ಭಾನುವಾರ, ಮೇ 01, 2011

ಅಡಗೂರು ಲಕ್ಷ್ಮೀನಾರಾಯಣ


ಅಡಗೂರಿನ ಲಕ್ಷ್ಮೀನಾರಾಯಣ ದೇವಾಲಯ ತ್ರಿಕೂಟ ಶೈಲಿಯ ದೇವಾಲಯವಾಗಿದ್ದರೂ ಪ್ರಮುಖ ಗರ್ಭಗುಡಿಯ ಮೇಲೆ ಮಾತ್ರ ಗೋಪುರದ ರಚನೆಯಿದೆ. ಲಕ್ಷ್ಮೀನಾರಾಯಣನನ್ನು ಇಲ್ಲಿ ’ವಡಗನಾರಾಯಣ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಸಣ್ಣದಾದರೂ ಆಕರ್ಷಕ ಮುಖಮಂಟಪವಿದ್ದು, ಕುಳಿತುಕೊಳ್ಳಲು ವ್ಯವಸ್ಥೆಯಿದೆ. ಎಲ್ಲಾ ೩ ಗರ್ಭಗುಡಿಗಳಿಗೆ ಸಾಮಾನ್ಯ ನವರಂಗವಿದೆ. ಪ್ರಮುಖ ಗರ್ಭಗುಡಿಗೆ ಮಾತ್ರ ಅಂತರಾಳವಿದೆ. ಪ್ರಮುಖ ಗರ್ಭಗುಡಿಯಲ್ಲಿ ಲಕ್ಷ್ಮೀ ಮತ್ತು ನಾರಾಯಣನ ವಿಗ್ರಹವಿದ್ದರೆ, ಉಳಿದೆರಡರಲ್ಲಿ ವೇಣುಗೋಪಾಲನ ಮತ್ತು ಸರಸ್ವತಿ ದೇವಿಯ ವಿಗ್ರಹಗಳಿವೆ. ವೇಣುಗೋಪಾಲನ ಒಂದು ಕಾಲು ಭಗ್ನಗೊಂಡಿದೆ.


ದೇವಾಲಯದ ಹೊರಗೋಡೆಯಲ್ಲಿ ಯಾವುದೇ ಕೆತ್ತನೆಗಳಿಲ್ಲದಿದ್ದರೂ ಆಕರ್ಷಕವಾಗಿ ನಿರ್ಮಿಸಲಾಗಿದೆ. ಶಿಖರವೂ ಸುಂದರವಾಗಿದೆ. ಇತರ ಹೊಯ್ಸಳ ದೇವಾಲಯಗಳಂತೆ ಇದು ಕೂಡಾ ನಕ್ಷತ್ರಾಕಾರದ ಜಗುಲಿಯ ಮೇಲೆ ನಿರ್ಮಿತಗೊಂಡಿದ್ದು ಪೂರ್ವಾಭಿಮುಖವಾಗಿದೆ. ೧೧ನೇ ಶತಮಾನದಲ್ಲಿ ಸಣ್ಣ ಪ್ರಮಾಣದಲ್ಲಿ ನಿರ್ಮಿತಗೊಂಡಿದ್ದ ದೇವಾಲಯವನ್ನು ನಂತರ ೧೩ನೇ ಶತಮಾನದಲ್ಲಿ ಹೊಯ್ಸಳರು ಅಭಿವೃದ್ಧಿಪಡಿಸಿರಬಹುದು ಎಂದು ನಂಬಲಾಗಿದೆ. ಆದರೆ ದೇವಾಲಯ ಏನೇನೂ ಸ್ವಚ್ಚವಾಗಿಲ್ಲ. ಮುಖಮಂಟಪದಲ್ಲೇ ಸಿಗರೇಟು ತುಂಡುಗಳನ್ನು ಕಂಡು ಅವಕ್ಕಾದೆ. ಒಳಗೆಲ್ಲಾ ಕಸ ಕಡ್ಡಿಗಳು ಮತ್ತು ಧೂಳು. ಊರವರಿಗೆ ಈ ದೇವಾಲಯದ ಬಗ್ಗೆ ಸ್ವಲ್ಪನೂ ಕಾಳಜಿಯಿಲ್ಲವೇ ಎಂದೆನಿಸತೊಡಗಿತು.


ದೇವಾಲಯಕ್ಕೆ ಯಾವಾಗಲೂ ಬೀಗ ಜಡಿದಿರುತ್ತದೆ. ಅಲ್ಲೇ ಸಮೀಪದಲ್ಲಿರುವ ಮನೆಯಿಂದ ಬೀಗದಕೈಯನ್ನು ಪಡೆದುಕೊಳ್ಳಬೇಕು. ಊರವರಲ್ಲಿ ದೇವಾಲಯವನ್ನು ಯಾಕೆ ಸ್ವಚ್ಛವಾಗಿಟ್ಟುಕೊಳ್ಳಬಾರದು ಎಂದು ಮಾತುಕತೆ ಆರಂಭಿಸಿದೆ. ಇಷ್ಟು ಸ್ವಚ್ಛವಾಗಿರುವುದೇ ದೊಡ್ಡ ವಿಷಯ ಎಂದು ಅವರು ಮಾತಿಗಾರಂಭಿಸಿದರು. ದೇವಾಲಯಕ್ಕೆ ಈಗ ಪ್ರಾಂಗಣವಿದೆ. ಅದು ಕೂಡಾ ಒಂದು ವರ್ಷದ ಹಿಂದೆ ನಿರ್ಮಿಸಲಾಗಿತ್ತು. ಪ್ರಾಂಗಣವಿದ್ದರೂ ಗೇಟು ಇರಲಿಲ್ಲ. ಹಾಗಾಗಿ ದನ ಕರುಗಳಿಗೆ ಮತ್ತು ಹಳ್ಳಿಗರಿಗೆ ಇದೊಂದು ಬಹಿರ್ದೆಸೆ ಮಾಡುವ ತಾಣವಾಗಿತ್ತು! ನಾವು ತೆರಳಿದಾಗ ಗೇಟನ್ನು ತಯಾರು ಮಾಡಿ ತರಲಾಗಿತ್ತು, ಆದರೆ ಕೂರಿಸಿರಲಿಲ್ಲ. ಇನ್ನೊಂದೆರಡು ದಿನದಲ್ಲಿ ಅದನ್ನು ಕೂರಿಸಲಿದ್ದೇವೆ. ಗೇಟೊಂದು ಬಿದ್ದರೆ ನಂತರ ಸ್ವಲ್ಪ ನಿರಾಳವಾಗಿರಬಹುದು ಎಂದು ಊರವರ ಅಭಿಪ್ರಾಯ. ಮೊದಲು ದೇವಾಲಯಕ್ಕೆ ಹೇಳುವವರು ಕೇಳುವವರು ಯಾರೂ ಇರಲಿಲ್ಲ. ಈಗ ಊರವರು ಒಂದು ಸಮಿತಿಯನ್ನು ರಚಿಸಿ ಅದರ ಪ್ರಕಾರ ದೇವಾಲಯದ ಅಭಿವೃಧ್ಧಿಯನ್ನು ಕೈಗೆತ್ತಿಕೊಂಡಿದ್ದಾರೆ. ದೇವಾಲಯದ ಒಳಗೆ ತುಂಬಾ ಗಲೀಜು ಇದೆ. ಅದನ್ನು ಇನ್ನು ಸ್ವಚ್ಛ ಮಾಡಬೇಕಷ್ಟೇ ಎಂದು ಅವರು ಒಪ್ಪಿಕೊಂಡರು. ಈ ಕಾರ್ಯ ಆದಷ್ಟು ಬೇಗ ಆಗಲಿ.

ಇಷ್ಟೆಲ್ಲಾ ನಿರ್ಲಕ್ಷಿಸಿದರೂ ದೇವಾಲಯದ ೩ ವಿಗ್ರಹಗಳು, ಬಣ್ಣ ಸ್ವಲ್ಪ ಮಾಸಿದೆ ಎನ್ನುವುದನ್ನು ಹೊರತುಪಡಿಸಿದರೆ ಇನ್ನೂ ಸುಸ್ಥಿತಿಯಲ್ಲಿವೆ ಎಂದರೆ ಅಚ್ಚರಿಪಡುವ ವಿಷಯ. ದೇವಾಲಯದ ಬೀಗದಕೈ ಇರುವ ಮನೆಯ ಅಜ್ಜಿ ನಮ್ಮನ್ನು ತುಂಬಾ ಅದರದಿಂದ ಬರಮಾಡಿಕೊಂಡು ಲೀನಾಳಿಗೆ ಅರಶಿನ ಕುಂಕುಮ ಹೂವು ಇತ್ಯಾದಿ ನೀಡಿ ಹಾರೈಸಿ ಬೀಳ್ಕೊಟ್ಟಳು. ಲೀನಾಳಿಗೆ ಊರಿನ ಹೆಸರು ನೆನಪಿಲ್ಲದಿದ್ದರೂ ಅಜ್ಜಿಯ ಆತ್ಮೀಯತೆಯ ನೆನಪು ಮಾತ್ರ ಇದೆ.

2 ಕಾಮೆಂಟ್‌ಗಳು:

sunaath ಹೇಳಿದರು...

ದೇವಾಲಯದ ವಾಸ್ತುವಿನ ವರ್ಣನೆಯ ಜೊತೆಗೇ, ಅಲ್ಲಿಯ ಆವರಣದ ಸ್ಥಿತಿಯನ್ನು ಸಹ ಹೇಳಿರುವದು ಸಮಂಜಸವಾಗಿದೆ.

ರಾಜೇಶ್ ನಾಯ್ಕ ಹೇಳಿದರು...

ಸುನಾಥ್,
ಧನ್ಯವಾದ. ಹಳ್ಳಿಗರು ಸಕಾಲದಲ್ಲಿ ಎಚ್ಚೆತ್ತುಕೊಂಡಿರುವುದು ಸಂತೋಷದ ವಿಷಯ. ದೇವಾಲಯ ಈಗ ಸ್ವಚ್ಛಗೊಂಡು ಇನ್ನಷ್ಟು ಆಕರ್ಷಕವಾಗಿ ಕಾಣುತ್ತಿರಬಹುದು.

ರಘು,
ಖಂಡಿತ.