ಮಂಗಳವಾರ, ಮಾರ್ಚ್ 27, 2007

ಏರಿಕಲ್ಲನ್ನು ಏರಿ


ಏರಿಕಲ್ಲಿಗೆ ಚಾರಣ ಮಾಡುವುದರ ಸಲುವಾಗಿ ಮಾರ್ಚ್ 25ರಂದು ಮುಂಜಾನೆ 6:30ಕ್ಕೆ ಮಂಗಳೂರಿನಿಂದ ಚಾರ್ಮಾಡಿಗೆ ಹೊರಡುವುದುದೆಂದು ಆಯೋಜಕ ದಿನೇಶ್ ಹೊಳ್ಳರು ತಿಳಿಸಿದ್ದರು. ಉತ್ತರ ಕರ್ನಾಟಕದ ಊರುಗಳಿಂದ ಮಂಗಳೂರಿಗೆ ಬರುವ ಬಸ್ಸುಗಳು ಮುಂಜಾನೆ 3.30ರಿಂದ 5.30ರೊಳಗೆ ಉಡುಪಿ ಹಾದುಹೋಗುತ್ತವೆ. ಈ ಬಸ್ಸುಗಳಲ್ಲೊಂದರಲ್ಲಿ ತೆರಳುವ ಎಂದು ಮುಂಜಾನೆ 5ಕ್ಕೆ 5 ನಿಮಿಷ ಇರುವಾಗ ಉಡುಪಿ ಬಸ್ಸು ನಿಲ್ದಾಣಕ್ಕೆ ಬಂದರೆ, ಬರುವೆನೆಂದು ತಿಳಿಸಿದ್ದ ರಾಕೇಶ್ 'ಜಿರಾಫೆ' ಹೊಳ್ಳ ಎಲ್ಲೂ ಕಾಣುತ್ತಿರಲಿಲ್ಲ. ಫೋನಾಯಿಸಿದರೆ, 'ಇಲ್ಲೇ ಇದ್ದೇನೆ. ಹಿಂದೆ ತಿರುಗಿ ನೋಡಿ' ಎಂದ. ಹೊಟೇಲೊಂದರೊಳಗೆ ತಿಂಡಿ ಆರ್ಡರ್ ಮಾಡಿ ಆರಾಮವಾಗಿ ಕುಂತಿದ್ದ. ನನಗೆ 6.30ರೊಳಗೆ ಮಂಗಳೂರು ಯೂತ್ ಹಾಸ್ಟೆಲ್ ತಲುಪುವ ತವಕವಿದ್ದರೆ, ಈತನಿಗೆ ತಿನ್ನುವ ತವಕ!

5.10ಕ್ಕೆ ಕೂಡಲಸಂಗಮದಿಂದ ಬಂದ ಬಸ್ಸನ್ನೇರಿದೆವು. ಹಿಂದಿನ ದಿನ ರಾತ್ರಿ ತಡವಾಗಿ ಮಲಗಿದ್ದರಿಂದ ಈಗ ಬಸ್ಸಲ್ಲಾದರೂ ಮಲಗೋಣವೆಂದರೆ ನಿರ್ವಾಹಕರು ಬಿಟ್ಟರೆ ತಾನೆ? ಆತನಿಗೆ ಕೊಟ್ಟ ಟಿಕೇಟುಗಳಿಗೂ ಇದ್ದ ಪ್ರಯಾಣಿಕರಿಗೂ ಹೊಂದಾಣಿಕೆಯಾಗುತ್ತಿರಲಿಲ್ಲ. ಆತನದ್ದು 'ಟಿಕೀಟು 37 ಕೊಟ್ಟಿನ್ರಿ, ಮಂದಿ 38 ಅದಾರ್ರಿ' ಎಂಬುದೊಂದೇ ವರಾತ. ಎಲ್ಲರ ಟಿಕೇಟುಗಳನ್ನು ನಾಲ್ಕೈದು ಸಲ ಪರೀಕ್ಷಿಸಿದರೂ ಹೊಂದಾಣಿಕೆಯಾಗಲಿಲ್ಲ. 'ತಲಿ ಕೆಡಾಕ್-ಹತ್ತೈತ್ರಿ' ಎನ್ನುತ್ತಾ ಮತ್ತೊಂದು ಸಲ ಪರೀಕ್ಷಿಸಲು ಮುಂದಾದಾಗ ಒಂದಿಬ್ಬರಿಂದ ಬೈಸಿಕೊಂಡೂ, ನಮ್ಮಿಂದ ತಮಾಷೆ ಮಾಡಿಸಿಕೊಂಡಿದ್ದೂ ಆಯಿತು. ಆ ಬಡಪಾಯಿಗೆ, ಎಲ್ಲಾದರೂ 'ಚೆಕ್ಕಿಂಗ್'ಗೆ ಬಂದುಬಿಟ್ಟರೆ ನೌಕರಿ ಕಳಕೊಳ್ಳುವ ಭಯ. ಮಂಗಳೂರಿಗೆ ಕೇವಲ 10ಕಿಮಿ ಇರುವಾಗಲೇ ಈ ಭೂಪನಿಗೆ ಅರಿವಾದ್ದು, ತಾನು ಇಬ್ಬರು ಮಕ್ಕಳಿಗೆ ಎರಡು ಅರ್ಧ ಟಿಕೇಟ್ ಬದಲಾಗಿ ಒಂದು ಫುಲ್ ಟಿಕೇಟ್ ಕೊಟ್ಟಿದ್ದೇನೆಂದು! ತಲೆ ಚಚ್ಚಿಕೊಳ್ಳುವ ಸರದಿ ನಮ್ಮದಾಗಿತ್ತು.

ಮೋಹನನ 'ಶಕ್ತಿ' ಟೆಂಪೊದಲ್ಲಿ ಚಾರ್ಮಾಡಿ ಘಟ್ಟದ ನಾಲ್ಕನೇ ತಿರುವಿನ ಬಳಿ ತಲುಪಿದಾಗ 10 ಗಂಟೆಯಾಗಿತ್ತು. ಇಲ್ಲಿಂದ ಏರಿಕಲ್ಲಿಗೆ ಆರೋಹಣ ಮಾಡಿ, ಅವರೋಹಣವನ್ನು ಚಾರ್ಮಾಡಿ ತಲುಪುವಂತೆ ಮಾಡುವುದೆಂದು ತೀರ್ಮಾನವಾಗಿತ್ತು. ಮೊದಲ 120 ನಿಮಿಷಗಳ ಚಾರಣ ದಟ್ಟವಾದ ಕಾಡಿನ ನಡುವೆ ಸಂಪೂರ್ಣ ಏರುಹಾದಿ. ಅಲ್ಲಲ್ಲಿ ಅನೆಗಳ ಲದ್ದಿ. ಚಾರಣ ನಿಧಾನಗತಿಯಲ್ಲಿ ಸಾಗುತ್ತಿತ್ತು. ಕಾಡಿನ ಹಾದಿಯನ್ನು ಮನಸಾರೆ ಆನಂದಿಸುತ್ತಾ ಏರಿಕಲ್ಲು ಮೊದಲ ಬಾರಿಗೆ ದೂರದಲ್ಲಿ ತನ್ನ ದರ್ಶನ ಮಾಡುವ ಸ್ಥಳ ತಲುಪಿದಾಗ ಸಮಯ 12 ಆಗಿತ್ತು. ಏರಿಕಲ್ಲಿನ ಬದಿಯಿಂದಲೇ ಸಾಗಿ ನಂತರ 'ಯು ಟರ್ನ್' ತಗೊಂಡು ತುದಿಗೆ ಸಾಗುತ್ತಿತ್ತು ಚಾರಣದ ಹಾದಿ.


ಕಾಡಿನ ಹಾದಿ ಮುಗಿದ ಬಳಿಕ ನಂತರದ ಹಾದಿ ಸುಂದರವಾಗಿತ್ತು. ದೂರದಲ್ಲಿ ಕಾಣುವ ಬಾರೆಕಲ್ಲು ಮತ್ತು ಕೊಡೆಕಲ್ಲು, ವಿರುದ್ಧ ದಿಕ್ಕಿನಲ್ಲಿರುವ ಅಮೇದಿಕಲ್ಲು ಮತ್ತು ಮಿಂಚುಕಲ್ಲು ಇತ್ಯಾದಿಗಳ ಸೌಂದರ್ಯವನ್ನು ಆಸ್ವಾದಿಸುತ್ತಾ, ನಡುನಡುವೆ ಸಿಗುವ ಸಣ್ಣ ಶೋಲಾ ಕಾಡುಗಳಲ್ಲಿ ವಿಶ್ರಾಂತಿ ಪಡೆಯುತ್ತಾ, 'ಯು ಟರ್ನ್' ತಗೊಳ್ಳುವಲ್ಲಿ ಬಂದೆವು. ಇಲ್ಲಿದ್ದ ಚಡಾವು ಸುಮಾರು 110 ಡಿಗ್ರಿ ಕೋನದಾಗಿದ್ದು ಕಠಿಣವಾಗಿತ್ತು. ಎಷ್ಟೇ ಹತ್ತಿದರೂ ಮುಗಿಯುತ್ತಿರಲಿಲ್ಲ. ಈ ಏರುಹಾದಿಗೆ ಹಿಡಿಶಾಪ ಹಾಕುತ್ತಾ ಮೇಲೇರಿದೆವು. ಅಲ್ಲಲ್ಲಿ ಇದ್ದ ಸಣ್ಣ ಸಣ್ಣ ಪೊದೆಗಳನ್ನು ಆಧಾರವಾಗಿ ಬಳಸಿ ಮೇಲೆ ತಲುಪಿದಾಗ ದೂರದಲ್ಲಿ ಮತ್ತೊಂದು ಆಕಾರದಲ್ಲಿ ಏರಿಕಲ್ಲಿನ ದರ್ಶನ. ಹಾಗೆ ಮುನ್ನಡೆದು ಏರಿಕಲ್ಲಿನ ಬುಡ ತಲುಪಿದಾಗ ಸಮಯ ಮಧ್ಯಾಹ್ನ 2.

ಏರಿಕಲ್ಲಿನ ಮೇಲೆ ಹೋಗುವುದು ಕಷ್ಟಸಾಧ್ಯ. ಸರಿಯಾದ ದಾರಿಯಿಲ್ಲ. ಏರಿಕಲ್ಲಿನ ಬುಡದಲ್ಲೇ ಕುಳಿತು ವಿಶ್ರಾಂತಿ ಪಡೆಯುತ್ತ ಅರ್ಧ ಗಂಟೆ ಕಳೆದೆವು. ಚಾರ್ಮಾಡಿ ಘಟ್ಟದ ದೃಶ್ಯ ಸುಂದರವಾಗಿತ್ತು. ಹಾಗೆನೇ ಮತ್ತೊಂದು ಬದಿಯಲ್ಲಿ ಕಾಣುತ್ತಿತ್ತು ಚಾರ್ಮಾಡಿ ಮೂಲಕ ಹಾದುಹೋಗುವ ರಸ್ತೆ ಮತ್ತು ನೇತ್ರಾವತಿ ನದಿಯ ಹರಿವು. ಎಲ್ಲಾ ಪ್ರಮುಖ ಬೆಟ್ಟಗುಡ್ಡಗಳು 'ನಾನು ಇಲ್ಲಿದ್ದೇನೆ', 'ತಾನು ಇಲ್ಲಿದ್ದೇನೆ' ಎಂಬಂತೆ ಕಾಣುತ್ತಿದ್ದವು. ಆಗಾಗ ಬೀಸುವ ತಂಗಾಳಿ ಹಿತವಾಗಿತ್ತು. ಏರಿಕಲ್ಲು ಚಾರ್ಮಾಡಿ ಶ್ರೇಣಿಯ ಮೊದಲ ಶಿಖರ. ನಂತರವೇ ಬಾರೆಕಲ್ಲು, ಕೊಡೆಕಲ್ಲು, ದೊಡ್ಡೇರಿಬೆಟ್ಟ, ದುರ್ಗದಬೆಟ್ಟ, ಅಮೇದಿಕಲ್ಲು, ಜೇನುಕಲ್ಲುಗುಡ್ಡ ಇತ್ಯಾದಿಗಳು ಬರುತ್ತವೆ.


ಸರಿಯಾಗಿ 3 ಗಂಟೆಗೆ ಚಾರ್ಮಾಡಿ ದಾರಿಯಲ್ಲಿ ಏರಿಕಲ್ಲಿನಿಂದ ಅವರೋಹಣ ಪ್ರಾರಂಭ. ಸುಮಾರು 45 ನಿಮಿಷಗಳ ಬಳಿಕ ಮತ್ತೆ ಕಾಡಿನ ದಾರಿ ಆರಂಭ. ಇಲ್ಲಿಂದಲೇ ಏರಿಕಲ್ಲನ್ನು ಕೊನೆಯ ಬಾರಿಗೆ ನೋಡಬಹುದು. ಮತ್ತೊಂದು ಆಕಾರದಲ್ಲಿ ಏರಿಕಲ್ಲು ಇಲ್ಲಿಂದ ಕಾಣುತ್ತಿತ್ತು. ನಂತರ ಕಾಡು ಹೊಕ್ಕ ನಾವು ಮುಂದಿನ 3 ತಾಸು ಕಾಡಿನಿಂದ ಹೊರಗೆ ಬರಲಿಲ್ಲ. ಪೂರ್ಣವಾಗಿ ಇಳಿಜಾರಿನ ದಾರಿಯಾಗಿದ್ದು ದಟ್ಟವಾದ ಕಾಡಿನ ನಡುವೆ ಮಾರ್ಗದರ್ಶಿ ಇಸುಬು ನಮ್ಮನ್ನು ಕರೆದೊಯ್ಯುತ್ತಿದ್ದ. ಅದಾಗಲೇ ಕತ್ತಲಾಗುತ್ತಿತ್ತು. ಚಂದ್ರನ ಬೆಳಕು ಸ್ವಲ್ಪ ಇದ್ದಿದ್ದರಿಂದ ದಾರಿ ಅಸ್ಪಷ್ಟವಾಗಿಯಾದರೂ ಕಾಣುತ್ತಿತ್ತು. ಸಹಚಾರಣಿಗರೊಬ್ಬರಿಗೆ 'ಕ್ರ್ಯಾಂಪ್ಸ್' ಬಂದು ಸ್ವಲ್ಪ ತೊಂದರೆಯಾಗಿದ್ದರಿಂದ ಮತ್ತು ಕತ್ತಲಾಗುತ್ತಿದ್ದರಿಂದ ಚಾರ್ಮಾಡಿ ಸಮೀಪಿಸುತ್ತಿದ್ದಂತೆ ಚಾರಣದ ವೇಗ ನಿಧಾನಗತಿಯಲ್ಲಿ ಸಾಗುತ್ತಿತ್ತು.

ಮಾರ್ಗದರ್ಶಿ ಇಸುಬುನ ಪ್ರಕಾರ ಕತ್ತಲಾಗುತ್ತಿರುವಾಗ ನಾವಿನ್ನೂ ಆನೆಗಳು ಓಡಾಡುವ ಸ್ಥಳದಲ್ಲೇ ಇದ್ದೆವು ಮತ್ತು ಅದು ಕರಡಿಗಳು ಅಲೆದಾಡುವ ಸ್ಥಳ ಕೂಡಾ. ಆತನ ಎಲ್ಲಾ ಮಾತುಗಳನ್ನು ನಂಬುವಂತೆ ಇಲ್ಲ. ಕತ್ತಲಲ್ಲೂ ಕಾಳಿಂಗಸರ್ಪ ನೋಡಿದ ಮಹಾನುಭಾವ ಈ ಇಸುಬು! ಈ ಇಸುಬುನ ಕಾಡಿನ ಅನುಭವಗಳು ಸಕತ್ತಾಗಿವೆ. ಮುಂದೆ ಯಾವಾಗಾದರೂ ಅವುಗಳ ಬಗ್ಗೆ ಬರೆಯುವೆ. ಚಾರ್ಮಾಡಿ ತಲುಪಿದಾಗ ರಾತ್ರಿ 8.15. ಮಂಗಳೂರು ತಲುಪಿ, ಸಿಂದಗಿಗೆ ಹೊರಟಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ಸಲ್ಲಿ ಉಡುಪಿ ತಲುಪಿ ಮನೆಗೆ ಎಂಟ್ರಿ ಹೊಡೆದಾಗ ಸರಿಯಾಗಿ ಮಧ್ಯರಾತ್ರಿ 12.

ಗುರುವಾರ, ಮಾರ್ಚ್ 22, 2007

ಕಲ್ಯಾಣಿ ನಿಸರ್ಗ ಧಾಮದ ಸೌಂದರ್ಯ


ಹೊಸನಗರ ತಾಲೂಕಿನ ನಿಟ್ಟೂರಿನಲ್ಲೊಂದು ಪ್ರಕೃತಿ ಪ್ರೇಮಿಯೊಬ್ಬರು ನಡೆಸುವ ನಿಸರ್ಗ ಧಾಮವೊಂದಿದೆ ಎಂದು ಕೇಳಿದ್ದೆ ಹಾಗೂ ಓದಿದ್ದೆ ಕೂಡಾ. ಕಲ್ಯಾಣಿ ನಿಸರ್ಗ ಧಾಮ ಎಂಬ ಸುಂದರ ಹೆಸರು ಈ ನಿಸರ್ಗ ಧಾಮಕ್ಕೆ. ಕಳೆದ ರವಿವಾರ ಗೆಳೆಯ ರಾಕೇಶ್ ಹೊಳ್ಳನೊಂದಿಗೆ ಮಧ್ಯಾಹ್ನ 3 ಗಂಟೆಗೆ ಕಲ್ಯಾಣಿಗೆ ತಲುಪಿದ ನಮ್ಮನ್ನು ಎದುರುಗೊಂಡವರು ಶ್ರೀ ಕೃಷ್ಣಮೂರ್ತಿಯವರು. ಆತ್ಮೀಯತೆಯಿಂದ ಬರಮಾಡಿಸಿ ಮರದ ನೆರಳಿನಲ್ಲಿ ಕುರ್ಚಿ ಹಾಕಿ ಮತ್ತಷ್ಟು ಆತ್ಮೀಯತೆಯಿಂದ ಕುಶಲೋಪಚರಿ ವಿಚಾರಿಸಿಕೊಂಡರು. ಉಡುಪಿಯಿಂದ ಈ ಉರಿ ಬಿಸಿಲಿನಲ್ಲಿ ಬಂದಿದ್ದೀರಾ, ಊಟ ಮಾಡುವಿರಂತೆ, ನಂತರ ಆರಾಮಾವಾಗಿ ಕೂತು ಮಾತಾಡೋಣ ಎಂದು ಅಡಿಗೆ ಮನೆ ಎಂಬ ಕುಟೀರಕ್ಕೆ ಕರೆದೊಯ್ದರು. ’ಊಟ’ ಎಂದ ಕೂಡಲೇ ನಮಗೆ ಮತ್ತಷ್ಟು ಹಸಿವಾಗತೊಡಗಿತು. ನಿಟ್ಟೂರಿನಲ್ಲಿ ನಾಲ್ಕೈದು ಬಾಳೆಹಣ್ಣುಗಳನ್ನು ಇದೇ ಕಾರಣಕ್ಕಾಗಿ ಖರೀದಿಸಿದ್ದೆವು. ಆದರೆ ಇಲ್ಲಿ ಕೃಷ್ಣಮೂರ್ತಿಯವರು ’ಊಟ ಮಾಡುವಿರಂತೆ’ ಎಂದಾಗ ಸ್ವರ್ಗಕ್ಕೆ 3ರೇ ಗೇಣು!

ಅನಿರೀಕ್ಷಿತವಾಗಿ ಸಿಕ್ಕಿದ ಊಟವಂತೂ ಭಾರೀ ರುಚಿ. ಆಪ್ಪಟ ಮಲೆನಾಡಿನ ಮೆನು. ಹೊಟ್ಟೆ ಶುದ್ಧವಾಗುತ್ತೆ ಕುಡೀರಿ ಎಂದು ಲೋಟಗಟ್ಟಲೆ ಕೊಟ್ಟ ’ತಂಬಳಿ’ಯಂತೂ ಗ್ರೇಟ್. ಅತೀಯಾಗಿ ಶರಾಬು ಕುಡಿಯುವವರಿಗೆ ಈ ’ತಂಬಳಿ’ ಒಳ್ಳೆಯದು, ಹೊಟ್ಟೆ ಶುದ್ಧವಾಗಿಬಿಡುತ್ತೆ ಎಂದು ಕೃಷ್ಣಮೂರ್ತಿಯವರು ಹೇಳಿದಾಗ, ಎಲ್ಲರಿಗೂ ನಗು. ತನ್ನ ಪ್ರಮಾದವನ್ನು ಅರ್ಥ ಮಾಡಿಕೊಂಡ ಕೃಷ್ಣಮೂರ್ತಿಯವರು ನಾಚಿಕೊಂಡು ಕ್ಷಮೆ ಯಾಚಿಸಿ ಮತ್ತಷ್ಟು ನಗು ಬರಿಸಿದರು. ಅಲ್ಲಿ ಉಳಿದುಕೊಂಡಿದ್ದ ಬೆಂಗಳೂರಿನ 10 ಜನರ ಶ್ರೀಮಂತ ಕುಟುಂಬವೊಂದು ಭರ್ಜರಿಯಾಗೇ ಊಟ ಮಾಡಿತು. ಇನ್ನೊಂದು ಗುಂಪು ಕೊಡಚಾದ್ರಿಗೆ ಚಾರಣಕ್ಕೆ ಹೋಗಿದ್ದರೆ ಮತ್ತೊಂದು ಗುಂಪು ಕೊಲ್ಲೂರಿಗೆ ಮೂಕಾಂಬಿಕೆಯ ದರ್ಶನಕ್ಕೆ ತೆರಳಿತ್ತು.

ನಂತರ ಭೇಟಿಯಾಯಿತು ಮಂಜಣ್ಣನವರದು. ಇವರೊಂದು ಭಲೇ ಯೋಗ ಪಟು. ಅಲ್ಲಲ್ಲಿ ಯೋಗ ಶಿಬಿರಗಳನ್ನು ನಡೆಸಿ ಹೆಸರು ಗಳಿಸಿದವರು. ದೊಡ್ಡ ಪ್ರಕೃತಿ ಪ್ರೇಮಿ ಹಾಗೇನೇ ಪ್ರಮುಖ ಸ್ಥಳಗಳಲ್ಲಿ ಉತ್ತಮ ಕನೆಕ್ಷನ್ ಉಳ್ಳ ದೊಡ್ಡ ಕುಳ ಕೂಡಾ. ತನ್ನದೇ ಸ್ವಂತ ಜಾಗದಲ್ಲಿ ಕುಟೀರಗಳನ್ನು ನಿರ್ಮಿಸಿ, ಶಾಂತ ಸ್ಥಳದಲ್ಲಿ ಒಂದೆರಡು ದಿನಗಳನ್ನು ಕಳೆದು ಹೋಗುವವರ ಸಲುವಾಗಿ ರೂಪುಗೊಂಡ ಕಲ್ಯಾಣಿ ನಿಸರ್ಗ ಧಾಮದ ರೂವಾರಿ ಈ ಮಂಜಣ್ಣ. ಉತ್ತಮ ಮಾತುಗಾರ. ಪರಿಸರದ ಬಗ್ಗೆ ವಿಪರೀತ ಕಾಳಜಿ. ಕಲ್ಯಾಣಿ ನಿಸರ್ಗ ಧಾಮವನ್ನು ಇನ್ನಷ್ಟು ವಿಸ್ತರಿಸಬೇಕು, ಮತ್ತಷ್ಟು ಸೌಕರ್ಯಗಳನ್ನು ಬರುವವರಿಗೆ ನೀಡಬೇಕು ಎಂದು ಸುಮಾರು ಅರ್ಧ ಗಂಟೆ ಹರಟಿದರು.

ಶಿವಮೊಗ್ಗ ಯೂತ್ ಹಾಸ್ಟೆಲ್ ಜತೆಗೆ ನಿಕಟ ಸಂಪರ್ಕ ಹೊಂದಿರುವ ಮಂಜಣ್ಣ, 3-4 ದಿನಗಳ ಚಾರಣದ ದಾರಿಗಳನ್ನು ಸಿದ್ಧಪಡಿಸಿ ಅದನ್ನು ಕಾರ್ಯರೂಪಕ್ಕೆ ತರುವ ಹಂತದಲ್ಲಿದ್ದಾರೆ. ಇದರಲ್ಲಿ ’ಪಂಚ ಜಲಪಾತ ದರ್ಶನ’ ಎಂಬ 4 ದಿನಗಳ ಚಾರಣದ ಯೋಜನೆ ನನಗೆ ಬಹಳ ಹಿಡಿಸಿತು. ಜೋಗದಿಂದ ಶುರು ಮಾಡಿ, ದಬ್ಬೆ ಮುಗಿಸಿ, ಬೆಳ್ಳಿಗುಂಡಿ ಹಾದಿಯಾಗಿ, ಅರಶಿನಗುಂಡಿಯಲ್ಲಿಳಿದು ನಂತರ ಹಿಡ್ಲುಮನೆಯಲ್ಲಿ ಮುಕ್ತಾಯಗೊಳಿಸುವುದು. ಈ ಐದೂ ಜಲಪಾತಗಳನ್ನು ನಾನು ನೋಡಿದ್ದರೂ ಚಾರಣದ ಹಾದಿ ವಿಶಿಷ್ಟವಾಗಿರುವುದರಿಂದ ಆಸಕ್ತಿ ಹುಟ್ಟಿತು.


ನಿಸರ್ಗ ಧಾಮದೊಳಗೆ ಮರದ ಮೇಲೊಂದು ಸುಂದರ ಮಚಾನ್ ಇದೆ, ಪಕ್ಕದಲ್ಲೇ ಮಲ್ಲಕಂಭ, ರೋಪ್ ಲ್ಯಾಡರ್, ರೋಪ್ ಕ್ಲೈಂಬಿಂಗ್ ಮತ್ತು ಇನ್ನೂ ಇತರ ಟೈಮ್ ಪಾಸ್ ಮಾಡಲು ಬೇಕಾಗುವ ಎಲ್ಲಾ ವಿಧಾನಗಳಿವೆ. ಜೋಕಾಲಿಯೂ ಇದೆ. ಹತ್ತು ನಿಮಿಷ ನಡೆದರೆ ಲಿಂಗನಮಕ್ಕಿ ಹಿನ್ನೀರಿನ ಪ್ರಶಾಂತ ತಟ. ದೋಣಿಯಲ್ಲಿ ಕುಳಿತು 3ಕಿಮಿ ಪ್ರಯಾಣಿಸಿ ಕುಕ್ಕನಗುಡ್ಡಕ್ಕೊಂದು ಸುತ್ತು ಹಾಕಿ ಬರಬಹುದು. 2-3 ದಿನಗಳನ್ನು ಏಕಾಂತದಲ್ಲಿ, ಗೌಜಿ ಗಲಾಟೆಯಿಂದ ದೂರ ಕಳೆಯುವುದಿದ್ದಲ್ಲಿ ಕಲ್ಯಾಣಿ ಒಂದು ಸೂಕ್ತ ಸ್ಥಳ. ಈ ಬಾರಿ ವೇಗವಾಗಿ ಹೋಗಿ ಅಷ್ಟೆ ವೇಗವಾಗಿ ಹಿಂತಿರುಗುದೆವು. ಮುಂದಿನ ಬಾರಿ ವೇಗವಾಗಿ ಹೋಗಿ ನಿಧಾನವಾಗಿಯೇ ಹಿಂತಿರುಗುವುದು.

3 ವಾರಗಳ ಹಿಂದೆ ಕಾರ್ಗಲ್ ಸಮೀಪದ ಹುಕ್ಕಲು ಎಂಬಲ್ಲಿಗೆ ಭೇಟಿ ನೀಡಿದ್ದೆ. ತಲಕಳಲೆ ಹಿನ್ನೀರಿನ ದಂಡೆಯಲ್ಲಿರುವ ಹುಕ್ಕಲಿನಲ್ಲಿ ಸ್ಥಳೀಯರೆ ಒಂದೆರಡು ಕುಟೀರಗಳನ್ನು ಹಾಕಿ ಬಂದವರಿಗೆ ಉಳಕೊಳ್ಳಲು ವ್ಯವಸ್ಥೆ ಮಾಡಿಕೊಡುತ್ತಾರೆ. ಆದರೆ ಕಲ್ಯಾಣಿಯಲ್ಲಿರುವಂತಹ ಅದ್ಭುತ ವ್ಯವಸ್ಥೆ ಹುಕ್ಕಲಿನಲ್ಲಿಲ್ಲ. ಹುಕ್ಕಲಿನ ಈ ವ್ಯವಸ್ಥೆಗಳನ್ನು ನೋಡಿಕೊಳ್ಳುವ ನರಹರಿಯವರಿಗೊಂದು ದೂರವಾಣಿ ಕರೆ ಮಾಡಿ ಮುಂಚಿತವಾಗಿ ತಿಳಿಸಿದರೆ ಊಟ, ಉಪಹಾರ ಇತ್ಯಾದಿಗಳೊಂದಿಗೆ ರಾಜ ಮರ್ಯಾದೆ ಸಿಗುವುದು ಖರೆ. ಒಂದೆರಡು ದಿನ ಉಳಕೊಂಡು 10ಕಿಮಿ ದೂರವಿರುವ ದಬ್ಬೆ ಜಲಪಾತಕ್ಕೆ ಚಾರಣ ಮಾಡಿ, ಅಲ್ಲೇ ಕಾಡಿನಲ್ಲಿ ತಿರುಗಾಡಿ, ಹಿನ್ನೀರಿನ ಅಗಾಧತೆಯನ್ನು ನೋಡುತ್ತ ಕಾಲಹರಣ ಮಾಡುವುದಾದರೆ ಹುಕ್ಕಲು ಇಸ್ ಎ ನೈಸ್ ಪ್ಲೇಸ್.

ಶುಕ್ರವಾರ, ಮಾರ್ಚ್ 02, 2007

ಇಲ್ಲೊಂದು ಜೋಗ!


ವಿಚಿತ್ರ ಹೆಸರಿನ ವಿಶಿಷ್ಟ ಜಲಪಾತ ಇದು. ವರ್ಷದ ಯಾವುದೇ ಸಮಯದಲ್ಲೂ ನೀರಿರುವ 'ಆಲ್ ಸೀಸನ್' ಜಲಪಾತ ಈ ಜೋಗ. ಸುಂದರ ಕಣಿವೆಯಲ್ಲಿ ನಾಲ್ಕು ಹಂತಗಳಲ್ಲಿ ಭೋರ್ಗರೆಯುತ್ತ ವರ್ಷದ ಎಲ್ಲಾ ಸಮಯದಲ್ಲಿ ತನ್ನನ್ನು ವೀಕ್ಷಿಸಲು ಬರುವವರನ್ನು ನಿರಾಸೆಗೊಳಿಸದ ಈ ಜಲಧಾರೆ, ಮಳೆಗಾಲ ಮತ್ತು ನಂತರದ ಎರಡು ತಿಂಗಳಲ್ಲಿ ತನ್ನ ಹತ್ತಿರ ಯಾರನ್ನೂ ಸುಳಿಯಲು ಬಿಡದಷ್ಟು ರೌದ್ರಾವತಾರವನ್ನು ತಾಳಿರುತ್ತದೆ.

ಮೊದಲ ಹಂತ ಸುಮಾರು ೨೦೦ ಅಡಿಯಷ್ಟು ಎತ್ತರವಿದ್ದು ೪ ಹಂತಗಳನ್ನು ಒಳಗೊಂಡಿದೆ. ನಂತರ ಸ್ವಲ್ಪ ಮುಂದೆ ಅಷ್ಟೇನು ಆಕರ್ಷಕವಲ್ಲದ ದ್ವಿತೀಯ ಹಂತ. ಸುಮಾರು ೧೩೦ ಕೋನದ ಆಕಾರದಲ್ಲಿ ರಭಸವಾಗಿ ಹರಿಯುವ ಈ ಹಂತ ತನ್ನ ಇಕ್ಕೆಲಗಳಲ್ಲಿ ಬಂಡೆಗಳನ್ನು ಹೊಂದಿರುವುದರಿಂದ ವಿಪರೀತ ಶಬ್ದವನ್ನು ಮಾಡುತ್ತಾ ತಾನು ತನ್ನ ೩ ಸೋದರರಿಗಿಂತ ಕಮ್ಮಿಯಿಲ್ಲ ಸದ್ದು ಮಾಡುವುದರಲ್ಲಾದರೂ ಎನ್ನುತ್ತಾ ಹರಿಯುತ್ತದೆ.


ನಂತರ ಮುಂದೆ ಕಣಿವೆಯಲ್ಲಿ ಇನ್ನಷ್ಟು ಆಳಕ್ಕೆ ೩ನೇ ಹಂತ ಧುಮುಕುತ್ತದೆ. ಈ ಹಂತವನ್ನು ತಳದಿಂದ ವೀಕ್ಷಿಸಬೇಕಾದಲ್ಲಿ ಸ್ವಲ್ಪ ಧೈರ್ಯ ಮಾಡಿ ಕೆಳಗಿಳಿಯಬೇಕಾಗುತ್ತದೆ. ಇದು ಸುಮಾರು ೮೦-೧೦೦ ಅಡಿ ಎತ್ತರವಿದ್ದು ನೇರವಾಗಿ ಧುಮುಕದೆ ಸ್ವಲ್ಪ ಓರೆಯಾಗಿ ಧುಮುಕುತ್ತದೆ. ನಂತರ ಸುಮಾರು ೧೫೦ ಆಡಿ ಆಳಕ್ಕೆ ನಾಲ್ಕನೇ ಹಂತ ಹಾರುತ್ತದೆ. ಈ ಹಂತದ ಮೇಲ್ಭಾಗದ ಪಾರ್ಶ್ವ ನೋಟ ಮಾತ್ರ ಲಭ್ಯ. ಬಹಳ ಆಳಕ್ಕೆ ಧುಮುಕುವ ನಾಲ್ಕನೇ ಹಂತದ ಸಂಪೂರ್ಣ ನೋಟ ಬೇಕಾದಲ್ಲಿ ಹಳ್ಳಗುಂಟ ನೀರಿನ ಹರಿವಿನ ವಿರುದ್ಧ ದಿಕ್ಕಿನಲ್ಲಿ ನಡೆದು ಮೇಲ್ಭಾಗಕ್ಕೆ ಬರಬೇಕಾಗುತ್ತದೆ. ಬೇಸಗೆಯಲ್ಲಿ ಈ ಚಾರಣ ಮಾಡುವ ಇರಾದೆ ಇದೆ.


ನಂತರ ಹಾಗೇ ಮುಂದೆ ಕಣಿವೆಯಲ್ಲಿ ಬಳುಕುತ್ತಾ ಹರಿಯುವ ಇಳಿಮನೆ ಹಳ್ಳ ಮುಂದೆ ಅಘನಾಶಿನಿ ನದಿಯನ್ನು ಸೇರುತ್ತದೆ. ೩ನೇ ಹಂತದ ಬದಿಯಿಂದ ಇಳಿಮನೆ ಹಳ್ಳ ಕಣಿವೆಯಲ್ಲಿ ಮುಂದಕ್ಕೆ ಹರಿಯುವ ದೃಶ್ಯ ಸುಂದರ.

ಮಾಹಿತಿ: ಅ.ನಾ.ರಾವ್ ಜಾದವ್