ಭಾನುವಾರ, ಸೆಪ್ಟೆಂಬರ್ 18, 2011

ಕಪಿಲೇಶ್ವರ ದೇವಾಲಯ - ದಾವಣೀಬೈಲು


ಗಿಡಗಂಟಿಗಳಿಂದ, ಮುಳ್ಳುಗಿಡಗಳಿಂದ, ಪೊದೆಗಳಿಂದ ಸುತ್ತುವರಿದು ಪಾಳುಬಿದ್ದು, ನಿಶಾಚರಿ ಪ್ರಾಣಿ ಪಕ್ಷಿಗಳ ನೆಲೆಬೀಡಾಗಿದ್ದ ಕಪಿಲೇಶ್ವರ ದೇವಾಲಯವನ್ನು ಅತ್ಯಂತ ಮುತುವರ್ಜಿ ವಹಿಸಿ ಸ್ವಚ್ಛಗೊಳಿಸಿ ಪ್ರವಾಸಿಗರ ಸಂದರ್ಶನಕ್ಕೆ ಯೋಗ್ಯವಾಗುವಂತೆ ಮಾಡಿದೆ ಪ್ರಾಚ್ಯ ವಸ್ತು ಇಲಾಖೆ.


ಸುಮಾರು ೭೦೦ ವರ್ಷಗಳ ಹಿಂದಿನ ದೇವಾಲಯ ಎಂಬ ಮಾಹಿತಿ ಹೊರತುಪಡಿಸಿ ದೇವಾಲಯದ ಬಗ್ಗೆ ಬೇರೆ ಯಾವ ಮಾಹಿತಿಯೂ ಲಭ್ಯವಿಲ್ಲ. ದೇವಾಲಯದ ಮುಂದೆ ವಿಶಾಲವಾದ ಕೆರೆಯಿದ್ದು ದೇವಾಲಯದ ಮುಖಮಂಟಪದಿಂದ ಅದೊಂದು ಸುಂದರ ನೋಟ.


ಭವ್ಯವಾಗಿ ನಿರ್ಮಿಸಲಾಗಿರುವ ಮುಖಮಂಟಪಕ್ಕೆ ಮೂರು ದಿಕ್ಕುಗಳಿಂದ ಪ್ರವೇಶವಿದ್ದು ಸುತ್ತಲೂ ಕಕ್ಷಾಸನವಿದೆ. ಮುಖಮಂಟಪದಲ್ಲಿ ಒಟ್ಟು ೩೨ ಕಂಬಗಳಿದ್ದು ಇವುಗಳಲ್ಲಿ ೧೬ ಕಂಬಗಳನ್ನು ಕಕ್ಷಾಸನದ ಮೇಲೆ ನಿರ್ಮಿಸಲಾಗಿದೆ.


ಮುಖಮಂಟಪದಲ್ಲಿರುವ ೨೫ ಅಂಕಣಗಳಲ್ಲಿ ವಿವಿಧ ರೀತಿಯ ತಾವರೆಗಳನ್ನು ಕಾಣಬಹುದು. ಕೆಲವು ಅಂಕಣಗಳಲ್ಲಿನ ಕೆತ್ತನೆಗಳು ನಶಿಸಿದ್ದರೂ ಹೆಚ್ಚಿನವು ಉಳಿದುಕೊಂಡಿವೆ.


ಮುಖಮಂಟಪದ ನಟ್ಟನಡುವಿನ ಅಂಕಣ ಬಹಳ ಆಕರ್ಷಕವಾಗಿದೆ. ವೃತ್ತವೊಂದರ ಒಳಗೆ ೨೫ ತಾವರೆಗಳನ್ನು ಕಲಾತ್ಮಕವಾಗಿ ಕೆತ್ತಲಾಗಿದೆ. ಕೆಲವು ತಾವರೆಗಳು ತಮ್ಮ ಕೋಷ್ಠದಿಂದ ನಾಪತ್ತೆಯಾಗಿವೆ ಮತ್ತು ಇನ್ನೂ ಕೆಲವು ಭಾಗಶ: ಅಳಿಸಿಹೋಗಿವೆ. ಆದರೂ ಈ ರಚನೆ ಆಕರ್ಷಕವಾಗಿದ್ದು ಗಮನ ಸೆಳೆಯುತ್ತದೆ.


ಇದೊಂದು ಅದ್ಭುತ ಮತ್ತು ಸೃಜನಶೀಲ ಕೆತ್ತನೆ. ವೃತ್ತದೊಳಗೆ ಹಲವಾರು ಚೌಕಗಳು, ಆ ಚೌಕಗಳ ನಡುವೆ ಹಾಗೂ ಹೊರಗೆ ತಾವರೆಗಳು ಮತ್ತು ೨ ಚೌಕಗಳನ್ನು ಒಂದರೊಳಗೊಂದು ನುಸುಳುವ ರೀತಿಯಲ್ಲಿ ಕೆತ್ತಿರುವುದು ಇವೆಲ್ಲಾ ಶಿಲ್ಪಿಯ ನೈಪುಣ್ಯತೆಗೆ ಸಾಕ್ಷಿಯಾಗಿವೆ.


ಮುಖಮಂಟಪದ ಛಾವಣಿಯ ಹೊರಚಾಚಿದ ಭಾಗದಲ್ಲಿ ಪ್ರಾಣಿ ಪಕ್ಷಿಗಳನ್ನು ತೋರಿಸಲಾಗಿದೆ. ಸಿಂಹ, ಆನೆ ಮತ್ತು ಹಂಸಗಳ ವೈವಿಧ್ಯಮಯ ಕೆತ್ತನೆಗಳನ್ನು ಇಲ್ಲಿ ಕಾಣಬಹುದು.


ನವರಂಗದ ದ್ವಾರವು ಅಷ್ಟಶಾಖೆಗಳಿಂದ ಅಲಂಕೃತಗೊಂಡಿದ್ದು ಲಲಾಟದಲ್ಲಿ ಲಕ್ಷ್ಮೀಯ ಕೆತ್ತನೆಯಿದೆ. ದ್ವಾರದ ಮೇಲ್ಗಡೆ ೬ ಸಣ್ಣ ಗೋಪುರಗಳಿವೆ. ಎಲ್ಲಾ ಶಾಖೆಗಳು ತೋರಣಗಳಿಂದ ಅಲಂಕೃತವಾಗಿವೆ.


ನವರಂಗದ ದ್ವಾರದ ಪಾರ್ಶ್ವಗಳಲ್ಲಿರುವ ಸ್ತಂಭಗಳ ತಳಭಾಗದಲ್ಲಿ ಚಾಮರಧಾರಿಯರನ್ನು ಬಹಳ ಸುಂದರವಾಗಿ ತೋರಿಸಲಾಗಿದೆ.


ನವರಂಗದಲ್ಲಿ ನಾಲ್ಕು ಕಂಬಗಳಿವೆ ಮತ್ತು ನಾಲ್ಕು ದೇವಕೋಷ್ಠಗಳಿವೆ. ಎಲ್ಲಾ ದೇವಕೋಷ್ಠಗಳು ಖಾಲಿಯಾಗಿವೆ. ಅಂತರಾಳದ ದ್ವಾರವು ಅಲಂಕಾರರಹಿತ ಸಪ್ತಶಾಖೆಗಳನ್ನು ಹೊಂದಿದ್ದು ಲಲಾಟದಲ್ಲಿ ಲಕ್ಷ್ಮೀಯನ್ನು ಹೊಂದಿದೆ. ದ್ವಾರದ ಮೇಲಿನ ಅಡ್ಡಪಟ್ಟಿಯಲ್ಲಿ ಆರು ಕೆತ್ತನೆಗಳಿದ್ದು ಅವೇನೆಂದು ತಿಳಿಯಲಿಲ್ಲ.


ಗರ್ಭಗುಡಿಯ ದ್ವಾರ ಸಂಪೂರ್ಣವಾಗಿ ಅಲಂಕಾರರಹಿತವಾಗಿದೆ! ಲಲಾಟವೂ ಖಾಲಿ. ಗರ್ಭಗುಡಿಯೂ ಖಾಲಿ. ಗರ್ಭಗುಡಿಯಲ್ಲಿ ೯ ಅಂಕಣಗಳಿದ್ದು ಪ್ರತಿಯೊಂದರಲ್ಲೂ ತಾವರೆಗಳನ್ನು ಕೆತ್ತಲಾಗಿದೆ.


ಬಹಳ ಹಿಂದೆ ನಿಧಿಶೋಧಕರು ಶಿವಲಿಂಗವನ್ನು ಕಿತ್ತೆಸೆದು ಗರ್ಭಗುಡಿಯನ್ನು ಅಗೆದುಹಾಕಿದ್ದರು. ಅಂದಿನಿಂದ ಇಂದಿನವರೆಗೆ ಶಿವಲಿಂಗವು ದೇವಾಲಯದ ಹೊರಗೆ ಅನಾಥವಾಗಿ ಬಿದ್ದುಕೊಂಡಿದೆ. ನಂದಿಯ ಮೂರ್ತಿಯನ್ನು ತೆಗೆಯಲಾಗಿದ್ದು ಅದನ್ನು ಕೂಡ ಹಾನಿಗೊಂಡಿರುವ ಶಿವಲಿಂಗದ ಸಮೀಪದಲ್ಲೇ ಕಾಣಬಹುದು.


ಕಕ್ಷಾಸನದ ಹೊರಗೋಡೆಯಲ್ಲಿ ಸ್ತಂಭಗಳನ್ನು ಕೆತ್ತಲಾಗಿದೆ. ಪ್ರತಿ ಸ್ತಂಭದ ಮೇಲೆ ಪುಟ್ಟ ಗೋಪುರವನ್ನು ರಚಿಸಲಾಗಿದೆ. ಈ ಸ್ತಂಭಗಳ ನಡುವೆ ಏಕತೋರಣವಿದ್ದರೆ, ಗೋಪುರಗಳ ನಡುವೆ ವಿವಿಧ ಕೆತ್ತನೆಗಳಿವೆ.


ಈ ಕೆತ್ತನೆಗಳಲ್ಲಿ ಸಿಂಹ, ಗಣೇಶ, ವಾದ್ಯಗಾರರು, ನೃತ್ಯಗಾರರು, ಆನೆ, ವಾನರ, ಮಾರ್ಜಾಲ, ಶ್ವಾನ, ಅಶ್ವ ಇತ್ಯಾದಿಗಳನ್ನು ಕಾಣಬಹುದು.


ದೇವಾಲಯದ ಹೊರಗೋಡೆಯಲ್ಲಿ ದಿಕ್ಕಿಗೊಂದರಂತೆ ಗೋಪುರ ಹೊಂದಿರುವ ೩ ಖಾಲಿ ದೇವಕೋಷ್ಠಗಳಿವೆ. ಇವುಗಳಲ್ಲಿ ಒಂದರ ಗೋಪುರದಲ್ಲಿ ಈ ಕೆಳಗಿನ ಕೆತ್ತನೆಯಿತ್ತು.


ಕರಿಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿರುವುದರಿಂದ ದೇವಾಲಯವನ್ನು ’ಕಪ್ಪುಗೋಡು ಕಪಿಲೇಶ್ವರ ದೇವಾಲಯ’ವೆಂದೂ ಕರೆಯುತ್ತಾರೆ. ನಾನು ಚಿತ್ರ ತೆಗೆಯುತ್ತಿರಬೇಕಾದರೆ ಓಮ್ನಿಯೊಂದು ದೇವಾಲಯದ ಬಳಿ ಬಂತು. ಅದರ ಚಾಲಕ ಸ್ಥಾನದಲ್ಲಿದ್ದ ಯುವ ವ್ಯಕ್ತಿ ಇಳಿದು ಬಂದು ನನ್ನ ಬಗ್ಗೆ ಮಾಹಿತಿ ಕೇಳತೊಡಗಿದ. ಆತನ ಪ್ರಶ್ನೆಗಳಿಂದ ಆಶ್ಚರ್ಯಚಕಿತನಾದರೂ ಸಭ್ಯನಂತೆ ತೋರುತ್ತಿದ್ದ ಕಾರಣ ತಾಳ್ಮೆಯಿಂದ ಉತ್ತರ ನೀಡಿದೆ.


ಆತ ಅದೇ ಊರಿನ ವ್ಯಕ್ತಿಯಾಗಿದ್ದು ದೇವಾಲಯದ ಟ್ರಸ್ಟಿನ ಮುಖ್ಯಸ್ಥನೂ ಹೌದು. ಪಾಳು ಬಿದ್ದ ದೇವಾಲಯವನ್ನು ಈ ಮಟ್ಟಕ್ಕೆ ದುರಸ್ತಿ ಮಾಡಿದರೂ ಊರಿನ ಕೆಲವರು ದೇವಾಲಯಕ್ಕೆ ಸೇರಿದ ಜಾಗವನ್ನು ಅತಿಕ್ರಮಣ ಮಾಡಲು ಮುಂದಾಗಿರುವುದನ್ನು ಅವರು ತಿಳಿಸಿದರು. ದೇವಾಲಯಕ್ಕೆ ಬರಬೇಕಾದರೆ ಹಾಕಲಾಗಿದ್ದ ಬೇಲಿಯನ್ನು ಕಿತ್ತೊಗೆಯಲಾಗಿದ್ದನ್ನು ನಾನು ಗಮನಿಸಿದ್ದೆ. ಅದೇ ವಿಷಯದ ಬಗ್ಗೆ ಮಾತನಾಡಿದ ಅವರು ದೇವಾಲಯದ ಅಭಿವೃದ್ಧಿಗೆ ಎಂದು ಊರವರು ಸೇರಿ ನಿರ್ಧಾರಮಾಡಿದ ಸ್ಥಳದಲ್ಲೇ ಬೇಲಿಯನ್ನೂ ಹಾಕಲಾಗಿತ್ತು. ಆದರೆ ಅದೇ ಬೇಲಿಯನ್ನು ಅತಿಕ್ರಮಣ ಮಾಡುವ ಹುನ್ನಾರದಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದರು.


ಈ ವಿಷಯದ ಬಗ್ಗೆ ತಾನು ಪೋಲೀಸರಲ್ಲಿ ದೂರು ನೀಡಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ. ಬೇಲಿ ಕಿತ್ತೊಗೆದ ವ್ಯಕ್ತಿಗಳೇನಾದರೂ ತಮ್ಮನ್ನು ಚಿತ್ರಗಳನ್ನು ತೆಗೆದು ಬರಲು ಕಳಿಸಿದರೋ ಎಂಬ ಸಂಶಯವುಂಟಾಗಿ ವಿಚಾರಿಸಲು ಬಂದೆ ಎಂದು ಹೇಳಿ ಕ್ಷಮೆಯಾಚಿಸಿ ತೆರಳಿದರು.


ಈ ಸ್ಥಳವನ್ನು ಪ್ರವಾಸಿ ಸ್ಥಳವನ್ನಾಗಿ ಅಭಿವೃದ್ಧಿಪಡಿಸುವ ಬಗ್ಗೆ ಸ್ಥಳೀಯ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಮುಖ್ಯಮಂತ್ರಿ ಇವರಿಗೆಲ್ಲಾ ಪತ್ರ ಬರೆದು ಭೇಟಿಯೂ ಆಗಿದ್ದಾರೆ. ತಾಲೂಕು ಕೇಂದ್ರಕ್ಕೆ ಬಹಳ ಸಮೀಪವಿರುವ ಮತ್ತು ಪ್ರಮುಖ ರಸ್ತೆಯಿಂದ ಸ್ವಲ್ಪವೇ ಒಳಗಿರುವ ಈ ಪ್ರಶಾಂತ ಸ್ಥಳದಲ್ಲಿರುವ ಸುಂದರ ದೇವಾಲಯಕ್ಕೆ ಪ್ರವಾಸಿಗರು ಭೇಟಿ ನೀಡಬೇಕು ಎಂಬ ಇರಾದೆ ಅವರದ್ದು. ಅವರ ಇರಾದೆ ಸರಿಯಾಗಿಯೇ ಇದೆ. ಆದರೆ ಪ್ರವಾಸಿ ಸ್ಥಳವಾದ ನಂತರದ ಪರಿಣಾಮ ಅವರ ಕೈಯಲ್ಲಿಲ್ಲ ಅಲ್ವೇ?

ಮಾಹಿತಿ: ಜಿ ಆರ್ ಸತ್ಯನಾರಾಯಣ

ಭಾನುವಾರ, ಸೆಪ್ಟೆಂಬರ್ 11, 2011

ಲಕ್ಷ್ಮೀನರಸಿಂಹ ದೇವಾಲಯ - ಭದ್ರಾವತಿ


ಪೂಜಿತ ದೇವರ ಸುಂದರ ಮೂರ್ತಿಗಳನ್ನು ನೋಡಬೇಕಾದರೆ ಭದ್ರಾವತಿಯ ಲಕ್ಷ್ಮೀನರಸಿಂಹ ದೇವಾಲಯಕ್ಕೆ ಭೇಟಿ ನೀಡಬೇಕು. ಇಲ್ಲಿ ಅದ್ಭುತವಾಗಿ ಕೆತ್ತಲಾಗಿರುವ ೫ ಮೂರ್ತಿಗಳಿವೆ - ಲಕ್ಷ್ಮೀನರಸಿಂಹ, ವೇಣುಗೋಪಾಲ, ಪುರುಷೋತ್ತಮ, ಗಣೇಶ ಮತ್ತು ಶಾರದಾ. ಈ ಮೂರ್ತಿಗಳನ್ನು ಕೆತ್ತಿದ ಶಿಲ್ಪಿ ಡಕ್ಕಣಾಚಾರಿ.


ದೇವಾಲಯದೊಳಗೆ ಚಿತ್ರ ತೆಗೆಯುವುದನ್ನು ನಿಷೇಧಿಸಲಾಗಿದ್ದರೂ ಈ ಮೂರ್ತಿಗಳ ಅದ್ಭುತ ಕೆತ್ತನೆಯನ್ನು ಕಂಡು ಹೇಗಾದರೂ ಮಾಡಿ ಚಿತ್ರ ತೆಗೆದೇ ಅಲ್ಲಿಂದ ಹೊರಹೋಗುವುದು ಎಂದು ನಿರ್ಧರಿಸಿದೆ. ಆಗ ನನ್ನ ಮನಸ್ಸನ್ನು ಓದಿದವರಂತೆ ಅಲ್ಲಿನ ಅರ್ಚಕರು ’ದೇವರ ಚಿತ್ರಗಳನ್ನು ತೆಗೆದರೆ ಕೆಡುಕುಂಟಾಗುತ್ತದೆ. ಚಿತ್ರ ತೆಗೆದ ಎಷ್ಟೋ ಜನರಿಗೆ ಅಪಾರ ಹಾನಿಯುಂಟಾಗಿದೆ’ ಎಂದುಬಿಟ್ಟರು.


ತ್ರಿಕೂಟ ಶೈಲಿಯಲ್ಲಿರುವ ದೇವಾಲಯವು ಮೂರ್ನಾಲ್ಕು ಅಡಿ ಎತ್ತರದ ಜಗತಿಯ ಮೇಲೆ ನಿರ್ಮಾಣಗೊಂಡಿದೆ. ಎರಡು ಕಂಬಗಳ ಸುಂದರ ಮುಖಮಂಟಪವಿದ್ದು ಇಕ್ಕೆಲಗಳಲ್ಲಿ ಕಲ್ಲಿನ ಆಸನಗಳಿವೆ. ದೇವಾಲಯದೊಳಗೆ ಕಾಲಿಟ್ಟರೆ ಸುಖನಾಸಿ ಮತ್ತು ನಂತರ ನವರಂಗ. ನಾಲ್ಕು ಕಂಬಗಳನ್ನು ಹೊಂದಿರುವ ನವರಂಗದಿಂದಲೇ ಎಲ್ಲಾ ದೇವರ ಮೂರ್ತಿಗಳನ್ನು ವೀಕ್ಷಿಸಬೇಕು. ಮೂರೂ ಗರ್ಭಗುಡಿಗಳು ಪ್ರತ್ಯೇಕ ಅಂತರಾಳವನ್ನು ಹೊಂದಿದ್ದು, ಅಂತರಾಳಗಳ ದ್ವಾರಗಳೂ ಏಕಪ್ರಕಾರವಾಗಿದ್ದು ಸುಂದರ ಜಾಲಂಧ್ರಗಳನ್ನು ಹೊಂದಿವೆ.


ಪ್ರಮುಖ ಗರ್ಭಗುಡಿಯಲ್ಲಿ ಸುಖಾಸನ ಶೈಲಿಯಲ್ಲಿ ಲಕ್ಷ್ಮೀನರಸಿಂಹ ವಿರಾಜಮಾನನಾಗಿದ್ದಾನೆ. ದಕ್ಷಿಣದಲ್ಲಿರುವ ಗರ್ಭಗುಡಿಯಲ್ಲಿ ಗರುಡ ಪೀಠದ ಮೇಲೆ ವೇಣುಗೋಪಾಲನ ಮನಮೋಹಕ ಮೂರ್ತಿಯಿದೆ. ಮರವೊಂದರ ಕೆಳಗೆ ಕೊಳಲು ನುಡಿಸುತ್ತಿರುವ ಭಂಗಿಯಲ್ಲಿ ವೇಣುಗೋಪಾಲನ ಮೂರ್ತಿಯನ್ನು ಕೆತ್ತಲಾಗಿದ್ದು, ಒಂದು ಬದಿಯಲ್ಲಿ ಗೋಪಿಕಾ ಸ್ತ್ರೀಯರು ಮತ್ತು ಗೋವುಗಳು ಹಾಗೂ ಇನ್ನೊಂದು ಬದಿಯಲ್ಲಿ ಗೋಪಾಲರು ಮತ್ತು ಗೋವುಗಳು ಕೊಳಲಿನಿಂದ ಹೊರಹೊಮ್ಮುತ್ತಿರುವ ಸಂಗೀತವನ್ನು ಮೈಮರೆತು ಕೇಳುತ್ತಿರುವುದನ್ನು ಮನೋಜ್ಞವಾಗಿ ಕೆತ್ತಲಾಗಿದೆ. ಉತ್ತರ ದಿಕ್ಕಿನಲ್ಲಿರುವ ಗರ್ಭಗುಡಿಯಲ್ಲಿ ಗರುಡ ಪೀಠದ ಮೇಲೆ ಪುರುಷೋತ್ತಮ ಮೂರ್ತಿಯಿದೆ. ವಿಷ್ಣುವನ್ನು ’ಪುರುಷೋತ್ತಮ’ ರೂಪದಲ್ಲಿ ತೋರಿಸಿರುವ ನಿದರ್ಶನಗಳು ಬಹಳ ವಿರಳ.


ಪ್ರಮುಖ ಗರ್ಭಗುಡಿಯ ಅಂತರಾಳದ ದ್ವಾರದ ಇಕ್ಕೆಲಗಳಲ್ಲಿರುವ ಕವಾಟಗಳಲ್ಲಿ ಗಣೇಶ ಮತ್ತು ಶಾರದಾದೇವಿಯ ಆಕರ್ಷಕ ಮೂರ್ತಿಗಳಿವೆ. ಈ ಐದೂ ಮೂರ್ತಿಗಳ ಚಿತ್ರ ತೆಗೆಯಲು ಆಗುತ್ತಿಲ್ಲವಲ್ಲ ಎಂದು ಬಹಳ ಚಡಪಡಿಸಿದೆ. ದೇವಾಲಯದ ನವರಂಗದಲ್ಲೇ ಬಹಳ ಸಮಯ ಕಳೆದು ಎಲ್ಲಾ ಮೂರ್ತಿಗಳನ್ನು ಕಣ್ತುಂಬಾ ನೋಡಿದೆ.


ಇಲ್ಲಿರುವ ಅರ್ಚಕರು ದೇವಾಲಯದ ಬಗ್ಗೆ ಮಾಹಿತಿ ನೀಡಿದರು. ನಾಲ್ಕು ತಲೆಮಾರುಗಳಿಂದ ಅವರ ಮನೆಯವರೇ ಇಲ್ಲಿ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.  ದೇವಾಲಯದ ಮುಖ್ಯ ದ್ವಾರದ ಹೊರಗೆ ನಿಂತವರಿಗೆ, ಲಕ್ಷ್ಮೀನರಸಿಂಹನ ಕಾಲುಗಳು ತಮ್ಮ ತಲೆಯ ಮೇಲೆ ಇರುವಂತೆ ಮತ್ತು ನವರಂಗದಲ್ಲಿ ಕುಳಿತರೆ ವೇಣುಗೋಪಾಲನ ಮತ್ತು ಪುರುಷೋತ್ತಮನ ಕಾಲುಗಳು ತಲೆಯ ಮೇಲೆ ಇರುವಂತೆ ಭಾಸವಾಗುವ ರೀತಿಯಲ್ಲಿ ಈ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಎಲ್ಲಾ ಹೊಯ್ಸಳ ದೇವಾಲಯಗಳಲ್ಲೂ ಇದೇ ರೀತಿ ಇರುತ್ತದೆಯಂತೆ! ಮೇ ತಿಂಗಳಲ್ಲಿ ದೇವಾಲಯದ ವಾರ್ಷಿಕ ಜಾತ್ರೆ ನಡೆಯುತ್ತದೆ ಎಂದು ಅವರು ತಿಳಿಸಿದರು.


ದೇವಾಲಯದ ಹೊರಗೋಡೆಯಲ್ಲಿ ತುಂಬಾ ಭಿತ್ತಿಗಳಿದ್ದರೂ ಯಾವುದೂ ಆಕರ್ಷಕವಾಗಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ ಅವುಗಳ ಅಪೂರ್ಣ ಕೆತ್ತನೆ. ಎಲ್ಲಾ ಭಿತ್ತಿಚಿತ್ರಗಳನ್ನು ಕೊನೆಯ ಹಂತದವರೆಗೆ ಕೆತ್ತಲಾಗಿದ್ದು, ನೈಜ ರೂಪ ನೀಡುವ ಅಂತಿಮ ಹಂತ ಬಂದಾಗ ಕೆತ್ತನೆ ನಿಲ್ಲಿಸಿದಂತೆ ಕಾಣಬರುತ್ತದೆ. ಕೆಲವು ಭಿತ್ತಿಗಳ ಪೀಠಭಾಗದಲ್ಲಿ ಒಂದು ಅಕ್ಷರವನ್ನು ಕೆತ್ತಿರುವುದು ಕಂಡುಬರುತ್ತದೆ. ಶಿಲ್ಪಿಯ ಹೆಸರಿನ ಮೊದಲ ಅಕ್ಷರವಿರಬಹುದೇ?


ದೇವಾಲಯದ ದಕ್ಷಿಣ ಭಾಗದಲ್ಲಂತೂ ಭಿತ್ತಿಗಳನ್ನು ಕೆತ್ತಲು ಚೌಕಟ್ಟನ್ನು ಅಂತಿಮಗೊಳಿಸಿ ಹಾಗೇ ಬಿಡಲಾಗಿದೆ. ಹೊರಗೋಡೆಯ ತಳಭಾಗದಲ್ಲಿ ಆರು ಪಟ್ಟಿಕೆಗಳೇನೋ ಇವೆ ಆದರೆ ಅವುಗಳಲ್ಲಿ ಯಾವ ಕೆತ್ತನೆಗಳೂ ಇಲ್ಲ.


ಶಿಖರಗಳ ರಚನೆಯೂ ಅಪೂರ್ಣವಾಗಿದೆ. ಮೂರು ತಾಳಗಳನ್ನು ನಿರ್ಮಿಸಿ ಅಷ್ಟಕ್ಕೇ ಕೈಬಿಟ್ಟಂತೆ ತೋರುತ್ತದೆ. ತಾಳಗಳ ಬಳಿಕ ಇರುವ ತಲೆಕೆಳಗಾಗಿರುವ ಪದ್ಮದ ಸುಳಿವು ಮೂರೂ ಶಿಖರಗಳಲ್ಲಿಲ್ಲ. ಅವಸರದಲ್ಲಿ ಗುಮ್ಮಟದಂತಹ ರಚನೆ ಮಾಡಿ ಶಿಖರದ ಮೇಲ್ಭಾಗವನ್ನು ಮುಚ್ಚಿರುವುದು ಕಾಣಬರುತ್ತದೆ. ದೇವಾಲಯವನ್ನು ವೀಕ್ಷಿಸಿದಾಗ ವಿಚಿತ್ರವಾಗಿರುವ ಶಿಖರದ ತುದಿಭಾಗಗಳೇ ಎದ್ದುಕಾಣುತ್ತವೆ.


ದೇವಾಲಯದ ಹೊರಗೋಡೆಯ ಮೇಲಿನ ಸಾಲಿನಲ್ಲಿರುವ ಸಣ್ಣ ಸಣ್ಣ ಗೋಪುರಗಳನ್ನು ಮಾತ್ರ ಸರಿಯಾಗಿ ಕೆತ್ತಲಾಗಿದೆ. ಭಿತ್ತಿಚಿತ್ರಗಳ ಕೆತ್ತನೆಯನ್ನು ಪೂರ್ಣಗೊಳಿಸಿದ್ದಲ್ಲಿ ಅವುಗಳು ಅದ್ಭುತ ಕಲಾಕೃತಿಗಳಾಗುತ್ತಿದ್ದವು.


೧೩ನೇ ಶತಮಾನದ ಮಧ್ಯಭಾಗದಲ್ಲಿ ಈ ದೇವಾಲಯದ ನಿರ್ಮಾಣವಾಗಿದೆ ಎನ್ನಲಾಗುತ್ತದೆ. ಈ ಬಗ್ಗೆ ಸ್ಪಷ್ಟ ದಾಖಲೆಗಳಿಲ್ಲ. ಇನ್ನೊಂದು ಅಭಿಪ್ರಾಯವೇನೆಂದರೆ ಪುರಾತನ ಕಾಲದಿಂದಲೂ ಇದ್ದ ದೇವಾಲಯದಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಹೊಯ್ಸಳರು ಅಭಿವೃದ್ಧಿಪಡಿಸಿದರು ಎಂದು. ಭದ್ರಾವತಿಯನ್ನು ಮೊದಲು ವಂಕಿಪುರ ಮತ್ತು ನಂತರ ಬೆಂಕಿಪುರವೆಂದು ಕರೆಯಲಾಗುತ್ತಿತ್ತು. ಮಹಾಭಾರತದಲ್ಲಿ ಈ ದೇವಾಲಯದ ಬಗ್ಗೆ ವಂಕಿಪುರದ ದೇವಾಲಯವೆಂದು ಉಲ್ಲೇಖವಿದ್ದು, ಈ ದೇವಾಲಯ ಮೊದಲಿನಿಂದಲೂ ಅಸ್ತಿತ್ವದಲ್ಲಿದ್ದ ವಾದಕ್ಕೆ ಪುಷ್ಟಿ ನೀಡುತ್ತದೆ ಎಂಬ ವಾದವೂ ಇದೆ. ಅದೇನೇ ಇರಲಿ. ಅದ್ಭುತವಾಗಿರುವ ಐದು ಮೂರ್ತಿಗಳನ್ನು ನೋಡುವ ಸಲುವಾಗಿಯಾದರೂ ಇಲ್ಲಿಗೆ ಭೇಟಿ ನೀಡಲೇಬೇಕು.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ

ಭಾನುವಾರ, ಸೆಪ್ಟೆಂಬರ್ 04, 2011