ಮಂಗಳವಾರ, ಮೇ 20, 2008

ಉದ್ರಿಯ ದೇವಾಲಯಗಳು ಮತ್ತು ತಾಳಗುಂದದ ಪ್ರಾಣೇಶ್ವರ


ಉದ್ರಿಯಲ್ಲಿ ಹೊಯ್ಸಳರು ನಿರ್ಮಿಸಿರುವ ೩ ಹಳೇ ದೇವಾಲಯಗಳಿವೆ - ಈಶ್ವರ ದೇವಾಲಯ, ನಾರಾಯಣ ದೇವಾಲಯ (ಮೇಲಿನ ಚಿತ್ರ) ಮತ್ತು ಲಕ್ಷ್ಮೀನಾರಾಯಣ ದೇವಾಲಯ.


ಈಶ್ವರ ದೇವಾಲಯ ಊರಿನ ನಡುವಲ್ಲೇ ಇದೆ. ಸಣ್ಣ ದಿಬ್ಬವೊಂದರ ಮೇಲಿರುವ ಈ ದೇವಾಲಯ ಶಿಥಿಲಗೊಳ್ಳುತ್ತಿದೆ. ಗರ್ಭಗೃಹ ಮತ್ತು ಸುಖನಾಸಿ ಮಾತ್ರ ಇದ್ದು, ನವರಂಗ ಸಂಪೂರ್ಣವಾಗಿ ಬಿದ್ದುಹೋಗಿದೆ.

ಊರಿನ ಕೊನೆಯಲ್ಲಿ ನಾರಾಯಣ ದೇವಾಲಯವಿದೆ. ವಿಶಾಲ ಪ್ರಾಂಗಣ ಹೊಂದಿರುವ ದೇವಾಲಯದ ಮುಂದೆ ದೊಡ್ಡ ಉದ್ದನೆಯ ಶಿಲಾಶಾಸನವೊಂದಿದೆ. ದೇವಾಲಯದ ಬದಿಯಲ್ಲಿ, ಶಿಲಾಬಾಲಿಕೆಯರ ಹಾನಿಗೊಳಗಾದ ಮೂರ್ತಿಗಳನ್ನು ಇರಿಸಲಾಗಿದೆ.


ದೇವಾಲಯದ ಗೋಪುರ ಸಣ್ಣದಾದರೂ ಸುಂದರವಾಗಿದೆ. ನವರಂಗದಲ್ಲಿ ಶಿಲಾಬಾಲಿಕೆಯೊಬ್ಬಳ ಸುಂದರ ಮೂರ್ತಿಯನ್ನಿರಿಸಲಾಗಿದೆ.


ತಾಳಗುಂದದಿಂದ ಒಂದು ಕಿಮಿ ಚಲಿಸಿದರೆ ಕೆರೆಯೊಂದರ ತಟದಲ್ಲಿ ಸಣ್ಣದೊಂದು ದೇವಾಲಯ. ಇದೇ ತಾಳಗುಂದ ಪ್ರಾಣೇಶ್ವರ ದೇವಾಲಯ. ಗರ್ಭಗೃಹ ಮತ್ತು ಸುಖನಾಸಿ ಬಿಟ್ಟರೆ ಬೇರೇನೂ ಇಲ್ಲ. ದೇವಾಲಯದ ಮುಂದೆ ಒಂದು ಧ್ವಜಸ್ತಂಭ ಇದೆ. ಇದನ್ನು ಹೊಸದಾಗಿ ನಿರ್ಮಿಸಿರುವಂತೆ ತೋರುತ್ತದೆ. ಎಲ್ಲಿಂದಲೋ ತಂದು ೨ ನಂದಿಗಳನ್ನು ದೇವಲಯದ ಮುಂದೆ ಇರಿಸಲಾಗಿದೆ ಅಥವಾ ಸಮೀಪದಲ್ಲೆಲ್ಲೋ ಉತ್ಖನನ ಮಾಡುವಾಗ ಸಿಕ್ಕಿದ್ದೂ ಇರಬಹುದು. ಕೆರೆಯ ತಟದಲ್ಲಿರುವುದರಿಂದ ಈ ಜಾಗಕ್ಕೆ ಹೆಚ್ಚಿನ ಸೌಂದರ್ಯ.


ಶಿವಲಿಂಗ ಮಾತ್ರ ಸುಮಾರು ೩ ಅಡಿ ಎತ್ತರವಿದೆ. ಪೀಠವನ್ನು ಹೊಸದಾಗಿ ನಿರ್ಮಿಸಲಾಗಿದ್ದು, ಅದರ ಮೇಲೆ ಹಳೇ ಕಾಲದ ಮೂಲ ಶಿವಲಿಂಗವನ್ನು ಏರಿಸಲಾಗಿದೆ. ಪೀಠವೇ ಸುಮಾರು ೩.೫ ಅಡಿ ಎತ್ತರವಿದೆ. ದೇವಾಲಯ ಹೊಯ್ಸಳ ಕಾಲಕ್ಕೆ ಸೇರಿದ್ದಿರಬಹುದು. ದೇವಾಲಯದ ಪ್ರಾಂಗಣ ವಿಶ್ರಾಂತಿ ಪಡೆಯಲು ಸೂಕ್ತ ಸ್ಥಳ.

ಮಾಹಿತಿ: ಬಿ.ಪಿ.ಪ್ರೇಮಕುಮಾರ್

1 ಕಾಮೆಂಟ್‌:

Unknown ಹೇಳಿದರು...

ಇತಿಹಾಸದ ನಿಮ್ಮ ಅಭಿರುಚಿಗೆ ಅನಂತಾನಂತ ಅಭಿನಂದನೆಗಳು ಸರ್.ಆದರೆ ತಾಳಗುಂದದ ಇತಿಹಾಸದ ಬಗ್ಗೆ ಸ್ವಲ್ಪ ಇನ್ನೂ ತಿಳಿದುಕೊಂಡ ಹಾಕೋದು ಉತ್ತಮ ಅನಿಸುತ್ತೆ .