ಬುಧವಾರ, ಅಕ್ಟೋಬರ್ 22, 2008

ರಾಜ್ಯ ಮಟ್ಟದ ಚಾರಣ 2008 - ಉಡುಪಿ ಯೂತ್ ಹಾಸ್ಟೆಲ್

ಉಡುಪಿ ಯೂತ್ ಹಾಸ್ಟೆಲ್ 2008 ನವೆಂಬರ್ 13, 14, 15, ಮತ್ತು 16ರಂದು ರಾಜ್ಯ ಮಟ್ಟದ ಚಾರಣ ಕಾರ್ಯಕ್ರಮವನ್ನು ಆಯೋಜಿಸಿದೆ.

ಚಾರಣ ಹಾದಿಯ ವಿವರಗಳು ಈ ಕೆಳಗಿನಂತಿವೆ.

ನವೆಂಬರ್ 13: ಮಧ್ಯಾಹ್ನ ೩ ಗಂಟೆಯ ಬಳಿಕ ಬೇಸ್ ಕ್ಯಾಂಪ್-ಗೆ (ಮಾವಿನಕಾರು ಅಥವಾ ಬಾವುಡಿ) ಆಗಮನ. ಸಂಜೆಗೆ ಚಾರಣ ಹಾದಿಯ ಮತ್ತು ಅಲ್ಲಿನ ಸ್ಥಳಗಳ ಬಗ್ಗೆ ಮಾಹಿತಿ ಹಾಗೂ ಪರಿಚಯ, ನಿಯಮಗಳು ಮತ್ತು ಷರತ್ತುಗಳ ಬಗ್ಗೆ ಒಂದೆರಡು ಮಾತು.

ನವೆಂಬರ್ 14: ಮಾವಿನಕಾರಿನಲ್ಲಿ ಬೇಸ್ ಕ್ಯಾಂಪ್ ಆದರೆ ಅಲ್ಲಿಂದ ಬಾವುಡಿಗೆ ಚಾರಣ. ನಂತರ ಬಾವುಡಿ ಜಲಧಾರೆಗೆ ಚಾರಣ. ಜಲಧಾರೆಯಿಂದ ಬಾವುಡಿಗೆ ಹಿಂತಿರುಗಿ ನಂತರ ಮೇಗಣಿಗೆ ಚಾರಣ. (ಸುಮಾರು 15 ಕಿ.ಮಿ)

ನವೆಂಬರ್ 15: ಮೇಗಣಿಯಿಂದ ಗಾಳಿಗುಡ್ಡ, ಹದ್ದುಬರೆ ಮತ್ತು ದೇವಕುಂದ ಬೆಟ್ಟಗಳಿಗೆ ಚಾರಣ. (ಸುಮಾರು 10 ಕಿ.ಮಿ)

ನವೆಂಬರ್ 16: ಮೇಗಣಿಯಿಂದ ಹುಲ್ಲುಕುಡಿಕೆಗೆ ಚಾರಣ. ದಾರಿಯಲ್ಲಿ ಹರಿಗೆ ಜಲಧಾರೆಗೆ ಭೇಟಿ. (ಸುಮಾರು 9 ಕಿ.ಮಿ.) ಹುಲ್ಲುಕುಡಿಕೆಯಲ್ಲಿ ಸಣ್ಣ ಬೀಳ್ಕೊಡುಗೆ ಸಮಾರಂಭ.

ಈ ಚಾರಣ ಕಾರ್ಯಕ್ರಮದ ವೈಶಿಷ್ಟ್ಯವೇನೆಂದರೆ ಇದೇ ಕೊನೆಯ ಬಾರಿಗೆ ಈ ಸ್ಥಳಗಳನ್ನು ನೋಡುವ ಅವಕಾಶ. ಮೇಲೆ ತಿಳಿಸಿರುವ ಎಲ್ಲಾ ಹಳ್ಳಿಗಳು ಮತ್ತು ಸುತ್ತಮುತ್ತಲಿನ ಪಟ್ಟಾ ಜಮೀನು ಎಲ್ಲವನ್ನು ಉದ್ಯಮಿಯೊಬ್ಬರು ಖರೀದಿಸಿರುವುದರಿಂದ ಅವರು ಇನ್ನೊಮ್ಮೆ ಇಲ್ಲಿಗೆ ಬರಲು ಯಾರಿಗೂ ಅನುಮತಿ ನೀಡುವುದಿಲ್ಲ ಎಂದು ಎಚ್ಚರಿಸಿಯೇ, ಈ ಚಾರಣ ಕಾರ್ಯಕ್ರಮವನ್ನು ಆಯೋಜಿಸಲು ನಮಗೆ ಅನುಮತಿ ನೀಡಿದ್ದಾರೆ.

ಆಸಕ್ತಿಯುಳ್ಳವರು 9845937556, 9945414193 ಮತ್ತು 9342985704 ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು.

ಭಾನುವಾರ, ಅಕ್ಟೋಬರ್ 19, 2008

ಜಲಧಾರೆ - ದೇವಸ್ಥಾನ


ಹಿಡ್ಲುಮನೆಯಲ್ಲಿ ಗದ್ದೆಗಳನ್ನು ದಾಟಿ ಸಿಗುವ ತೊರೆಯೊಂದರ ಜಾಡನ್ನು ಹಿಡಿದು ನಡೆದರೆ ಒಂದರ ಬಳಿಕ ಒಂದರಂತೆ ಹಿಡ್ಲುಮನೆ ಜಲಧಾರೆಯ ೭ ಹಂತಗಳು. ೩ನೇ ಹಂತ ೪೦ ಅಡಿಯಷ್ಟು ಎತ್ತರವಿದೆ ಮತ್ತು ಪ್ರಮುಖ ಹಂತವಾದ ೭ನೇ ಹಂತವು ೮೦ ಅಡಿಯಷ್ಟು ಎತ್ತರವಿದೆ. ಉಳಿದ ಹಂತಗಳು ಹೆಚ್ಚೆಂದರೆ ೧೫-೨೦ ಅಡಿಯಷ್ಟು ಎತ್ತರವಿರಬಹುದು.


೨೦೦೪ ಮೇ ತಿಂಗಳಲ್ಲಿ ರಮೇಶ್ ಕಾಮತ್-ರೊಂದಿಗೆ ಹಿಡ್ಲುಮನೆ ಜಲಧಾರೆಗೆ ತೆರಳಿದ್ದೆ. ಕೆಲವೊಂದೆಡೆ ರಸ್ತೆ ನನ್ನ ಯಮಾಹಾವೇ ಒದ್ದಾಡುವಷ್ಟು ಹದಗೆಟ್ಟಿತ್ತು. ಮೇ ತಿಂಗಳಾದ್ದರಿಂದ ನೀರಿನ ಪ್ರಮಾಣ ಬಹಳ ಕಡಿಮೆಯಿತ್ತು. ಅಕ್ಟೋಬರ್ ೨೦೦೫ರ ಮಂಗಳೂರು ಯೂತ್ ಹಾಸ್ಟೆಲ್ ಚಾರಣ ಕಾರ್ಯಕ್ರಮದ ಜವಾಬ್ದಾರಿಯನ್ನು ದಿನೇಶ್ ಹೊಳ್ಳ ನನ್ನ ಮೇಲೆ ಹೊರಿಸಿದ್ದರು. ಹಿಡ್ಲುಮನೆಗೆ ಮೇ ತಿಂಗಳಲ್ಲಿ ತೆರಳಿದಾಗಲೇ ರಸ್ತೆ ಅಷ್ಟು ಕೆಟ್ಟಿರುವಾಗ ಈಗ ಅಕ್ಟೋಬರ್ ತಿಂಗಳಲ್ಲಿ ಹೇಗಿರಬಹುದೋ ಎಂಬ ಕಳವಳ ಶುರುವಾಗಿ ಬೇರೆ ದಾರಿಯಿದೆಯೇ ಎಂದು ನೋಡಿ ಬರೋಣವೆಂದು ಹಿಡ್ಲುಮನೆಗೆ ಹೊರಟೆ.


ಈ ಬಾರಿ ಅನಿಲ್ ನನ್ನೊಂದಿಗಿದ್ದು, ನಾವಿಬ್ಬರು ಬೇರೊಂದು ದಾರಿಯಲ್ಲಿ ಹಿಡ್ಲುಮನೆಯತ್ತ ಹೊರಟೆವು. ಈ ದಾರಿ ಚೆನ್ನಾಗಿದ್ದರಿಂದ ಒಂದು ವಾರದ ಬಳಿಕ ಬರುವಾಗ ಇದೇ ದಾರಿಯಲ್ಲಿ ಬಂದರಾಯಿತು ಎಂದು ಹಿಡ್ಲುಮನೆಯತ್ತ ಮುಂದುವರಿದೆವು. ಹಿಡ್ಲುಮನೆಯ ವೈಶಿಷ್ಟ್ಯವೆಂದರೆ ಪ್ರಮುಖ ಹಂತದಿಂದ ಕೆಳಗಿನವರೆಗೆ (ಮೊದಲ ಹಂತದವರೆಗೆ) ನೀರು ಕರಿ ಕಲ್ಲಿನ ಪದರಗಳ ಮೇಲೇ ಹರಿದುಕೊಂಡು ಬರುತ್ತದೆ. ಮಧ್ಯದಲ್ಲೆಲ್ಲೂ ಮಣ್ಣಿರುವ ನೆಲವೇ ಇಲ್ಲ. ಇಷ್ಟೇ ಅಲ್ಲದೇ ನೀರಿನಲ್ಲೇ ನಡೆಯುತ್ತಾ ಸಲೀಸಾಗಿ ಮೇಲಕ್ಕೇರಬಹುದು. ಈ ಕಲ್ಲಿನ ಪದರಗಳ ಮೇಲಿನಿಂದ ಸತತವಾಗಿ ನೀರು ಹರಿಯುತ್ತಿದ್ದರೂ ಜಾರಿ ಬೀಳುವ ಸಂಭವವೇ ಇಲ್ಲ! ಎರಡೂ ಬದಿಯಲ್ಲಿ ದಟ್ಟ ಕಾಡು. ತಂಪು ನೀರಿನಲ್ಲೇ ಮೇಲೇರಬೇಕಾದ್ದರಿಂದ ಎರಡೂ ಪಾದಗಳು ’ಥಂಡಾ’ ಹೊಡೆಯಲು ಶುರುಮಾಡಿದ್ದವು. ೩ನೇ ಹಂತದ ಬಳಿ ಹಳ್ಳದಿಂದ ಬದಿಗೆ ಸರಿದು ಮೇಲೇರಬೇಕು.


ನಂತರದ ದೃಶ್ಯ ಬಹಳ ಸುಂದರ. ನಾಲ್ಕನೇ, ಐದನೇ ಮತ್ತು ಆರನೇ ಹಂತಗಳು, ಒಂದರ ಮೇಲೊಂದು, ನೀರಿನ ಸುಂದರ ಹರಿವಿನಿಂದ ಅಲಂಕೃತಗೊಂಡ ಮೆಟ್ಟಿಲುಗಳಂತೆ ಕಾಣುತ್ತಿದ್ದವು. ಇಷ್ಟೇ ಸಾಲದೆಂಬಂತೆ ಇಕ್ಕೆಲಗಳಲ್ಲಿ ಕಾಡಿನ ಹಸಿರ ತೋರಣ. ಮೇಲಿನಿಂದ ಕಾಡಿನ ಚಪ್ಪರ. ಈ ಹಂತಗಳನ್ನು ದಾಟಿ ನಾನು ಪ್ರಮುಖ ಹಂತದ ಬಳಿ ತಲುಪುವಷ್ಟರಲ್ಲಿ ಅನಿಲ್ ಅದಾಗಲೇ ಸ್ನಾನಕ್ಕಿಳಿದಿದ್ದ.


ಮುಂದಿನ ವಾರವೇ ಯೂತ್ ಹಾಸ್ಟೆಲ್ ತಂಡದೊಂದಿಗೆ ಮತ್ತೆ ಹಿಡ್ಲುಮನೆಯಲ್ಲಿದ್ದೆ. ಮೋಹನನ ’ಶಕ್ತಿ’ ದಾರಿಯಲ್ಲಿ ಇಳಿಜಾರೊಂದನ್ನು ಇಳಿದ ತಕ್ಷಣವೇ ಸ್ತಬ್ಧವಾಯಿತು. ಕತ್ತಲಾಗುತ್ತಿದ್ದರಿಂದ ಜಲಧಾರೆಯ ೩ನೇ ಹಂತದವರೆಗೆ ಮಾತ್ರ ತೆರಳಿದೆವು. ನಾವು ಹಿಂತಿರುಗುವಷ್ಟರಲ್ಲೇ ಮೋಹನ, ’ಶಕ್ತಿ’ಯನ್ನು ಇಳಿಜಾರನ್ನು ಹತ್ತಿಸುವ ವಿಫಲ ಪ್ರಯತ್ನ ಮಾಡುತ್ತಿದ್ದ. ಗಾಲಿಗಳು ಒದ್ದೆ ನೆಲದಲ್ಲಿ ಜಾರಿ ಹಿಂದಕ್ಕೆ ಬರುತ್ತಿದ್ದವು. ಅಚೀಚೆ ಬೆಳೆದಿದ್ದ ಗಿಡಗಳನ್ನು ತಂದು ಚಕ್ರದ ಕೆಳಗೆ ಇಟ್ಟು ಏನೇನೋ ಮಾಡಿ ಇಳಿಜಾರನ್ನು ಮೇಲೇರುವಂತೆ ಮಾಡಿದಾಗ ಸುಮಾರು ೪೦ ನಿಮಿಷಗಳು ಕಳೆದುಹೋದವು.


ಇಷ್ಟೆಲ್ಲಾ ಆಗುವಾಗ ನನ್ನ ಕ್ಯಾಮರಾಗಳಿದ್ದ ಬ್ಯಾಗ್ ಮತ್ತು ರೈನ್-ಕೋಟ್ ಇದ್ದ ಬ್ಯಾಗುಗಳನ್ನು ಅಲ್ಲೇ ಪೊದೆಯೊಂದರ ಬಳಿ ಇರಿಸಿದ್ದೆ. ಈಗ ನೋಡಿದರೆ ರೈನ್-ಕೋಟ್ ಇದ್ದ ಬ್ಯಾಗ್ ಮಾತ್ರ ಇತ್ತು. ೨ ಕ್ಯಾಮರಾಗಳಿದ್ದ ಬ್ಯಾಗ್ ಮಾಯ! ಆ ದಾರಿಯಾಗಿ ಒಬ್ಬ ಹಳ್ಳಿಗ ಹೋಗಿದ್ದನ್ನು ನಮ್ಮಲ್ಲಿ ಒಂದಿಬ್ಬರು ನೋಡಿದ್ದರು. ಆತನೇ ಒಯ್ದಿರಬೇಕೆಂದು ಎಲ್ಲರಿಗೂ ಖಚಿತವಾಗಿತ್ತು. ಈಗ ಕತ್ತಲಲ್ಲಿ ಆತನನ್ನು ಎಲ್ಲಿ ಹುಡುಕುವುದು? ’ಶಕ್ತಿ’ ಯನ್ನು ಆ ತೊಡಕಿನಿಂದ ದಾಟಿಸಿದೆವೆಂದು ಎಲ್ಲರೂ ಸಂತೋಷಪಡುತ್ತಿರಬೇಕಾದರೆ, ನನ್ನ ಕ್ಯಾಮರಾಗಳು ಕಳೆದುಹೋದ ಘಟನೆ. ಸ್ವಲ್ಪ ಮುಂದೆ ಹಳ್ಳಿಗರ ಗುಂಪೂಂದು ಕಾಣಿಸಿದಾಗ, ನಮ್ಮ ಸುಧೀರ್ ಕುಮಾರ್ ಅವರಲ್ಲಿ ಬ್ಯಾಗ್ ಕಳೆದುಹೋಗಿದ್ದರ ಬಗ್ಗೆ ತಿಳಿಸಿ, ನನ್ನ ಮನೆಯ ದೂರವಾಣಿ ಸಂಖ್ಯೆಯನ್ನು ಅವರಿಗೆ ನೀಡಿ, ಆ ದಾರಿಯಾಗಿ ಒಬ್ಬ ಹಳ್ಳಿಗ ಹೋದದ್ದನ್ನೆಲ್ಲಾ ಅವರಿಗೆ ತಿಳಿಸಿದರು.

ಇಲ್ಲಿ ನಮಗೆ ಸುಮಾರು ಒಂದು ಗಂಟೆ ಕಳೆದುಹೋಯಿತು. ಸಿಗಂದೂರಿನ ಹೋಟೇಲಿನ ಯಜಮಾನರೊಂದಿಗೆ ದೂರವಾಣಿಯಲ್ಲೇ ಮಾತನಾಡಿ ೨೭ ಚಾರಣಿಗರಿಗೆ ಆ ದಿನ ರಾತ್ರಿಯ ಊಟ ತಯಾರು ಇಡಲು ಸೂಚಿಸಿದ್ದೆ. ಅಂತೆಯೇ ದೇವಸ್ಥಾನದಲ್ಲಿ ತಂಗಲು ವ್ಯವಸ್ಥೆ ಮಾಡಲೂ ವಿನಂತಿಸಿದ್ದೆ. ಅವರದ್ದು ಒಂದೇ ವಿನಂತಿ. ರಾತ್ರಿ ೮ ಗಂಟೆಯ ಒಳಗೆ ಬಂದುಬಿಡಿ ಎಂದು. ನಮ್ಮ ಈಗಿನ ಪರಿಸ್ಥಿತಿ ನೋಡಿದರೆ ಅದು ಸಾಧ್ಯವೇ ಇರಲಿಲ್ಲ.

ಮುಂದೆ ಸಿಗುವ ತೊರೆಯ ಬಳಿ ಈಗ ಇದ್ದೆವು. ತೊರೆಯ ಒಂದು ತುದಿಯಲ್ಲಿ ದೊಡ್ಡ ಕೊಳವೆಯೊಂದನ್ನು ರಸ್ತೆಯ ಅಂಚಿಗೆ ಹೂತಿಡಲಾಗಿತ್ತು. ಬರುವಾಗ ಇಳಿಜಾರಾಗಿದ್ದರಿಂದ ’ಶಕ್ತಿ’ ಸಲೀಸಾಗಿ ಬಂತು. ಈಗ ಹಿಂದಿನ ಗಾಲಿಗಳು ಆ ಕೊಳವೆಯನ್ನು ಮೇಲೇರಿ ದಾಟಲು ಕೇಳಲೇ ಇಲ್ಲ. ಇಲ್ಲಿ ಮತ್ತಷ್ಟು ಸಮಯ ವ್ಯರ್ಥವಾಯಿತು. ೨೦ ನಿಮಿಷಗಳ ಪ್ರಯತ್ನದ ಬಳಿಕ ಹಿಂದಿನ ಗಾಲಿಗಳು ಕೊಳವೆ ದಾಟಿದವು ಆದರೆ ಒಂದು ದೊಡ್ಡ ಶಬ್ದದೊಂದಿಗೆ. ’ಶಕ್ತಿ’ಯ ಯಾವುದೋ ಭಾಗ ಹಾನಿಗೊಳಗಾಗಿತ್ತು. ಆದರೂ ಮೋಹನ ತನ್ನ ಮುಖಭಾವದಲ್ಲಿ ಏನನ್ನೂ ತೋರ್ಗೊಡದೆ ಸಿಗಂದೂರಿನತ್ತ ಹೊರಟ. ಆ ತೊರೆಯಿಂದ ಸಿಗಂದೂರು ೩೬ಕಿಮಿ ದೂರ. ಸಮಯ ೭.೪೫ ಆಗಿತ್ತು. ಈಗ ಮೊಬೈಲ್ ಸಿಗ್ನಲ್ ಸಿಗುತ್ತಿದ್ದರಿಂದ ಸಿಗಂದೂರಿಗೆ ಕರೆ ಮಾಡಿ ಬರಲು ತಡವಾಗುವುದೆಂದು ತಿಳಿಸಿದೆ.

ಯಾವಾಗಲೂ ಶರವೇಗದಲ್ಲಿ ’ಶಕ್ತಿ’ ಓಡಿಸುವ ಮೋಹನ, ಈಗ ತುಂಬಾ ನಿಧಾನವಾಗಿ ಚಲಾಯಿಸುತ್ತಿದ್ದ. ಬ್ಯಾಕೋಡಿನಲ್ಲಿ ಒಂದೈದು ನಿಮಿಷ ’ಶಕ್ತಿ’ಯನ್ನು ನಿಲ್ಲಿಸಿ ಅದೇನೋ ತಪಾಸಣೆಯನ್ನು ಮೋಹನ ಮಾಡತೊಡಗಿದಾಗ ನನಗೆ ಕಳವಳ ಶುರುವಾಗಿತ್ತು. ಕಾದು ಕಾದು ಬೇಸತ್ತು ಎಲ್ಲಾದರೂ ಸಿಗಂದೂರಿನ ಭಟ್ಟರು ಹೋಟೇಲನ್ನು ಮುಚ್ಚಿಬಿಟ್ಟರೆ? ತಂಡದ ಉಳಿದ ಸದಸ್ಯರು ಕಾಮತರ ಹಾಸ್ಯ ಚಟಾಕಿಗಳನ್ನು ಎಂಜಾಯ್ ಮಾಡುವುದರಲ್ಲಿ ಮಗ್ನರಾಗಿದ್ದರು. ಶಕ್ತಿಯ ತುಂಬಾ ನಗುವಿನ ಸ್ಫೋಟ. ಅಂತೂ ೧೦.೧೫ಕ್ಕೆ ಸಿಗಂದೂರಿನಲ್ಲಿದ್ದೆವು. ೩೬ ಕಿಮಿ ಕ್ರಮಿಸಲು ೧೫೦ ನಿಮಿಷಗಳು! ಇಷ್ಟು ನಿಧಾನವಾಗಿ ಮೋಹನ ನಿದ್ರೆಯಲ್ಲೂ ವಾಹನ ಚಲಾಯಿಸಿವುದಿಲ್ಲ. ದಣಿದಿದ್ದ ಎಲ್ಲರೂ ಭರ್ಜರಿಯಾಗಿಯೇ ಊಟ ಮಾಡಿದರೆನ್ನಿ. ಇಲ್ಲೂ ಕಾಮತರ ಹಾಸ್ಯ ಚಟಾಕಿಗಳು ಅವ್ಯಾಹತವಾಗಿ ಮುಂದುವರಿದವು. ಹೋಟೇಲಿನ ಸಿಬ್ಬಂದಿಗಳೂ ನಮಗೆ ಬಡಿಸುವಾಗ ಕಾಮತರ ಹಾಸ್ಯ ಚಟಾಕಿಗಳಿಗೆ ಬಿದ್ದು ಬಿದ್ದು ನಗುತ್ತಿದ್ದರು!!


ಸಿಗಂದೂರಿನ ಚೌಡೇಶ್ವರಿ ದೇವಿಗೆ ಮುಂಜಾನೆ ೪ಕ್ಕೇ ಮಹಾಪೂಜೆ. ಮುಂಜಾನೆ ೩ಕ್ಕೆ ನಾವೆಲ್ಲರೂ ಮಲಗಿದ್ದ ವಿಶಾಲ ಕೊಠಡಿಯ ಬಾಗಿಲನ್ನು ಬಡಿಯುತ್ತಾ, ’ಏಳಿ, ಏಳಿ, ಪೂಜೆಯ ಸಮಯ, ಇನ್ನೊಂದು ತಾಸು ಮಾತ್ರ. ಎದ್ದು ತಯಾರಾಗಿ’ ಎನ್ನುತ್ತಾ ಎಬ್ಬಿಸುತ್ತಿದ್ದರು. ಪ್ರತಿ ೫ ನಿಮಿಷಕ್ಕೊಮ್ಮೆ ಬಂದು ಬಾಗಿಲು ಬಡಿಯುತ್ತಾ ಎಬ್ಬಿಸಿ ಹೋಗುತ್ತಿದ್ದರು. ರಾತ್ರಿ ಎಲ್ಲರೂ ಮಲಗುವಾಗಲೇ ೧೨ ದಾಟಿತ್ತು. ಎಬ್ಬಿಸಿದವನಿಗೆ ಒಂದಷ್ಟು ಹಿಡಿಶಾಪ ಹಾಕಿದರೂ, ೪.೧೫ರ ಹೊತ್ತಿಗೆ ನಮ್ಮಲ್ಲಿ ಹೆಚ್ಚಿನವರು, ಸ್ನಾನ ಮುಗಿಸಿ ದೇವಿಯ ಸನ್ನಿಧಾನದಲ್ಲಿದ್ದರು.

ತನ್ನಲ್ಲಿದ್ದ ಸಲಕರಣೆಗಳಿಂದ ಸ್ವಲ್ಪ ದುರಸ್ತಿ ಕಾರ್ಯವನ್ನು ಸಿಗಂದೂರಿನಲ್ಲೇ ಮಾಡಿದ್ದ ಮೋಹನ, ಈಗ ತುಮರಿಯಲ್ಲಿ ಸುಮಾರು ೪೫ ನಿಮಿಷ ’ಶಕ್ತಿ’ಯ ದುರಸ್ತಿ ಕಾರ್ಯವನ್ನು ಮುಂದುವರಿಸಿದ. ಹೊಸಗದ್ದೆಯ ನಾಗರಾಜ್ ಮನೆಗೆ ಭೇಟಿ ನೀಡಿ, ದಬ್ಬೆ ಜಲಧಾರೆಗೆ ಚಾರಣ ಮಾಡಿದ ಬಳಿಕ ಭೀಮೇಶ್ವರಕ್ಕೆ ಭೇಟಿ ನೀಡಿ ಕಾರ್ಯಕ್ರಮ ಮುಕ್ತಾಯಗೊಳಿಸಿದೆವು.

ಮನೆ ತಲುಪಿದಾಗ ನನಗೊಂದು ಅಚ್ಚರಿ ಕಾದಿತ್ತು. ’ಕ್ಯಾಮರಾಗಳಿದ್ದ ಬ್ಯಾಗು ಸಿಕ್ಕಿದೆ’ ಎಂಬ ದೂರವಾಣಿ ಕರೆ ಬಂದಿತ್ತು. ಮರುದಿನ ಮುಂಜಾನೆ ೫ಕ್ಕೇ ಹಿಡ್ಲುಮನೆಗೆ ಹೊರಟೆ. ಅಲ್ಲಿ ತಲುಪಿದಾಗ ಹಳ್ಳಿಗರು ಒಬೊಬ್ಬರಾಗಿ ಒಟ್ಟುಗೂಡಿದರು. ಕ್ಯಾಮಾರಾಗಳಿದ್ದ ಬ್ಯಾಗನ್ನು ಒಯ್ದವನ ಮನೆಗೆ ತಲುಪಿದೆವು. ಆ ದಿನ ರಾತ್ರಿ ದಾರಿಯಲ್ಲಿ ಸಿಕ್ಕ ಹಳ್ಳಿಗರೊಂದಿಗೆ ಆ ದಾರಿಯಾಗಿ ತೆರಳಿದ ಹಳ್ಳಿಗನೊಬ್ಬನ ಮೇಲೆ ನಾವು ಸಂಶಯ ವ್ಯಕ್ತಪಡಿಸಿದ್ದರಿಂದ, ಅವರು ಆ ದಾರಿಯಲ್ಲಿರುವ ಐದಾರು ಮನೆಗಳಲ್ಲಿ ವಿಚಾರಿಸಿದಾಗ ಒಂದು ಮನೆಯವರು ತಮ್ಮಲ್ಲಿ ಬ್ಯಾಗ್ ಇದ್ದದ್ದನ್ನು ತಿಳಿಸಿದ್ದರು.

’ಅಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ಬ್ಯಾಗ್ ತಗೊಂಡುಬಂದೆ’ ಎಂದು ಆತ ಹೇಳಿದ್ದು ’ಸುಳ್ಳು’ ಎಂದು ತಿಳಿಯಲು ಯಾರಿಗೂ ಹೆಚ್ಚಿನ ಸಮಯ ಬೇಕಾಗಿರಲಿಲ್ಲ. ಆ ಮನುಷ್ಯ ಊರಿನ ಎಲ್ಲರೂ ಇದರ ಬಗ್ಗೆ ಮಾತನಾಡುತ್ತಿರುವಾಗ ಹೆದರಿ ’ವಾರಸುದಾರರಿಲ್ಲದೆ ಈ ಬ್ಯಾಗ್ ಬಿದ್ದಿತ್ತು. ಅದ್ಕೆ ಎತ್ಕೊಂಡು ಬಂದೆ’ ಎಂದು ರೀಲು ಬಿಟ್ಟಿದ್ದ. ’ಹಾಗಿದ್ದಲ್ಲಿ, ನನ್ನ ಮತ್ತೊಂದು ಬ್ಯಾಗನ್ನು ಯಾಕೆ ಅಲ್ಲೇ ಬಿಟ್ಟು ಬಂದೆ. ಅದನ್ನೂ ಎತ್ಕೊಂಡು ಬರಬೇಕಾಗಿತ್ತಲ್ಲವೇ..’ ಎಂದು ನಾನು ಕೇಳಲು ಬಾಯಿ ತೆರೆದವ ಸುಮ್ಮನಾದೆ. ಕ್ಯಾಮರಾಗಳು ಸಿಕ್ಕಿದ್ದೇ ನನಗೆ ಬಹಳ ಸಂತೋಷವಾಗಿತ್ತು. ಇನ್ನು ಆ ವಿಷಯವನ್ನು ಮುಂದಕ್ಕೆ ಒಯ್ಯಲು ನನಗೆ ಆಸಕ್ತಿಯಿರಲಿಲ್ಲ. ಬ್ಯಾಗಿನ ಎಲ್ಲಾ ಕೋಣೆಗಳನ್ನು ಅವರು ತಡಕಾಡಿದ ಕುರುಹುಗಳಿದ್ದವು. ಧನ ರೂಪದಲ್ಲಿ ಏನೂ ಸಿಗದೆ ಅವರು ನಿರಾಶರಾದರೇನೋ. ಮುಖಂಡನಂತಿದ್ದ ಒಬ್ಬ ’ಕ್ಷಮಿಸಿ ಸಾರ್. ನಿಮಗೆ ತೊಂದರೆ ಆಯಿತು. ಎಂದೂ ಹೀಗೆ ಆಗಿರಲಿಲ್ಲ ಇಲ್ಲಿ....’, ಎಂದು ಕಳ್ಳತನವಾದದ್ದನ್ನು ಪರೋಕ್ಷವಾಗಿ ಒಪ್ಪುತ್ತಾ ಕ್ಷಮೆಯಾಚಿಸಿದ.

ಭಾನುವಾರ, ಅಕ್ಟೋಬರ್ 12, 2008

ದಬ್ಬೆ ಜಲಧಾರೆ


ದಿನಾಂಕ: ೨೮ ಸೆಪ್ಟೆಂಬರ್ ೨೦೦೫

ಕಿರಣ್ ಕೃಷ್ಣ ಬೆಂಗಳೂರಿನ ಚಾರಣಿಗ. ಪ್ರತಿ ವರ್ಷ ಮಳೆಗಾಲದಂದು ಆರೇಳು ಗೆಳೆಯರ ಒಂದು ಗುಂಪು ಕಟ್ಟಿಕೊಂಡು ಉತ್ತರ ಕನ್ನಡದ ನಾಲ್ಕಾರು ಜಲಧಾರೆಗಳಿಗೆ ಸುತ್ತಾಡುತ್ತಾರೆ. ೨೦೦೫ ಅಗೋಸ್ಟ್ ತಿಂಗಳಲ್ಲಿ ಇದೇ ರೀತಿ ’ಜಲಧಾರೆ ಪ್ರವಾಸ’ಕ್ಕೆ ಹೊರಟಿದ್ದರು. ದಬ್ಬೆ ಜಲಧಾರೆಯೊಂದನ್ನು ಬಿಟ್ಟು ಅವರು ನೋಡಲಿರುವ ಎಲ್ಲಾ ಜಲಧಾರೆಗಳನ್ನು ನಾನು ಅದಾಗಲೇ ನೋಡಿ ಆಗಿತ್ತು. ’ಹೇಗೂ ನೀವು ದಬ್ಬೆ ನೋಡಿಲ್ಲ. ೨ನೇ ದಿನ ನಾವು ದಬ್ಬೆಗೆ ಹೊರಟಿದ್ದೀವಿ. ಆ ದಿನ ನಮ್ಮನ್ನು ಸೇರಿಕೊಳ್ಳಬಹುದಲ್ಲಾ..’ ಎಂದು ಕಿರಣ್ ಹೇಳಿದಾಗ ನನಗೂ ಹೌದೆನಿಸಿತು. ನಾನು ಕಾರ್ಗಲ್ ತಲುಪಿ ಕಿರಣ್ ಮತ್ತವರ ಗೆಳೆಯರ ಗುಂಪಿಗಾಗಿ ಕಾಯತೊಡಗಿದೆ.


ದಬ್ಬೆ ಜಲಧಾರೆ ಮತ್ತು ಕಾನೂರು ಕೋಟೆಗೆ ಚಾರಣ ತೆರಳುವವರಿಗೆ ಅಧಿಕೃತ ಮಾರ್ಗದರ್ಶಿ ಸಾಗರದ ಮಹೇಶ, ಮುಂಜಾನೆ ೬ಕ್ಕೇ ಈತ ಹಾಜರಾದ. ಹೊಸಗದ್ದೆಯಲ್ಲಿ ನಾಗರಾಜ್ ಅವರ ಮನೆಯಂಗಳದಲ್ಲಿ ಸ್ವಲ್ಪ ವಿಶ್ರಾಮ. ನನಗೆ ಇದು ನಾಗರಾಜ್ ಮತ್ತು ಅವರ ಮನೆ ಮಂದಿಯೊಂದಿಗೆ ಪ್ರಥಮ ಭೇಟಿ. ದಬ್ಬೆ ಜಲಧಾರೆಗೆ ಬರುವ ಚಾರಣಿಗರನ್ನೆಲ್ಲ ಮಹೇಶ, ಈ ಮನೆಗೆ ಕರೆತಂದೆ ಮುಂದುವರಿಸುತ್ತಾನೆ.


ಇಲ್ಲಿಂದ ಮುಂದೆ ಗದ್ದೆ, ತೋಟ, ಬಯಲುಗಳ ದಾರಿಯಲ್ಲಿ ಮಧ್ಯೆ ತೊರೆಯೊಂದನ್ನು ೨ ಸಲ ದಾಟಿ ೪೫ ನಿಮಿಷ ಚಾರಣ ಮಾಡಿದರೆ ಜೈನರ ಮನೆ. ಇದಕ್ಕೆ ದಬ್ಬೆ ಮನೆಯೆಂದೂ ಹೆಸರು. ಜಲಧಾರೆ ವೀಕ್ಷಿಸಲು ಬರುವ ಪ್ರತಿಯೊಬ್ಬರೂ ಈ ಮನೆಯಲ್ಲಿ ಹೆಸರು ಮತ್ತು ವಿಳಾಸವನ್ನು ಬರೆಯಬೇಕು. ಹಿಂದೊಮ್ಮೆ ಹೀಗೆ ಬಂದವರು ಅಸಭ್ಯವಾಗಿ ವರ್ತಿಸಿದ್ದರಿಂದ ಈಗ ಈ ಕ್ರಮ. ಎಲ್ಲರನ್ನು ವೃತ್ತಾಕಾರದಲ್ಲಿ ನಿಲ್ಲಿಸಿ ಮಹೇಶ ಮಾತನಾಡತೊಡಗಿದ. ’ಇದುವರೆಗೆ ದಾರಿ ಬಹಳ ಸುಲಭವಾಗಿತ್ತು. ಇಲ್ಲಿಂದ ಮುಂದೆ ನೋಡಿದರೂ ದಾರಿ ಸುಲಭವಾಗಿರುವಂತೆ ತೋರುತ್ತದೆ. ಆದರೆ ಶೀಘ್ರದಲ್ಲೇ ನಿಮಗೆಲ್ಲರಿಗೂ ಗೊತ್ತಾಗಲಿದೆ ದಾರಿಯ ಬಗ್ಗೆ. ಬಹಳ ಎಚ್ಚರಿಕೆಯಿಂದ ಪ್ರತಿಯೊಬ್ಬರೂ ಸಾಗಬೇಕು. ಎಲ್ಲರೂ ಕ್ಷೇಮವಾಗಿ ಹಿಂತಿರುಗಿ ಬರಬೇಕು. ಹೆಜ್ಜೆ ಹೆಜ್ಜೆಗೂ ಎಚ್ಚರಿಕೆಯಿರಲಿ’ ಎಂದು ಮಾತು ಮುಗಿಸಿದ.


ದಬ್ಬೆ ಮನೆಯ ಮುಂದೆ ನೋಡಿದರೆ ೧೦೦ ಮೀಟರುಗಳಷ್ಟು ದೂರ ಗದ್ದೆಗಳು. ನಂತರ ಕಾಡು. ಈ ಗದ್ದೆಗಳ ಏರಿನಲ್ಲಿ ಸಾಗುತ್ತಿರುವಾಗ ಅಲ್ಲೆಲ್ಲಾ ಜಾರುತ್ತಿತ್ತು. ’ನಿಧಾನವಾಗಿ ನಡೆಯಬೇಕು, ಜಾರುತ್ತಿದೆ. ಬಿದ್ದರೆ ಮೈಯೆಲ್ಲಾ ಕೆಸರು’ ಎಂದು ಮನದಲ್ಲೇ ನನಗೆ ನಾನೇ ಹೇಳಿಕೊಂಡು ಎರಡು ಹೆಜ್ಜೆ ಇಡುವಷ್ಟರಲ್ಲಿ ಜಾರಿ ಗದ್ದೆಗೆ ಬಿದ್ದುಬಿಟ್ಟೆ. ಎಮ್ಮೆ ಕೆಸರಲ್ಲಿ ಉರುಳಾಡಿ ಎದ್ದಾಗ ಹ್ಯಾಗೆ ಕಾಣುತ್ತೋ ಹಾಗೆ ನಾನು ಈಗ ಕಾಣುತ್ತಿದ್ದೆ. ಎಲ್ಲರಿಗೂ ನಗು ಬರುತ್ತಿತ್ತು. ಆದರೆ ನಾನು ಅವರ ಅತಿಥಿಯಾಗಿದ್ದರಿಂದ, ಸೌಜನ್ಯಕ್ಕಾಗಿ ನನ್ನ ಮುಂದೆ ನಗದೇ ಕದ್ದು ಮುಚ್ಚಿ ನಗುತ್ತಿದ್ದರು. ನನ್ನ ಅವತಾರ ನೋಡಿ ನಗು ತಡೆಹಿಡಿಯಲೂ ಅಸಾಧ್ಯವಾಗಿತ್ತು.


ಗದ್ದೆಗಳ ಅಂಚು ತಲುಪಿದ ಕೂಡಲೇ ಪ್ರಪಾತ. ಇಷ್ಟು ಆಳದ ಪ್ರಪಾತವೊಂದು ಇಲ್ಲಿ ಅಡಗಿ ಕುಳಿತಿದೆ ಎಂದು ಕಲ್ಪಿಸಲು ಸಾಧ್ಯವೇ ಇಲ್ಲ. ಮರ ಗಿಡಗಳ ಬೇರು, ಕೊಂಬೆ ಇತ್ಯಾದಿಗಳನ್ನು ಆಧಾರವಾಗಿ ಹಿಡಿದು ಕೆಳಗಿಳಿಯಲಾರಂಭಿಸಿದೆವು. ೧೦ ನಿಮಿಷದ ಬಳಿಕ ದಬ್ಬೆ ಜಲಧಾರೆ ಗೋಚರಿಸುವುದು. ಇನ್ನೂ ಕೆಳಕ್ಕೆ ಇಳಿದು ಜಲಧಾರೆಯ ಬುಡಕ್ಕೆ ತೆರಳಬಹುದು. ಆದರೆ ನೀರಿನ ಹರಿವು ಹೆಚ್ಚಿದ್ದರಿಂದ ಕೆಳಗೆ ಹೋಗುವುದು ಬೇಡವೆಂದು ಮಹೇಶ ನಿರ್ಧರಿಸಿದ. ಡಿಸೆಂಬರ್ ನಂತರ ಬಂದರೆ ಸಲೀಸಾಗಿ ಕೆಳಗಿಳಿಯಬಹುದು. ಈಗ ನಾವು ಕಣಿವೆಯ ಮಧ್ಯದಲ್ಲೇ ನಿಂತು ದಬ್ಬೆಯನ್ನು ನೋಡಿ ತೃಪ್ತಿಪಟ್ಟೆವು.


ದಬ್ಬೆ ಜಲಧಾರೆ ೨೫೦ ಅಡಿಯಷ್ಟು ಎತ್ತರದಿಂದ ಧುಮುಕುತ್ತದೆ. ಕಣಿವೆಯ ಮೇಲ್ಮೈಯನ್ನು ಸ್ಪರ್ಶಿಸುತ್ತಾ ಕೆಳಗೆ ಬರುತ್ತಿದ್ದಂತೆ ಜಲಧಾರೆಯ ಅಗಲವೂ ವಿಸ್ತಾರಗೊಳ್ಳುತ್ತದೆ. ದಬ್ಬೆ ಮನೆಗೆ ಬರುವಾಗ ದಾಟಿದ ತೊರೆಯೇ ನಂತರ ಮುಂದೆ ಇನ್ನೆರಡು ತೊರೆಗಳನ್ನು ತನ್ನಲ್ಲಿ ಸೇರಿಸಿಕೊಂಡು ಮುಂದೆ ಹರಿದು ದಬ್ಬೆ ಜಲಧಾರೆಯನ್ನು ನಿರ್ಮಿಸುತ್ತದೆ. ಜಲಧಾರೆ ಧುಮುಕುವಲ್ಲೇ ಆರಂಭವಾಗುವ ಕಣಿವೆ ನಂತರ ಬಹಳ ಕಿರಿದಾಗಿದೆ. ದೂರದಲ್ಲೊಂದು ಜಿಂಕೆಯೋ, ಕಡವೆಯೋ ನಮಗೆ ಕಂಡುಬಂತು. ಹಿಂತಿರುಗುವಾಗ ಸಿಗುವ ತೊರೆಯಲ್ಲಿ ಹೊರಳಾಡಿ ಬಟ್ಟೆಗೆ, ಮೈಗೆ ಮೆತ್ತಿದ್ದ ಕೆಸರನ್ನು ತೊಳೆದುಕೊಂಡೆ. ಮತ್ತೊಂದು ಸಲ ನಾಗರಾಜ್ ಮನೆಯಲ್ಲಿ ವಿಶ್ರಾಂತಿ ಪಡೆದು, ಭೀಮೇಶ್ವರದತ್ತ ತಂಡ ಹೊರಟಿತು.

ಭೀಮೇಶ್ವರ ತಿರುವು ತಲುಪಿದಾಗ ಅದಾಗಲೇ ೪.೧೫ ಆಗಿತ್ತು. ಈಗ ಮಳೆ ಬೀಳಲಾರಂಭಿಸಿತು. ಭಟ್ಕಳಕ್ಕೆ ಕೊನೆಯ ಬಸ್ಸು ಭೀಮೇಶ್ವರಕ್ಕೆ ೫.೨೦ಕ್ಕೆ ಆಗಮಿಸುತ್ತದೆ. ಇದು ತಪ್ಪಿದರೆ ನಂತರ ನನಗೆ ಉಡುಪಿಗೆ ಬಸ್ಸಿಲ್ಲ. ಭೀಮೇಶ್ವರವನ್ನು ಒಂದೆರಡು ಸಲ ನೋಡಿದ್ದರೂ ಮತ್ತೆ ನೋಡಬೇಕೆಂಬ ಆಸೆ. ಉಳಿದವರು ಇನ್ನೂ ವಾಹನದಿಂದ ಇಳಿದಿರಲಿಲ್ಲ. ರೈನ್ ಕೋಟ್ ಧರಿಸಿ, ಕಿರಣ್-ಗೆ ಮುಂದೆ ಹೋಗುವೆನೆಂದು ತಿಳಿಸಿ, ಭೀಮೇಶ್ವರದತ್ತ ಹೊರಟೆ.


ಮಳೆಗಾಲದಲ್ಲಿ ಇದು ಭೀಮೇಶ್ವರಕ್ಕೆ ನನ್ನ ಪ್ರಥಮ ಭೇಟಿ. ಅರ್ಚಕರು ಇರಲಿಲ್ಲ. ನಿರ್ಜನ ಪ್ರದೇಶ. ದೇವಸ್ಥಾನ ತಲುಪಿ, ಜಲಧಾರೆಯ ಅಂದವನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಮರಳಿ ಅರ್ಚಕರ ಮನೆಗೆ ಬರಬೇಕಾದರೆ ಸಮಯ ೫ ಆಗಿತ್ತು. ಮಳೆಯಲ್ಲೇ ಓಡಲು ಶುರುಮಾಡಿದೆ. ಸ್ವಲ್ಪ ದೂರ ಬರುವಷ್ಟರಲ್ಲಿ ಅರ್ಚಕರು ಸಿಕ್ಕರು. ಪ್ರತಿ ಶನಿವಾರ ಸಿದ್ಧಾಪುರ ಸಮೀಪದ ತನ್ನ ಊರಿಗೆ ತೆರಳುವ ಅವರು ೪.೩೦ರ ಬಸ್ಸಿಗೆ ಬಂದಿದ್ದರು. ಮುಂದೆ ತೊರೆಯ ತನಕ ಇಳಿಜಾರಾಗಿದ್ದರಿಂದ ಬೇಗನೇ ಬಂದೆ. ಇಲ್ಲಿದ್ದರು ಕಿರಣ್ ಮತ್ತವರ ಗೆಳೆಯರು. ಎಲ್ಲರಿಗೂ ವಿದಾಯ ಹೇಳಿ ಮುಂದುವರಿದೆ.


ಏದುಸಿರು ಬಿಡುತ್ತಾ ಕೊನೆಯ ತಿರುವಿನ ಬಳಿಗೆ ಬಂದಾಗ ಬಸ್ಸಿನ ಹಾರ್ನ್ ಕೇಳಿಸುತ್ತಿತ್ತು. ಕಾಲುಗಳು ನೋಯುತ್ತಿದ್ದರೂ ಇನ್ನಷ್ಟು ವೇಗವಾಗಿ ಓಡಿದೆ. ರಸ್ತೆ ಕಾಣುತ್ತಿತ್ತು, ಬಸ್ಸು ಕಾಣುತ್ತಿರಲಿಲ್ಲ, ಬಸ್ಸಿನ ಸದ್ದು ಮತ್ತು ಹಾರ್ನ್ ಕೇಳಿಸುತ್ತಿತ್ತು. ಬಸ್ಸು ದಾಟಿ ಹೊಯಿತೇನೋ ಎಂಬ ಕಳವಳ. ಕಡೆಗೂ ರಸ್ತೆ ಬಳಿ ಬಂದಾಗ ಇನ್ನೂ ಬಸ್ಸಿನ ಸದ್ದು ಕೇಳಿಸುತ್ತಿತ್ತು. ಅರ್ಧ ನಿಮಿಷದೊಳಗೆ ಆಗಮಿಸಿದ ದುರ್ಗಾಂಬಾ ಬಸ್ಸನ್ನೇರಿ ಹೊರಟೆ ಉಡುಪಿಯತ್ತ.

ಶನಿವಾರ, ಅಕ್ಟೋಬರ್ 04, 2008

’ಸಿಂಕ್ ದ ಬಿಸ್ಮಾರ್ಕ್’!


ಎರಡನೇ ಮಹಾಯುದ್ಧ ಆರಂಭವಾಗಿ 2 ವರ್ಷಗಳಾಗಿದ್ದವು. ನಾಝಿ(ಜರ್ಮನಿ) ನೌಕಾಪಡೆಗಳಿಂದ ಇಂಗ್ಲಂಡಿನ ಹಡಗುಗಳ ಮುಳುಗಡೆ ಅತಿರೇಕಕ್ಕೆ ತಲುಪಿತ್ತು. ಜರ್ಮನಿಯ ನೌಕಾಪಡೆ(ಕ್ರೀಗ್ಸ್-ಮರೀನ್) ಅವ್ಯಾಹತ ದಾಳಿಗಳನ್ನು ನಡೆಸಿ ರಾಯಲ್ ನೇವಿಯ (ಇಂಗ್ಲಂಡಿನ ನೌಕಾಪಡೆ) ಅದೆಷ್ಟೋ ಯುದ್ಧನೌಕೆಗಳನ್ನು ಮುಳುಗಿಸಿತ್ತು. ಕ್ರೀಗ್ಸ್-ಮರೀನ್, ಒಂದು ಅತ್ಯಾಧುನಿಕವಾದ ಅಗಾಧ ಗಾತ್ರದ, ಬಲಿಷ್ಠ ಯುದ್ಧನೌಕೆಯನ್ನು ನಿರ್ಮಿಸಿತ್ತು. ಈ ಹಡಗು ಇಂಗ್ಲಂಡಿನ ಯಾವುದೇ ಯುದ್ಧನೌಕೆಗಿಂತ ದೊಡ್ಡದಾಗಿತ್ತು. ಇಂಗ್ಲಂಡಿನ ಅತಿ ವೇಗದ ಹಡಗಿಗಿಂತಲೂ ವೇಗವಾಗಿ ಚಲಿಸುವ ಸಾಮರ್ಥ್ಯವನ್ನು ಈ ಹಡಗು ಹೊಂದಿತ್ತು. ಜರ್ಮನಿಯ ಈ ಹೊಸ ಯುದ್ಧನೌಕೆಯೇ ಬಿಸ್ಮಾರ್ಕ್!

ಇಂಗ್ಲಂಡ್ ಬಿಸ್ಮಾರ್ಕ್-ಗೆ ಹೆದರಲು ಕಾರಣಗಳಿದ್ದವು. ಇಂಗ್ಲಂಡಿಗೆ ಆಗುತ್ತಿದ್ದ ಆಹಾರ ಮತ್ತು ಧಾನ್ಯಗಳ ಸರಬರಾಜನ್ನು ವ್ಯಾಪಾರಿ ಹಡಗುಗಳನ್ನು ಮುಳುಗಿಸುವ ಮೂಲಕ ತಡೆಹಿಡಿಯುವ ಕಾರ್ಯದಲ್ಲಿ ಪೂರ್ಣ ಯಶಸ್ಸನ್ನು ಬಿಸ್ಮಾರ್ಕ್ ಮೂಲಕ ಸಾಧಿಸುವ ಇರಾದೆ ಕ್ರೀಗ್ಸ್-ಮರೀನ್-ಗೆ ಇತ್ತು.

ಬಿಸ್ಮಾರ್ಕನ್ನು ಎದುರಿಸಲು ರಾಯಲ್ ನೇವಿಯ ’ಹೋಮ್ ಫ್ಲೀಟ್’ ಎಂಬ ಹೆಸರಿನ ಯುದ್ಧನೌಕೆಗಳ ಗುಂಪು ಸನ್ನದ್ಧವಾಗಿತ್ತು. ಈ ಗುಂಪಿನಲ್ಲಿ ೫ ಪ್ರಮುಖ ಯುದ್ಧನೌಕೆಗಳಿದ್ದವು - ಕಿಂಗ್ ಜಾರ್ಜ್ 5, ಪ್ರಿನ್ಸ್ ಆಫ್ ವೇಲ್ಸ್, ದಿ ಹುಡ್, ರಿಪಲ್ಸ್ ಮತ್ತು ವಿಕ್ಟೋರಿಯಸ್. ಹೋಮ್ ಫ್ಲೀಟ್-ನ ಉಸ್ತುವಾರಿಯನ್ನು ಅಡ್ಮಿರಲ್ ಸರ್ ಜಾನ್ ಟೋವಿ ಎಂಬ ಅಧಿಕಾರಿಗೆ ವಹಿಸಿಕೊಡಲಾಗಿತ್ತು.


ಮೇ 17, 1941: ಡೆನ್ಮಾರ್ಕ್ ಮತ್ತು ಸ್ವೀಡನ್ ನಡುವೆ ಇರುವ ಕಟಿಗಾಟ್ ಸಮುದ್ರ ಹಾದಿಯಲ್ಲಿ ಎರಡು ದೊಡ್ಡ ಹಡಗುಗಳು ನಾರ್ವೇಯೆಡೆ ತೆರಳುತ್ತಿರುವ ವರದಿ ಇಂಗ್ಲಂಡ್ ನೌಕಾಪಡೆಗೆ ದೊರಕಿತು. ಇವುಗಳಲ್ಲೊಂದು ಬಿಸ್ಮಾರ್ಕ್ ಆಗಿರಬಹುದು ಎಂದು ಊಹಿಸಲಾಯಿತು.


ಮೇ 18: ನಾರ್ವೇ ಮತ್ತು ಡೆನ್ಮಾರ್ಕ್ ನಡುವಿನ ಸ್ಕಗೆರಾಕ್ ಸಮುದ್ರ ಹಾದಿಯಲ್ಲಿ ಬಿಸ್ಮಾರ್ಕ್ ಸಾಗುತ್ತಿರುವುದನ್ನು ತಟಸ್ಥ ರಾಷ್ಟ್ರವಾಗಿದ್ದ ಸ್ವೀಡನ್ ದೇಶದ ಹಡಗೊಂದು ಕಂಡಿತ್ತು. ಈ ಮಾಹಿತಿಯನ್ನು ನಂತರ ಬ್ರಿಟೀಷರಿಗೆ ನೀಡಲಾಯಿತು.

ಮೇ 20: ಜರ್ಮನಿಯ ಬೇಹುಗಾರಿಕಾ ಯುದ್ಧವಿಮಾನವೊಂದು ಇಂಗ್ಲಂಡಿನ ನೌಕಾನೆಲೆಯ ಮೇಲೆಲ್ಲಾ ಹಾರಾಡಿ ಮಾಹಿತಿ ಸಂಗ್ರಹಿಸಿ, ’ಹೋಮ್ ಫ್ಲೀಟ್’ನ ಎಲ್ಲಾ ಯುದ್ಧನೌಕೆಗಳು ’ಸ್ಕಾಪಾ ಫ್ಲೋ’ (ಉಚ್ಚಾರ ತಪ್ಪು ಇರಬಹುದು) ಬಂದರಿನಲ್ಲೇ ಇರುವ ಮಾಹಿತಿಯನ್ನು ಬಿಸ್ಮಾರ್ಕಿನ ಫ್ಲೀಟ್ ಕಮಾಂಡರ್ ಅಡ್ಮಿರಲ್ ಗೂಂತರ್ ಲೂಯನ್ಸ್ ಅವರಿಗೆ ರವಾನಿಸಿತು.

ಮೇ 21: ಬ್ರಿಟಿಷ್ ವಾಯುಪಡೆಯ ಯುದ್ಧವಿಮಾನವೊಂದು ನಾರ್ವೇಯ ಕರಾವಳಿ ಪ್ರದೇಶದುದ್ದಕ್ಕೂ ಮಾಹಿತಿ ಮತ್ತು ಚಿತ್ರಗಳನ್ನು ಕಲೆಹಾಕುತ್ತಾ ಬೇಹುಗಾರಿಕಾ ಕೆಲಸ ಮಾಡುತ್ತಿರುವಾಗ ಬರ್ಗನ್ ಎಂಬ ನಿರ್ಜನ ಬಂದರಿನಲ್ಲಿ 2 ಯುದ್ಧನೌಕೆಗಳಿರುವುದನ್ನು ಕಂಡು ಅವುಗಳ ಚಿತ್ರಗಳನ್ನು ತೆಗೆದು ಹಿಂತಿರುಗಿತು. ಆ ಚಿತ್ರಗಳ ಮೂಲಕ ಒಂದನ್ನು ಬಿಸ್ಮಾರ್ಕ್ ಎಂದು ಗುರುತಿಸಲಾಯಿತು. ಇನ್ನೊಂದು, ಬಿಸ್ಮಾರ್ಕ್-ನ ಬೆಂಗಾವಲಾಗಿ ಇದ್ದ ಯುದ್ಧನೌಕೆ ’ಪ್ರಿನ್ಸ್ ಒಯ್ಗೀನ್’.

ಈ ಸುದ್ದಿ ಬಂದ ಕೂಡಲೇ, ನಾರ್ವೇಯಿಂದ ಅಟ್ಲಾಂಟಿಕ್ ಮಹಾಸಾಗರಕ್ಕಿರುವ ನಿರ್ಗಮನ ದಾರಿಗಳ ಮೇಲೆ ನಿಗಾ ಇಡಲು ಜಾನ್ ಟೋವಿ, ತನ್ನ ಸುಪರ್ದಿಯಲ್ಲಿದ್ದ 5 ಹಡಗುಗಳಲ್ಲಿ ಎರಡನ್ನು - ದಿ ಹುಡ್ ಮತ್ತು ಪ್ರಿನ್ಸ್ ಆಫ್ ವೇಲ್ಸ್ - ಮಧ್ಯರಾತ್ರಿಯ ವೇಳೆಗೆ ಗ್ರೀನ್-ಲ್ಯಾಂಡ್ ಮತ್ತು ಐಸ್-ಲ್ಯಾಂಡ್ ನಡುವೆ ಇರುವ ಡೆನ್ಮಾರ್ಕ್ ಕೊಲ್ಲಿಗೆ ಕಳಿಸಿದರು. ಇಲ್ಲಿಂದಲೇ ಬಿಸ್ಮಾರ್ಕ್-ಗಾಗಿ ಶೋಧ ಆರಂಭವಾಯಿತು ಎನ್ನಬಹುದು. ಜಗತ್ತಿನ ನೌಕಾಪಡೆಗಳ ಇತಿಹಾಸದಲ್ಲಿ ಇಷ್ಟು ರೋಚಕ ಮತ್ತು ಸಾಹಸಭರಿತ ’ಚೇಸ್’ ಎಂದೂ ನಡೆದಿಲ್ಲ.


ಮೇ 22: ಇನ್ನೊಮ್ಮೆ ಇಂಗ್ಲಂಡಿನ ಬಂದರುಗಳತ್ತ ಸಾಗಿಬಂದ ಜರ್ಮನಿಯ ಬೇಹುಗಾರಿಕಾ ವಿಮಾನವು, ಹೋಮ್ ಫ್ಲೀಟ್-ನ ಎಲ್ಲಾ ಯುದ್ಧನೌಕೆಗಳು ಬಂದರಿನಲ್ಲೇ ಇವೆ ಎಂಬ ತಪ್ಪು ಮಾಹಿತಿಯನ್ನು ಬಿಸ್ಮಾರ್ಕಿನ ಫ್ಲೀಟ್ ಕಮಾಂಡರ್ ಅಡ್ಮಿರಲ್ ಗೂಂತರ್ ಲೂಯನ್ಸ್-ಗೆ ರವಾನಿಸಿತು. ಆದರೆ ಈ ಬೇಹುಗಾರಿಕಾ ವಿಮಾನ, ದಿ ಹುಡ್ ಮತ್ತು ಪ್ರಿನ್ಸ್ ಆಫ್ ವೇಲ್ಸ್ ತಮ್ಮ ಜಾಗದಲ್ಲಿ ಇಲ್ಲದಿರುವುದನ್ನು ಗಮನಿಸಿರಲಿಲ್ಲ! ತಪ್ಪು ಮಾಹಿತಿ ಪಡಕೊಂಡ ಅಡ್ಮಿರಲ್ ಲೂಯನ್ಸ್, ಇನ್ನು ಬಿಸ್ಮಾರ್ಕ್ ಸುರಕ್ಷಿತ ಎಂದು ಬರ್ಗನ್-ನಿಂದ ಹೊರಟರು.


ಇತ್ತ ಇಂಗ್ಲಂಡಿನ ಬೇಹುಗಾರಿಕಾ ವಿಮಾನದ ಮೂಲಕ ಸಂಜೆ 7.45ಕ್ಕೆ ಬಂದ ಮಾಹಿತಿಯ ಪ್ರಕಾರ ಬಿಸ್ಮಾರ್ಕ್ ಮತ್ತು ಪ್ರಿನ್ಸ್ ಒಯ್ಗೀನ್ ಎರಡೂ ಕೂಡಾ ಬರ್ಗನ್ ಬಂದರಿನಲ್ಲಿರಲಿಲ್ಲ! ಕೂಡಲೇ ಉಳಿದ 3 ಯುದ್ಧನೌಕೆಗಳೊಂದಿಗೆ - ಕಿಂಗ್ ಜಾರ್ಜ್ 5, ರಿಪಲ್ಸ್ ಮತ್ತು ವಿಕ್ಟೋರಿಯಸ್ - ಜಾನ್ ಟೋವಿ ಇನ್ನೊಂದು ನಿರ್ಧರಿತ ಸ್ಥಳಕ್ಕೆ ತೆರಳಿದರು. ನೊರ್ಫೋಕ್ ಎಂಬ ಹೆಸರಿನ ನೌಕೆ ಡೆನ್ಮಾರ್ಕ್ ಕೊಲ್ಲಿಯಲ್ಲಿ ಗಸ್ತು ತಿರುಗುತ್ತಿತ್ತು. ಇದರ ಸಹಾಯಕ್ಕಾಗಿ ಸಫೋಕ್ ಎಂಬ ಇನ್ನೊಂದು ನೌಕೆಯನ್ನೂ ಅಲ್ಲಿಗೆ ತೆರಳುವಂತೆ ಸೂಚಿಸಲಾಯಿತು. ಬಿಸ್ಮಾರ್ಕ್ ಶೋಧ ಕಾರ್ಯದಲ್ಲಿ ಈ 2 ನೌಕೆಗಳು ಬಹಳ ಪ್ರಮುಖ ಕಾರ್ಯ ನಿರ್ವಹಿಸಿದವು.

ಮೇ 23: ಸಂಜೆ 7ರ ಸಮಯ. ಡೆನ್ಮಾರ್ಕ್ ಕೊಲ್ಲಿಯಲ್ಲಿ ಆವರಿಸಿದ್ದ ಮಂಜಿನಲ್ಲಿ ಅಡಗಿ ಕುಳಿತು ಸಫೋಕ್ ಗಸ್ತು ತಿರುಗುತ್ತಾ ಇತ್ತು. 7.22ಕ್ಕೆ ಅಕಸ್ಮಾತ್ತಾಗಿ ಮಂಜು ಸರಿದುಬಿಟ್ಟಿತು. ಬಿಸ್ಮಾರ್ಕ್ ಮತ್ತು ಪ್ರಿನ್ಸ್ ಒಯ್ಗೀನ್ ಕೇವಲ 14 ಕಿ.ಮಿ ದೂರದಲ್ಲಿ ಸಫೋಕ್-ನತ್ತವೇ ಬರುತ್ತಿದ್ದವು. 40 ಕಿಮಿ ದೂರ ಬಂದೂಕು ಸಾಮರ್ಥ್ಯವುಳ್ಳ ಬಿಸ್ಮಾರ್ಕ್-ಗೆ ಸಫೋಕ್ ಸುಲಭದಲ್ಲಿ ತುತ್ತಾಗುತ್ತಿತ್ತು. ಅಪಾಯವನ್ನರಿತು ಕೂಡಲೇ ಸಫೋಕ್ ಮಂಜಿನ ಪರದೆಯೆಡೆ ಪಲಾಯನಗೈದು ಅಲ್ಲೇ ಅವಿತು, ವೈರಿ ನೌಕೆಗಳೆರಡೂ ತನ್ನನ್ನು ದಾಟಿದ ಬಳಿಕ ಅವುಗಳನ್ನು ಹಿಂಬಾಲಿಸುತ್ತಾ, ಅವುಗಳ ಇರುವಿಕೆಯ ಸರಿಯಾದ ಸ್ಥಳದ ಬಗ್ಗೆ ಸಂದೇಶಗಳನ್ನು ಕಳಿಸಿತು.

ಸಫೋಕ್-ನಿಂದ ಬಂದ ಮಾಹಿತಿಯ ಪ್ರಕಾರ ವೈರಿ ಇರಬಹುದಾದ ಸ್ಥಳದೆಡೆ ಮಂಜಿನಲ್ಲಿ ಅವಿತುಕೊಂಡೇ ನೊರ್ಫೋಕ್ ಚಲಿಸಲಾರಂಭಿಸಿತು. ಸುಮಾರು ಒಂದು ತಾಸು ವೇಗವಾಗಿ ಚಲಿಸಿದ ಬಳಿಕ ರಾತ್ರಿ 8.30ಕ್ಕೆ ನೊರ್ಫೋಕ್ ಒಮ್ಮೇಲೆ ಮಂಜಿನಿಂದ ಹೊರಬಂದುಬಿಟ್ಟಾಗ, ಬಿಸ್ಮಾರ್ಕ್ ಮತ್ತು ಪ್ರಿನ್ಸ್ ಒಯ್ಗೀನ್ ಕೇವಲ 9 ಕಿಮಿ ದೂರದಲ್ಲಿ ಧಾವಿಸಿ ಬರುತ್ತಿದ್ದವು. ಕಂಗಾಲಾದ ನೊರ್ಫೋಕ್, ಕೂಡಲೆ ಕೃತಕ ಮಂಜು ಮತ್ತು ಹೊಗೆಯನ್ನು ಸೃಷ್ಟಿಸಿ ಮಂಜಿನೆಡೆ ಪಲಾಯನಗೈಯಲಾರಂಭಿಸಿತು.

ಹೀಗೆ ಆ ರಾತ್ರಿಯಿಡೀ ವೈರಿ ಹಡಗುಗಳನ್ನು ಎಡಬದಿಯಿಂದ ಸಫೋಕ್ ಮತ್ತು ಬಲಬದಿಯಿಂದ ನೊರ್ಫೋಕ್ ಮಂಜಿನ ಪರದೆಯಲ್ಲಿ ಅವಿತುಕೊಂಡೇ ಹಿಂಬಾಲಿಸಲಾರಂಭಿಸಿದವು. ನಾಲ್ಕೂ ಹಡಗುಗಳು ಡೆನ್ಮಾರ್ಕ್ ಕೊಲ್ಲಿಯ ಮೈಕೊರೆಯುವ ಚಳಿಯಲ್ಲಿ ಮಳೆ, ಮಂಜು ಮತ್ತು ಮಂಜುಗಡ್ಡೆಗಳ ನಡುವೆ ಗರಿಷ್ಠ ವೇಗದಲ್ಲಿ ಸಾಗುತ್ತಿದ್ದವು.


ಮೇ 24: ಸಫೋಕ್ ಮತ್ತು ನೊರ್ಫೋಕ್ ಕಳಿಸುತ್ತಿದ್ದ ಸಂದೇಶಗಳನ್ನು ಹಿಂಬಾಲಿಸುತ್ತಾ ದಿ ಹುಡ್ ಮತ್ತು ಪ್ರಿನ್ಸ್ ಆಫ್ ವೇಲ್ಸ್, ಮುಂಜಾನೆ 5.35ಕ್ಕೆ ವೈರಿ ಯುದ್ಧನೌಕೆಗಳ ದಾರಿಗಡ್ಡವಾಗಿ ಬಂದು ಬಿಸ್ಮಾರ್ಕ್ ಮೇಲೆ ದಾಳಿ ಮಾಡಲಾರಂಭಿಸಿದವು. ಬಿಸ್ಮಾರ್ಕ್ ಮತ್ತು ಪ್ರಿನ್ಸ್ ಒಯ್ಗೀನ್ ಕೂಡಲೇ ಪ್ರತ್ಯುತ್ತರ ನೀಡಿದವು. ದಿ ಹುಡ್, ರಾಯಲ್ ನೇವಿಯ ಪ್ರತಿಷ್ಠಿತ ಯುದ್ಧನೌಕೆಯಾಗಿತ್ತು. ನೌಕಾಪಡೆಯ ಪ್ರತಿಯೊಬ್ಬ ನಾವಿಕ ಮತ್ತು ಅಧಿಕಾರಿ, ದಿ ಹುಡ್-ನಲ್ಲಿ ಸೇವೆ ಸಲ್ಲಿಸಲು ಸಿಕ್ಕಿದರೆ ಅದಕ್ಕಿಂತ ದೊಡ್ಡ ಗೌರವ ಬೇರೆ ಇಲ್ಲ ಎಂದೇ ಭಾವಿಸಿದ್ದರು. ಆ ರೀತಿಯ ಗೌರವ ಮತ್ತು ಹೆಮ್ಮೆ ಇತ್ತು ಬ್ರಿಟೀಷರಿಗೆ ದಿ ಹುಡ್-ನ ಮೇಲೆ. ಬಿಸ್ಮಾರ್ಕ್-ನ ಕ್ಷಿಪಣಿ ದಾಳಿ ಅದೆಷ್ಟು ಕರಾರುವಕ್ಕಾಗಿತ್ತೆಂದರೆ ಕೇವಲ ಎಂಟು ನಿಮಿಷಗಳ ಕಾದಾಟದ ಬಳಿಕ ’ದಿ ಹುಡ್’ ಮಧ್ಯಭಾಗದಲ್ಲೇ ತುಂಡಾಗಿ ತನ್ನ 1417 ನಾವಿಕರೊಂದಿಗೆ ಸಾಗರದ ತಳದತ್ತ ಕಣ್ಮರೆಯಾಯಿತು. ಕೇವಲ 3 ನಾವಿಕರು ಮಾತ್ರ ಬದುಕುಳಿದರು.

ನಂತರ ಬಿಸ್ಮಾರ್ಕ್ ಮತ್ತು ಪ್ರಿನ್ಸ್ ಒಯ್ಗೀನ್, ಪ್ರಿನ್ಸ್ ಆಫ್ ವೇಲ್ಸ್ ಮೇಲೆ ದಾಳಿ ಮಾಡಲಾರಂಭಿಸಿದವು. ಕಡೆಗೂ ಕೃತಕ ಹೊಗೆ ಮತ್ತು ಮಂಜನ್ನು ಸೃಷ್ಟಿಸಿ ಪ್ರಿನ್ಸ್ ಆಫ್ ವೇಲ್ಸ್ ಕುಂಟುತ್ತಾ ಅಲ್ಲಿಂದ ಪಲಾಯನಗೈದಿತು. ಅದನ್ನು ಹಿಂಬಾಲಿಸಲು ಬಿಸ್ಮಾರ್ಕ್ ಯಾವುದೇ ಆಸಕ್ತಿಯನ್ನು ತೋರಲಿಲ್ಲ. ಏಕೆಂದರೆ ’ಅನಾವಶ್ಯಕವಾಗಿ ಎಲ್ಲೂ ದಾಳಿ ಅಥವಾ ಯುದ್ಧದಲ್ಲಿ ತೊಡಗಿಕೊಳ್ಳಬಾರದು’ ಎಂಬ ಕಟ್ಟುನಿಟ್ಟಿನ ಆದೇಶವನ್ನು ಬಿಸ್ಮಾರ್ಕಿಗೆ ನೀಡಲಾಗಿತ್ತು.

ಪ್ರಿನ್ಸ್ ಆಫ್ ವೇಲ್ಸ್-ನ ಎರಡು ಕ್ಷಿಪಣಿಗಳು ಬಿಸ್ಮಾರ್ಕಿನ ಇಂಧನ ಪೈಪುಗಳನ್ನು ಹಾನಿಗೊಳಿಸಿದ್ದರಿಂದ ಗರಿಷ್ಠ ವೇಗದಲ್ಲಿ ಚಲಿಸುವುದು ಅಸಾಧ್ಯವಾಗಿತ್ತು. ಈ ಹಾನಿಯನ್ನು ಸರಿಪಡಿಸಲು, ಪ್ರಿನ್ಸ್ ಒಯ್ಗೀನ್-ನನ್ನು ಗಸ್ತು ತಿರುಗುವ ಕಾರ್ಯಕ್ಕೆ ಬಿಟ್ಟು ಬಿಸ್ಮಾರ್ಕ್ ಮಾತ್ರ ಅತಿಕ್ರಮಿತ ಫ್ರಾನ್ಸ್-ಗೆ ತೆರಳುವುದೆಂದು ಅಡ್ಮಿರಲ್ ಗೂಂತರ್ ಲೂಯನ್ಸ್ ನಿರ್ಧರಿಸಿದರು. ದಿ ಹುಡ್ ಮುಳುಗಡೆಯಾದದ್ದು ರಾಯಲ್ ನೇವಿಗೆ ದೊಡ್ಡ ಹೊಡೆತ ಬಿದ್ದಂತಾಗಿತ್ತು.

ದಿ ಹುಡ್ ಸಾಗರದ ತಳ ಸೇರಿದ ಸುದ್ದಿ ತಿಳಿದು ರೊಚ್ಚಿಗೆದ್ದ ಆಗಿನ ಬ್ರಿಟನ್ ಪ್ರಧಾನಿ ವಿನಸ್ಟನ್ ಚರ್ಚಿಲ್, ’ಸಿಂಕ್ ದ ಬಿಸ್ಮಾರ್ಕ್ ಎಟ್ ಎನಿ ಕಾಸ್ಟ್’ ಎಂದು ಅದೇಶ ನೀಡಿದರು.

ಅತ್ತ ಯುರೋಪ್ ಮತ್ತು ಆಫ್ರಿಕಾ ಖಂಡಗಳ ನಡುವಿನ ಮೆಡಿಟರೇನಿಯನ್ ಸಾಗರದಲ್ಲಿ ವೈಸ್ ಅಡ್ಮಿರಲ್ ಸರ್ ಜೇಮ್ಸ್ ಸೋಮರ್ವಿಲ್ ನಾಯಕತ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಾ 2000 ಕಿ.ಮಿ ದೂರವಿರುವ ಜಿಬ್ರಾಲ್ಟರ್-ನಲ್ಲಿ ನೆಲೆಗೊಂಡಿದ್ದ ಫೋರ್ಸ್-ಎಚ್ ನೌಕಾಪಡೆಯನ್ನು ’ಸಿಂಕ್ ದ ಬಿಸ್ಮಾರ್ಕ್’ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಆದೇಶಿಸಲಾಯಿತು. ’ಫೋರ್ಸ್-ಎಚ್’ನ 3 ಪ್ರಮುಖ ಯುದ್ಧನೌಕೆಗಳು - ರಿನೌನ್, ಆರ್ಕ್ ರಾಯಲ್, ಶೆಫೀಲ್ಡ್ - ಮತ್ತು ಇತರ ೬ ಸಣ್ಣ ಯುದ್ಧನೌಕೆಗಳು ಕೂಡಲೇ ಬಿಸ್ಮಾರ್ಕ್-ನತ್ತ ಧಾವಿಸತೊಡಗಿದವು. ಸುಮಾರು 300 ಕಿ.ಮಿ ದೂರ ಮಧ್ಯ ಅಟ್ಲಾಂಟಿಕ್ ಸಾಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ’ರಾಮಿಲ್ಲೀಸ್’ ಎಂಬ ಯುದ್ಧನೌಕೆಯನ್ನು ತನ್ನ ಗುಂಪನ್ನು ಬಿಟ್ಟು ಬಿಸ್ಮಾರ್ಕಿನೆಡೆ ಧಾವಿಸಲು ಆದೇಶಿಸಲಾಯಿತು. ಹಾಗೇನೇ ಸುಮಾರು 650 ಕಿ.ಮಿ. ದೂರದಲ್ಲಿ ಐರ್ಲಂಡ್ ಕರಾವಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುದ್ಧನೌಕೆ ’ರಾಡ್ನಿ’ಯನ್ನು ಕೂಡಾ ಬಿಸ್ಮಾರ್ಕಿನೆಡೆ ಧಾವಿಸಲು ಆದೇಶಿಸಲಾಯಿತು. ’ದಿ ಹುಡ್’ ಮುಳುಗಿದ ೬ ತಾಸುಗಳ ಒಳಗೆ 25 ಹಡಗುಗಳು - 11 ದೊಡ್ಡ ಯುದ್ಧನೌಕೆಗಳು ಮತ್ತು 14 ಇತರ ಹಡಗುಗಳು - ಎಲ್ಲಾ ದಿಕ್ಕಿನಿಂದ ಬಿಸ್ಮಾರ್ಕನ್ನು ಬೆಂಬತ್ತತೊಡಗಿದವು.

ದಿ ಹುಡ್ ಮುಳುಗಿದ ನಂತರ ಸಫೋಕ್ ಮತ್ತು ನೊರ್ಫೋಕ್ ಬಿಸ್ಮಾರ್ಕನ್ನು ಹಿಂಬಾಲಿಸುವ ಕಾರ್ಯವನ್ನು ಮತ್ತೆ ಶುರುಮಾಡಿದವು. ಪ್ರಿನ್ಸ್ ಆಫ್ ವೇಲ್ಸ್ ಕೂಡಾ ಇವೆರಡು ಹಡಗುಗಳ ಜೊತೆಯಲ್ಲಿತ್ತು. ಸರ್ ಜಾನ್ ಟೋವಿಯವರನ್ನು ಚಿಂತೆಗೀಡುಮಾಡುತ್ತಿದ್ದ ವಿಷಯವೆಂದರೆ ಬಿಸ್ಮಾರ್ಕಿನ ವೇಗ. ಬಿಸ್ಮಾರ್ಕಿನ ವೇಗವನ್ನು ಕುಂಠಿತಗೊಳಿಸಲು ಏರ್-ಕ್ರಾಫ್ಟ್ ಕ್ಯಾರಿಯರ್ ಯುದ್ಧನೌಕೆಯಾಗಿರುವ ವಿಕ್ಟೋರಿಯಸ್-ನ ವಿಮಾನಗಳಿಂದ ದಾಳಿ ಮಾಡಿಸಲಾಯಿತು. ಮುಸ್ಸಂಜೆಯ ವೇಳೆಗೆ ಸುಮಾರು 75 ಕಿ.ಮಿ. ದೂರದಲ್ಲಿ ಮುಂದೆ ಸಾಗುತ್ತಿದ್ದ ಬಿಸ್ಮಾರ್ಕಿನಿಡೆ, ವಿಕ್ಟೋರಿಯಸ್-ನ 9 ಯುದ್ಧವಿಮಾನಗಳು ಹಾರಿ ಕ್ಷಿಪಣಿಗಳನ್ನು ಬೀಳಿಸಿ ಹಿಂತಿರುಗಿದರೂ, ಯವುದೂ ಬಿಸ್ಮಾರ್ಕಿಗೆ ಹಾನಿಯುಂಟುಮಾಡಲಿಲ್ಲ. ಇಂಧನ ಕಡಿಮೆಯಾದ ಕಾರಣ ರಿಪಲ್ಸ್ ಮತ್ತು 3 ಸಣ್ಣ ಹಡಗುಗಳು ಇಗ್ಲಂಡಿಗೆ ಮರಳಬೇಕಾಯಿತು. ಈ 4 ಹಡಗುಗಳ ಮರಳುವಿಕೆ, ವಿಮಾನಗಳ ಕ್ಷಿಪಣಿ ದಾಳಿಯ ವೈಫಲ್ಯ ಮತ್ತು ವೇಗವಾಗಿ ಫ್ರಾನ್ಸಿನೆಡೆ ಸಾಗುತ್ತಿರುವ ಬಿಸ್ಮಾರ್ಕ್, ಈ ಅಂಶಗಳು ಸರ್ ಜಾನ್ ಟೋವಿಗೆ ನಿರಾಸೆಯನ್ನುಂಟುಮಾಡಿದವು.


ಮೇ ೨೫: ಮುಂಜಾನೆ 3 ಗಂಟೆಗೆ ಬಿಸ್ಮಾರ್ಕನ್ನು ಹಿಂಬಾಲಿಸುತ್ತಿದ್ದ ಸಫೋಕ್, ಅದರೊಂದಿಗೆ ಸಂಪರ್ಕವನ್ನು ಕಳಕೊಂಡುಬಿಟ್ಟಿತು. ಈಗ ಬಿಸ್ಮಾರ್ಕ್ ಎಲ್ಲಿದೆ, ಯಾವ ಕಡೆ ಚಲಿಸುತ್ತಿದೆ ಎಂಬ ಬಗ್ಗೆ ಸರ್ ಜಾನ್ ಟೋವಿಗೆ ಸ್ವಲ್ಪನೂ ಮಾಹಿತಿ ಸಿಗುತ್ತಿರಲಿಲ್ಲ! ಗೊತ್ತುಗುರಿಯಿಲ್ಲದೆ ಸಫೋಕ್, ನೊರ್ಫೋಕ್, ಪ್ರಿನ್ಸ್ ಆಫ್ ವೇಲ್ಸ್ ಮತ್ತು ಇತರ ಹಡಗುಗಳು ಎಲ್ಲೆಡೆ ಹುಡುಕಾಡತೊಡಗಿದವು. ರಾಯಲ್ ಏರ್-ಫೋರ್ಸಿನ ಸ್ವೋರ್ಡ್-ಫಿಶ್ ಯುದ್ಧವಿಮಾನಗಳು ವೈಮಾನಿಕ ಹುಡುಕಾಟವನ್ನು ನಡೆಸಿದವು. ಆದರೂ ಎಲ್ಲಿ ಕೂಡಾ ಬಿಸ್ಮಾರ್ಕಿನ ಸುಳಿವೇ ಸಿಗಲಿಲ್ಲ. 31 ತಾಸು ಮತ್ತು 30 ನಿಮಿಷಗಳವರೆಗೆ ರಾಯಲ್ ನೇವಿಗೆ ಬಿಸ್ಮಾರ್ಕನ್ನು ಪತ್ತೆಮಾಡಲು ಸಾಧ್ಯವಾಗಲಿಲ್ಲ. ಕಡೆಗೂ ಬಿಸ್ಮಾರ್ಕಿನ ಸುಳಿವು ಮತ್ತೆ ಸರ್ ಜಾನ್ ಟೋವಿಗೆ ದೊರಕಿದ್ದು ಅದರ ಫ್ಲೀಟ್ ಕಮಾಂಡರ್ ಅಡ್ಮಿರಲ್ ಗೂಂತರ್ ಲೂಯನ್ಸ್ ಮಾಡಿದ ಪ್ರಮಾದದಿಂದ.

ಮೇ ೨೬: ಬೆಂಬತ್ತಲ್ಪಡುತ್ತಿದ್ದ ಬಿಸ್ಮಾರ್ಕಿನಲ್ಲಿ ಪರಿಸ್ಥಿತಿ ಬೆರೇನೇ ಇತ್ತು. ರಾಯಲ್ ನೇವಿಯ ’ಹೋಮ್ ಫ್ಲೀಟ್’ನ ಎಲ್ಲಾ ಯುದ್ಧನೌಕೆಗಳು ಬಂದರಿನಲ್ಲೇ ಇವೆ ಎಂಬ ತಪ್ಪು ಮಾಹಿತಿಯನ್ನು ನಂಬಿ ಬರ್ಗನ್-ನಿಂದ ಹೊರಟಿದ್ದ ಫ್ಲೀಟ್ ಕಮಾಂಡರ್ ಅಡ್ಮಿರಲ್ ಗೂಂತರ್ ಲೂಯನ್ಸ್-ಗೆ ನಂತರ ವಿಶ್ರಾಂತಿಯೇ ಇರಲಿಲ್ಲ. ಸತತವಾಗಿ ಹಿಂಬಾಲಿಸುತ್ತಾ ಕಾಡುತ್ತಿದ್ದ ರಾಯಲ್ ನೇವಿಯ ಯುದ್ಧನೌಕೆಗಳು. ಪ್ರಿನ್ಸ್ ಆಫ್ ವೇಲ್ಸ್-ನ 2 ಕ್ಷಿಪಣಿಗಳಿಂದ ಆದ ಹಾನಿಯ ಕಾರಣ ಕುಗ್ಗಿದ ವೇಗ. ಜೊತೆಯಿಲ್ಲದ ಪ್ರಿನ್ಸ್ ಒಯ್ಗೀನ್. ಈ ಎಲ್ಲಾ ಅಂಶಗಳು ಗೂಂತರ್ ಲೂಯನ್ಸ್-ರನ್ನು ಖಿನ್ನರನ್ನಾಗಿ ಮಾಡಿತ್ತು. ಈಗ ಸದ್ಯಕ್ಕೆ ಬಿಸ್ಮಾರ್ಕ್ ಎಲ್ಲಿದೆ ಎಂದು ತಿಳಿಯದೇ ರಾಯಲ್ ನೇವಿ ಪರದಾಡುತ್ತಿದೆ ಎಂಬ ಬಗ್ಗೆಯೂ ಗೂಂತರ್ ಲೂಯನ್ಸ್-ಗೆ ಗೊತ್ತಿರಲಿಲ್ಲ!

ಖಿನ್ನರಾಗಿದ್ದ ಗೂಂತರ್ ಲೂಯನ್ಸ್, ಬಿಸ್ಮಾರ್ಕಿನ ಕ್ಯಾಪ್ಟನ್ ಆಗಿದ್ದ ಅರ್ನ್ಸ್ಟ್ ಲಿಂಡ್ಮನ್-ರ ವಿರೋಧದ ನಡುವೆಯೂ ಅರ್ಧ ಗಂಟೆ ಕಾಲ ಒಂದು ದೊಡ್ಡ ಸಂದೇಶವನ್ನು ಜರ್ಮನಿಗೆ ರೇಡಿಯೋ ಮೂಲಕ ರವಾನಿಸಿದರು. ಈ ರೇಡಿಯೋ ಸಂದೇಶವನ್ನು ಲಂಡನ್-ನಲ್ಲಿದ್ದ ರಾಯಲ್ ನೇವಿಯ ’ಕೋಡ್-ಬ್ರೇಕರ್ಸ್’ ತಂಡ ಆಲಿಸತೊಡಗಿತು. ಆದರೆ ’ಕೋಡ್-ಬ್ರೇಕರ್ಸ್’ ಸಂದೇಶವನ್ನು ಡಿಕೋಡ್ ಮಾಡಿತೇ ಹೊರತು, ಆ ಸಂದೇಶ ಎಲ್ಲಿಂದ ಹೊರಹೊಮ್ಮುತ್ತಿದೆ ಎಂದು ಪತ್ತೆ ಮಾಡುವುದು ಅಸಾಧ್ಯವಾಗಿತ್ತು. ಅಷ್ಟರಲ್ಲಿ ಇಟಲಿಯಲ್ಲಿ ನೆಲೆಗೊಂಡಿದ್ದ ನಾಝಿ ಅಧಿಕಾರಿಯೊಬ್ಬನಿಗೆ ಬಿಸ್ಮಾರ್ಕ್ ಯಾವ ಕಡೆ ತೆರಳುತ್ತಿದೆ ಎಂಬ ಬಗ್ಗೆ ಮಾಹಿತಿ ಬೇಕಿತ್ತು. ಯಾಕೆಂದರೆ ಆತನ ತಂಗಿಯ ಮಗ ಬಿಸ್ಮಾರ್ಕಿನಲ್ಲಿದ್ದ! ಆತನಿಗೆ ಬೇಕಿದ್ದ ಮಾಹಿತಿಯನ್ನು ಗೂಂತರ್ ಲೂಯನ್ಸ್ ನೀಡಿದರು!! ಈ ಸಂದೇಶವನ್ನೂ ’ಕೋಡ್-ಬ್ರೇಕರ್ಸ್’ ಆಲಿಸಿ ರಾಯಲ್ ನೇವಿಗೆ ಸುದ್ದಿ ಮುಟ್ಟಿಸಿದರು.

ಬಿಸ್ಮಾರ್ಕ್ ಈಗ ಎಲ್ಲಿದೆ ಎಂಬ ಬಗ್ಗೆ ತಿಳಿಯದಾದರೂ ಫ್ರಾನ್ಸಿನ ಯಾವ ಬಂದರಿನೆಡೆ ತೆರಳುತ್ತಿದೆ ಎಂಬ ಮಾಹಿತಿ ರಾಯಲ್ ನೇವಿಗೆ ದೊರಕಿತ್ತು. ಕೂಡಲೇ ಬೇಹುಗಾರಿಕಾ ವಿಮಾನವೊಂದು ಆ ಭಾಗದಲ್ಲಿ ಹಾರಾಟ ನಡೆಸಿ ಬಿಸ್ಮಾರ್ಕನ್ನು ಪತ್ತೆ ಹಚ್ಚಿ, ಅದರ ಇರುವಿಕೆಯ ಸ್ಥಳದ ಮಾಹಿತಿಯನ್ನು ಸರ್ ಜಾನ್ ಟೋವಿಗೆ ತಿಳಿಸಲಾಯಿತು. ಸಮಯ ಮುಂಜಾನೆ 10.30.


ಆದರೆ ಕಳೆದ 31 ತಾಸುಗಳ ಗೊತ್ತುಗುರಿಯಿಲ್ಲದ ಹುಡುಕಾಟದಿಂದ ರಾಯಲ್ ನೇವಿಯ ಎಲ್ಲಾ ಯುದ್ಧನೌಕೆಗಳು ಬಿಸ್ಮಾರ್ಕಿನಿಂದ ಬಹಳ ದೂರದಲ್ಲಿದ್ದವು ಮತ್ತು ಇಂಧನದ ಕೊರತೆಯಿಂದ ವೇಗವಾಗಿ ಚಲಿಸುವಂತೆಯೂ ಇರಲಿಲ್ಲ. ಸರ್ ಜಾನ್ ಟೋವಿಯ ಕಿಂಗ್ ಜಾರ್ಜ್ ೫ ಈಗ ಬಿಸ್ಮಾರ್ಕಿನಿಂದ 70 ಕಿ.ಮಿ ದೂರದಲ್ಲಿತ್ತು. ತನ್ನ ಈಗಿನ ವೇಗವಾದ 20 ಕಿ.ಮಿ ವೇಗದಲ್ಲಿ ಚಲಿಸಿದರೂ ಮರುದಿನ ಮುಂಜಾನೆಯ ಸಮಯದಲ್ಲಿ ಬಿಸ್ಮಾರ್ಕ್, ಲುಫ್ತ್-ವಾಫದ(ನಾಝಿ ವಾಯುಪಡೆ) ಪರಿಧಿಯೊಳಗೆ ಬಂದಾಗುತ್ತಿತ್ತು. ಹಾಗೆ ಆದರೆ ಸರ್ ಜಾನ್ ಟೋವಿ ಏನೂ ಮಾಡುವಂತಿರಲಿಲ್ಲ. ಆದ್ದರಿಂದ ಬಿಸ್ಮಾರ್ಕನ್ನು ಯುದ್ಧದಲ್ಲಿ ತೊಡಗಿಸಬೇಕಾದರೆ ಆಕೆಯ ವೇಗವನ್ನು ಬಹಳ ಕಡಿಮೆಗೊಳಿಸಬೇಕು ಮತ್ತು ಆ ಕಾರ್ಯ ಇಂದೇ 26ರಂದೇ ಆಗಬೇಕು. ಆ ಪರಿಯ ಹಾನಿ ವೈಮಾನಿಕ ಕ್ಷಿಪಣಿ ದಾಳಿಯಿಂದ ಮಾತ್ರ ಸಾಧ್ಯ. ಒಂದೇ ಆಶಾಕಿರಣವೆಂದರೆ ಜಿಬ್ರಾಲ್ಟರ್-ನಿಂದ ಧಾವಿಸಿ ಬರುತ್ತಿದ್ದ ’ಫೋರ್ಸ್-ಎಚ್’ನ ಏರ್-ಕ್ರಾಫ್ಟ್ ಕ್ಯಾರಿಯರ್ ’ಆರ್ಕ್ ರಾಯಲ್’. 24 ತಾಸುಗಳ ಮೊದಲು ಜಿಬ್ರಾಲ್ಟರಿನಿಂದ ಹೊರಟಿದ್ದ ಆರ್ಕ್ ರಾಯಲ್ ಈಗ ಅಟ್ಲಾಂಟಿಕ್ ಸಾಗರದಲ್ಲಿ ಪೋರ್ಚುಗಲ್ ಮತ್ತು ಸ್ಪೇನ್ ಕರಾವಳಿಗಳನ್ನು ದಾಟಿ ಫ್ರಾನ್ಸ್ ಕರಾವಳಿಗೆ ಸಮಾನಾಂತರವಾಗಿ ಸಾಗುತ್ತಿತ್ತು.

ಬಿಸ್ಮಾರ್ಕ್ ಪತ್ತೆಯಾದ ಸ್ವಲ್ಪ ಸಮಯದ ಬಳಿಕ ಸರ್ ಜಾನ್ ಟೋವಿ, ಬಿಸ್ಮಾರ್ಕ್ ಇರುವ ಸ್ಥಳದ ಮಾಹಿತಿಯೊಂದಿಗೆ ಒಂದು ಪ್ರಮುಖ ಸಂದೇಶವನ್ನು ’ಫೋರ್ಸ್-ಎಚ್’ನ ವೈಸ್ ಅಡ್ಮಿರಲ್ ಸರ್ ಜೇಮ್ಸ್ ಸೋಮರ್ವಿಲ್-ಗೆ ಕಳಿಸಿದರು: ’ಜೇಮ್ಸ್, ಪ್ರಿಪೇರ್ ಯುವರ್ ಏರ್ಕ್ರಾಫ್ಟ್ಸ್ ಫಾರ್ ಎನ್ ಇಮ್ಮಿಡಿಯಟ್ ಸ್ಟ್ರೈಕ್ ಆನ್ ಬಿಸ್ಮಾರ್ಕ್’. ಅತ್ತ ಆರ್ಕ್ ರಾಯಲ್-ನಲ್ಲಿ ದಾಳಿ ನಡೆಸಲು ಯುದ್ಧವಿಮಾನಗಳು ತಯಾರಿ ಆಗುತ್ತಿದ್ದಂತೆಯೇ, ಇತ್ತ ಜೇಮ್ಸ್ ಸೋಮರ್ವಿಲ್ ತನ್ನ ಸುಪರ್ದಿಯಲ್ಲಿದ್ದ ನೌಕೆಗಳ ಪೈಕಿ ವೇಗವಾಗಿ ಚಲಿಸುವ ಶೆಫೀಲ್ದ್ ಎಂಬ ಹಡಗನ್ನು ಬಿಸ್ಮಾರ್ಕನ್ನು ಸಮೀಪಿಸಿ ಅದರ ಬಗ್ಗೆ ಮಾಹಿತಿ ನೀಡುವಂತೆ ಆದೇಶಿಸಿದ್ದರು. ಈ ಸಂದೇಶವನ್ನು ರೇಡಿಯೋದ ಬದಲು ದೀಪ ಮಿಣುಕಿಸುವ ಮೂಲಕ ತಿಳಿಸಲಾಗಿದ್ದರಿಂದ ಶೆಫೀಲ್ಡ್ ವೇಗವಾಗಿ ಮುಂದೆ ಹೊರಟಿದ್ದನ್ನು ಆರ್ಕ್ ರಾಯಲ್ ಗಮನಿಸಿರಲಿಲ್ಲ.


ಮಧ್ಯಾಹ್ನ 2.30ಕ್ಕೆ ಸರಿಯಾಗಿ ಆರ್ಕ್ ರಾಯಲ್-ನಿಂದ 15 ವಿಮಾನಗಳು ಕ್ಷಿಪಣಿಗಳಿಂದ ಅಲಂಕೃತಗೊಂಡು ಗಗನಕ್ಕೆ ಹಾರಿದವು. ಎಲ್ಲಾ 15 ವಿಮಾನಗಳ ಪೈಲಟ್ ಮತ್ತು ಗನ್ನರ್-ಗಳಿಗೆ ನೀಡಿದ ಮಾಹಿತಿಯ ಪ್ರಕಾರ ಬಿಸ್ಮಾರ್ಕ್ ಸುಮಾರು 50-55 ಕಿ.ಮಿ. ದೂರದಲ್ಲಿದೆ ಮತ್ತು ಸಮೀಪದಲ್ಲಿ ಇನ್ಯಾವುದೇ ಹಡಗುಗಳಿಲ್ಲ ಎಂದು! ಮೋಡ ಕವಿದ ವಾತಾವರಣದಲ್ಲಿ ವೈರಿಯ ಹಡಗನ್ನು ಮಾತ್ರ ಕಂಡು ದಾಳಿ ಮಾಡುವ ಇರಾದೆಯಿಂದ ಹೊರಟ ಆರ್ಕ್ ರಾಯಲ್-ನ ವಿಮಾನಗಳಿಗೆ ಸುಮಾರು ದೂರ ಹಾರಿದ ಬಳಿಕ ಕಾಣಿಸಿದ್ದು ಮುಂದಕ್ಕೆ ತೆರಳಿದ್ದ ಶೆಫೀಲ್ಡ್! ಬಿಸ್ಮಾರ್ಕ್ ಸಿಕ್ಕೇಬಿಟ್ಟಿತು ಎಂದು ವಿಮಾನಗಳು ದಾಳಿ ಮಾಡಲು ಮುಂದಾದವು. ಈ ವಿಮಾನಗಳು ದಾಳಿ ಮಾಡಲು ತನ್ನೆಡೆ ’ಡೈವ್’ ಮಾಡುತ್ತಿರುವುದನ್ನು ಗಮನಿಸಿ ಭಯಭೀತನಾದ ಶೆಫೀಲ್ಡಿನ ಕ್ಯಾಪ್ಟನ್ ಖುದ್ದಾಗಿ ಸ್ಟೀರಿಂಗ್ ವೀಲ್-ಬಳಿ ನಿಂತು ಹಡಗನ್ನು ಅಂಕು ಡೊಂಕಾಗಿ ಚಲಿಸತೊಡಗಿದನು. ೧೨ ವಿಮಾನಗಳು ಕ್ಷಿಪಣಿಗಳನ್ನು ’ಡ್ರಾಪ್’ ಮಾಡಿದರೆ, ಕೊನೆಯ 3 ವಿಮಾನಗಳು ತಪ್ಪನ್ನರಿತು ಕ್ಷಿಪಣಿಗಳನ್ನು ಬೀಳಿಸಲಿಲ್ಲ. ಯಾವುದೇ ಕ್ಷಿಪಣಿ ಶೆಫೀಲ್ಡ್-ಗೆ ತಾಗಲಿಲ್ಲ ಎಂಬುದು ದೊಡ್ಡ ಅದೃಷ್ಟ.

ಮತ್ತೊಮ್ಮೆ ಆರ್ಕ್ ರಾಯಲ್-ನಲ್ಲಿ ಎಲ್ಲಾ 15 ವಿಮಾನಗಳನ್ನು ಹಾರಾಟಕ್ಕೆ ಸಜ್ಜುಗೊಳಿಸಲಾಯಿತು. ಮಳೆ ಬಿರುಸಾಗಿ ಬೀಳುತ್ತಿತ್ತು ಮತ್ತು ಗಾಳಿ ರಭಸವಾಗಿ ಬೀಸುತ್ತಿತ್ತು. ಎಲ್ಲೆಲ್ಲೂ ಮೋಡಗಳ ರಾಶಿ. ಆದರೆ ಈಗ ದಾಳಿ ಮಾಡದೆ ಬೇರೆ ದಾರಿಯಿರಲಿಲ್ಲ. ಸಂಜೆ 7ಕ್ಕೆ ಸರಿಯಾಗಿ ಮತ್ತೊಮ್ಮೆ 15 ವಿಮಾನಗಳು ಕ್ಷಿಪಣಿಗಳೊಂದಿಗೆ ಬಿಸ್ಮಾರ್ಕಿನೆಡೆ ಹಾರಿದವು. 40 ನಿಮಿಷಗಳ ಬಳಿಕ ದಾರಿಯಲ್ಲಿ ಶೆಫೀಲ್ಡ್ ಕಾಣಸಿಕ್ಕಿತು. ಶೆಫೀಲ್ಡ್-ನ್ನು ಕಂಡು ಸ್ವಲ್ಪ ಕೆಳಮಟ್ಟಕ್ಕೆ ಬಂದ ವಿಮಾನಗಳಿಗೆ ಶೆಫೀಲ್ಡ್-ನ ಕ್ಯಾಪ್ಟನ್, ’ಎನಿಮಿ- 16 ಕಿ.ಮಿ. ಡೆಡ್ ಅಹೆಡ್’ ಎಂಬ ಸಂದೇಶ ನೀಡಿದ ಬಳಿಕ, 15 ವಿಮಾನಗಳೂ ಮತ್ತೆ ಮೇಲಕ್ಕೇರಿ ಮೋಡಗಳ ನಡುವೆ ಮರೆಯಾದವು.


ಸ್ವಲ್ಪ ಸಮಯದ ಬಳಿಕ ಕದನದ ಸದ್ದುಗಳು ಶೆಫೀಲ್ಡ್-ಗೆ ಕೇಳಲಾರಂಭಿಸಿದವು. ಬಿಸ್ಮಾರ್ಕಿನಿಂದ ಹೊರಬರುತ್ತಿದ್ದ ಗುಂಡಿನ ದಾಳಿ ಮತ್ತು ವಿಮಾನಗಳು ನಡೆಸುತ್ತಿದ್ದ ಕ್ಷಿಪಣಿ ದಾಳಿ. ನಂತರ ಎಲ್ಲವೂ ಶಾಂತ. ಸ್ವಲ್ಪ ಹೊತ್ತಿನ ಬಳಿಕ ವಿಮಾನಗಳು ಶೆಫೀಲ್ಡನ್ನು ದಾಟಿ ಆರ್ಕ್ ರಾಯಲಿನೆಡೆ ಹಿಂದಿರುಗತೊಡಗಿದವು. 3ನೇ ವಿಮಾನ ಶೆಫೀಲ್ಡಿನ ಸಮಾನಾಂತರಕ್ಕೆ ಬಂದು ಬಹಳ ಸಮೀಪದಿಂದ ಮತ್ತು ಕೆಳಮಟ್ಟದಲ್ಲಿ ಹಾರತೊಡಗಿತು. ಈ ವಿಮಾನದ ಪೈಲಟ್ ಮತ್ತು ಗನ್ನರ್ ನಗುವಿನೊಂದಿಗೆ ’ಥಂಬ್ಸ್ ಅಪ್’ ಚಿಹ್ನೆಯನ್ನು ತೋರಿಸುತ್ತಾ ಆರ್ಕ್ ರಾಯಲ್-ನೆಡೆ ಮುಂದುವರಿದರು. ಶೆಫೀಲ್ಡಿನ ಮೇಲೆ ನಿಂತಿದ್ದ ಎಲ್ಲಾ ನಾವಿಕರು ತಮ್ಮ ತಮ್ಮ ಟೊಪ್ಪಿಗಳನ್ನು ತೆಗೆದು ಗೌರವ ಸೂಚಿಸಿದರು. 15 ವಿಮಾನಗಳ ಪೈಕಿ 14 ಹಿಂತಿರುಗಿದವು. ಆದರೆ ಕೇವಲ 2 ಕ್ಷಿಪಣಿಗಳು ಮಾತ್ರ ಬಿಸ್ಮಾರ್ಕಿಗೆ ತಗುಲಿದ್ದವು. ಆದರೆ ಮಾಡಬೇಕಾದ ಹಾನಿಯನ್ನು ಒಂದೇ ಕ್ಷಿಪಣಿ ಮಾಡಿತ್ತು.

ಈ ಒಂದು ಕ್ಷಿಪಣಿ ಬಿಸ್ಮಾರ್ಕಿನ ಸ್ಟೀರಿಂಗ್-ನ್ನು ಸಂಪೂರ್ಣವಾಗಿ ನಾಶಮಾಡಿತು. ಕ್ಷಿಪಣಿ ದಾಳಿಯಿಂದ ಆದ ಹಾನಿಯನ್ನು ಕಂಡು ವಿವರ ಕಲೆ ಹಾಕಲು ತೆರಳಿದ್ದ ವಿಮಾನ ಆರ್ಕ್ ರಾಯಲ್-ಗೆ ಹಿಂತಿರುಗಿದ ಬಳಿಕವೇ ಬಿಸ್ಮಾರ್ಕಿನ ಸ್ಟೀರಿಂಗ್ ಜಾಮ್ ಆಗಿರುವ ವಿಷಯ ತಿಳಿದದ್ದು. ಈ ವಿಮಾನದ ಪೈಲಟ್ ಪ್ರಕಾರ, ಕ್ಷಿಪಣಿ ದಾಳಿಯ ಬಳಿಕ ಬಿಸ್ಮಾರ್ಕ್ ಎರಡು ದೊಡ್ಡ ವೃತ್ತಾಕಾರದ ಸುತ್ತುಗಳನ್ನು ಹಾಕಿ ಉತ್ತರ ದಿಕ್ಕಿಗೆ (ಅಂದರೆ ಸರ್ ಜಾನ್ ಟೋವಿಯ ಹಡಗುಗಳು ಬರುವ ದಿಕ್ಕಿನೆಡೆ) ಮುಖ ಮಾಡಿ ಸ್ತಬ್ಧವಾಗಿ ನಿಂತುಬಿಟ್ಟಿತ್ತು. ಈಗ ಕೇವಲ ವೃತ್ತಾಕಾರದಲ್ಲಿ ಮಾತ್ರ ಬಿಸ್ಮಾರ್ಕ್ ಚಲಿಸಬಲ್ಲದಾಗಿತ್ತು. ರಾಯಲ್ ನೇವಿಯಿಂದ ಸತತವಾಗಿ ಪೀಡನೆ ಮತ್ತು ದಾಳಿಗೊಳಗಾದ ಬಿಸ್ಮಾರ್ಕ್ ಈಗ ಅಸಹಾಯಕ ಸ್ಥಿತಿಯಲ್ಲಿ ನಿಂತಿತ್ತು.

ಮೇ ೨೭: ಮುಂಜಾನೆ 08.15ರ ಸಮಯ. ನೊರ್ಫೊಕ್ ಬಿಸ್ಮಾರ್ಕನ್ನು 12 ಕಿ.ಮಿ ಮುಂದೆ ಕಂಡು ಸರ್ ಜಾನ್ ಟೋವಿಗೆ ಮಾಹಿತಿ ರವಾನಿಸಿತು. ಬಿಸ್ಮಾರ್ಕ್ ಚಲಿಸುತ್ತಿರಲಿಲ್ಲ ಆದರೆ ಆಕೆಯ ಶಕ್ತಿಶಾಲಿ ಬಂದೂಕುಗಳು ಇನ್ನೂ ಜೀವಂತವಾಗಿದ್ದವು ಮತ್ತು ಇವು ಅಪಾರ ಹಾನಿಯನ್ನು ಉಂಟುಮಾಡುವ ಸಾಮರ್ಥ್ಯವುಳ್ಳ ಬಂದೂಕುಗಳಾಗಿದ್ದವು. ಇದರ ಅರಿವಿದ್ದ ಸರ್ ಜಾನ್ ಟೋವಿ ತನ್ನ 2 ಬಲಿಷ್ಠ ಯುದ್ಧನೌಕೆಗಳನ್ನು - ಕಿಂಗ್ ಜಾರ್ಜ್ 5 ಮತ್ತು ರಾಡ್ನಿ- ಬಿಸ್ಮಾರ್ಕಿನ ಮೇಲೆ ದಾಳಿ ಮಾಡಲು ಆಯ್ಕೆ ಮಾಡಿದರು.


08.47ಕ್ಕೆ ರಾಡ್ನಿಯ 16 ಇಂಚು ಬಂದೂಕುಗಳು ಬಿಸ್ಮಾರ್ಕಿನೆಡೆ ದಾಳಿ ಮಾಡಲು ಆರಂಭಿಸಿದವು. ಕೂಡಲೇ ಕಿಂಗ್ ಜಾರ್ಜ್ 5 ದಾಳಿಯನ್ನಾರಂಭಿಸಿತು. 2 ನಿಮಿಷ ಸುಮ್ಮನಿದ್ದ ಬಿಸ್ಮಾರ್ಕ್ ನಂತರ ದಾಳಿಗೆ ಪ್ರತ್ಯುತ್ತರ ನೀಡಲಾರಾಂಭಿಸಿತು. ಆಕೆಯ 3ನೇ ಗುಂಡೇ ರಾಡ್ನಿಯನ್ನು ಸವರಿಕೊಂಡು ಹೋಯಿತು. ಇಷ್ಟು ಬೇಗನೇ ಅಷ್ಟು ಕರಾರುವಕ್ಕಾದ ದಾಳಿಯನ್ನು ಆಗಿನ ಕಾಲದಲ್ಲಿ ಬೇರೆ ಯಾವ ಯುದ್ಧನೌಕೆಗೂ ಮಾಡಲು ಸಾಧ್ಯವಿರಲಿಲ್ಲ. ತನ್ನ ಹಡಗನ್ನು ಸವರಿಕೊಂಡು ಹೋದ ಗುಂಡಿನ ಮಹತ್ವವನ್ನರಿದ ರಾಡ್ನಿಯ ಕ್ಯಾಪ್ಟನ್ ಡಾಲ್ರಿಂಪಲ್ ಹ್ಯಾಮಿಲ್ಟನ್, ಕೂಡಲೇ ರಾಡ್ನಿಯ ಕೋನವನ್ನು ಬದಲಾಯಿಸಿ ಹೆಚ್ಚು ಬಂದೂಕುಗಳೊಂದಿಗೆ ದಾಳಿ ಮಾಡಲು ಅನುವಾಗುವಂತೆ ನೋಡಿಕೊಂಡು ದಾಳಿಯ ತೀವ್ರತೆಯನ್ನು ಹೆಚ್ಚಿಸಿದರು. 08.54ಕ್ಕೆ ನೊರ್ಫೋಕ್ ತನ್ನ 8 ಇಂಚಿನ ಬಂದೂಕುಗಳೊಂದಿಗೆ ಸ್ವಲ್ಪ ದೂರದಿಂದಲೇ ದಾಳಿಯನ್ನಾರಂಭಿಸಿತು. ಅದಾಗಲೇ ಬಿಸ್ಮಾರ್ಕಿನ ಇನ್ನಷ್ಟು ಸಮೀಪಕ್ಕೆ ಬಂದಿದ್ದ ಕಿಂಗ್ ಜಾರ್ಜ್ 5 ಮತ್ತು ರಾಡ್ನಿ ತಮ್ಮ ರಿಸರ್ವ್ ಬಂದೂಕುಗಳಿಂದಲೂ ದಾಳಿ ಮಾಡಲಾರಂಭಿಸಿದವು. 09.04ಕ್ಕೆ ಜಿಬ್ರಾಲ್ಟರಿನಿಂದ ಬಂದಿದ್ದ ’ಫೋರ್ಸ್-ಎಚ್’ನ ಹಡಗು ಡೊರ್ಸೆಟ್-ಷಯರ್ ಕೂಡಾ ಬಿಸ್ಮಾರ್ಕಿನ ಮೆಲೆ ದಾಳಿಯನ್ನಾರಂಭಿಸಿತು.

10.00 ಗಂಟೆಯ ಹೊತ್ತಿಗೆ ಬಿಸ್ಮಾರ್ಕ್ ಒಂದು ಮೌನ ಅವಶೇಷದಂತೆ ಉರಿಯುತ್ತಾ, ಹೊಗೆ ಉಗುಳುತ್ತಾ ನಿಂತಿತ್ತು. ಆಕೆಯ ಕೊಳವೆಗಳು ಕಣ್ಮರೆಯಾಗಿದ್ದವು. ಬಂದೂಕುಗಳು ಎಲ್ಲಾ ದಿಕ್ಕಿಗೆ ಮುಖ ಮಾಡಿ ಮೌನವಾಗಿ ನಿಂತಿದ್ದವು. ಬಿಸ್ಮಾರ್ಕಿನ ಮಧ್ಯಭಾಗದಿಂದ ಕಪ್ಪು ಮೋಡದಂತೆ ಹೊಗೆ ಮೇಲೇಳುತ್ತಿತ್ತು. ಒಳಗಡೆಯಿಂದ ಬಿಸ್ಮಾರ್ಕ್ ಹೊತ್ತಿ ಉರಿಯುವ ಬೆಂಕಿಯ ಉಂಡೆಯಾಗಿತ್ತು. ಒಳಗಡೆ ಉರಿಯುತ್ತಿರುವ ಈ ಬೆಂಕಿಯ ಪ್ರಖರ ಜ್ವಾಲೆ ಬಿಸ್ಮಾರ್ಕಿನ ಬದಿಯಲ್ಲಿ ಗುಂಡಿನ ದಾಳಿಯಿಂದ ಉಂಟಾದ ರಂಧ್ರಗಳ ಮೂಲಕ ಸ್ಪಷ್ಟವಾಗಿ ಕಾಣುತ್ತಿತ್ತು. ಆಕೆಯ ನಾವಿಕರು ತಮ್ಮ ತಮ್ಮ ಸ್ಥಾನಗಳನ್ನು ಬಿಟ್ಟು ಆಚೀಚೆ ಓಡಾಡುತ್ತಾ ಹಾರಿ ಬರುತ್ತಿದ್ದ ಗುಂಡುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಸಮುದ್ರಕ್ಕೆ ಹಾರುತ್ತಿದ್ದರು. ಇಷ್ಟೆಲ್ಲಾ ಹಾನಿಗೊಳಗಾದರೂ ಬಿಸ್ಮಾರ್ಕಿನ ಧ್ವಜ ಇನ್ನೂ ಹಾರಾಡುತ್ತಿತ್ತು. ಫ್ಲೀಟ್ ಕಮಾಂಡರ್ ಗೂಂತರ್ ಲೂಯನ್ಸ್ ಅದಾಗಲೇ ರಾಡ್ನಿಯ ಬಂದೂಕಿನ ದಾಳಿಗೆ ಬಲಿಯಾಗಿದ್ದರು. ವೈರಿಗಳಿಂದ ಸುತ್ತುವರಿದು, ಯಾವ ಶಕ್ತಿಯೂ ಇಲ್ಲದೆ ನಿಸ್ತೇಜವಾಗಿ ನಿಂತರೂ ಬಿಸ್ಮಾರ್ಕ್ ಇನ್ನೂ ಶರಣಾಗಿರಲಿಲ್ಲ.


ಆದರೆ ರಾಯಲ್ ನೇವಿ ಬಿಸ್ಮಾರ್ಕನ್ನು ಮುಳುಗಿಸಲೇಬೇಕೆಂಬ ಹಟದಲ್ಲಿತ್ತು ಮತ್ತು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ. ಅದಾಗಲೇ ಕಾಡುತ್ತಿದ್ದ ಇಂಧನ ಕೊರತೆಯ ಮತ್ತು ಅಷ್ಟು ಹೊತ್ತಿಗಾಗಲೇ ಅಲ್ಲಿಗಾಗಮಿಸಬೇಕಾಗಿದ್ದ ಜರ್ಮನಿಯ ಯು-ಬೋಟ್-ಗಳು(ಸಬ್-ಮರೀನ್). ಸರ್ ಜಾನ್ ಟೋವಿ, ಇನ್ನಷ್ಟು ಸಮೀಪಕ್ಕೆ ತೆರಳಿ ದಾಳಿ ಮಾಡುವಂತೆ ಸೂಚಿಸಿದರು. ಆದರೆ ಈಗ ಒಂದು ಮಾತಂತೂ ನಿಶ್ಚಯ. ಈ ಸ್ಥಿತಿಯಲ್ಲಿ ಬಿಸ್ಮಾರ್ಕ್ ಯಾವುದೇ ಬಂದರಿಗೆ ಹೋಗಲು ಸಾಧ್ಯವಿರಲಿಲ್ಲ. 10.15ಕ್ಕೆ ಸರ್ ಜಾನ್ ಟೋವಿ ರಾಡ್ನಿಗೆ ದಾಳಿಯನ್ನು ನಿಲ್ಲಿಸಿ ಹಿಂದಿರುಗಲು ಸೂಚಿಸಿದರು.

ಹಿಂತಿರುಗಲು ಸಜ್ಜಾಗುವಂತೆ, ಡಾರ್ಸೆಟ್-ಷಯರ್ 2 ಕ್ಷಿಪಣಿಗಳನ್ನು ಬಿಸ್ಮಾರ್ಕಿನ ಬಲಭಾಗದೆಡೆ ಹಾರಿಸಿತು. ನಂತರ ಬಿಸ್ಮಾರ್ಕಿನ ಎಡಭಾಗಕ್ಕೆ ಬಂದು ಇನ್ನೊಂದು ಕ್ಷಿಪಣಿಯನ್ನು ಹಾರಿಸಿತು. ಈ ಕ್ಷಿಪಣಿಯ ಹೊಡೆತ ಬಿಸ್ಮಾರ್ಕಿಗೆ ಮುಕ್ತಿಯನ್ನು ನೀಡಿತು. ಬಿಸ್ಮಾರ್ಕಿನ ಕ್ಯಾಪ್ಟನ್ ಅರ್ನ್ಸ್ಟ್ ಲಿಂಡ್ಮನ್, ಹಡಗು ಎಡಕ್ಕೆ ವಾಲುತ್ತಿದ್ದಂತೆಯೇ ಏನೋ ಕಸರತ್ತು ಮಾಡಿ ಹಡಗಿನ ಬಲ ಭಾಗದ ಮೇಲೇರಿ ಸಲ್ಯೂಟ್ ಮಾಡುತ್ತಾ ತಟಸ್ಥವಾಗಿ ನಿಂತುಬಿಟ್ಟರು. ಈಗ ಬಿಸ್ಮಾರ್ಕ್ 90 ಡಿಗ್ರಿ ವಾಲಿ ಸಂಪೂರ್ಣವಾಗಿ ತನ್ನ ಎಡಪಾರ್ಶ್ವದ ಮೇಲೆ ನಿಂತಿತ್ತು. ಬಳಿಕ ಎಲ್ಲರೂ ನೋಡುತ್ತಿರುವಂತೆಯೇ ಬಿಸ್ಮಾರ್ಕ್ ಮತ್ತು ಲಿಂಡ್ಮನ್ ನಿಧಾನವಾಗಿ ಅಲೆಗಳ ಕೆಳಗೆ ಕಣ್ಮರೆಯಾದರು. 2000ಕ್ಕೂ ಅಧಿಕ ನಾವಿಕರು ಬಿಸ್ಮಾರ್ಕಿನೊಂದಿಗೆ ಸಾಗರದ ತಳ ಸೇರಿದರು. ಸಮಯ ಮುಂಜಾನೆ 10.39.


ನೀರಿಗೆ ಹಾರಿದ ಬಿಸ್ಮಾರ್ಕಿನ ನಾವಿಕರಲ್ಲಿ 110 ಮಂದಿಯನ್ನು ಡಾರ್ಸೆಟ್-ಷಯರ್ ಮತ್ತು ಮಾವೋರಿ ಎಂಬ ಹಡಗು ಮೇಲೆಳೆದುಕೊಂಡವು. ಆದರೆ ಆಗ ಬಂದ ಯು-ಬೋಟ್-ನ ಎಚ್ಚರಿಕೆ ಈ ಎರಡು ಹಡಗುಗಳನ್ನು ಉಳಿದ 300 ನಾವಿಕರನ್ನು ನೀರಲ್ಲೇ ಬಿಟ್ಟು ಹೋಗುವಂತೆ ಮಾಡಿತು.

ಅದೇ ಸಮಯಕ್ಕೆ ಅಲ್ಲಿ ಇಂಗ್ಲಂಡಿನಲ್ಲಿ ವಿನಸ್ಟನ್ ಚರ್ಚಿಲ್ ಹೌಸ್ ಆಫ್ ಕಾಮನ್ಸ್-ನಲ್ಲಿ ದಿ ಹುಡ್ ಗೆ ಆದ ಸೋಲಿಗೆ ಸೇಡು ತೀರಿಸಲಾಗಿದೆ ಎಂದು ಘೋಷಿಸಿದರು. ಎಲ್ಲಾ ಸದಸ್ಯರು ಕರತಾಡನದೊಂದಿಗೆ ಮೇಜನ್ನು ಕುಟ್ಟಿ ಹರ್ಷೋದ್ಗಾರವನ್ನು ಮಾಡಿದರು. ಬಿಸ್ಮಾರ್ಕನ್ನು ಶೋಧ ಮಾಡಿ ಅದನ್ನು ಮುಳುಗಿಸಿದ್ದು ಜಗತ್ತಿನ ಸಮುದ್ರ ಸಮರಗಳ ಉನ್ನತ ಕಾದಾಟಗಳಲ್ಲೊಂದು. ಅಷ್ಟು ವಿಶಾಲ ಸ್ಥಳದಲ್ಲಿ ಅಷ್ಟೊಂದು ಹಡಗುಗಳನ್ನು ಒಂದೇ ಹಡಗಿನೆಡೆ ದಾಳಿ ಮಾಡಲು ಆಯೋಜಿಸಿ ಅದನ್ನು ಸಾಧಿಸಿದ್ದು ಈ ಅಪೂರ್ವ ಚೇಸ್-ನ ವೈಶಿಷ್ಟ್ಯ.

ಜೂನ್ 8 , 1989ರಂದು ಡಾ.ರಾಬರ್ಟ್ ಬಲ್ಲಾರ್ಡ್, 48 ವರ್ಷಗಳಿಂದ 15700 ಅಡಿ ಸಾಗರದ ತಳದಲ್ಲಿ ಮಲಗಿದ್ದ ಬಿಸ್ಮಾರ್ಕಿನ ಅವಶೇಷಗಳನ್ನು ಪತ್ತೆ ಮಾಡಿದರು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ಪಡೆಯಬಹುದು. ಆವಶೇಷಗಳ ಎಲ್ಲಾ ಚಿತ್ರಗಳನ್ನು ಇಲ್ಲಿ ಕಾಣಬಹುದು.

ಬಿಸ್ಮಾರ್ಕ್ ಪೋಲಂಡನಿಂದ ಹೊರಟು ನಾರ್ವೇಯ ಬರ್ಗನ್ ಬಂದರಿನಲ್ಲಿ ತಂಗಿ ನಂತರ ಮುಂದೆ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಡೆಯಾಗುವ ತನಕದ ಸಂಪೂರ್ಣ ವಿವರಗಳನ್ನು ಇಲ್ಲಿ ಪಡೆಯಬಹುದು. ಬಿಸ್ಮಾರ್ಕ್ ಬಗ್ಗೆ ಇರುವ ಅಂತರ್ಜಾಲ ತಾಣದಲ್ಲಿ ಬೇಕಾದಷ್ಟು ಮಾಹಿತಿಗಳಿವೆ.

ಬುಧವಾರ, ಅಕ್ಟೋಬರ್ 01, 2008

ಮಲೆನಾಡಿನ ಜಲಧಾರೆ


ದಿನಾಂಕ: ಅಗೋಸ್ಟ್ ೨೦, ೨೦೦೮.

ಕೆಲಸದ ನಿಮಿತ್ತ ಮಲೆನಾಡಿಗೆ ಹೋಗಬೇಕಿತ್ತು. ಕೆಲಸವೇನೋ ಅರ್ಧ ದಿನದ್ದು. ಉಳಿದರ್ಧ ದಿನ ಎಲ್ಲಾದರೂ ಸಣ್ಣ ಮಟ್ಟದ ಚಾರಣ ಅಥವಾ ಪ್ರಯಾಣ ಮಾಡಿ ಬರೋಣವೆಂದು ಲೇಖನಗಳ ಸಂಗ್ರಹವನ್ನು ಜಾಲಾಡಿದಾಗ ಕಣ್ಣಿಗೆ ಬಿದ್ದದ್ದು ಈ ಜಲಧಾರೆ. ಜಲಧಾರೆಗೆ ಭೇಟಿ ನಾನು ಮೊದಲೇ ನಿಗದಿ ಮಾಡಿದ್ದರಿಂದ ಉಡುಪಿಯಿಂದ ಗೆಳೆಯ ಮಾಧವರನ್ನು ಕರೆದುಕೊಂಡೇ ಹೋಗಿದ್ದೆ.


ಹಳ್ಳಿ ತಲುಪಿ ಜಲಧಾರೆಗೆ ಕೇವಲ ಇಪ್ಪತ್ತು ನಿಮಿಷದ ನಡಿಗೆ. ಎಲ್ಲೋ ಕಾಡಿನೊಳಗಿನಿಂದ ಹರಿದು ಬರುತ್ತಿದ್ದ ಹಳ್ಳ ಮೈದುಂಬಿ ಹರಿಯುತ್ತಿತ್ತು. ನೀರಿನ ಹರಿವು ತುಂಬಾ ಇದ್ದಿದ್ದರಿಂದ ಜಲಧಾರೆಯ ಎತ್ತರ ಕಡಿಮೆ ಆದಂತೆ ತೋರುತ್ತಿತ್ತು. ನೀರು ಹರಿಯುವಲ್ಲೇ ಬದಿಯಲ್ಲಿ ಕಲ್ಲಿನ ಮೇಲ್ಮೈ ಮೇಲೆ ಸಾವಕಾಶವಾಗಿ ಎಚ್ಚರಿಕೆಯಿಂದ ಇಳಿದರೆ ಕೆಳಗೆ ತಲುಪಬಹುದು.


ಮಳೆಯೂ ಆಗಾಗ ಬಿರುಸಾಗಿ ಬೀಳುತ್ತಿತ್ತು. ಎರಡು ಹಂತಗಳ ಈ ಜಲಧಾರೆ ಸುಮಾರು ೩೫ ಅಡಿ ಎತ್ತರವಿರಬಹುದು. ಬಹಳ ಮೌನ ವಾತಾವರಣವಿತ್ತು. ಮಳೆಯ ಸದ್ದು ಮತ್ತು ರಭಸದಿಂದ ಹರಿಯುವ ನದಿಯ ಭೋರ್ಗರೆತ ಮಾತ್ರ.


ಮಾಧವರಿಗೆ ನೀರು ಕೆಸರಿನಿಂದ ಕೆಂಪಾಗಿ ಹರಿಯುತ್ತಿದ್ದನ್ನು ಕಂಡು ನಿರಾಸೆ. ಆದರೆ ಜಲಧಾರೆ ಕೆಂಪಗೆ ಕಾಣಿಸಿದಾಗಲೇ ಅದೊಂದು ರೀತಿಯ ಚಂದ. ಮಳೆಯ ನಡುವೆ ಕೊಡೆಯ ಆಸರೆಯಲ್ಲಿ ನಿಂತು ಜಲಧಾರೆಯ ಅಂದವನ್ನು ಆ ಮೌನ ಕಣಿವೆಯಲ್ಲಿ ಸುಮಾರು ಹೊತ್ತು ಆನಂದಿಸಿ ನಂತರ ವಾಹನ ನಿಂತಲ್ಲಿಗೆ ಹಿಂತಿರುಗಿದೆವು.