ಭಾನುವಾರ, ಅಕ್ಟೋಬರ್ 04, 2009

ಕರ್ನಾಟಕ ಪ್ರೀಮಿಯರ್ ಲೀಗ್

ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಏನೇ ಹೇಳಲಿ. ರಾಹುಲ್ ದ್ರಾವಿಡ್ ದೂರಾನೇ ಉಳಿಯಲಿ. ಬೃಜೇಶ್ ಪಟೇಲ್ ಮತ್ತು ಒಡೆಯರ್ ಎಷ್ಟೇ ಕಚ್ಚಾಡಿಕೊಳ್ಳಲಿ. ಕರ್ನಾಟಕ ಪ್ರಿಮಿಯರ್ ಲೀಗ್ ಪ್ರಥಮ ಆವೃತ್ತಿ ಯಶಸ್ಸನ್ನು ಗಳಿಸಿದ್ದಂತು ಹೌದು. ಬರೀ ಬೆಂಗಳೂರು, ಮೈಸೂರು ಮತ್ತು ಧಾರವಾಡ ಲೀಗ್ ಗಳಲ್ಲಿ ಆಡುತ್ತಾ ಇದ್ದ ಹಲವಾರು ಪ್ರತಿಭಾವಂತ ಆಟಗಾರರ ಪರಿಚಯವಂತೂ ರಾಜ್ಯದ ಕ್ರಿಕೆಟ್ ಪ್ರೇಮಿಗಳಿಗೆ ಆಯಿತು. ದೇಶದಲ್ಲೇ ರಾಜ್ಯ ಮಟ್ಟದಲ್ಲಿ ಇಂತಹ ಪ್ರಯೋಗ ಮಾಡಿ ರಿಸ್ಕ್ ತೆಗೆದುಕೊಂಡು ಯಶಸ್ವಿ ಆಗಿದ್ದಕ್ಕೆ ಕೆ.ಎಸ್.ಸಿ.ಎಗೆ ಅಭಿನಂದನೆಗಳು. ಉಳಿದ ರಾಜ್ಯಗಳ ಕ್ರಿಕೆಟ್ ಮಂಡಳಿಗಳು ಕೆಪಿಎಲ್-ನ್ನು ಕುತೂಹಲದಿಂದ ಗಮನಿಸುತ್ತಿದ್ದರು. ಈಗ ಪ್ರತಿ ರಾಜ್ಯದಲ್ಲೂ ಇದೇ ತರಹದ ಲೀಗ್-ಗಳು ಹುಟ್ಟಿಕೊಂಡರೆ ಆಶ್ಚರ್ಯವಿಲ್ಲ.

ಕ್ಷೇತ್ರರಕ್ಷಣೆ ವಿಭಾಗ ಬಿಟ್ಟರೆ ಬೌಲಿಂಗ್ ಮತ್ತು ಬ್ಯಾಟಿಂಗ್ ಉನ್ನತ ಮಟ್ಟದ್ದಾಗಿತ್ತು. ಲೀಗ್ ಆಟಗಾರರು ಎಂದು ಎಷ್ಟೋ ಜನರು (ಪ್ರಮುಖ ಕ್ರಿಕೆಟಿಗರು ಮತ್ತು ಜರ್ನಲಿಸ್ಟುಗಳು) ಈ ಕೂಟದ ಯಶಸ್ಸಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ನನಗಂತೂ ಇದೊಂತರ ಹಬ್ಬ ಇದ್ದಂಗಾಯಿತು. ಎಷ್ಟೋ ಪ್ರತಿಭಾವಂತ ಲೀಗ್ ಆಟಗಾರರ ಹೆಸರು ಮಾತ್ರ ಕೇಳಿದ್ದೆ. ಈಗ ಅವರ ಆಟವನ್ನೂ ನೋಡಿದಂತಾಯಿತು. ರಾಜ್ಯವನ್ನು ಪ್ರತಿನಿಧಿಸಿದ್ದ ಆಟಗಾರರ ಆಟದ ಶೈಲಿಯನ್ನೂ ನೋಡಿದಂತಾಯಿತು.

ಬೆಂಗಳೂರಿನಲ್ಲಿ ನಡೆದ ಪಂದ್ಯಗಳಿಗೆ (ಒಂದೆರಡು ದಿನಗಳನ್ನು ಹೊರತುಪಡಿಸಿ) ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿಲ್ಲ. ಆದರೆ ರಣಜಿ ಪಂದ್ಯ ನೋಡುವವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು ಎಂಬುದು ಗಮನಾರ್ಹ. ಮೈಸೂರಿನಲ್ಲಿ ನಡೆದ ಎಲ್ಲಾ ೬ ಪಂದ್ಯಗಳೂ ಹೌಸ್ ಫುಲ್. ಮುಂದಿನ ವರ್ಷಗಳಲ್ಲಿ ಕೆ.ಎಸ್.ಸಿ.ಎ ಪಂದ್ಯಗಳನ್ನು ರಾಜ್ಯದ ಉಳಿದ ಭಾಗಗಳಲ್ಲೂ ನಡೆಸಬೇಕು. ಆಗ ಜನರಲ್ಲಿ ಆಸಕ್ತಿ ಹೆಚ್ಚಿ ಕೆಪಿಎಲ್ ಇನ್ನಷ್ಟು ಯಶಸ್ಸನ್ನು ಗಳಿಸಬಹುದು. ಫ್ರಾಂಚೈಸಿಗಳಿಂದ ಮತ್ತು ಪ್ರಾಯೋಜಕರಿಂದ ಹರಿದು ಬಂದ ಹಣವನ್ನು ರಾಜ್ಯದೆಲ್ಲೆಡೆ ಕ್ರೀಡಾಂಗಣಗಳನ್ನು ನಿರ್ಮಿಸಲು ವ್ಯಯಿಸಿ ಕೆಪಿಎಲ್ ಪಂದ್ಯಗಳನ್ನು ಆಯಾ ತಂಡಗಳ ಹೋಮ್ ಬೇಸ್-ನಲ್ಲಿ ಆಡಿಸಿದರೆ ಯಶಸ್ಸು ಖಚಿತ. ಬರೀ ಬೆಂಗಳೂರು-ಮೈಸೂರಿನಲ್ಲಿ ಪಂದ್ಯಗಳನ್ನು ಆಡಿಸಿದರೆ ಆಸಕ್ತಿ ಕ್ರಮೇಣ ಕಡಿಮೆ ಆಗುವುದರಲ್ಲಿ ಸಂಶಯವಿಲ್ಲ.

ನಿರೀಕ್ಷಿಸಿದಂತೆ ನಡೆದದ್ದು:೧. ಪ್ರಾವಿಡೆಂಟ್ ಬೆಂಗಳೂರು ಪ್ರಶಸ್ತಿ ಗೆದ್ದಿದ್ದು
೨. ಅರುಣ್ ಕುಮಾರ್ ಭರ್ಜರಿ ಬ್ಯಾಟಿಂಗ್
೩. ರಾಬಿನ್ ಉತ್ತಪ್ಪ ಭರ್ಜರಿ ವೈಫಲ್ಯ
೪. ಸ್ಟೀವ್ ಲಾಝರಸ್ ಮತ್ತು ಸುನಿಲ್ ಕುಮಾರ್ ಜೈನ್ ಪ್ರತಿಭಾ ಪ್ರದರ್ಶನ
೫. ಆನಂದ್ ಕಟ್ಟಿ ಉತ್ತಮ ಬೌಲಿಂಗ್

ನಿರೀಕ್ಷಿಸಿರಲಿಲ್ಲ:೧. ಭರತ್ ಚಿಪ್ಲಿ, ದೇವರಾಜ್ ಪಾಟೀಲ್ ಮತ್ತು ಎಸ್.ಎಲ್.ಅಕ್ಷಯ್ ವೈಫಲ್ಯ
೨. ಬೆಳಗಾವಿ ಫೈನಲ್ ತಲುಪಿದ್ದು
೩. ಸುಧೀಂದ್ರ ಶಿಂದೆಗೆ ಬಿಜಾಪುರ ಬುಲ್ಸ್ ನಾಯಕತ್ವ
೪. ಮಿಥುನ್ ಬೀರಾಲ ಯಶಸ್ಸು
೫. ಮಧುಸೂದನ್, ರಾಮಲಿಂಗ ಪಾಟೀಲ್, ವೆಂಕಟೇಶ್ ಮತ್ತು ಸರ್ಫರಾಝ್ ಅಶ್ರಫ್ ಉತ್ತಮ ಬೌಲಿಂಗ್ ಪ್ರದರ್ಶನ

ಬೆಟ್ ಕಟ್ಟಿ ಗೆದ್ದದ್ದು:
ಮಂಗಳೂರು ಯುನೈಟೆಡ್, ದಾವಣಗೆರೆ ಡೈಮಂಡ್ಸ್ ಮತ್ತು ಮಲ್ನಾಡ್ ತಂಡಗಳು ಕೊನೆಯ ೩ ಸ್ಥಾನ ಗಳಿಸುತ್ತವೆ ಎಂದು

ನಾನು ಇಂಗು ತಿಂದ ಮಂಗನಾದ್ದು:ಡೇವಿಡ್ ಜಾನ್ಸನ್ ಮತ್ತು ಮನ್ಸೂರ್ ಅಲಿ ಖಾನ್ ಇವರಿಬ್ಬರ ಹೆಸರನ್ನು ಆಟಗಾರರ ಲಿಸ್ಟಿನಲ್ಲಿ ಕಂಡಾಗ ಕೆಟ್ಟದಾಗಿ ನಕ್ಕು ಬಿಟ್ಟಿದ್ದೆ. ಜಾನ್ಸನ್ ಅದಾಗಲೇ ನಿವೃತ್ತಿ ಘೋಷಿಸಿಯಾಗಿತ್ತು ಮತ್ತು ಮನ್ಸೂರ್ ಎಂಟು ವರ್ಷಗಳ ಹಿಂದೆನೇ ರಾಜ್ಯ ತಂಡದಿಂದ ಹೊರಬಿದ್ದು ಪ್ರಸಕ್ತ ಬೆಂಗಳೂರು ಲೀಗಿನಲ್ಲಿ ಕೆನರಾ ಬ್ಯಾಂಕ್ ಪರವಾಗಿ ಆಡುತ್ತಾ ಮತ್ತು ಕೋಚಿಂಗ್ ಮಾಡುತ್ತಾ ಇದ್ದರು. ಇವರನ್ನು ಆಡಿಸಿದ ತಂಡಗಳು ಉದ್ಧಾರ ಆದ ಹಾಗೆ ಎಂದು ತಿಳಿದಿದ್ದೆ. ಆದರೆ ಅವರಿಬ್ಬರೂ ಪ್ರೂವ್ಡ್ ಮಿ ರಾಂಗ್. ಜಾನ್ಸನ್ ಅದ್ಭುತ ಬೌಲಿಂಗ್ ಮಾಡಿ ತನ್ನ ತಂಡ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತೆಯೇ ಮನ್ಸೂರ್ ಕೂಡಾ ತೆನ್ನೆಲ್ಲಾ ಅನುಭವವನ್ನು ಬಳಸಿ ಉತ್ತಮ ಬೌಲಿಂಗ್ ಮಾಡಿದರು. ಇವರ ’ಸ್ಲೋ ಬಾಲ್’ ದಾಂಡಿಗರನ್ನು ಪೇಚಿಗೆ ಸಿಲುಕಿಸುವುದನ್ನು ನೋಡುವುದೇ ಒಂದು ಆನಂದ.

ಕೆಟ್ಟ ಜಾಹೀರಾತು:ಶಾಮನೂರು ದಾವಣಗೆರೆ ಡೈಮಂಡ್ಸ್

ಅವಶ್ಯಕತೆಯಿರಲಿಲ್ಲ:ಬ್ರಾಂಡ್ ಅಂಬಾಸಿಡರ್-ಗಳದ್ದು

ಅಚ್ಚರಿ ಮೂಡಿಸಿದ್ದು:
೧. ರಾಂಗ್ಸೆನ್ ಜೊನಾಥನ್ ಬ್ಯಾಟಿಂಗ್ (ಕೆಪಿಎಲ್ ಉತ್ತಮ ಪ್ರದರ್ಶನದಿಂದ ಕರ್ನಾಟಕ ೨೦-೨೦ ತಂಡಕ್ಕೆ ತದನಂತರ ಆಯ್ಕೆಯಾದರು)
೨. ನಿಖಿಲ್ ಹಲ್ದೀಪುರ್ ಕೆಪಿಎಲ್-ನಲ್ಲಿ ಆಡಿದ್ದು
೩. ಬಾಲಚಂದ್ರ ಅಖಿಲ್ ಮತ್ತು ದೀಪಕ್ ಚೌಗುಲೆ ಉತ್ತಮ ನಾಯಕತ್ವ
೪. ವಿನಯ್ ಕುಮಾರ್ ಬ್ಯಾಟಿಂಗಿನಲ್ಲಿ ಮಿಂಚಿದ್ದು
೫. ಸುಧೀರ್ ರಾವ್ ಮತ್ತು ಅನಿರುದ್ಧ ಜೋಶಿ ಉತ್ತಮ ಬ್ಯಾಟಿಂಗ್ ಪ್ರದರ್ಶನ.

ನಿರಾಸೆ ಮಾಡಿದ್ದು:
೧. ಶಾಮ್ ಪೊನ್ನಪ್ಪ ಮತ್ತು ಕೆ.ಎಸ್.ಟಿ.ಸಾಯಿ ಇನ್ನಷ್ಟು ರನ್ನು ಗಳಿಸಲಿಲ್ಲವೆಂದು
೨. ಮಂಗಳೂರು ಯುನೈಟೆಡ್ ಜನಾರ್ಧನ ತಿಂಗಳಾಯನನ್ನು ಒಂದೂ ಪಂದ್ಯದಲ್ಲೂ ಆಡಿಸದೇ ಇದ್ದದ್ದು.
೩. ಧಾರವಾಡ-ಹುಬ್ಬಳ್ಳಿ ಹೆಸರಿನಲ್ಲಿ ತಂಡ ಇರದೇ ಇದ್ದಿದ್ದು! ಇಲ್ಲಿರುವ ಅತ್ಯಂತ ಉತ್ತಮ ಆಟಗಾರರಿಗೆ ಅವಕಾಶ ಸಿಕ್ಕರೆ ಒಳ್ಳೆಯದಿತ್ತು. ದಾವಣಗೆರೆ ಡೈಮಂಡ್ಸ್ ತಾನು ಧಾರವಾಡದ ತಂಡ ಕೂಡಾ ಎನ್ನುತ್ತದಾದರೂ ಹಾಗನಿಸುವುದಿಲ್ಲ.

ಕೆಪಿಎಲ್-ನ ಕೆಟ್ಟ ಗಳಿಗೆ:ಸುಧೀಂದ್ರ ಶಿಂದೆಯಿಂದ ಮಿಥುನ್ ಬೀರಾಲನಿಗೆ ಕಪಾಳ ಮೋಕ್ಷ

ದಶಮಾನದ ಕಮ್ ಬ್ಯಾಕ್:ಮಿಥುನ್ ಬೀರಾಲ. ೨೦೦೧ರಲ್ಲಿ ರಾಜ್ಯಕ್ಕೆ ಕೊನೆಯ ಬಾರಿ ಆಡಿದ್ದ ಮಿಥುನ್, ಕೆಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ ರಾಜ್ಯ ೨೦-೨೦ ತಂಡದಲ್ಲಿ ಸ್ಥಾನ ಪಡೆದರು. ಅಂತೂ ಕೊನೆಗೆ ಪ್ರಥಮ ಬಾರಿಗೆ ಉತ್ತಮ ಪ್ರದರ್ಶನದ ಆಧಾರದ ಮೇಲೆ ಕರ್ನಾಟಕಕ್ಕೆ ಆಯ್ಕೆಯಾದರು.

ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದೆ:
ಮನ್ಸೂರ್ ಅಲಿ ಖಾನ್ ಈಗಲಾದರೂ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೊನೆಯ ಸ್ಥಾನದಿಂದ ಭಡ್ತಿ ಪಡೆದಿದ್ದಾರೋ ಎಂದು! ಇಲ್ಲ. ಮತ್ತದೇ ನಂಬರ್ ೧೧ ಸ್ಥಾನದಲ್ಲಿ ಜೇನುಗೂಡಿನಂತಹ ಗಡ್ಡ ಬಿಟ್ಟು ತನ್ನದೇ ಯುನೀಕ್ ಸ್ಟೈಲ್-ನಲ್ಲಿ ಬ್ಯಾಟಿಂಗ್ ಮಾಡಲು ಆಗಮಿಸಿದರು.

ತುಂಬಾನೇ ಇಷ್ಟವಾದದ್ದು:
ನಮ್ಮ ಮನಸಲ್ಲೂ ಕ್ರಿಕೆಟ್ ನಮ್ಮ ಕನಸಲ್ಲೂ ನಮ್ಮ ಕೆಪಿಎಲ್ ಕೆಪಿಎಲ್
ನಮ್ಮ ಉತ್ಸಾಹಕ್ಕೆಂದು ನಮ್ಮ ಉಲ್ಲಾಸ ನಮ್ಮ ಕೆಪಿಎಲ್ ನಮ್ಮ ಕೆಪಿಎಲ್
ಆಚರಿಸುತಾ ಆಡುವಾ ಕರುನಾಡೆಲ್ಲಾ ಈ ಉತ್ಸವ
ಕೂಡಿ ಆಡಿ ಜಗವಾ
ಗೆಲ್ಲೋಣ....(ಕೆಪಿಎಲ್)
ಗೆಲ್ಲೋಣ.....(ಕೆಪಿಎಲ್)

ಕೆಪಿಎಲ್ ಕ್ಷಣ:ಫೈನಲ್ ಪಂದ್ಯ. ಮೊದಲ ಆರು ಓವರ್-ಗಳ ಒಳಗೆ ಸ್ಪಿನ್ನರ್ ಆನಂದ್ ಕಟ್ಟಿ ಆರಂಭಿಕ ಆಟಗಾರ ಮನಿಷ್ ಪಾಂಡೆಗೆ ಬೌಲಿಂಗ್ ಮಾಡುತ್ತಿದ್ದಾರೆ. ೩೭ ರ ಹರೆಯದ ಹಿರಿಯ ಅನುಭವಿ ಆಟಗಾರನಿಂದ ೨೦ರ ಹರೆಯದ ಯುವ ಪ್ರತಿಭಾವಂತ ಆಟಗಾರನಿಗೆ ಬೌಲಿಂಗ್. ಹಿರಿಯನಿಗೆ ತಾನೇನೂ ಕಮ್ಮಿಯಿಲ್ಲ ಎಂದು ತೋರಿಸುವ ಛಲ. ಕಿರಿಯನಿಗೆ ತನ್ನ ಐಪಿಎಲ್ ಮತ್ತು ಕೆಪಿಎಲ್ ಚಮತ್ಕಾರಗಳನ್ನು ಮುಂದುವರೆಸಿ ಹಿರಿಯನ ಬೌಲಿಂಗನ್ನು ಚಿಂದಿಗೊಳಿಸುವ ತವಕ. ಕಟ್ಟಿ ಎಸೆದ ಚೆಂಡು ಗಾಳಿಯಲ್ಲಿ ತೇಲಿಬಂದಂತೆ ಅನಿಸಿ ಮನಿಷ್ ಎಡಗಾಲನ್ನು ಮುಂದಿಟ್ಟು ಡ್ರೈವ್ ಮಾಡಲು ಕಮಿಟ್ ಆಗಿಬಿಟ್ಟರು. ಡ್ರೈವ್ ಶಾಟ್ ಆಡಬೇಕಾದರೆ ಚೆಂಡು ಪುಟಿದೇಳುವೆಡೆ ಎಡಗಾಲು ಮತ್ತು ಬ್ಯಾಟ್ ಇರಬೇಕು. ಇಲ್ಲಿ ಮನೀಷ್ ಎಡಗಾಲು ಮತ್ತು ಬ್ಯಾಟ್ ಎರಡೂ ಇದ್ದವು ಆದರೆ ಚೆಂಡೇ ಇರಲಿಲ್ಲ! ಮನೀಷ್ ಒಬ್ಬ ಫ್ರಂಟ್ ಫೂಟ್ ಆಟಗಾರ ಎಂಬ ಅರಿವು ಇದ್ದ ಆನಂದ್ ಕಟ್ಟಿ, ಚೆಂಡನ್ನು ಸ್ವಲ್ಪ ಮಾತ್ರ ಗಾಳಿಯಲ್ಲಿ ತೇಲಿಬಿಟ್ಟಿದ್ದರು ಮತ್ತು ಚೆಂಡಿನ ರಿಲೀಸ್ ಕೂಡಾ ಕ್ಷಣಮಾತ್ರ ತಡವಾಗಿ ಮಾಡಿದ್ದರು. ಹಾಗಾಗಿ ಚೆಂಡಿನ ಲೆಂತ್ ಅರಿಯುವಲ್ಲಿ ಮನೀಷ್ ಸಂಪೂರ್ಣ ವಿಫಲರಾದರು. ಸಂಪೂರ್ಣವಾಗಿ ಫ್ಲೈಟ್ ಮಾಡಲಾಗಿದೆ ಎಂದು ಡ್ರೈವ್ ಮಾಡಲು ಮುಂದೆ ಬಂದರೆ ಅಲ್ಲಿ ಚೆಂಡೇ ಇಲ್ಲ. ಶಾಟ್ ಆಡಲು ಕಮಿಟ್ ಆದ ಮನಿಷ್, ಡ್ರೈವ್ ಮಾಡಲು ಆಗದೆ ಬ್ಯಾಟನ್ನು ಹಾಗೆ ಮುಂದೆ ಬೀಸಿದರು. ಒಂದೆರಡು ಅಡಿ ಮೊದಲೇ ಪುಟಿದೆದ್ದ ಚೆಂಡು ತಡವಾಗಿ ಆಗಮಿಸಿ ಗಾಳಿಯಲ್ಲಿ ಹ್ಯಾಂಗ್ ಆಗಿದ್ದ ಬ್ಯಾಟಿನ ಅಂಚಿಗೆ ಬಡಿದು ಮಿಡ್ ವಿಕೆಟ್ ನಲ್ಲಿ ಸುಲಭದ ಕ್ಯಾಚ್. ಈ ವಿಕೆಟನ್ನು ಕಟ್ಟಿ ತುಂಬಾ ಸೆಲೆಬ್ರೇಟ್ ಮಾಡಿ ಎಂಜಾಯ್ ಮಾಡಿದರು. ಯಾಕೆಂದರೆ ಈ ವಿಕೆಟನ್ನು ಅವರು ಗಳಿಸಿದ್ದರು. ತಲೆ ತಗ್ಗಿಸಿ ಅಲ್ಲಿಂದ ಡಗ್ ಔಟ್ ಕಡೆ ನಡೆದರು ಮನೀಷ್. ಮನೀಷ್ ಬಕ್ರಾ ಆದ ಪರಿ ನೋಡಿ ಬಿದ್ದು ಬಿದ್ದು ನಕ್ಕು ಆ ಕ್ಷಣವನ್ನು ಬಹಳ ಎಂಜಾಯ್ ಮಾಡಿದೆ.