ಭಾನುವಾರ, ಏಪ್ರಿಲ್ 27, 2008

ಕಲ್ಲೇಶ್ವರ ದೇವಾಲಯ - ಅಂಬಳಿ


ದೇವಾಲಯ ಚೆನ್ನಾಗಿರಬಹುದೆಂಬ ನಿರೀಕ್ಷೆಯೊಂದಿಗೆ ಅಂಬಳಿ ತಲುಪಿದರೆ, ಕಲ್ಲೇಶ್ವರ ದೇವಾಲಯ ನಿರಾಸೆ ಮಾಡಿತು. ದೇವಾಲಯದ ಸಂಪೂರ್ಣ ನೋಟ ಕಣ್ಣಿಗೆ ಇಷ್ಟು ನಿರಾಶದಾಯಕವಾಗಿತ್ತೆಂದರೆ, ದೇವಾಲಯದ ಒಂದೇ ಒಂದು ಸಂಪೂರ್ಣ ಚಿತ್ರವನ್ನು ನಾನು ತೆಗೆಯಲಿಲ್ಲ. ಇದು ಪಶ್ಚಿಮ ಚಾಲುಕ್ಯ ಕಾಲದ ಏಕಕೂಟ ದೇವಾಲಯ.


ಅಲ್ಲಿದ್ದ ಪುರಾತತ್ವ ಇಲಾಖೆಯ ಸಿಬ್ಬಂದಿಯ ಪ್ರಕಾರ, ದೇವಾಲಯದ ಗೋಪುರಕ್ಕೆ ಹಲವು ಬಾರಿ ಸುಣ್ಣ ಬಳಿದು ಬಳಿದು ಅದು ತನ್ನ ಅಂದಗೆಡಿಸಿಕೊಂಡ ಬಳಿಕ ಊರವರು ಕಡೆಗೆ ಅದನ್ನು ಬೀಳಿಸಿ(?) ಅದರ ಜಾಗದಲ್ಲಿ ಹೊಸ ಗೋಪುರವನ್ನು ನಿರ್ಮಿಸಿದರು ಎಂದು! ಇಷ್ಟೇ ಅಲ್ಲದೆ, ನವರಂಗ/ಸುಖನಾಸಿಯ ಸುತ್ತಲು ಮಾರ್ಬಲ್!!! ಅದರ ಮೇಲೆ ಕುಳಿತು ವಿಶ್ರಮಿಸುತ್ತಿದ್ದರು ಊರವರು. ಇದಕ್ಕೆಲ್ಲಾ ಕಲಶವಿಟ್ಟಂತೆ ನವರಂಗದಿಂದ ಅಂತರಾಳಕ್ಕೆ ತೆರೆದುಕೊಳ್ಳುವ ದ್ವಾರಕ್ಕೆ ಹೊಸ ದ್ವಾರವೊಂದನ್ನು ಅಳವಡಿಸಿ ಅದರ ಮೇಲೆ ’ನೌಕರರ ದೇಣಿಗೆ ಅಂಬಳಿ ೧೯೮೮’ ಎಂಬ ಬರಹ ಬೇರೆ!


ಇಷ್ಟೆಲ್ಲಾ ಆದ ಬಳಿಕ ಪುರಾತತ್ವ ಇಲಾಖೆ ಎಚ್ಚೆತ್ತುಕೊಂಡು ದೇವಾಲಯವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು, ಸುಂದರ ಉದ್ಯಾನವನ್ನು ನಿರ್ಮಿಸಿಕೊಂಡು, ಸಿಬ್ಬಂದಿಯೊಬ್ಬನನ್ನು ನೇಮಿಸಿ ಕಲ್ಲೇಶ್ವರನ ಸನ್ನಿಧಿಯನ್ನು ಕಾಪಾಡಿಕೊಂಡು ಬಂದಿದೆ.


ಮೇಲೆ ತಿಳಿಸಿದ್ದನ್ನೆಲ್ಲಾ ಮರೆತು ದೇವಾಲಯವನ್ನು ವೀಕ್ಷಿಸುವುದಾದರೆ ಇದೊಂದು ಸುಂದರ ದೇವಾಲಯ. ಗರ್ಭಗುಡಿ, ಅಂತರಾಳ, ನವರಂಗ ಮತ್ತು ಮುಖಮಂಟಪವನ್ನು ಈ ದೇವಾಲಯ ಹೊಂದಿದೆ. ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೆ ಪಾಣಿಪೀಠವಿಲ್ಲ(!) ಮತ್ತು ನಂದಿ ಗರ್ಭಗುಡಿಯಲ್ಲೇ ಇದ್ದಾನೆ! ಇದು ಈ ದೇವಾಲಯದ ವೈಶಿಷ್ಟ್ಯ ಎನ್ನಬಹುದು.


ನವರಂಗದಲ್ಲಿ ಪ್ರಭಾವಳಿ ಕೆತ್ತನೆಯಿರುವ ನಾಲ್ಕು ಸುಂದರ ಕಲ್ಲಿನ ಕಂಬಗಳು. ನವರಂಗದಿಂದ ಅಂತರಾಳಕ್ಕೆ ತೆರೆದುಕೊಳ್ಳುವ ದ್ವಾರದ ಇಕ್ಕೆಲಗಳಲ್ಲಿ ಜಾಲಂಧ್ರಗಳು. ದೇವಾಲಯದ ಸುತ್ತಲೂ ಹೊರಗೋಡೆಯಲ್ಲಿರುವ ಸಿಂಹಗಳ ಮತ್ತು ಮೊಸಳೆಗಳ ತಲೆಗಳ ಕೆತ್ತನೆಯಿದೆ.


ದೇವಾಲಯದ ನಿರ್ಮಾಣಗೊಂಡ ವರ್ಷದ ಬಗ್ಗೆ ತಿಳಿಸುವ ಶಾಸನ ಲಭ್ಯವಾಗಿಲ್ಲ. ಈ ದೇವಾಲಯದಲ್ಲಿ ಪಶ್ಚಿಮ ಚಾಲುಕ್ಯ ದೊರೆ ಆರನೇ ವಿಕ್ರಮಾದಿತ್ಯನ ಆಳ್ವಿಕೆಯ ಕಾಲದ (ಇಸವಿ ೧೦೮೧ ಮತ್ತಿ ೧೧೦೫) ಎರಡು ಶಾಸನಗಳು ದೊರಕಿವೆ. ಮೊದಲ ಶಾಸನದಲ್ಲಿ ಈ ದೇವಾಲಯಕ್ಕೆ ಮಾಡಲಾಗಿರುವ ದಾನದತ್ತಿಗಳ ಬಗ್ಗೆ ವಿವರಗಳಿರುವುದರಿಂದ ೧೦೮೧ ಕ್ಕಿಂತ ಮೊದಲೇ ಈ ದೇವಾಲಯದ ನಿರ್ಮಾಣವಾಗಿದೆಯೆಂದು ಇತಿಹಾಸಕಾರರ ಅಭಿಪ್ರಾಯ. ಊರಿನಲ್ಲಿರುವ ಹನುಮಂತನ ದೇವಾಲಯದಲ್ಲಿ ಪಶ್ಚಿಮ ಚಾಲುಕ್ಯ ದೊರೆ ಎರಡನೇ ಜಗದೇಕಮಲ್ಲನ ಕಾಲದ (ಇಸವಿ ೧೧೪೩) ಶಾಸನವೂ ದೊರಕಿದೆ.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ

ಶುಕ್ರವಾರ, ಏಪ್ರಿಲ್ 18, 2008

’ಮೇಘರಾಗ’ಕ್ಕೆ ಆಮಂತ್ರಣ


ಗೆಳೆಯರೆ,

ಇದೇ ಎಪ್ರಿಲ್ ೨೭ರ ಆದಿತ್ಯವಾರ ಮಂಗಳೂರಿನ ಹವ್ಯಾಸಿ ಚಾರಣಿಗರ ಗುಂಪು ’ವನ್ಯ ಚಾರಣ ಬಳಗ’ ಚಾರ್ಮಾಡಿಯ ಮಲಯಮಾರುತದಲ್ಲಿ ’ಮೇಘರಾಗ’ ಎಂಬ ಸಣ್ಣ ಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪ್ರಮುಖ ಉದ್ದೇಶ, ದಿನೇಶ್ ಹೊಳ್ಳ ಬರೆದ ಕಥಾ ಸಂಕಲನ ’ಬೆಟ್ಟದ ಹೆಜ್ಜೆಗಳು’ ಪುಸ್ತಕದ ಬಿಡುಗಡೆ. ಈ ಪುಸ್ತಕದ ಬಿಡುಗಡೆಯ ಕಾರ್ಯಕ್ರಮವನ್ನು ಬೆಟ್ಟದ ಮೇಲೆಯೇ ಹಮ್ಮಿಕೊಳ್ಳೋಣವೆಂಬ ವಿಚಾರ ಬಂದಾಗ ಮನಸ್ಸಿಗೆ ಬಂದ ತಾಣಗಳು ಹಲವಾರು. ಕೊನೆಗೆ ಎಲ್ಲಾ ದೃಷ್ಟಿಯಿಂದಲೂ ಸೂಕ್ತವಾಗಿರುವ ತಾಣವೆಂದು ಮಲಯಮಾರುತವನ್ನೇ ಆಯ್ಕೆ ಮಾಡಿಕೊಂಡೆವು.

ಈ ಸಂದರ್ಭದಲ್ಲಿ ಉದಯೋನ್ಮುಖ ಯುವ ಕವಿಗಳಿಂದ ಕವನ ವಾಚನ ಮತ್ತು ಕಲಾವಿದರಿಂದ ಚಾರ್ಮಾಡಿಯ ಗಿರಿ ವನಗಳ ಕ್ಯಾನ್ವಾಸ್ ಪೇಂಟಿಂಗ್ ಕಾರ್ಯಕ್ರಮವೂ ಇದೆ. ಉತ್ತರ ಕನ್ನಡದ ಹಾಲಕ್ಕಿ ಸಮುದಾಯದ ಹಿರಿಯ ಜಾನಪದ ಕಲಾವಿದೆ, ರಾಜ್ಯಪ್ರಶಸ್ತಿ ಮತ್ತು ನಾಡೋಜ ಪ್ರಶಸ್ತಿ ವಿಜೇತ, ’ಹಾಡೊ ಹಕ್ಕಿ’ ಎಂದೇ ನಾಮಾಂಕಿತ ಶ್ರೀಮತಿ ಸುಕ್ರಿ ಬೊಮ್ಮಗೌಡ, ಆರ್ಯಭಟ ಪ್ರಶಸ್ತಿ ವಿಜೇತ ಕೊಳಲು ವಾದಕ ಶ್ರೀ ಕೆ.ಮುರಳೀಧರ ಮತ್ತು ಪರಿಸರ ಪ್ರೇಮಿ ಶ್ರೀ ಶೀನ ನಡೋಳಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.

ಇನ್ನೊಂದು ಸಂತೋಷದ ಸುದ್ದಿ ಎಂದರೆ ಬಂಡಾಜೆ ಜಲಪಾತಕ್ಕೆ ಚಾರಣಗೈಯುವ ಚಾರಣಿಗರಿಗೆ ಯಾವುದೇ ಸಮಯದಲ್ಲೂ ಸಹಾಯ ಹಸ್ತ ನೀಡಲು ಸಿದ್ಧರಾಗಿರುವ ಶ್ರೀ ವಳಂಬ್ರ ನಾರಾಯಣ ಗೌಡರು ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಲಿರುವರು. ಕಾರ್ಯಕ್ರಮಕ್ಕೆ ಆಗಮಿಸಲಿರುವ ಉಳಿದ ಗಣ್ಯರ ವಿವರಗಳು ಆಮಂತ್ರಣ ಪತ್ರಿಕೆಯಲ್ಲಿವೆ.

ಮಂಗಳೂರು ಯೂತ್ ಹಾಸ್ಟೆಲ್-ನಿಂದ ೨೭ ಎಪ್ರಿಲ್ ಮುಂಜಾನೆ ೬.೩೦ಕ್ಕೆ ಮಲಯಮಾರುತಕ್ಕೆ ತೆರಳಲು ಉಚಿತ ವಾಹನ ಸೌಕರ್ಯವಿದೆ. ತಮಗೆಲ್ಲರಿಗೂ ’ವನ್ಯ ಚಾರಣ ಬಳಗ’ ವತಿಯಿಂದ ’ಮೇಘರಾಗ’ಕ್ಕೆ ಇದು ಆಮಂತ್ರಣ.

ಹೆಚ್ಚಿನ ಮಾಹಿತಿಗೆ ’ವನ್ಯ ಚಾರಣ ಬಳಗ’ದ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು.
ಸುಧೀರ್ ಕುಮಾರ್ - ೯೪೪೯೦೭೯೬೫೬
ವಿನಯ್ - ೯೮೮೦೭೯೨೯೪೬
ಪ್ರವೀಣ್ ಕುಮಾರ್ - ೯೪೪೮೨೪೯೩೧೩
ದಿನೇಶ್ ಹೊಳ್ಳ - ೯೩೪೧೧೧೬೧೧೧