ ಜಯಂತಿಯ ರಜೆಯನ್ನು ಸದುಪಯೋಗಪಡಿಸಿಕೊಳ್ಳೋಣವೆಂದು ಹೊರಟು ನಾಗರಮಡಿ ಇರುವ ಪುಟ್ಟ ಹಳ್ಳಿ ತಲುಪಿದಾಗ ಮಧ್ಯಾಹ್ನ ೧.೦೦ ಆಗಿತ್ತು.


ಈ ಹಳ್ಳಿಯ ಚೆಕ್ ಪೋಸ್ಟ್ ನಲ್ಲಿ ನಮ್ಮನ್ನು ಬಸ್ಸಿನ ನಿರ್ವಾಹಕರು ಇಳಿಸಿದರು. ಅಲ್ಲೇ ಒಂದು ಸಣ್ಣ ಹೋಟೇಲು. ಆ ಹೋಟೇಲ್ ನೋಡಿದರೆ ಹಸಿವೆಲ್ಲಾ ಮಾಯವಾಗಬೇಕು, ಅಷ್ಟು ಕೊಳಕು. ಆದರೆ ಅಲ್ಲಿ ಬೇರೆ ಹೋಟೇಲುಗಳಿರಲಿಲ್ಲ. ಭಲೇ ದಡಿಯರಾಗಿದ್ದ ಅಪ್ಪ-ಮಗ ಜೋಡಿ ಈ ಹೋಟೇಲನ್ನು ನಡೆಸುತ್ತಿದ್ದರು. ಇಲ್ಲಿ ಜನರ ಸಂಚಾರ ಕಡಿಮೆ. ಹೋಟೇಲಿಗೆ ಯಾರೂ ಬರುವಂತೆ ಕಾಣುತ್ತಿರಲಿಲ್ಲ.


ಒಂದೆರಡು ಕಿಮಿ ರಸ್ತೆಯಲ್ಲೇ ನಡೆದ ಬಳಿಕ ಬಲಕ್ಕೆ ತಿರುಗಿ ನೇರ ನಡೆದರೆ ನಾಗರಮಡಿ ಎಂದು ಹೋಟೇಲಿನ ಅಪ್ಪ-ಮಗ ನಮಗೆ ತಿಳಿಸಿದರು. ರಸ್ತೆಯಲ್ಲಿ ನಡೆಯುವಾಗ ನೋಟ ಚೆನ್ನಾಗಿತ್ತು. ದೂರದಲ್ಲೊಂದು ಅತ್ಯಾಕರ್ಷವಾಗಿ ಕಾಣುತ್ತಿದ್ದ ಶಿಖರ. ರಸ್ತೆಯ ಎರಡೂ ಪಾರ್ಶ್ವಗಳಲ್ಲಿ ಗದ್ದೆಗಳು. ಗದ್ದೆಗಳ ನಡುವೆ ಅಲ್ಲಲ್ಲಿ ಮನೆಗಳು. ಬಲಕ್ಕೆ ದೂರದಲ್ಲಿ ಬೆಟ್ಟಗಳ ಸಾಲು. ಅಲ್ಲೆಲ್ಲೋ ನಾಗರಮಡಿ ಇರಬಹುದೆಂದು ಊಹಿಸಿದೆ. ದೇವಸ್ಥಾನದ ಬಳಿ ರಸ್ತೆಯಿಂದ ತಿರುವು ಪಡೆದು ಒಳಗೆ ನಡೆದೆವು. ಐದು ನಿಮಿಷದ ಬಳಿಕ ನಂತರ ಮನೆಗಳಿಲ್ಲ. ಮಣ್ಣಿನ ರಸ್ತೆಯಲ್ಲಿ ೧೫ ನಿಮಿಷ ನಡೆದ ಬಳಿಕ ತೊರೆಯೊಂದರ ಪಾರ್ಶ್ವದಲ್ಲೇ ರಸ್ತೆ ಮುಂದುವರಿಯಿತು. ನಾಗರಮಡಿ ಜಲಧಾರೆ ಇದೇ ಹಳ್ಳದಿಂದ ನಿರ್ಮಿತವಾಗಿರಬಹುದೆಂದು ಮುನ್ನಡೆದೆವು.


ಸ್ವಲ್ಪ ಹೊತ್ತಿನ ಬಳಿಕ ಕಲ್ಲಿನ ಕ್ವಾರಿಯೊಂದು ಎದುರಾಯಿತು. ಬೆಟ್ಟವನ್ನು ಶಿಸ್ತುಬದ್ಧವಾಗಿ ಕೊರೆದು ಕರಿಕಲ್ಲನ್ನು ಲೂಟಿಗೈಯಲಾಗಿತ್ತು. ಇದರ ಬದಿಯಲ್ಲೇ ನಿಧಾನವಾಗಿ ಮೇಲೇರಿದೆವು. ಎಡಕ್ಕೆ ಕ್ವಾರಿಯ ಆಳವಿದ್ದರೆ, ಬಲಕ್ಕೆ ಹಳ್ಳ ಹರಿಯುತ್ತಿತ್ತು. ಜಲಧಾರೆಯ ಸದ್ದಂತೂ ಕೇಳಿಸುತ್ತಿರಲಿಲ್ಲ.


ಬೆಟ್ಟದ ಮೇಲೆ ತಲುಪಿದಾಗ ಕೆಳಗೆ ವಿಚಿತ್ರ ಆಕಾರದ ಬಂಡೆಯೊಂದು ಕಂಡುಬಂತು. ಅದರ ಕೆಳಗಡೆಯಿಂದ ಹಳ್ಳವು ಹರಿಯುತ್ತಿತ್ತು. ನೋಡಿಬರೋಣವೆಂದು ಕೆಳಗಿಳಿದರೆ ಅಲ್ಲೇ ಇತ್ತು ನಾಗರಮಡಿ ಜಲಧಾರೆ(?!). ಕೇವಲ ೧೦-೧೨ ಅಡಿ ಎತ್ತರದಿಂದ ನೀರು ಕೆಳಗೆ ಬೀಳುತ್ತಿತ್ತು!



ಆದರೆ ಆ ಬಂಡೆ! ನಾಗರಹಾವು ಹೆಡೆ ಎತ್ತಿದಾಗ ಕಾಣುವಂತೆ ಈ ಬಂಡೆ ಕಾಣುತಿತ್ತು. ಅದಕ್ಕೇ ನಾಗರಮಡಿ ಎಂಬ ಹೆಸರು. ಇದು ಸುಮಾರು ೩೦ ಅಡಿ ಎತ್ತರವಿದ್ದು, ಎರಡೂ ಪಾರ್ಶ್ವಗಳಲ್ಲಿರುವ ಕಲ್ಲಿನ ಗೋಡೆಯ ಮೇಲೆ ಆಧಾರವಾಗಿ ನಿಂತಿರುವುದು. ಇದರ ಕೆಳಗೇ ನೀರು ಧುಮುಕಿ, ೨೦ ಅಡಿ ಅಗಲ ಮತ್ತು ೨೫ ಅಡಿ ಉದ್ದದ ಕೊಳವೊಂದನ್ನು ಸೃಷ್ಟಿಸಿ ಮುಂದಕ್ಕೆ ಹರಿದು ಹೋಗುತ್ತಿತ್ತು.


ಜಲಧಾರೆ ಇರದಿದ್ದರೂ, ಸ್ಥಳ ಮಾತ್ರ ಬಹಳ ಚೆನ್ನಾಗಿತ್ತು. ಆ ಬಂಡೆಯ ರಚನೆ, ಹೆಡೆಯೆತ್ತಿ ನಿಂತಿರುವ ಅದರ ಆಕಾರ, ಬಂಡೆಯ ಅಡಿಯಲ್ಲಿರುವ ಈಜುಕೊಳದಂತಹ ನೀರಿನ ಗುಂಡಿ ಮತ್ತು ಸದ್ದಿಲ್ಲದ ಪ್ರಶಾಂತ ವಾತಾವರಣ.

ಮಾಹಿತಿ: ಅ.ಚಿಂ.ಜ್ಯೋತಿಷಿ ಮತ್ತು ಜಿ.ಡಿ.ಪಾಲೇಕರ

ಭಾನುವಾರ, ಅಕ್ಟೋಬರ್ 21, 2012

ಸಾತಖಂಡಾ!


೨೦೦೭ ಸೆಪ್ಟೆಂಬರ್ ೭. ಧಾರವಾಡದಲ್ಲಿ ವಿವೇಕ್ ಎಲ್ಲಾದರೂ ಹೊರಟಿದ್ದಾರೋ ನೋಡೋಣವೆಂದು ಫೋನಾಯಿಸಿದರೆ, ’ನಾಗಝರಿ ಫಾಲ್ಸ್ ಕಡೆ ಹೋಗೋಣ ಅಂತಿದ್ದೀವಿ..’ ಎಂಬ ಉತ್ತರ. ಅತ್ತ ಧಾರವಾಡದಿಂದ ವಿವೇಕ್ ಮತ್ತು ಗಂಗಾಧರ್ ಕಲ್ಲೂರ್ ಮತ್ತು ಇತ್ತ ಉಡುಪಿಯಿಂದ ನಾನು, ಜಲಧಾರೆ ಇದ್ದ ಊರಿನಲ್ಲಿ ಮುಂಜಾನೆ ಭೇಟಿಯಾಗೋಣವೆಂದು ನಿರ್ಧರಿಸಿದೆವು.


ಮುಂಜಾನೆ ಹಳ್ಳಿಯಲ್ಲೊಂದೆಡೆ ಕಾರನ್ನಿರಿಸಿ ಜಲಧಾರೆಯತ್ತ ಹೊರಟೆವು. ಸುಮಾರು ೨ ಕಿಮಿ ಟಾರು ರಸ್ತೆಯಲ್ಲಿ ನಡೆದು ನಂತರ ಮಣ್ಣಿನ ರಸ್ತೆಗೆ ಹೊರಳಿದೆವು. ನವೆಂಬರ್ ಬಳಿಕ ಪ್ರವಾಸಿಗರನ್ನು ನಾಗಝರಿ ಜಲಧಾರೆಗೆ ಕರೆದೊಯ್ಯುವ ಸಲುವಾಗಿ ಅರಣ್ಯ ಇಲಾಖೆ ನಿರ್ಮಿಸಿದ ರಸ್ತೆ ಇದು. ಎಪ್ರಿಲ್ ನಿಂದ ಅಕ್ಟೋಬರ್ ವರೆಗೆ ಇಲ್ಲಿ ಯಾರನ್ನೂ ಅರಣ್ಯ ಇಲಾಖೆಯವರು ಕರೆದುಕೊಂಡು ಬರುವುದಿಲ್ಲ. ಆದ್ದರಿಂದ ರಸ್ತೆಯಲ್ಲೆಲ್ಲಾ ಗಿಡಗಂಟಿಗಳು ಬೆಳೆದು ನಿಂತಿದ್ದವು.


ಪಕ್ಷಿಪ್ರಿಯರಿಗಂತೂ ಈ ಕಾಡುಗಳು ಸ್ವರ್ಗ. ಪಕ್ಷಿ ವೀಕ್ಷಣೆಯಲ್ಲಿ ನನಗೆ ಅಷ್ಟು ಆಸಕ್ತಿಯಿಲ್ಲ. ಆದರೆ ಕಲ್ಲೂರ್ ಅವರೊಂದಿಗೆ ಎಲ್ಲಾದರು ತೆರಳಿದರೆ, ಪಕ್ಷಿಗಳನ್ನು ಗುರುತಿಸಿ ಅವುಗಳ ಶಬ್ದವನ್ನು ಅನುಕರಣೆ ಮಾಡಿ ಅವುಗಳ ವರ್ತನೆಯನ್ನು ಗಮನಿಸಿ ವಿವರಣೆ ಮತ್ತು ಮಾಹಿತಿ ನೀಡುವಾಗ ಆಸಕ್ತಿ ಕೆರಳದೆ ಇರಲು ಅಸಾಧ್ಯ. ಎಂದೂ ನೋಡದ, ಗೊತ್ತಿರದ ಸುಮಾರು ೧೫ ಬಗೆಯ ಪಕ್ಷಿಗಳನ್ನು ಅಂದು ನೋಡಿದೆ. ೩ ಬೇರೆ ಬೇರೆ ಜಾತಿಯ ಮರಕುಟಕ ಪಕ್ಷಿಗಳನ್ನು ತನ್ನ ಬೈನಾಕುಲರ್ ನಲ್ಲಿ ಕಲ್ಲೂರ್ ತೋರಿಸಿದರು. ಕಾಡಿನ ಹಾದಿಯಲ್ಲಿ ಸಾಗುವಾಗ ಯಾರಿಗೂ ಕೇಳಿಸದ ಶಬ್ದಗಳು ಈ ಕಲ್ಲೂರ್ ಗೆ ಕೇಳಿಸುತ್ತವೆ. ಹಕ್ಕಿಯೊಂದರ ಶಬ್ದ ಕೇಳಿಸಿದೊಡನೆ ಅಲ್ಲೇ ನಿಂತು, ನಮ್ಮನ್ನೂ ನಿಲ್ಲಿಸಿ, ’ನೋಡ್ರಿ ಅದು ಈ ಪಕ್ಷಿ, ಇದು ಆ ಪಕ್ಷಿ...’ ಎನ್ನುತ್ತಾ ಚಾರಣದ ಸಂಪೂರ್ಣ ಅನುಭವವನ್ನು ನೀಡುತ್ತಾರೆ. ಪಕ್ಷಿಗಳಲ್ಲದೆ, ಕೀಟಗಳು, ಗಿಡಗಳ ಬಗ್ಗೆಯೂ ಅಪಾರ ಮಾಹಿತಿಯನ್ನು ಕಲ್ಲೂರ್ ನಮಗೆ ದೊರಕಿಸುತ್ತಾ ಸಾಗುತ್ತಾರೆ. ಇವರೊಂದಿಗೆ ಚಾರಣಕ್ಕೆ ತೆರಳಿದರೆ ಅದೊಂದು ’ನೇಚರ್ ಟ್ಯೂಷನ್’.


ಜೀಪ್ ರಸ್ತೆ ಒಮ್ಮೆಲೇ ಕೊನೆಗೊಂಡು ಇಳಿಜಾರಿನ ಕಾಲುದಾರಿ ಆರಂಭಗೊಳ್ಳುತ್ತದೆ. ಇಳಿಜಾರು ಆರಂಭವಾಗುವಲ್ಲೇ ದೂರದಲ್ಲಿ ನಾಗಝರಿ ಜಲಧಾರೆಯ ದರ್ಶನವಾಗುತ್ತದೆ. ಇಲ್ಲಿ ಕಾಣಿಸುವುದು ಜಲಧಾರೆಯ ಮೇಲಿನ ೩ ಹಂತಗಳು. ಇಲ್ಲಿಂದ ನಾಗಝರಿ ಕಣಿವೆಗೆ ಇಳಿದು, ಎದುರಾಗುವ ನಾಗಝರಿ ಹಳ್ಳವನ್ನು ದಾಟಿ, ಹಳ್ಳಗುಂಟ ಸ್ವಲ್ಪ ಹೊತ್ತು ನಡೆದರೆ ನಾಗಝರಿ ಜಲಧಾರೆ.


ಇಲ್ಲಿಂದ ಕಾಣಿಸುವುದು ಜಲಧಾರೆಯ ೬ ಮತ್ತು ೭ನೇ ಹಂತಗಳು ಮಾತ್ರ. ಮೇಲಿನ ೫ ಹಂತಗಳನ್ನು ನೋಡಬೇಕಿದ್ದಲ್ಲಿ ಜಲಧಾರೆಯ ಪಾರ್ಶ್ವದಲ್ಲೇ ಬಂಡೆಯ ಮೇಲ್ಮೈಯನ್ನು ಏರಬೇಕು. ನಾನು ಕೆಳಗೆ ಇರಲು ನಿರ್ಧರಿಸಿದರೆ ಉಳಿದವರು ಮೇಲೇರತೊಡಗಿದರು. ಆರನೇ ಹಂತದ ಮೇಲ್ಭಾಗದವರೆಗೂ ಅವರುಗಳು ಕಾಣಿಸುತ್ತಿದ್ದರು. ನಂತರ ಮಾಯವಾದವರು ಕಡೆಗೆ ಒಬ್ಬೊಬ್ಬರಾಗಿ ಕೆಳಗಿಳಿದು ಬರುವುದು ೧೫ ನಿಮಿಷದ ಬಳಿಕ ಕಾಣಿಸಿತು.


ನಾಗಝರಿ ಜಲಧಾರೆಯಲ್ಲಿ ಅರಣ್ಯ ಇಲಾಖೆಯವರು ’ರಾಕ್ ಕ್ಲೈಂಬಿಂಗ್’ ಇತ್ಯಾದಿ ಸಾಹಸ ಕ್ರೀಡೆಗಳನ್ನು ಏರ್ಪಡಿಸುತ್ತಾರೆ. ಖಾಸಗಿಯವರು ಕೂಡಾ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಇಂತಹ ಚಟುವಟಿಕೆಗಳನ್ನು ಏರ್ಪಡಿಸುತ್ತಾರೆ. ನಾಗಝರಿ ಜಲಪಾತ ಸಂದರ್ಶಿಸಲು ಪ್ರಕೃತಿ ಪ್ರಿಯರಿಗೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳು ಮಾತ್ರ ಪ್ರಶಸ್ತ ಸಮಯ. ಗೌಜಿ, ಗಲಾಟೆ, ಕೇಕೇ ಹಾಕುವ ಗುಂಪು ಬರುವುದು ನವೆಂಬರ್-ನಿಂದ. ಜಲಧಾರೆಗೆ ಸಾತಖಂಡಾ ಜಲಪಾತ ಎಂಬ ಹೆಸರೂ ಇದೆ. ಇದು ಮರಾಠಿ ಭಾಷೆಯಿಂದ ಬಂದ ಹೆಸರು. ಏಳು ಹಂತಗಳಿರುವುದರಿಂದ ’ಸಾತ’ಖಂಡಾ ಎಂಬ ಹೆಸರು.