ಮಂಗಳವಾರ, ಆಗಸ್ಟ್ 19, 2008

ಕಾಳಿ ಕೊಳ್ಳದ ಕಥೆ/ವ್ಯಥೆ - ೪

ಕೊಡಸಳ್ಳಿ ಅಣೆಕಟ್ಟು: ೪೯ ಮೀಟರ್ ಎತ್ತರ, ೫೦೨ ಮೀಟರ್ ಉದ್ದ ಮತ್ತು ೧೦೪೩ ಚ.ಕಿ.ಮಿ ಜಲಾನಯನ ಪ್ರದೇಶ.

ಕದ್ರಾ ಅಣೆಕಟ್ಟು: ೪೦ ಮೀಟರ್ ಎತ್ತರ, ೨೩೧೦ ಮೀಟರ್ ಉದ್ದ ಮತ್ತು ೪೩೩ ಚ.ಕಿ.ಮಿ ಜಲಾನಯನ ಪ್ರದೇಶ.

ಕೊಡಸಳ್ಳಿಯಲ್ಲಿ ೧೨೦ ಮೆಗಾವ್ಯಾಟ್ ಮತ್ತು ಕದ್ರಾದಲ್ಲಿ ೧೫೦ ಮೆಗಾವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಲಾಗುತ್ತಿದೆ. ಕಾಳಿ ೨ನೇ ಹಂತದಲ್ಲಿ ಒಟ್ಟು ೨೭೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ. ಈ ಎರಡೂ ಅಣೆಕಟ್ಟುಗಳನ್ನು ಮತ್ತು ೬ ವಿದ್ಯುತ್ ಘಟಕಗಳನ್ನು ೧೯೯೯ರೊಳಗೆ ಹಂತ ಹಂತವಾಗಿ ಪೂರ್ಣಗೊಳಿಸಿ ಕಾರ್ಯಾಚರಣೆ ಆರಂಭಿಸಲಾಯಿತು.

ಕೊಡಸಳ್ಳಿ ಮತ್ತು ಕದ್ರಾ ಅಣೆಕಟ್ಟುಗಳ ನಿರ್ಮಾಣದಲ್ಲಿ ಮುಳುಗಡೆಯಾದ ಪ್ರದೇಶ ಇನ್ನುಳಿದ ೪ ಆಣೆಕಟ್ಟುಗಳಿಗೆ ಹೋಲಿಸಿದರೆ ಕಡಿಮೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿದ್ದ ಏಕೈಕ ’ಆನೆಗಳ ದಾರಿ(ಎಲಿಫೆಂಟ್ ಕಾರಿಡಾರ್)’ ಈ ಅಣೆಕಟ್ಟುಗಳ ನಿರ್ಮಾಣದಿಂದ ಕಣ್ಮರೆಯಾಯಿತು. ೧೯೯೮ರವರೆಗೂ ಯಲ್ಲಾಪುರ-ಅಂಕೋಲ ರಸ್ತೆಯಲ್ಲಿರುವ ಅರೆಬೈಲ್ ಘಟ್ಟದಲ್ಲಿ ಆನೆಗಳು ರಸ್ತೆಯನ್ನು ದಾಟುತ್ತಿದ್ದವು. ದಾಂಡೇಲಿ ಅಭಯಾರಣ್ಯದಿಂದ ಬೇಡ್ತಿ ಕಣಿವೆಗೆ ಇದ್ದ ಆನೆದಾರಿ ಇದಾಗಿತ್ತು. ಈ ೨ ಅಣೆಕಟ್ಟುಗಳು ಮತ್ತು ಕೈಗಾ ಅಣುಸ್ಥಾವರದ ನಿರ್ಮಾಣದ ಸಮಯದಲ್ಲುಂಟಾದ ಕಾಡಿನ ನಾಶ ಈ ಆನೆದಾರಿಯನ್ನು ಶಾಶ್ವತವಾಗಿ ಮರೆಮಾಡಿದೆ. ಬೇಡ್ತಿ ಕಣಿವೆಗೆ ಆನೆಗಳ ಭೇಟಿ ಇಲ್ಲದೇ ಹತ್ತು ವರ್ಷಗಳಾಗುತ್ತಾ ಬಂದವು. ಕಾಡೇ ಇಲ್ಲದೆಡೆ ಎಲ್ಲಿಯ ಆನೆ? ಯಲ್ಲಾಪುರ ವಿಭಾಗದಲ್ಲಿ ಕಳೆದ ದಶಕದಲ್ಲಿ ಯೋಜನೆಗಳಿಗೆ ಸಂಬಂಧಿಸಿದಂತೆ ಮತ್ತು ಮಾನವನ ಆಸೆಗೆ ಬಲಿಯಾದ ಕಾಡು ಅಪಾರ.

ಬೇಡ್ತಿ ಕಣಿವೆಗೆ ಇದ್ದ ದಾರಿ ಮರೆಯಾದ ಬಳಿಕ ಗೊಂದಲಕ್ಕೊಳಗಾದ ದಾಂಡೇಲಿಯ ಆನೆಗಳು ಆಹಾರವನ್ನು ಹುಡುಕಿ ಗೋವಾದ ಭಗವಾನ್ ಮಹಾವೀರ್ ಮತ್ತು ಮೊಲ್ಲೆಮ್ ಅಭಯಾರಣ್ಯಗಳೆಡೆಗೆ ಹಾಗೂ ಮಹಾರಾಷ್ಟ್ರದ ಚಾಂದಘಡದಲ್ಲಿರುವ ದಟ್ಟಾರಣ್ಯಗಳಿಗೆ ತೆರಳುತ್ತಿವೆ. ಅಲ್ಲಿ ಗೋವಾ ಮತ್ತು ಮಹಾರಾಷ್ಟ್ರದ ಜನರಿಗೆ ಆನೆಗಳ ಭೇಟಿ ಹೊಸತು. ಈ ಆನೆಗಳನ್ನು ನೋಡಲು ಅವರು ಮುಗಿಬೀಳುತ್ತಿದ್ದಾರೆ. ಒಂದೆಡೆ ಜನರನ್ನು ಮತ್ತು ಇನ್ನೊಂದೆಡೆ ಆನೆಗಳನ್ನು ಎರಡನ್ನೂ ನಿಯಂತ್ರಿಸಲು ಆಗದೆ ಆ ೨ ರಾಜ್ಯಗಳ ಸರಕಾರಗಳು ಕರ್ನಾಟಕ ಸರಕಾರದ ಎರ್ರಾಬಿರ್ರಿ ಯೋಜನೆಗಳೇ ಇದಕ್ಕೆಲ್ಲಾ ಕಾರಣ ಎಂದು ದೂರುತ್ತಿವೆ. ಗೋವಾ ಮತ್ತು ಮಹಾರಾಷ್ಟ್ರ ಅರಣ್ಯ ಇಲಾಖೆಗಳ ಸಿಬ್ಬಂದಿಗಳಿಗೆ ಅನೆಗಳನ್ನು ನಿಯಂತ್ರಿಸುವ ಮತ್ತು ಸಂಭಾಳಿಸುವ ಅನುಭವ/ಪರಿಣಿತಿ ಇಲ್ಲ. ಆ ದಾರಿತಪ್ಪಿದ ಆನೆಗಳನ್ನು ಮರಳಿ ಕರ್ನಾಟಕದ ಕಾಡಿನೊಳಗೆ ಓಡಿಸಲು ಕರ್ನಾಟಕ ಅರಣ್ಯ ಇಲಾಖೆಯ ಸಿಬ್ಬಂದಿಗಳೇ ತೆರಳಬೇಕು!

ಈಗ ಈ ಆನೆಗಳಿಗೆ ಕಾಡಿನ ಸೊಪ್ಪಿಗಿಂತ ನಾಡಿನ ಕಬ್ಬಿನ ರುಚಿ ಹತ್ತಿದೆ. ೨೦೦೮ರ ಆರಂಭದಲ್ಲಿ ಆನೆಗಳ ಹಿಂಡು ದಾಂಡೇಲಿ ಕಾಡಿನಿಂದ ಹೊರಬಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಎಂಬಲ್ಲಿಯ ಕಬ್ಬಿನ ಗದ್ದೆಗಳಿಗೆ ದಾಳಿ ಮಾಡಿ ದಾಂದಲೆ ನಡೆಸಿದ್ದವು ಎಂದರೆ ವಿಸ್ಮಯವಾಗದೇ ಇರಲಾರದು. ಎಲ್ಲಿಯ ದಾಂಡೇಲಿ ಮತ್ತು ಎಲ್ಲಿಯ ಹಾನಗಲ್! ಕಾಡು ಎಂಬುದು ದಾಂಡೇಲಿ ಸಮೀಪದ ಭಗವತಿಯಲ್ಲೇ ಕೊನೆ. ಆದರೆ ಈ ಆನೆಗಳು ಕಲಘಟಗಿ, ಮುಂಡಗೋಡ ದಾಟಿ ಅಕ್ಕಿಆಲೂರು ತಲುಪಿ ರೈತನೊಬ್ಬನನ್ನು ತುಳಿದು ಆತನ ಮರಣಕ್ಕೆ ಕಾರಣರಾದರೆಂದರೆ ಮುಂದಿನ ದಿನಗಳಲ್ಲಿ ಇವುಗಳನ್ನು ನಿಯಂತ್ರಿಸುವವರಾರು? ಸರಿಯಾದ ರೂಪುರೇಷೆ ಇಲ್ಲದ ಯೋಜನೆಗಳು ಎಷ್ಟೆಲ್ಲಾ ರೀತಿಯಲ್ಲಿ ಅನಾಹುತಗಳಿಗೆ ಕಾರಣವಾಗುತ್ತವೆ ಎಂಬುದಕ್ಕೆ ಈ ಆನೆಗಳ ಪರದಾಟ/ಹಾವಳಿ ಒಂದು ಉದಾಹರಣೆ. ತಮ್ಮ ಪಾಡಿಗೆ ದಾಂಡೇಲಿ-ಅಣಶಿ-ಬೇಡ್ತಿ ಎಂದು ಅಲೆದಾಡಿಕೊಂಡಿದ್ದ ಆನೆಗಳು ಈಗ ನಾಡಿನೆಡೆಗೆ ಮತ್ತು ನೆರೆ ರಾಜ್ಯಗಳ ಜನನಿಬಿಡ ಪ್ರದೇಶಗಳಿಗೆ ಭೇಟಿ ನೀಡುವಂತಾಗಲು ಕಾರಣ ಯಾರು?

ಈ ೨ ಅಣೆಕಟ್ಟುಗಳಿಂದ ಅತಂತ್ರ ಸ್ಥಿತಿಗೆ ತಲುಪಿದ ಹಳ್ಳಿಗಳು ಹಲವಾರು. ತಮ್ಮಣಗಿ, ಬಾಳೆಮನೆ, ಶಿವಪುರ, ದೇವಕಾರು ಈ ಎಲ್ಲಾ ಹಳ್ಳಿಗಳು ಮುಳುಗಡೆಯಾಗದೆ ಉಳಿದರೂ ಇದ್ದ ಎಲ್ಲಾ ಸಂಪರ್ಕ ರಸ್ತೆಗಳನ್ನು ಕಳೆದುಕೊಂಡವು. ಮುಳುಗಡೆಯಾಗಿಲ್ಲ ಎಂಬ ಕಾರಣ ಮುಂದಿಟ್ಟು ಪರಿಹಾರ ನೀಡಲು ಸರಕಾರ ನಿರಾಕರಿಸಿತು. ಪರ್ಯಾಯ ಸಂಪರ್ಕ ವ್ಯವಸ್ಥೆ ಕಲ್ಪಿಸಲೂ ಸರಕಾರ ಆಸಕ್ತಿ ತೋರಿಸಿಲ್ಲ. ಇಂತಹ ಹಲವಾರು ಹಳ್ಳಿಗಳಿವೆ. ಹೊಸಘಟ್ಟ ಹಳ್ಳಿಯ ಅರ್ಧಭಾಗ ಅಂದರೆ ಕೆಳಗಿನ ಹೊಸಘಟ್ಟ ಮಾತ್ರ ಮುಳುಗಿದೆ. ಕೆಲವೊಂದೆಡೆ ಇಡೀ ಹಳ್ಳಿಯೇ ಮುಳುಗಿದರೂ, ಒಂದೆರಡು ಮನೆಗಳು ಮುಳುಗಿಲ್ಲವೆಂದು, ಆ ಮನೆಯವರಿಗೆ ಪರಿಹಾರವಿಲ್ಲ! ಹಿನ್ನೀರು ಎಂಬ ಸಾಗರದ ಮಧ್ಯೆ ಈ ಮನೆಯವರು ವಾಸ ಮಾಡಬೇಕೆ? ಸಂಬಂಧಪಟ್ಟ ಅಧಿಕಾರಿಗಳು ಸ್ವಲ್ಪವಾದರೂ ಮಾನವೀಯತೆಯನ್ನು ಹೊಂದಿರಬೇಕಾಗುತ್ತದೆ. ಆಲಮಟ್ಟಿ ಸಂತ್ರಸ್ತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ತೆಗೆಸಿಕೊಟ್ಟ ಅಧಿಕಾರಿಯೊಬ್ಬರಿದ್ದರು. ಇವರ ಹೆಸರು ನೆನಪಾಗುತ್ತಿಲ್ಲ. ಇಂತಹ ಅಧಿಕಾರಿಗಳನ್ನೇ ಸರಕಾರ ನೇಮಿಸಬೇಕು.

ಕೊಡಸಳ್ಳಿ ಹಿನ್ನೀರಿನಲ್ಲಿ ಮನೆ/ಜಮೀನು ಕಳಕೊಂಡವರಿಗೆ ಸೂಕ್ತ ಪರಿಹಾರ ನೀಡಿ ಮಾಗೋಡಿನಲ್ಲಿ ನೆಲೆಯನ್ನು ಕಲ್ಪಿಸಲಾಯಿತು. ಆದರೆ ಆಗ ಮಾಗೋಡಿನಲ್ಲಿ ಮತ್ತದೇ ಮೂಲಭೂತ ಸೌಕರ್ಯಗಳ ಕೊರತೆ. ಈಗ ಸ್ವಲ್ಪ ಪರವಾಗಿಲ್ಲ. ಇಲ್ಲಿನ ಅವ್ಯವಸ್ಥೆ ಕಂಡು ಮಾನಸಿಕವಾಗಿ ಗಟ್ಟಿಯಾಗಿದ್ದ ಕೆಲವು ನಿರಾಶ್ರಿತರು ಸಿಕ್ಕ ಪರಿಹಾರದ ಹಣದಿಂದ ಬೇರೆ ಕಡೆ ವಲಸೆ ಹೋಗಿ ಬದುಕು ಕಂಡುಕೊಂಡರು. ಇದ್ದ ನೆಲ, ಮನೆ ಮತ್ತು ಸಮೃದ್ಧ ಬದುಕು ಕಳಕೊಂಡು ಮಾನಸಿಕವಾಗಿ ಕುಗ್ಗಿ ಹೋದವರು ಮಾಗೋಡಿನಲ್ಲೇ ನೆಲೆ ನಿಂತರು. ಮಾಗೋಡು ಜಲಧಾರೆಗಿಂತ ೫ ಕಿ.ಮಿ ಮೊದಲು ಮಾಗೋಡು ಹಳ್ಳಿ ಸಿಗುತ್ತದೆ. ಹಳ್ಳಿಯಲ್ಲಿ ರಸ್ತೆಯ ಎಡಬದಿಯಲ್ಲಿ ನಿರಾಶ್ರಿತರಿಗೆಂದು ಕಟ್ಟಿಸಲಾಗಿದ್ದು, ಈಗ ಪಾಳುಬೀಳುತ್ತಿರುವ ಮನೆಗಳನ್ನು ಕಾಣಬಹುದು. ಕುಮಾರಪರ್ವತದ ಚಾರಣ ಹಾದಿಯಲ್ಲಿ ಸಿಗುವ ಗಿರಿಗದ್ದೆಯ ಒಂಟಿ ಮನೆಯಲ್ಲಿ ನೆಲೆನಿಂತಿರುವ ಭಟ್ಟರು ಕೂಡಾ ಕೊಡಸಳ್ಳಿ ನಿರಾಶ್ರಿತರು. ೨೦೦೪ ಜನವರಿಯಲ್ಲಿ ಇವರ ಮನೆಯಲ್ಲಿ ತಂಗಿದಾಗ ಅವರಲ್ಲಿ ಆ ವಿಷಯದ ಬಗ್ಗೆ ಚರ್ಚಿಸುವ ತವಕ ತೋರಿದೆನಾದರೂ ಅವರು ಆಸಕ್ತಿ ತೋರದ ಕಾರಣ ಸುಮ್ಮನಾಗಿದ್ದೆ. ಆ ದುಖ: ಇನ್ನೂ ಅವರನ್ನು ಕಾಡುತ್ತಿತ್ತೇನೋ.

ಕದ್ರಾ ನಿರಾಶ್ರಿತರಿಗೆ ’ಹೊಸ ಕದ್ರಾ’ ಎಂಬ ಸ್ಥಳದಲ್ಲಿ ವಾಸ್ತವ್ಯ ಕಲ್ಪಿಸಲಾಯಿತು. ಈ ಸ್ಥಳವಂತೂ ಯಾವುದೇ ಕೊಂಪೆಗೆ ಕಡಿಮೆಯಿಲ್ಲ. ಅಲ್ಲೇ ಸಮೀಪದಲ್ಲಿ ಕ.ವಿ.ನಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ವಾಸ್ತವ್ಯ ಕಲ್ಪಿಸಿರುವ ಕದ್ರಾ ಕಾಲೋನಿ ಚೆನ್ನಾಗಿದೆ. ಕದ್ರಾ ಹಿನ್ನೀರನ್ನು ಬಳಸುವ ಕೈಗಾ ಅಣುಸಂಸ್ಥೆಯ ನೌಕರರಿಗೆ ಕದ್ರಾದ ಸಮೀಪದಲ್ಲೇ ಮಲ್ಲಾಪುರ ಎಂಬಲ್ಲಿ ಉತ್ತಮ ಸ್ಥಳದಲ್ಲಿ ವಾಸ್ತವ್ಯ. ಆದರೆ ಮನೆ ಜಮೀನು ಕಳಕೊಂಡವರಿಗೆ ಮಾತ್ರ ಕೊಂಪೆಯಂತಹ ಸ್ಥಳ. ಕದ್ರಾ ಅಣೆಕಟ್ಟಿನ ಹಿಂಭಾಗದಲ್ಲೇ ತಗ್ಗು ಪ್ರದೇಶದಲ್ಲಿದ್ದ ಹಳೆ ಕದ್ರಾ ಸಂಪೂರ್ಣವಾಗಿ ಮುಳುಗಿಹೋದಾಗ ನಿರಾಶ್ರಿತರಲ್ಲಿ ಹೆಚ್ಚಿನವರು ಬೇರೆಡೆ ವಲಸೆ ಹೋದರು. ಆದರೆ ಕಡು ಬಡವರು ಮಾತ್ರ ಕದ್ರಾ ಅಣೆಕಟ್ಟಿನ ಮುಂಭಾಗದಲ್ಲೇ ಇರುವ ಹೊಸ ಕದ್ರಾದಲ್ಲಿ ಉಳಿದರು. ಈವತ್ತಿಗೂ ಇಲ್ಲಿ ಒಂದು ಸರಿಯಾದ ಆಸ್ಪತ್ರೆ, ಬಸ್ಸು ನಿಲ್ದಾಣ ಇಲ್ಲ.

ಕದ್ರಾ ಎಡದಂಡೆಯಲ್ಲಿ ಕೈಗಾ ಅಣುಸ್ಥಾವರವನ್ನು ನಿರ್ಮಿಸಲಾಗಿದೆ. ೭೩೨ ಹೆಕ್ಟೇರುಗಳಷ್ಟು ಕಾಡನ್ನು ಅಣುಸಂಸ್ಥೆ ನಿರ್ಮಾಣಕ್ಕಾಗಿ ಕಡಿದು ಹಾಕಲಾಯಿತು. ಇಷ್ಟೇ ಅಲ್ಲದೆ ಉತ್ಪಾದಿಸಿದ ವಿದ್ಯುತ್ತನ್ನು ಸಾಗಿಸಲು ೬೭೭ ಎಕ್ಟೇರುಗಳಷ್ಟು ಕಾಡನ್ನು ಮತ್ತೆ ಕಡಿಯಲಾಯಿತು. ಅದಾಗಲೇ ಕೆಲವು ಅಣೆಕಟ್ಟುಗಳು ಮತ್ತು ವಿದ್ಯುತ್ ಉತ್ಪಾದನಾ ಕೆಂದ್ರಗಳಿಂದ ನಲುಗುತ್ತಿದ್ದ ಕಾಳಿ ಕೊಳ್ಳಕ್ಕೆ ಈ ಅಣುಸ್ಥಾವರ ಒಂದು ಮಾರಕ ಹೊಡೆತ. ರಾಜ್ಯದೆಲ್ಲೆಡೆ ವ್ಯಾಪಕ ಟೀಕೆ ಮತ್ತು ವಿರೋಧದ ನಡುವೆಯೂ ಪರಿಸರ ಸಂರಕ್ಷಣೆ ಎಂಬ ಮಾತಿಗೆ ಅಪವಾದ ಎಂಬಂತೆ ಕೈಗಾ ಅಣುಸ್ಥಾವರವನ್ನು ದಟ್ಟ ಕಾಡಿನ ನಡುವೆ ನಿರ್ಮಿಸಲಾಯಿತು. ಅಣುಸ್ಥಾವರ ನಿರ್ಮಾಣದ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂಬ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಅದಾಗಲೇ ಬಹಳಷ್ಟು ಹಣವನ್ನು ವ್ಯಯಿಸಲಾಗಿದೆ ಎಂಬ ಕಾರಣವನ್ನು ಮುಂದಿಟ್ಟು ಕಡೆಗಣಿಸಲಾಯಿತು. ವಿನ್ಯಾಸ ದೋಷದ ಕಾರಣದಿಂದ ನಿರ್ಮಾಣಗೊಳ್ಳುತ್ತಿದ್ದ ಒಂದು ಗೋಪುರ ಕುಸಿದುಬಿದ್ದಿತ್ತು. ಕಾರ್ಯಾಚರಣೆಯಲ್ಲಿದ್ದಾಗ ಕುಸಿದು ಬಿದ್ದಿದ್ದರೆ ಆಗುತ್ತಿದ್ದ ಅನಾಹುತವನ್ನು ಊಹಿಸಲಸಾಧ್ಯ.

ಅನಾಹುತದ ಸಮಯದಲ್ಲಿ ಸ್ಥಾವರದ ಸಮೀಪವಿರುವ ಹಳ್ಳಿಗಳಲ್ಲಿ ವಾಸವಿರುವ ಜನರನ್ನು ಕ್ಷಿಪ್ರವಾಗಿ ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಈಗಲೂ ಯಾವುದೇ ವ್ಯವಸ್ಥೆಯಿಲ್ಲ. ಅಣುಸ್ಥಾವರಕ್ಕೆ ಹತ್ತಿರದಲ್ಲಿರುವುದೆಂದರೆ ೩ ಕಿ.ಮಿ ದೂರದಲ್ಲಿರುವ ಬಾಳೆಮನೆ ಎಂಬ ಹಳ್ಳಿ. ಪ್ರಜಾವಾಣಿಯಲ್ಲಿ ಅದೊಮ್ಮೆ ಬಾಳೆಮನೆ ಬಗ್ಗೆ ’ಬಾಳೇ ಇಲ್ಲದ ಮನೆ’ ಎಂಬ ಸೂಕ್ತ ಶೀರ್ಷಿಕೆ ಇದ್ದ ಲೇಖನ ಬಂದಿತ್ತು. ಅಣುಸ್ಥಾವರದ ಸಿಬ್ಬಂದಿಗಳು ಆಗಾಗ ಕೈಯಲ್ಲೊಂದು ಮಾಪನ ಹಿಡಿದುಕೊಂಡು ಬಾಳೆಮನೆಯ ಸುತ್ತ ಅಡ್ಡಾಡುತ್ತಾರೆಯೇ ವಿನ: ಹಳ್ಳಿಗರಲ್ಲಿ ಏನೂ ಮಾತನಾಡುವುದಿಲ್ಲ. ಹನ್ನೆರಡು ವರ್ಷಗಳ ಕಾಲ ಅಣುಸ್ಥಾವರವನ್ನು ವಿರೋಧಿಸಿ ಪ್ರಬಲ ಜನಾಂದೋಲನವಿದ್ದರೂ ಸರಕಾರ ಎಲ್ಲವನ್ನೂ ಕಡೆಗಣಿಸಿತು/ಹಿಮ್ಮೆಟ್ಟಿಸಿತು.

ಅಣುಸ್ಥಾವರದ ಅಪಾಯದ ಬಗ್ಗೆ ಕೈಗಾ ಮತ್ತು ಸುತ್ತಮುತ್ತಲಿನ ಹಳ್ಳಿಗರಿಗೆ ಯಾವುದೇ ಮಾಹಿತಿಯಿರಲಿಲ್ಲ. ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪರಿಸರವಾದಿಗಳು ಒಂದಾಗಿ ಜನರಿಗೆ ಅಣುಸ್ಥಾವರದ ಅಪಾಯಗಳನ್ನು ಮನವರಿಕೆ ಮಾಡಿ ಕೈಗಾ ಅಣುಸ್ಥಾವರದ ವಿರುದ್ಧ ಪ್ರಬಲ ಜನಾಂದೋಲನವನ್ನು ರಚಿಸಿದರು. ಸಾಹಿತಿ ಶಿವರಾಮ ಕಾರಂತರೂ ಈ ಹೋರಾಟಕ್ಕೆ ಸೇರಿಕೊಂಡು ಆಗ ನಡೆದಿದ್ದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತರು.

ಕದ್ರಾ ಜಲಾಶಯದ ನೀರನ್ನೇ ಅಣುಸ್ಥಾವರದಲ್ಲಿ ಬಳಸಿ ಮತ್ತದೇ ನೀರನ್ನು ಜಲಾಶಯಕ್ಕೇ ಬಿಡಲಾಗುತ್ತಿದೆ. ಹಾಗಿರುವಾಗ ಕಾಳಿ ನದಿ ನೀರಿನಲ್ಲಿ ಅಣು ವಿಕಿರಣಕ್ಕೆ ಸಂಬಂಧಿಸಿದ ಅಂಶಗಳಿಲ್ಲ ಎಂದು ಯಾವ ಆಧಾರದ ಮೇಲೆ ಎನ್.ಟಿ.ಪಿ.ಸಿ (ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್) ಹೇಳಿಕೆ ನೀಡುತ್ತಿದೆ ಅರ್ಥವಾಗುತ್ತಿಲ್ಲ. ಅತ್ತ ದಾಂಡೇಲಿಯಲ್ಲಿ ಕಾಳಿಯನ್ನು ಕುಲಗೆಡಿಸಿ ಗಬ್ಬು ನಾರುವಂತೆ ಮಾಡಿಯೂ ಕಾಳಿಯ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಹೇಳಿಕೆ ನೀಡುವ ವೆಸ್ಟ್-ಕೋಸ್ಟ್ ಪೇಪರ್ ಕಾರ್ಖಾನೆ. ಇತ್ತ ಅಣು ವಿಕಿರಣ ಅಂಶಗಳನ್ನು ಕಾಳಿ ನದಿಗೆ ವಿಸರ್ಜಿಸಿಯೂ ಕಾಳಿ ನದಿಯ ನೀರು ಕುಡಿಯಲಿಕ್ಕೆ ಯೋಗ್ಯ ಎನ್ನುವ ಎನ್.ಟಿ.ಪಿ.ಸಿ. ಇವರೆಲ್ಲಾ ಯಾರಿಗೆ ಮಂಕುಬೂದಿ ಎರಚಲು ನೋಡುವುದೇನೋ? ಕಾಳಿ ನೀರು ಕುಡಿಯಲಿಕ್ಕೆ ಯೋಗ್ಯ ಎನ್ನುವ ಅಣುಸಂಸ್ಥೆ, ತನ್ನ ನೌಕರರು ವಾಸವಿರುವ ಮಲ್ಲಾಪುರ ಕಾಲೊನಿಯಲ್ಲಿ ಮತ್ತು ಸ್ವತ: ತನ್ನ ಪ್ರಾಂಗಣದೊಳಗೆ ಬಳಸುವುದು ಯಲ್ಲಾಪುರ ತಾಲೂಕಿನ ಬಾರೆಯಿಂದ ಹರಿದುಬರುವ ನೀರನ್ನು!

ಕೈಗಾ ಅಣುಸ್ಥಾವರ ನಿರ್ಮಾಣದ ಹತ್ತು ವರ್ಷಗಳ ಬಳಿಕ ಕೈಗಾ ಸಮೀಪದ ಹಳ್ಳಿಗಳಲ್ಲಿ ಸಮರ್ಪಕ ವಿದ್ಯುತ್ ಸಂಪರ್ಕವಿಲ್ಲ ಮತ್ತು ಶುದ್ಧ ಕುಡಿಯುವ ನೀರಿನ ಕೊರತೆ! ಅಣುಸ್ಥಾವರಕ್ಕೆ ಜಮೀನನ್ನು ಯಾವುದೇ ಪರಿಹಾರ ನೀಡದೇ ಕಸಿದುಕೊಳ್ಳಲಾಗಿದೆ ಎಂಬ ಮಾತೂ ಕೇಳಿಬರುತ್ತಿದೆ. ಇಷ್ಟೆಲ್ಲಾ ಆದರೂ ಒಂದು ಅಣುಸ್ಥಾವರ ಆಯುಷ್ಯ ಎಷ್ಟು? ೩೦-೩೫ ವರ್ಷ ಆಷ್ಟೇ! ಅಲ್ಲಿ ನಾಗಝರಿಯಲ್ಲಿ ೫೦ ವರ್ಷ ನಿಗದಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ಸಲುವಾಗಿ ಅಪಾರ ಪ್ರಮಾಣದಲ್ಲಿ ಕಾಡು ಮತ್ತು ನಾಡು ನಾಶವಾದರೆ ಇಲ್ಲಿ ಕೈಗಾದಲ್ಲಿ ೩೫ ವರ್ಷ ಅಣು ವಿದ್ಯುತ್ ಉತ್ಪಾದನೆ ಸಲುವಾಗಿ ಕಾಳಿ ವಿಕಿರಣದ ಅಂಶಗಳಿಂದ ನಲುಗಿಹೋಗುತ್ತಿದ್ದಾಳೆ.

ಮುಂದುವರಿಯುತ್ತದೆ...

ಮಂಗಳವಾರ, ಆಗಸ್ಟ್ 12, 2008

ಇಂಥವರೂ ಇರ್ತಾರೆ...!


ಇವರು ರಮೇಶ್ ಕಾಮತ್. ವಯಸ್ಸು ೫೨. ಸದಾ ನುಗುಮೊಗದ ಧರ್ಮಪತ್ನಿ ಮತ್ತು ಅವಳಿ ಹೆಣ್ಣು ಮಕ್ಕಳ ಸಂಸಾರ. ಮಂಗಳೂರಿನಲ್ಲಿ ಸಣ್ಣ ಚೊಕ್ಕ ಸ್ವಂತ ಉದ್ಯಮ ನಡೆಸುತ್ತಾರೆ. ಭರ್ಜರಿ ಹಾಸ್ಯ ಮನೋಭಾವವುಳ್ಳ ವ್ಯಕ್ತಿ. ಪ್ರಕೃತಿಯನ್ನು ತುಂಬಾ ಪ್ರೀತಿಸುವ, ಆರಾಧಿಸುವ ಸಜ್ಜನ. ಮಂಗಳೂರು ಯೂತ್ ಹಾಸ್ಟೆಲಿನ ಬಹಳ ಮುಖ್ಯ ಕೊಂಡಿ.

ಬಹಳ ಹಾಸ್ಯ ಪ್ರವೃತ್ತಿಯ ವ್ಯಕ್ತಿಯಾಗಿರುವ ರಮೇಶ್, ಮಾತನಾಡಲು ಆರಂಭಿಸಿದರೆ ನಮ್ಮ ಚಾರಣ ವಾಹನ ’ಶಕ್ತಿ’ಯಲ್ಲಿ ನಗುವಿನ ಅಲೆ ಪ್ರತಿಧ್ವನಿಸುತ್ತಿರುತ್ತದೆ. ಪ್ರತಿ ವಿಷಯದಲ್ಲೂ ಏನಾದರೊಂದು ಹಾಸ್ಯದ ತುಣುಕನ್ನು ಕಂಡು ಅದನ್ನು ಹೇಳಿ ಎಲ್ಲರನ್ನೂ ನಗಿಸುವ ಕಲೆ ಇವರಿಗೆ ಕರಗತ. ಸನ್ನಿವೇಶಕ್ಕೆ ತಕ್ಕಂತೆ ಇವರಿಂದ ಜೋಕೊಂದು ಹೊರಬಂದಾಯಿತು. ಕೆಲವೊಮ್ಮೆ ಜೋಕುಗಳು ರಿಪೀಟ್ ಆದರೂ ಅವರು ಅದನ್ನು ಹೇಳುವ ರೀತಿ, ಮತ್ತೆ ಮತ್ತೆ ಕೇಳಿದರೂ ನಮ್ಮಂತಹ ಕೇಳುಗರಿಗೆ ನಗುವನ್ನು ತಂದೇ ತರಿಸುತ್ತದೆ.

ಮಂಗಳೂರು ಯೂತ್ ಹಾಸ್ಟೆಲ್ ಚಾರಣ ಕಾರ್ಯಕ್ರಮಗಳು ಚಾರಣವೂ ಹೌದು ಮತ್ತು ಕಾಮತರ ಕೃಪೆಯಿಂದ ಹಾಸ್ಯಗೋಷ್ಠಿಯೂ ಹೌದು. ಮೊದಲ ಸಲ ಕಾಮತರೊಂದಿಗೆ ಚಾರಣಕ್ಕೆ ಬಂದವರಿಗೆ ಚಾರಣಕ್ಕೆ ಎಲ್ಲಿಗೆ ತೆರಳಿದೆವು ಎನ್ನುವುದಕ್ಕಿಂತ ಕಾಮತರ ಹಾಸ್ಯ ಚಟಾಕಿಗಳೇ ನೆನಪಿನಲ್ಲಿರುತ್ತವೆಯೆಂದರೆ ’ಕಾಮತ್ ಕಮಾಲ್’ ಯಾವ ಮಟ್ಟದ್ದಿರಬಹುದೆಂದು ಊಹಿಸಬಹುದು. ಇವರು ಜೋಕು ಹೇಳಲು ಆರಂಭಿಸಿದ ಕೂಡಲೇ ಮುಂದೆ ಬರಬಹುದಾದ ಹಾಸ್ಯ ಸನ್ನಿವೇಶವನ್ನು ಕಲ್ಪಿಸಿಯೇ ನಗುವವರಿದ್ದಾರೆ! ಈ ’ಕಾಮತ್ ಇಫೆಕ್ಟ್’ ಯಾವ ಮಟ್ಟಕ್ಕೆ ಹೋಗಿದೆಯೆಂದರೆ ಚಾರಣಕ್ಕೆ ಬರುವ ಕೆಲವರು, ’ನೀವು ಎಲ್ಲಿಗೆ ಬೇಕಾದರೂ ಹೋಗಿ, ನನಗದು ಮುಖ್ಯವೇ ಅಲ್ಲ. ರಮೇಶ್ ಕಾಮತ್ ಬರ್ತಿದ್ದಾರೋ ... ಅದು ಮುಖ್ಯ’ ಎಂದು ಕಾಮತ್ ಬಂದರೆ ಮಾತ್ರ ಚಾರಣಕ್ಕೊಂದು ರಂಗು ಇಲ್ಲಾದ್ರೆ ನೀರಸ ಎಂಬಂತೆ ಮಾತನಾಡುತ್ತಾರೆ. ಈ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ. ಪ್ರಯಾಣ ಮಾಡುವಾಗ ಸಮಯ ಕಳೆದದ್ದು ಕಾಮತರ ಮಾತಿನಲ್ಲಿ ತಿಳಿಯುವುದೇ ಇಲ್ಲ.


ಇವರಿಗೆ ಕಷ್ಟಗಳು ಬಹಳಷ್ಟು ಇವೆ. ಆದರೆ ಅದನ್ನೆಲ್ಲಾ ಮೀರಿಸುವ ಮಾನಸಿಕ ಧೈರ್ಯ ಮತ್ತು ಸ್ಥೈರ್ಯ ಇವರಲ್ಲಿದೆ. ಕಷ್ಟಗಳಿದ್ದರೂ ನಗುನಗುತ್ತಾ, ಎಲ್ಲರನ್ನೂ ನಗಿಸುತ್ತಾ ಚಾರಣವನ್ನು ಆನಂದಿಸುವ ಇವರ ಉನ್ನತ ಮನೋಭಾವನೆಯನ್ನು ಮೆಚ್ಚಲೇಬೇಕು. ಎಲ್ಲಾದರೂ ಆ ತಿಂಗಳ ಕಾರ್ಯಕ್ರಮ ಚಾರಣರಹಿತವಾಗಿದ್ದರೆ ತಮ್ಮ ಧರ್ಮಪತ್ನಿ ಮತ್ತು ಮಕ್ಕಳನ್ನೂ ಕರೆದುಕೊಂಡು ಬರುತ್ತಾರೆ. ಆಗ ನೋಡಬೇಕು ಗಂಡ-ಹೆಂಡತಿ ಒಬ್ಬರೊಬ್ಬರ ಕಾಲೆಳೆಯುವುದನ್ನು. ಪ್ರತಿ ಚಾರಣಕ್ಕೂ ಬಿಳಿ ಅಂಗಿ ಮತ್ತು ಕಪ್ಪು ಶಾರ್ಟ್ಸ್ ಧರಿಸಿ ಬರುವ ಕಾಮತರಿಗೆ ಈ ೨ ಬಣ್ಣಗಳೆಂದರೆ ಬಲೂ ಇಷ್ಟ. ಜೀವನವನ್ನೂ ಅವರು ಈ ೨ ಬಣ್ಣಗಳಂತೆ ಸರಳವಾಗಿ, ನೇರವಾಗಿ ಜೀವಿಸುತ್ತಾರೆ ಮತ್ತು ಕಾಣುತ್ತಾರೆ. ಇವರ ದ್ವಿಚಕ್ರ ವಾಹನಗಳ ಬಣ್ಣ ಕಪ್ಪು ಮತ್ತು ಚತುಷ್ಚಕ್ರ ವಾಹನಗಳ ಬಣ್ಣ ಬಿಳಿ.

ಎಲ್ಲರಲ್ಲೂ ಈ ’ನಗಿಸುವ’ ಕಲೆ ಇರುವುದಿಲ್ಲ. ತಮ್ಮ ಕಷ್ಟಗಳನ್ನು ಹೇಳಿಕೊಳ್ಳದೆ, ಅವುಗಳನ್ನೆಲ್ಲಾ ಸ್ವಲ್ಪ ಸಮಯಕ್ಕಾದರೂ ಬದಿಗಿಟ್ಟು, ಬೇರೆಯವರನ್ನು ಹಾಸ್ಯ ಸಾಗರದಲ್ಲಿ ಮುಳುಗಿಸುವುದನ್ನು ರಮೇಶ್ ಕಾಮತ್ ನಮ್ಮ ಚಾರಣ ಕಾರ್ಯಕ್ರಮಗಳಲ್ಲಿ ಮಾಡುತ್ತಲೇ ಬರುತ್ತಿದ್ದಾರೆ. ವಾರಾಂತ್ಯಗಳಲ್ಲಿ ಮಂಗಳೂರಿನ ಹೊರವಲಯದಲ್ಲೆಲ್ಲಾದರೂ ತೆರಳಿ ನೇತ್ರಾವತಿಯ ತಟದಲ್ಲೋ ಅಥವಾ ಫಲ್ಗುಣಿಯ ತಟದಲ್ಲೋ ಸಮಯ ಕಳೆಯುತ್ತಾ, ಅಲ್ಲಿರುವ ಸಣ್ಣ ಬೆಟ್ಟಗಳನ್ನೆಲ್ಲಾ ಏರುತ್ತಾ, ರೈಲುಹಳಿಯ ಮೇಲೆ ನಡೆಯುತ್ತಾ ಪ್ರಕೃತಿಯ ನಡುವೆ ಒಂಟಿಯಾಗಿ ಸಮಯ ಕಳೆಯುತ್ತಾರೆ. ಮಂಗಳೂರಿನ ಆಸುಪಾಸಿನಲ್ಲಿ ಸುಂದರ ದೃಶ್ಯಾವಳಿ ಲಭ್ಯವಿರುವ ಸ್ಥಳಗಳ ಸಂಪೂರ್ಣ ಮಾಹಿತಿ ರಮೇಶ್ ಕಾಮತರಲ್ಲಿದೆ.


೨೦೦೩ ಅಗೋಸ್ಟ್ ತಿಂಗಳಿಂದ ಆರಂಭಿಸಿ ಮಂಗಳೂರು ಯೂತ್ ಹಾಸ್ಟೆಲಿನ ಯಾವುದೇ ಚಾರಣ ಕಾರ್ಯಕ್ರಮವನ್ನು ರಮೇಶ್ ಕಾಮತ್ ತಪ್ಪಿಸಿಕೊಂಡಿರಲಿಲ್ಲ. ಉಳಿದವರೆಲ್ಲರೂ ಏನಾದರೊಂದು ಕಾರಣದಿಂದ ಒಂದಾದರೂ ಚಾರಣಕ್ಕೆ ಗೈರುಹಾಜರಾಗಿದ್ದಿದ್ದರೆ, ಕಾಮತರು ಯಾವುದೇ ಚಾರಣವನ್ನು ತಪ್ಪಿಸಿರಲಿಲ್ಲ. ಅವರ ಈ ಸಾಧನೆಯನ್ನು ನಾನೇ ಮೊದಲು ಗಮನಿಸಿದ್ದು ಎಂದು ಹೇಳಲು ನನಗೆ ಬಹಳ ಹೆಮ್ಮೆ. ಈ ಸಾಧನೆಗಾಗಿ ಮುಂದಿನ ಚಾರಣ ಕಾರ್ಯಕ್ರಮವೊಂದರಲ್ಲಿ ಕಾಮತರಿಗೆ ನಮ್ಮಿಂದಲೇ ಸಣ್ಣ ಸನ್ಮಾನ ಮಾಡಬೇಕೆಂಬ ವಿಚಾರವನ್ನು ಮಂಗಳೂರು ಯೂತ್ ಹಾಸ್ಟೆಲಿನ ಆರ್ಗನೈಸಿಂಗ್ ಸೆಕ್ರೆಟರಿಯಾಗಿರುವ ಗೆಳೆಯ ದಿನೇಶ್ ಹೊಳ್ಳರಲ್ಲಿ ನಾನು ಪ್ರಸ್ತಾವಿಸಿದಾಗ ಅವರು, ’ಕಾಮತರು ಇದಕ್ಕೆಲ್ಲಾ ಒಪ್ಪಲಾರರು’ ಎಂದರು. ಆದ್ದರಿಂದ ಈ ವಿಷಯವನ್ನು ಕಾಮತರಿಗೆ ತಿಳಿಯದಂತೆ ಗೌಪ್ಯವಾಗಿಟ್ಟು ೨೦೦೭ ಮೇ ತಿಂಗಳ ಶಿಂಗಾಣಿಬೆಟ್ಟ ಚಾರಣದ ಮುನ್ನಾ ದಿನ ಶಿಶಿಲದಲ್ಲಿ ಶ್ರೀ ಗೋಪು ಗೋಖಲೆಯವರಿಂದ ಸನ್ಮಾನಿಸಲಾಯಿತು.

ಸತತ ೫೨ ತಿಂಗಳುಗಳ ಬಳಿಕ ಅಂತೂ ಕೊನೆಗೆ ೨೦೦೭ ಡಿಸೆಂಬರ್ ತಿಂಗಳ ಗಂಗಡಿಕಲ್ಲು ಚಾರಣಕ್ಕೆ ಕಾಮತ್ ಗೈರುಹಾಜರಾದರು. ಅಂದು ಅವರಿಗೆ ಚಾರಣ ತಪ್ಪಿಸದೇ ಬೇರೆ ವಿಧಿಯಿರಲಿಲ್ಲ. ಅಂದು ನಮ್ಮನ್ನು ಬೀಳ್ಕೊಡಲು ಬಂದಿದ್ದ ಕಾಮತರ ಮುಖ ಸಣ್ಣ ಮಗುವನ್ನು ಎಲ್ಲಾದರೂ ಬಿಟ್ಟುಹೋದರೆ ಆಗುವಂತೆ ಅಳುಮುಖವಾಗಿತ್ತು. ಅಷ್ಟು ಪ್ರೀತಿ ಈ ಹಿರಿಯರಿಗೆ ಚಾರಣ ಮತ್ತು ಪ್ರಕೃತಿಯೆಂದರೆ. ಆ ನಂತರ ಅವರ ಎರಡನೇ ಇನ್ನಿಂಗ್ಸ್ ಆರಂಭವಾಗಿದೆ ಮತ್ತು ಇದು ಮೊದಲ ಇನ್ನಿಂಗ್ಸ್-ಗಿಂತಲೂ ಹೆಚ್ಚು ಕಾಲ ಮುಂದುವರಿಯಲಿ ಎಂಬುವುದು ನಮ್ಮೆಲ್ಲರ ಆಶಯ.

(ಎರಡನೇ ಚಿತ್ರ ಕೃಪೆ - ರಾಕೇಶ್ ಹೊಳ್ಳ ; ಮೂರನೇ ಚಿತ್ರ ಕೃಪೆ - ಸುಧೀರ್ ಕುಮಾರ್)

ಭಾನುವಾರ, ಆಗಸ್ಟ್ 10, 2008

ಕಣ್ಣಿಗೆ ಹಬ್ಬ - ಹೆಬ್ಬೆ


ಅಗಾಧತೆಯಿದ್ದರೂ ಭೀಕರತೆಯಿಲ್ಲದ, ಎಸ್ಟೇಟ್ ಒಂದರಲ್ಲಿದ್ದೂ ಕಾಡಿನಲ್ಲೆಲ್ಲೋ ಇರುವಂತೆ, ಅಷ್ಟೆತ್ತರದಿಂದ ಧುಮುಕುತ್ತಿದ್ದರೂ ಸನಿಹಕ್ಕೆ ಬರುವ ತನಕ ತನ್ನ ಇರುವಿಕೆಯನ್ನು ಬಹಿರಂಗಪಡಿಸದ ನಾಚಿಕೆಯ ಜಲಧಾರೆ ಹೆಬ್ಬೆ. ಚಿಕ್ಕ ಹೆಬ್ಬೆ ಮತ್ತು ದೊಡ್ಡ ಹೆಬ್ಬೆ ಎಂಬ ಹೆಸರಿರುವ ಎರಡು ಹಂತಗಳಲ್ಲಿ ಹೆಬ್ಬೆ ಜಲಧಾರೆ ಧುಮುಕುತ್ತದೆ. ಪ್ರವಾಸಿಗರು/ಚಾರಣಿಗರ ಕಣ್ಣಿಗೆ ಸಂಪೂರ್ಣವಾಗಿ ಕಾಣಿಸುವುದು ದೊಡ್ಡ ಹೆಬ್ಬೆ. ಇದರ ಮೇಲೆ ಇರುವುದು ಮೊದಲ ಹಂತ ಸಣ್ಣ ಹೆಬ್ಬೆ.

ಗೆಳೆಯ ದಿನೇಶ್ ಹೊಳ್ಳರಲ್ಲಿ ದಾರಿಯ ಮಾಹಿತಿ ಪಡೆದು, ಅಕ್ಟೋಬರ್ ೨೦೦೩ರ ಅದೊಂದು ರವಿವಾರ ಮುಂಜಾನೆ ೫ಕ್ಕೆ ಮಂಗಳೂರಿನಿಂದ ಹೊರಟೆ. ನನ್ನ ಪ್ಯಾಶನ್ ಬೈಕಿಗೆ ಇದು ಮೊದಲ ದೂರದ ಪ್ರಯಾಣ. ಕೈಮರದ ಬಳಿಕ ಎಸ್ಟೇಟುಗಳ ನಡುವೆ ಸಾಗುವ ಸಿಂಗಲ್ ರಸ್ತೆ. ಅದುವರೆಗೆ ಮಹಾರಾಜನಂತೆ ಬಂದ ನನ್ನ ಬೈಕು, ಈಗ ಬೆಟ್ಟವನ್ನೇರುವಾಗ ಏದುಸಿರು ಬಿಡುತ್ತಿದ್ದ ಪರಿ ನೋಡಿ, ’ಛೆ, ಯಮಾಹ ತರಬೇಕಿತ್ತು’ ಎಂದೆನಿಸತೊಡಗಿತ್ತು.

ಬೆಟ್ಟದ ಮೇಲೆ ತಲುಪಿದ ನಂತರ ಕೆಮ್ಮಣ್ಣುಗುಂಡಿಯವರೆಗಿನ ಹಾದಿಯ ಬಗ್ಗೆ ವರ್ಣಿಸಲು ಶಬ್ದಗಳು ಸಾಲವು. ಒಂದೆಡೆ ನಿಂತು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸೋಣವೆಂದರೆ ನನ್ನಲ್ಲಿ ಸಮಯವಿರಲಿಲ್ಲ ಮತ್ತು ಆದಷ್ಟು ಬೇಗ ಹೆಬ್ಬೆ ಫಾಲ್ಸ್ ಮುಟ್ಟುವ ತವಕ. ಹಿಂತಿರುಗುವಾಗ ಆರಾಮವಾಗಿ ಅಲ್ಲಲ್ಲಿ ನಿಲ್ಲುತ್ತಾ ಹಸಿರಿನ ಸಿರಿಯನ್ನು ಆನಂದಿಸುತ್ತಾ ಬಂದರಾಯಿತು ಎಂದು ಎಲ್ಲೂ ನಿಲ್ಲಿಸದೇ ಕೆಮ್ಮಣ್ಣುಗುಂಡಿಯತ್ತ ಮುಂದುವರಿದೆ. ದತ್ತಪೀಠಕ್ಕೆ ತೆರಳುವ ತಿರುವು ಬಂದಾಗಲೂ ’ಹಿಂತಿರುಗುವಾಗ ನೋಡಿದರಾಯಿತು’ ಎಂದು ಮುಂದುವರಿಸಿದೆ. ಬೈಕು ಚಲಾಯಿಸುವಾಗ ಗಿರಿ ಕಂದರಗಳ ಚೆಲುವನ್ನು ಎಂಜಾಯ್ ಮಾಡಲು ಆಸ್ಪದವೇ ಇರಲಿಲ್ಲ. ಯಾಕೆಂದರೆ ರಸ್ತೆಯ ಬದಿಯಲ್ಲಿ ತಡೆಗೋಡೆಯೇ ಇರಲಿಲ್ಲ. ರಸ್ತೆ ಅಂಚಿಗೆ ಬಂದರೆ ಕೆಳಗೆ ಪ್ರಪಾತ. ಹಾಗಾಗಿ ಕಣ್ಣುಗಳು ರಸ್ತೆಯ ಮೇಲೆ. ಕೆಮ್ಮಣ್ಣುಗುಂಡಿ ತಲುಪಿ, ಶಾಂತಿ ಜಲಧಾರೆಗಾಗಿ ಎಷ್ಟು ಹುಡುಕಾಡಿದರೂ ಸಿಗಲಿಲ್ಲ. ಇಲ್ಲಿ ’ಝೆಡ್ ಪಾಯಿಂಟ್’ಗೆ ಹೋಗೋಣವೆಂದಾದರೂ ಸಮಯದ ಕೊರತೆಯಿತ್ತು. ಮತ್ತಷ್ಟು ಸಮಯ ವ್ಯರ್ಥ ಮಾಡದೇ ಹೆಬ್ಬೆ ಜಲಧಾರೆಯತ್ತ ಹೊರಟೆ.

ಆರೇಳು ಕಿಮಿ ಹದಗೆಟ್ಟಿದ ಮಣ್ಣಿನ ರಸ್ತೆಯಲ್ಲಿ ಸಾಗಿ ಎಸ್ಟೇಟ್-ವೊಂದರ ಬಳಿ ಬಂದೆ. ಇಲ್ಲಿ ಬೈಕು ನಿಲ್ಲಿಸಿ ಹತ್ತು ನಿಮಿಷ ನಡೆದರೆ ಹೆಬ್ಬೆ ಜಲಧಾರೆ. ನೋಡಿದೊಡನೆಯೇ ’ಆಂ..’ ಎಂದು ಬಾಯಿ ತೆಗೆದವ ಸ್ವಲ್ಪ ಹೊತ್ತು ಹಾಗೇ ಇದ್ದೆ. ಜಲಧಾರೆಯೊಂದರ ಸೌಂದರ್ಯ ಕೇವಲ ನೀರಿನ ಹರಿವೊಂದರ ಮೇಲಷ್ಟೆ ನಿರ್ಭರವಾಗಿರುವುದಿಲ್ಲ. ಜಲಧಾರೆಯ ಆಕಾರ, ಅಚೀಚೆ ಬೆಳೆದಿರುವ ಕಾಡು, ಅಕಾಶ, ನೀರಿನ ಹರಿವಿನ ಅಗಲ, ತಳಕ್ಕೆ ಅಪ್ಪಳಿಸುವ ಪರಿ, ತಳದಲ್ಲಿರುವ ನೀರಿನ ರಾಶಿ, ಜಲಧಾರೆಯ ಹಿಂದಿರುವ ಕಲ್ಲಿನ ಗೋಡೆ ಇವೆಲ್ಲವೂ ಜಲಧಾರೆಯ ಸೌಂದರ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೆಬ್ಬೆಯಲ್ಲಿದ್ದವು ಇವೆಲ್ಲವೂ. ತಳದಲ್ಲಿ ನೀರಿನ ಶೇಖರಣೆ ಸ್ವಲ್ಪ ಕಡಿಮೆ ಎಂಬುದನ್ನು ಕಡೆಗಣಿಸಿದರೆ, ಹೆಬ್ಬೆಯ ಚೆಲುವು ಅಪ್ರತಿಮ.

ಮರಳಿ ಕೆಮ್ಮಣ್ಣುಗುಂಡಿ ರಸ್ತೆಗೆ ಬಂದಾಗ ಸಮಯ ೩.೩೦ ಆಗಿತ್ತು. ಅತ್ತಿಗುಂಡಿ ದಾರಿಯಲ್ಲಿರುವ ಆ ತಿರುವುಗಳನ್ನು ಮತ್ತು ತಡೆಗೋಡೆ ಇರದ ರಸ್ತೆಯನ್ನು ನೆನೆಸಿ ಆ ದಾರಿ ಬೇಡವೆಂದು ಲಿಂಗದಹಳ್ಳಿ ದಾರಿ ಹಿಡಿದೆ. ಆದ್ದರಿಂದ ದತ್ತಪೀಠ ಮತ್ತು ಅತ್ತಿಗುಂಡಿ ದಾರಿಯ ಚೆಲುವನ್ನು ನೋಡಲಾಗಲಿಲ್ಲ. ಈ ಪ್ರಯಾಣದ ಬಳಿಕ ಇನ್ನೂ ಆ ಕಡೆ ನಾನು ತೆರಳಿಲ್ಲ. ಕೈಮರ-ಅತ್ತಿಗುಂಡಿ-ಕೆಮ್ಮಣ್ಣುಗುಂಡಿ ದಾರಿಯ ಚೆಲುವನ್ನು ಸಂಪೂರ್ಣವಾಗಿ ಅಸ್ವಾದಿಸುವ ಆಸೆ, ಹಾಗೇ ಉಳಿದಿದೆ.

ಮಾಹಿತಿ: ಚೇತನಾ ದಿನೇಶ್ ಮತ್ತು ದಿನೇಶ್ ಹೊಳ್ಳ

ಸೋಮವಾರ, ಆಗಸ್ಟ್ 04, 2008

ಮತ್ತೊಮ್ಮೆ ಗೋಕಾಕ ಮತ್ತು ಗೊಡಚಿನಮಲ್ಕಿ


ದಿನಾಂಕ: ೨೦೦೫ ಜುಲಾಯಿ ೩೧.

ಮೊದಲೊಮ್ಮೆ ಗೋಕಾಕ ಮತ್ತು ಗೊಡಚಿನಮಲ್ಕಿ ಜಲಧಾರೆಗಳಿಗೆ ಭೇಟಿ ನೀಡಿದ್ದರೂ, ನೀರಿನ ಪ್ರಮಾಣ ಕಡಿಮೆಯಿದ್ದುದರಿಂದ ಮತ್ತೊಮ್ಮೆ ಭೇಟಿ ನೀಡಬೇಕೆಂದಿದ್ದೆ. ಅಂತೆಯೇ ಧರ್ಮಸ್ಥಳ - ಅಥಣಿ ಬಸ್ಸು ನನ್ನನ್ನು ಗೋಕಾಕ ಬಸ್ಸು ನಿಲ್ದಾಣದಲ್ಲಿ ಇಳಿಸಿದಾಗ ಮುಂಜಾನೆ ೬ರ ಸಮಯ. ೧೩ ತಾಸಿನ ಬಸ್ಸು ಪ್ರಯಾಣದಿಂದ ಅಯಾಸಗೊಂಡಿದ್ದರೂ ವಿಶ್ರಾಂತಿ ಪಡೆಯಲು ನನ್ನಲ್ಲಿ ಸಮಯವಿರಲಿಲ್ಲ. ಮರಳಿ ೭ಕ್ಕೆ ಬಸ್ಸು ನಿಲ್ದಾಣಕ್ಕೆ ಬಂದಾಗ ಗೊಡಚಿನಮಲ್ಕಿಗೆ ಬಸ್ಸು ರೆಡಿ ಇತ್ತು. ಆ ಬಸ್ಸು ಹತ್ತಿದೆನಾದರೂ, ಅದೇಕೋ ಗೋಕಾಕ ಜಲಧಾರೆ ಮೊದಲು ನೋಡಿ ನಂತರ ಗೊಡಚಿನಮಲ್ಕಿಗೆ ತೆರಳೋಣವೆಂದೆನಿಸಿದಾಗ, ’ಫಾಲ್ಸ’ ಎಂದು ಗೋಕಾಕ ಜಲಧಾರೆಗೆ ಟಿಕೇಟು ಪಡೆದೆ.


ಮೊದಲ ಸಲ ಬಂದಾಗ ಸಮಾನ ಅಂತರದಲ್ಲಿ ೩ ಕವಲುಗಳಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಮಾತ್ರ ನೀರು ಧುಮುಕುತ್ತಿತ್ತು. ಆದರೆ ಈಗ ಜಲಧಾರೆಯ ಅಗಲಕ್ಕೆ ಒಂದೇ ಕವಲು! ದಷ್ಟಪುಷ್ಟವಾಗಿ ಬೆಳೆದ ಆನೆಯಂತೆ ಕಾಣುತ್ತಿದ್ದ ಗೋಕಾಕ ಜಲಧಾರೆ ಭೋರ್ಗರೆಯುತ್ತಿತ್ತು. ಅಷ್ಟು ಅಗಾಧ ಪ್ರಮಾಣದಲ್ಲಿ ನೀರು ಧುಮುಕುತ್ತಿದ್ದರೂ ಸದ್ದು ಮಾತ್ರ ಬಹಳ ಕಡಿಮೆ. ಕಣಿವೆ ತೆರೆದ ಜಾಗದಲ್ಲಿರುವುದರಿಂದ ಸದ್ದು ಕಡಿಮೆಯಿರಬಹುದು.


ಮೇಲೆ ಹಿಡ್ಕಲ್ ಅಣೆಕಟ್ಟಿನಲ್ಲಿ ಒಂದು ಗೇಟನ್ನು ತೆರೆದಿರಲಿಲ್ಲ. ಅದನ್ನೂ ತೆರೆದಿದ್ದರೆ ಜಲಧಾರೆಯ ಅಗಲ ಇನ್ನಷ್ಟು ವಿಸ್ತಾರಗೊಳ್ಳುತ್ತಿತ್ತು. ನಂತರ ಬ್ರಿಟೀಷ್ ಕಾಲದ ಸೇತುವೆಯ ಮೇಲೆ ತೆರಳಿದೆ. ಸೇತುವೆಯ ಅರ್ಧಕ್ಕೆ ಬಂದಾಗ, ಬೀಸುತ್ತಿದ್ದ ಗಾಳಿಗೆ ಸೇತುವೆ ಜೋರಾಗಿ ಓಲಾಡಲು ಶುರುವಾಯಿತು. ಕೆಳಗೆ ರಭಸದಿಂದ ಹರಿಯುತ್ತಿದ್ದ ಘಟಪ್ರಭಾ ಮತ್ತು ಸ್ವಲ್ಪ ಮುಂದಕ್ಕೆ ಅದು ಧುಮುಕುವ ರುದ್ರ ದೃಶ್ಯ ನೋಡುತ್ತಾ ಹೆದರಿ ಅಲ್ಲೇ ಸೇತುವೆಯ ಕಂಬವೊಂದನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಂತುಬಿಟ್ಟೆ. ನನ್ನ ಪಾಡು ನೋಡಿ ಅಲ್ಲಿನ ಜನರಿಗೆ ನಗು. ’ಏನೂ ಅಗೂದಿಲ್ರೀ...ಗಾಳಿಗೆ ಹಂಗೆ ಅಗ್ತೈತಿ...’ ಎಂದು ಧೈರ್ಯದ ಮಾತುಗಳನ್ನು ಹೇಳಿದರು. ಗಾಳಿ ಸ್ವಲ್ಪ ಕಡಿಮೆ ಆದ ಕೂಡಲೇ ಒಂದೆರಡು ಫೋಟೋ ತೆಗೆದು ಕೂಡಲೇ ಹಿಂತಿರುಗಿದೆ.

ಗೊಡಚಿನಮಲ್ಕಿಯಲ್ಲಿಳಿದು ೩ ಕಿ.ಮಿ. ದೂರದ ಜಲಧಾರೆಯತ್ತ ನಡೆಯಬೇಕಾದರೆ ದಾರಿಯುದ್ದಕ್ಕೂ ವಾಹನಗಳು, ಬೈಕುಗಳು, ಸೈಕಲ್ಲುಗಳು., ನನ್ನಂತೆ ನಡೆದು ಹೋಗುವವರು...ಅಬ್ಬಬ್ಬಾ! ಎಷ್ಟು ಜನರು. ಜಲಧಾರೆಯ ಸಮೀಪವಂತೂ ಸಂತೆ. ೨ ಸಾವಿರದಷ್ಟು ಜನರು ಅಲ್ಲಿ ತುಂಬಿದ್ದರೇನೋ. ’ಛೇ, ಬೆಳಗ್ಗೆ ನೇರವಾಗಿ ಇಲ್ಲೇ ಬರಬೇಕಿತ್ತು’ ಎಂದು ಪರಿತಪಿಸಿದೆ. ಬೆಳಗ್ಗಿನ ಬಸ್ಸಲ್ಲಿ ನೇರವಾಗಿ ಗೊಡಚಿನಮಲ್ಕಿಗೇ ಬಂದಿದ್ದರೆ ಅಷ್ಟು ಮುಂಜಾನೆ ಇಲ್ಲಿ ಯಾರೂ ಇರುತ್ತಿರಲಿಲ್ಲ. ಜಲಧಾರೆಯ ಅಂದವನ್ನು ಸಂಪೂರ್ಣವಾಗಿ ಆನಂದಿಸಬಹುದಿತ್ತು.


ಮಾರ್ಕಾಂಡೇಯ ನದಿ ರೌದ್ರಾವತಾರವನ್ನು ತಾಳಿತ್ತು. ಮೇಲ್ಭಾಗದಲ್ಲಿ ಶಿರೂರು ಅಣೆಕಟ್ಟು ತುಂಬಿದ್ದರಿಂದ ಇಲ್ಲಿ ನೀರೇ ನೀರು. ಮೊದಲ ಬಾರಿಗೆ ತೆರಳಿದ್ದಾಗ ಕಂಡ ದೃಶ್ಯಕ್ಕೂ ಈಗ ಕಾಣುತ್ತಿರುವ ದೃಶ್ಯಕ್ಕೂ ಅಜಗಜಾಂತರ ವ್ಯತ್ಯಾಸ. ಎತ್ತರ ಹೆಚ್ಚೆಂದರೆ ೫೦ ಅಡಿ ಅಷ್ಟೇ. ಅದೂ ಈ ಪರಿ ನೀರು ಹರಿಯುವಾಗ ೩೦ ಅಡಿಯಷ್ಟಿದೆ ಎಂದೂ ಅನಿಸುವುದಿಲ್ಲ! ಈ ಜಲಧಾರೆಯ ಅಂದವಿರುವುದೇ ಇದರ ಅಗಲದಲ್ಲಿ. ಮುಂದೆ ಸಿಂಗಾಪುರ ಎಂಬ ಹಳ್ಳಿಯ ಬಳಿ ಮಾರ್ಕಾಂಡೇಯ ನದಿಯು ಘಟಪ್ರಭಾ ನದಿಯನ್ನು ಸೇರುತ್ತದೆ.


ಜನರಾಶಿಯ ನಡುವೆ ಅಲ್ಲಲ್ಲಿ ನುಸುಳುತ್ತಾ ಒಂದಷ್ಟು ಚಿತ್ರಗಳನ್ನು ತೆಗೆದು ಅಲ್ಲಿಂದ ಗೋಕಾಕಕ್ಕೆ ಹಿಂತಿರುಗಿ, ಬಸ್ಸಿನಲ್ಲಿ ಧಾರವಾಡಕ್ಕೆ ಹೊರಟೆ. ದಾರಿಯಲ್ಲಿ ಸೌಂದತ್ತಿ ಸಮೀಪ ನವಿಲುತೀರ್ಥದಲ್ಲಿ ಮಲಪ್ರಭಾ ನದಿಗೆ ನಿರ್ಮಿಸಿದ ಅಣೆಕಟ್ಟು ಮತ್ತು ಹಿನ್ನೀರಿನ ದೃಶ್ಯ. ಹಿನ್ನೀರಗುಂಟ ಬಸ್ಸು ಸಾಗುತ್ತಿತ್ತು. ಮತ್ತದೇ ಮುಳುಗಡೆ, ಸ್ಥಳಾಂತರ, ಪರಿಹಾರ, ಇತ್ಯಾದಿಗಳ ಚಿತ್ರಣ ಮನಸ್ಸಿನಲ್ಲಿ ತೇಲಲು ಆರಂಭಿಸಿದವು.