ಮಂಗಳವಾರ, ಡಿಸೆಂಬರ್ 26, 2006

ಕುದುರೆಮುಖ


ಈ ಬಾರಿಯ ಚಾರಣ ಕುದುರೆಮುಖಕ್ಕೆ. ಈಗ್ಗೆ ೧೫ ದಿನಗಳ ಹಿಂದೆ ಕುದುರೆಮುಖದಲ್ಲಿ ಚಾರಣಕ್ಕೆ ತೆರಳಲು ಅನುಮತಿಯನ್ನು ನೀಡಲು ಶುರುಮಾಡಿದ್ದರು. 2 ವರ್ಷಗಳಿಂದ 'ನಕ್ಸಲೈಟ್' ಎಂಬ ಶಬ್ದವನ್ನು ಮುಂದಿಟ್ಟು ಚಾರಣಕ್ಕೆ ಅನುಮತಿ ನೀಡಲಾಗುತ್ತಿರಲಿಲ್ಲ. 23 ಡಿಸೆಂಬರ್ ರಾತ್ರಿ ೭.೩೦ಕ್ಕೆ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಮೊದಲಿರುವ ಕೊನೆಯ ಮನೆಯಾಗಿರುವ ರಾಜಪ್ಪ ಗೌಡರ ಮನೆ ತಲುಪಿ ಅಲ್ಲೇ ರಾತ್ರಿ ಕಳೆದು, ಮರುದಿನ ಮುಂಜಾನೆ ೯.೦೦ಕ್ಕೆ ಕೆಪೀಕ್(ಕುದುರೆಮುಖ ಪೀಕ್)ಗೆ ಚಾರಣ ಆರಂಭ. ರಾಜಪ್ಪ ಗೌಡರ ಮನೆಯಿಂದ ಕೆಪೀಕ್ 8ಕಿಮಿ ದೂರ.

3 ಕಿಮಿ ಕ್ರಮಿಸಿದ ಬಳಿಕ ಸಿಗುವುದು ಲೋಬೊನ ಮನೆ. ರಾಷ್ಟ್ರೀಯ ಉದ್ಯಾನ ಆಗುವ ಮೊದಲು ಲೋಬೊ ಇಲ್ಲಿದ್ದ. ನಂತರ ಬೆಳ್ತಂಗಡಿಗೆ ತನ್ನ ಸಂಸಾರವನ್ನು 'ಶಿಫ್ಟ್' ಮಾಡಿದ. ಲೋಬೊ ಅಣ್ಣ ತಮ್ಮಂದಿರ ಪಾಳುಬೀಳುತ್ತಿರುವ ೩ ಮನೆಗಳಿಲ್ಲಿವೆ. ಚಾರಣಿಗರು ರಾತ್ರಿ ಇಲ್ಲಿ ತಂಗುವುದು ಸಾಮಾನ್ಯ. ತಂಡದ 3 ಸದಸ್ಯರು ಬಹಳ ಹಿಂದೆ ಇದ್ದ ಕಾರಣ, ಅವರು ಬರುವುದನ್ನು ಖಾತ್ರಿಗೊಳಿಸಿದ ಮೇಲೆ ತಾವು ಬರುತ್ತೇವೆ ಎಂದು ಜಗದೀಶ್ ಹಾಗೂ ಶತ್ರುಘ್ನ 3ನೇ ಲೋಬೊ ಮನೆ ಬಳಿ ನಿಂತರೆ ಉಳಿದವರು ಮುನ್ನಡೆದೆವು.

ಲೋಬೊ ಮನೆಯ ಬಳಿಕ ಸಿಗುವುದೇ ಕಠಿಣ ಚಡಾವು ಇರುವ ಏರು ಹಾದಿ. ಈ ಬೆಟ್ಟದ ಮೇಲೆ ತಲುಪಿದ ಬಳಿಕ ಹಿಂತಿರುಗಿ ನೋಡಿದರೆ, ಜಗದೀಶ್ ಹಾಗೂ ಶತ್ರುಘ್ನ ಬಂದ ದಾರಿಯಲ್ಲಿ ವಾಪಾಸು ಓಡುತ್ತಿದ್ದರು!

ಲೋಬೊ ಮನೆಗಳು ಸಿಗುವ ಸ್ವಲ್ಪ ಮೊದಲು ಕವಲೊಡೆಯುವ ಹಾದಿಗೆ 'ನಾವೂರು ಕ್ರಾಸ್' ಎಂದು ಹೆಸರು. ಇಲ್ಲಿ ನೇರವಾಗಿ ನಡೆದರೆ ಕೆಪೀಕ್. ಎಡಕ್ಕೆ ತಿರುಗಿ ಸ್ಪಷ್ಟವಾಗಿ ಕಾಣುವ ಕಾಲುಹಾದಿಯಲ್ಲಿ ತೆರಳಿದರೆ ಬೆಳ್ತಂಗಡಿ ತಾಲೂಕಿನ ಕಿಲ್ಲೂರು ಸಮೀಪವಿರುವ ನಾವೂರಿಗೆ ೬-೭ ಕಿಮಿ. ಕೆಪೀಕ್-ಗೆ ತೆರಳುವ ಕಾಲುಹಾದಿಗಿಂತ ನಾವೂರಿಗೆ ತೆರಳುವ ಹಾದಿ ಸ್ಪಷ್ಟವಾಗಿ ಕಾಣುತ್ತಿದ್ದರಿಂದ ಪ್ರಥಮ ಬಾರಿ ಕೆಪೀಕ್-ಗೆ ಬರುತ್ತಿದ್ದ ನಿಶಾಂತ್ ನಾವೂರಿನ ದಾರಿಯಲ್ಲಿ ತೆರಳಿದರು. ನಿಶಾಂತ್-ಗಿಂತ ಒಂದೆರಡು ನಿಮಿಷ ಹಿಂದಿದ್ದ ಗುರುದತ್ ಮತ್ತು ನಿಹಾಲ್, ಸರಿಯಾದ ದಾರಿಯಲ್ಲಿ ಬಂದರು. ೩ನೇ ಲೋಬೊ ಮನೆ ಬಳಿ ಕಾಯುತ್ತಿದ್ದ ಜಗದೀಶ್ ಮತ್ತು ಶತ್ರುಘ್ನ ದೂರದಲ್ಲಿ ಇಬ್ಬರೇ ಬರುತ್ತಿರುವುದನ್ನು ಕಂಡು 'ನಿಶಾಂತ್ ಎಲ್ಲಿ' ಎಂದು ಜೋರಾಗಿ ಕೂಗಿ ಕೇಳಿದಾಗ, 'ಮುಂದೆ ಹೋಗಿದ್ದಾರೆ' ಎಂಬ ಉತ್ತರ ಬಂದಾಗಲೇ ನಿಶಾಂತ್ ದಾರಿ ತಪ್ಪಿದ್ದಾರೆ ಎಂದು ಅವರನ್ನು ಹುಡುಕಲು ವಾಪಾಸು ಬಂದ ದಾರಿಯಲ್ಲೇ ಓಡುವುದನ್ನು ನಾವು 6 ಮಂದಿ ಗಮನಿಸಿದ್ದು ಲೋಬೊ ಮನೆಯ ಹಿಂದಿರುವ ಬೆಟ್ಟದ ಮೇಲಿನಿಂದ. ಸುಮಾರು ೪೫ ನಿಮಿಷಗಳ ಹುಡುಕಾಟದ ಬಳಿಕ ನಿಶಾಂತ್ ನಾವೂರು ಹಾದಿಯಲ್ಲಿ ಬರುವ ಮೊದಲ ಮಳೆಕಾಡಿನ ನಡುವೆ 'ಯಾರೂ ಕಾಣುತ್ತಿಲ್ಲವಲ್ಲ. ಎಲ್ಲಿ ಮಾಯವಾದರು?' ಎಂದು ಯೋಚಿಸುತ್ತ ನಿಂತ ಸ್ಥಿತಿಯಲ್ಲಿ ಸಿಕ್ಕಿದರು.

೩ನೇ ಲೋಬೊ ಮನೆಯ ಹಿಂದಿರುವ 2 ಬೆಟ್ಟಗಳನ್ನು ಹತ್ತಿದರೆ ನಂತರ 3ಕಿಮಿ, ಆಚೀಚೆ ಇರುವ ಅದ್ಭುತ ದೃಶ್ಯವನ್ನು ಕಣ್ತುಂಬ ನೋಡಿ, ಸವಿದು ನಿಧಾನ ನಡೆಯುವ ಸುಲಭದ ಹಾದಿ. ಈ ೩ ಕಿಮಿ ದೂರದ ಚಾರಣ, ಕುದುರೆಮುಖ ಶ್ರೇಣಿಯ ಅದ್ಬುತ ಸೌಂದರ್ಯವನ್ನು ಕಣ್ಣಿಗೆ ಕುಕ್ಕುವಂತೆ ಪ್ರದರ್ಶಿಸುತ್ತದೆ. ಎಲ್ಲಾ ದಿಕ್ಕುಗಳಲ್ಲೂ ಬೆಟ್ಟ ಶ್ರೇಣಿಗಳು, ಕಣಿವೆಗಳು, ಮಳೆಕಾಡುಗಳು. ಕೊನೆಯ ೧.೫ ಕಿಮಿ ಹಾದಿ ಕೆಪೀಕ್-ನ 'ರಿಡ್ಜ್' ಮೇಲೆ ನಡೆದು ಹೋಗುವ ದಾರಿ. ಈ ೧.೫ಕಿಮಿ ಹಾದಿಯುದ್ದಕ್ಕೂ ಕಾಣುವ ದೃಶ್ಯ ರಮಣೀಯ. ಯಾಕೆ 'ಕುದ್ರೆಮುಖ ಇಸ್ ಎ ಗಿಫ್ಟೆಡ್ ಪ್ಲೇಸ್, ವಿ ಶುಡ್ ಸೇವ್ ಇಟ್' ಎನ್ನುತ್ತಾರೆ ಎಂದು ಇಲ್ಲಿ ಭೇಟಿ ನೀಡಿದರೆ ತಿಳಿಯುತ್ತದೆ.

ಭಾನುವಾರ, ಡಿಸೆಂಬರ್ 17, 2006

ಕರ್ನಾಟಕದ ಮುಕುಟಕ್ಕೆ ಪ್ರವಾಸ - ೪


ಮರುದಿನ ಸೋಮವಾರ ಬೆಳಗ್ಗೆ ಬಸವಕಲ್ಯಾಣದಿಂದ ೪ ಕಿ.ಮಿ ದೂರದಲ್ಲಿರುವ ನಾರಾಯಣಪುರಕ್ಕೆ ಹೊರಟೆ. ಮುಂಜಾನೆ ೭.೩೦ಕ್ಕೆ ನಾರಾಯಣಪುರ ಕ್ರಾಸ್ ಬಳಿ ಬಂದಾಗ ಹಲವಾರು ರಿಕ್ಷಾಗಳು ನಿಂತಿದ್ದವು. ಇವಕ್ಕೆ ಟಮ್ ಟಮ್ ಅಂತಾರಂತೆ. ಒಂದು ಟಮ್ ಟಮ್ ೧೧-೧೨ ಜನರನ್ನು ತುಂಬಿಸಿಕೊಂಡು ಹೋಗುತ್ತೆ. ಇನ್ನೂ ಸರಿಯಾಗಿ ಮೀಸೆ ಬರದ ಹುಡುಗ ನನ್ನನ್ನು ಆತನ ಟಮ್ ಟಮ್-ನ ಒಳಗೆ ಕೂರಿಸಿ ಇನ್ನುಳಿದ ಪ್ರಯಾಣಿಕರಿಗಾಗಿ ಕಾಯತೊಡಗಿದ. ೧೨ ಜನರಿಗೆ ರೂಪಾಯಿ 3ರಂತೆ ನಾರಾಯಣಪುರಕ್ಕೆ ಒಂದು ಸವಾರಿಗೆ ಟಮ್ ಟಮ್ ೩೬ ರೂಪಾಯಿ ಗಳಿಸುತ್ತದೆ. ನಾನೊಬ್ಬನೇ ಅಷ್ಟು ಹಣವನ್ನು ನೀಡುತ್ತೇನೆ ಎಂದಾಗ ಟಮ್ ಟಮ್ ಹೊರಟಿತು. ನಾರಾಯಣಪುರದಲ್ಲಿ ಚಾಳುಕ್ಯರ ಕಾಲದ ಸುಂದರವಾದ ಶಿವ ದೇವಸ್ಥಾನವೊಂದಿದೆ. ದೇವಸ್ಥಾನದ ಒಳಗೆ ಕಾಲಿಡುತ್ತಿದ್ದಂತೆಯೇ ಯಾವುದೋ ಪ್ರಾಚೀನ ಕಾಲಕ್ಕೆ ತೆರಳಿದಂತೆ ಭಾಸವಾಗುವುದಂತೂ ನಿಜ. ಇಲ್ಲೂ ಗರ್ಭಗುಡಿಯೊಳಗೆ ಪ್ರವೇಶಿಸಬಹುದು. ದೇವಾಲಯಕ್ಕೆ ಸುತ್ತು ಹಾಕಿದರೆ ಸುಂದರವಾಗಿ ಕೆತ್ತಿರುವ ಶಿಲಾಬಾಲಿಕೆಯರು ಗಮನ ಸೆಳೆಯುತ್ತಾರೆ.


ಬಸವಕಲ್ಯಾಣದಲ್ಲಿರುವ ಬಸವಣ್ಣನವರ ದೇವಸ್ಥಾನ ನನ್ನ ಮುಂದಿನ ಸ್ಟಾಪ್. ಹೊರಗಿನಿಂದ ದೇವಸ್ಥಾನ ಅಷ್ಟೇನು ಆಕರ್ಷಕವಾಗಿಲ್ಲ. ಕಲ್ಯಾಣ ಮಂಟಪಕ್ಕೆ ಬಂದಂತೆ ಅನ್ನಿಸತೊಡಗಿತು. ನಿಜಕ್ಕೂ ಅಲ್ಲಿ ಕಲ್ಯಾಣ ಮಂಟಪವಿತ್ತು. ಅದನ್ನು ದಾಟಿದ ನಂತರ ದೇವಾಲಯಕ್ಕೆ ಪ್ರವೇಶ. ಬಸವಣ್ಣನವರ ಮೂರ್ತಿಯಂತೂ ಬಹಳ ಆಕರ್ಷಕವಾಗಿದೆ.


ನಂತರ ಬಸವಕಲ್ಯಾಣ ಕೋಟೆಯತ್ತ ತೆರಳಿದೆ. ಮಹಾದ್ವಾರದ ಒಳಗೆ ಹೋದರೆ ಅಲ್ಲೊಂದು ಶಾಲೆ. ಕೋಟೆಯ ಮಹಾದ್ವಾರ ಮತ್ತು ಪ್ರಥಮ ದ್ವಾರದ ನಡುವೆ ಇರುವ ವಿಶಾಲ ಪ್ರಾಂಗಣದಲ್ಲಿ ಈಗ ಸರಕಾರ ಶಾಲೆಯೊಂದನ್ನು ನಡೆಸುತ್ತಿದೆ.


ಹಾಗೆ ಮುಂದೆ ಎರಡನೇ ಬಾಗಿಲತ್ತ ನಡೆದರೆ ಅದಕ್ಕೆ ಬೀಗ ಹಾಕಿತ್ತು. ಅಲ್ಲೇ ಒಂದು ಸೂಚನೆ: ಸೋಮವಾರ ರಜಾ ದಿನ. ಅಲ್ಲೇ ಕಲ್ಲಿಗೆ ತಲೆ ಹೊಡೆದುಕೊಳ್ಳುವಷ್ಟು ಸಿಟ್ಟು ಮತ್ತು ನಿರಾಸೆ ಎರಡೂ ಒಟ್ಟಿಗೆ ಆಯಿತು.


ಬೇರೆ ದಾರಿ ಕಾಣದೆ ತಿರುಗಿ ಮಹಾದ್ವಾರದತ್ತ ಬಂದೆ. ಮತ್ತದೇ ಮೆಟ್ಟಿಲುಗಳು.ಆಕರ್ಷಕವಾಗಿ ಕೆತ್ತಿದ, ಕಡಿದಾದ ಮೆಟ್ಟಿಲುಗಳು 1ನೇ ಮಹಡಿಗೆ ಕರೆದೊಯ್ದವು. ಅಲ್ಲಿ ಕೆಲವರು 'ಕಾರ್ಡ್ಸ್' ಆಡುತ್ತ ಕಾಲಹರಣ ಮಾಡುತ್ತಿದ್ದರು. ನಂತರ ಹಾಗೇ ಎರಡನೇ ಮಹಡಿಗೆ ತೆರಳಿದೆ. ಇಲ್ಲಿಂದ ಕೋಟೆಯ ಸಂಪೂರ್ಣ ದೃಶ್ಯ ಲಭಿಸಿ, ಸ್ವಲ್ಪ ಸಮಾಧಾನವೆನಿಸಿತು.


ಕೋಟೆಯಲ್ಲಿ ೧೯೪೮ರ ತನಕ ಹೈದರಾಬಾದಿನ ನಿಜಾಮರ ವಂಶಜರು ವಾಸಿಸುತ್ತಿದ್ದರು. ಕೋಟೆಯನ್ನು ಅಷ್ಟಕೋನಾಕೃತಿಯಲ್ಲಿ ಕಟ್ಟಲಾಗಿದ್ದು, ಪ್ರತಿಯೊಂದು ಹಂತವು ಮೊದಲಿನ ಹಂತಕ್ಕಿಂತ ಮೆಲ್ಮಟ್ಟದಲ್ಲಿರುವುದು. ಸುಮಾರು ೫ ಹಂತಗಳು ಇದ್ದಿರಬಹುದು ಎಂದು ಮಹಾದ್ವಾರದ ಮೇಲಿನಿಂದ ಊಹಿಸಿದೆ. ಕೋಟೆಯು ಕಂದಕದಿಂದ ಸುತ್ತುವರಿದ ಒಂದು ದಿಬ್ಬದ ಮೇಲಿದೆ. ಇಂತಹ ಅದ್ಭುತ ಮತ್ತು ವಿಶಿಷ್ಟ ಕೋಟೆಯನ್ನು ಒಳಹೊಕ್ಕು ನೋಡಲಾಗಲಿಲ್ಲವಲ್ಲ ಎಂಬ ಕೊರಗು ಮಾತ್ರ ಈಗಲೂ ಇದೆ.

ಅಕ್ಕನಾಗಮ್ಮನ ಗವಿ, ಬಸವಣ್ಣನವರ ಗವಿ ಮತ್ತು ಅರುಹಿನ ಮನೆ ಇವಿಷ್ಟನ್ನು ನೋಡಲು ಸಮಯವಿರಲಿಲ್ಲ. ಹುಮ್ನಾಬಾದ್-ನಿಂದ ೮ ಕಿ.ಮಿ. ದೂರವಿರುವ ಜಲಸಂಘಿಯಲ್ಲಿ ಚಾಳುಕ್ಯರು ಕಟ್ಟಿಸಿದ ಅದ್ಭುತವಾದ ದೇವಾಲಯವಿದೆ. ಆದರೆ ಸಮಯದ ಅಭಾವದಿಂದ ಇದನ್ನೂ ಕೈಬಿಡಬೇಕಾಯಿತು.


ಬೀದರ್-ನಿಂದ ಮಧ್ಯಾಹ್ನ 12.30ಕ್ಕೆ ಹೊರಡುವ ಬೀದರ್ - ಉಡುಪಿ ಬಸ್ಸು, 1.40ಕ್ಕೆ ಹುಮ್ನಾಬಾದ್ ಬಸ್ ನಿಲ್ದಾಣದಿಂದ ಹೊರಡುವುದರಿಂದ, 1.40ರ ಮೊದಲೇ ನಾನು ಹುಮ್ನಾಬಾದ್ ತಲುಪಬೇಕಿತ್ತು. ಅವಸರದಲ್ಲಿ, ಬಸವಕಲ್ಯಾಣದಿಂದ ಚಿಂಚೋಳಿಗೆ ಹೊರಟ ಬಸ್ಸನ್ನೇರಿ 1.30ಕ್ಕೆ ಹುಮ್ನಾಬಾದ್ ತಲುಪಿದೆ. ಶೋಲಾಪುರ, ಝಳಕಿ ಮಾರ್ಗವಾಗಿ ಬಿಜಾಪುರಕ್ಕೆ ಬಂದು ಮರುದಿನ ಅಂದರೆ ಮಂಗಳವಾರ ಮಧ್ಯಾಹ್ನ 12.30ಕ್ಕೆ ಉಡುಪಿಯಲ್ಲಿ ನಾನು ಇಳಿದಾಗ ಬಹು ದಿನದ ಆಸೆ ಪೂರೈಸಿದ ತೃಪ್ತಿಯಿತ್ತು.

ಒಂದನೇ ಭಾಗ ಇಲ್ಲಿದೆ. ಎರಡನೇ ಭಾಗ ಇಲ್ಲಿದೆ. ಮೂರನೇ ಭಾಗ ಇಲ್ಲಿದೆ.

ಸೋಮವಾರ, ಡಿಸೆಂಬರ್ 11, 2006

ಕಣಿವೆಯಲ್ಲೊಂದು ಜಲಪಾತ


ಆರ್.ವಿಶ್ವನಾಥ್ ಬರೆದಿದ್ದ ಲೇಖನವನ್ನು ಕಿಸೆಯಲ್ಲಿಟ್ಟುಕೊಂಡು ಈ ಹಳ್ಳಿಯಲ್ಲಿ ನಿನ್ನೆ ರವಿವಾರ ಮುಂಜಾನೆ ೮.೪೫ಕ್ಕೆ ರಿಕ್ಷಾದಿಂದ ಕೆಳಗಿಳಿದಾಗ ಎದುರಾದರು ನೇತ್ರಾವತಿ ಮತ್ತು ಮಹಾದೇವಿ. ಇವರಲ್ಲಿ ಕೃಷ್ಣ ಕುಣಬಿಯ ಬಗ್ಗೆ ವಿಚಾರಿಸಿದಾಗ, 'ಕೃಷ್ಣ ಇಲ್ಲೇ ಅವ್ನೆ. ಕರೀಲೀ' ಎಂದಾಗ 'ಹೂಂ'ಅನ್ನುವ ಮೊದಲೇ, 'ಕೃಷ್ಣಣ್ಣಾ, ಕೂ..ಹೂಯ್.... ಕೇಳ್ಕೊಂಡ್ ಬಂದವ್ರೆ' ಎಂದು ಕರೆದಾಯ್ತು. ಈ ಮಹಾದೇವಿ ಚೀರಾಡಿದ ರೀತಿಗೆ ದಡಬಡಿಸಿ ಓಡೋಡಿ ಬಂದ ಕೃಷ್ಣ. ಅವನನ್ನು ಹಿಂಬಾಲಿಸಿ ಬಂದನು ಪರಮೇಶ್ವರ.

ಗಿಡಕಂಟಿಗಳನ್ನು ಸರಿಸಿ ದಾರಿ ಮಾಡಲು, ಕತ್ತಿಯನ್ನು ಸೊಂಟಕ್ಕೆ ನೇತಾಡಿಸಿ ಕೃಷ್ಣ ಮತ್ತು ಪರಮೇಶ್ವರ ಮುನ್ನಡೆದರು. ಈ ಹಳ್ಳ, ಬೆಟ್ಟದಿಂದ ಜಿಗಿದು ೯ ಜಲಪಾತಗಳನ್ನು ಸೃಷ್ಟಿಸಿ ಕೊಡಸಳ್ಳಿ ಹಿನ್ನೀರನ್ನು ಸೇರುತ್ತದೆ. ಚಾರಣದ ದಾರಿ 1ನೇ ಹಂತದವರೆಗೆ 'ಪೀಸ್ ಆಫ್ ಕೇಕ್'. ನಂತರ ಶುರುವಾಗುವುದೇ ದಾರಿಯಿಲ್ಲದ ಕಡೆ ದಾರಿ ಮಾಡಿಕೊಂಡು ಕಡಿದಾದ ಇಳಿಜಾರಿನಲ್ಲಿ ಇಳಿಯುವುದು. ಈ ೯ ಹಂತಗಳಲ್ಲಿ ೩ ಹಂತಗಳನ್ನು ಅವುಗಳ ಮುಂದೆ ಬುಡದಲ್ಲಿ ನಿಂತು ನೋಡಬೇಕಿದ್ದಲ್ಲಿ ದೊಡ್ಡ ಬಂಡೆಗಳನ್ನು, ಮರಗಳ ಬೀಳುಗಳನ್ನು ಹಿಡಿದು ಸರ್ಕಸ್ ಮಾಡಿ ಹತ್ತಿ ಮತ್ತೆ ಇಳಿಯಬೇಕು.

ಒಂದು ಹಂತವನ್ನು ನೋಡಿ, ಕಲ್ಲು ಬಂಡೆಗಳನ್ನು ಹತ್ತಿ ದಾಟಿ, ಕಾಡನ್ನು ಪ್ರವೇಶಿಸಿ, ಮತ್ತೆ ಇಳಿಜಾರಿನಲ್ಲಿ ದಾರಿ ಮಾಡಿಕೊಂಡು ಮುಂದಿನ ಹಂತದ ಪಾರ್ಶ್ವಕ್ಕೆ ಬಂದು, ಮತ್ತೊಮ್ಮೆ ಕಲ್ಲು ಬಂಡೆಗಳನ್ನು ಹತ್ತಿ ಆ ಹಂತದ ಮುಂಭಾಗಕ್ಕೆ ಬರುವುದು. ಹೀಗೆ ಪ್ರತಿಯೊಂದು ಹಂತವನ್ನು ವೀಕ್ಷಿಸಿದೆವು. ಪ್ರಮುಖ ಹಂತವಾದ ೯ನೇ ಹಂತ ಸುಂದರವಾಗಿದ್ದು, ಹಲವಾರು ಮಿನಿ ಜಲಪಾತಗಳನ್ನು ಹೊಂದಿದೆ. ಇಲ್ಲಿ ಕಳೆದ ೨೦ ನಿಮಿಷ 'ಮೆಮೊರೇಬಲ್'. ಈ ಹಂತದ ಚೆಲುವು ವರ್ಣಿಸಲು ಶಬ್ದಗಳು ಸಾಲದು. ಸುಮಾರು ೧೨೦ಅಡಿ ಎತ್ತರವಿರುವ ಈ ಹಂತಕ್ಕೆ 'ಪ್ರಮುಖ ಜಲಪಾತ' ಎನ್ನಬಹುದು. ನಂತರ ಸಿಗುವ ೯ನೇ ಹಂತ ದಾಟಿ ಸ್ವಲ್ಪ ಮುಂದೆ ಇರುವ ಕೊಡಸಳ್ಳಿ ಹಿನ್ನೀರಿನಲ್ಲಿ ಈ ಹಳ್ಳ ಲೀನವಾಗುವುದು.

1ನೇ ಹಂತದಿಂದ, ಕೊನೆಯ ಹಂತದವರೆಗೆ ಸುಮಾರು ೧೦೦೦ ಅಡಿಯವರೆಗೆ ಇಳಿಯುತ್ತಾ 'ಫುಲ್ ಎಂಜಾಯ್' ಮಾಡುತ್ತಾ ಬಂದ ನಂತರ, ಹಿಂತಿರುಗುವಾಗ ಉಂಟಾದ ಆಯಾಸ...... ವೆಲ್ ಇಟ್ ಇಸ್ ಪಾರ್ಟ್ ಆಫ್ ದ ಚಾರಣ. ಹಳ್ಳಿಯಿಂದ ಕೊಡಸಳ್ಳಿ ಹಿನ್ನೀರಿನವರೆಗೆ ನಮಗೆ ತಗಲಿದ ಸಮಯ ೪ ತಾಸು. ನಂತರ ಮರಳಿ ಹಳ್ಳಿಗೆ, ಜಲಪಾತವಿರುವ ಕಣಿವೆಯ ಬದಿಯಲ್ಲಿರುವ, ಕೊಡಸಳ್ಳಿ ಹಿನ್ನೀರಿನಲ್ಲಿ ಮುಳುಗಿರುವ ಹಿಂದೆ ಜನವಾಸವಿದ್ದ ತೋಟಗಳ ನಡುವೆ ಕಾಲುದಾರಿಯಲ್ಲಿ ಘಟ್ಟ ಹತ್ತಿ ಬಂದಾಗ ತಗಲಿದ ಅವಧಿ ೨ ತಾಸು.

ಸೋಮವಾರ, ಡಿಸೆಂಬರ್ 04, 2006

ಬಿದಿರು ಜಲಧಾರೆ


ಎಲ್ಲೂ ತಿರುಗಾಡಾಲು ಹೋಗದೆ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯವಾಗಿತ್ತು. ಮೊನ್ನೆ ಶನಿವಾರ ಬಿಡುವು ಸಿಕ್ಕೊಡನೆ ಗೆಳೆಯ ಮಾಧವರೊಂದಿಗೆ ಈ ಜಲಪಾತ ನೋಡಲು ತೆರಳಿದೆ. ದಾರಿಯಲ್ಲಿ ಒಂದೆಡೆ, ದೂರದಲ್ಲಿ ಪರ್ವತವೊಂದರ ಮೇಲೆ ಕಾಣುವ ಅಸ್ಪಷ್ಟ ಆಕೃತಿಗಳ ಬಗ್ಗೆ ಮಾಧವ್ ಕೇಳಿದರು. ಅದು 'ಕರಿಕಾನು' ಬೆಟ್ಟದ ಮೇಲಿರುವ 'ಕರಿಕಾನಮ್ಮ' ದೇವಿಯ ದೇವಸ್ಥಾನ. ಮೊದಲು ದಟ್ಟ ಕಾಡಿನ ನಡುವೆ ಈ ದೇವಸ್ಥಾನ ಇದ್ದಿದ್ದರಿಂದ, ಕರಿಕಾನಮ್ಮ ದೇವಿ ಎಂದು ಕರೆಯಲಾಗುತ್ತಿತ್ತು. ಈಗ ದುರ್ಗಾಪರಮೇಶ್ವರಿ ಎನ್ನುತ್ತಾರೆ. ನಾನು ಹಲವಾರು ಬಾರಿ ಈ ದೇವಸ್ಥಾನ ನೋಡಿದ್ದರೂ, ಮಾಧವ ಅಲ್ಲಿಗೆ ತೆರಳುವ ಇಚ್ಛೆ ವ್ಯಕ್ತಪಡಿಸಿದರು. ಬೆಟ್ಟದ ಮೇಲೆ ತಲುಪಿದಾಗ ೬.೧೫ರ ಸಮಯ. ಮುಸ್ಸಂಜೆ. ರಮಣೀಯ ದೃಶ್ಯ ಇಲ್ಲಿಂದ ಲಭ್ಯ.

ರಾತ್ರಿ ತಂಗಲು ಚಂದಾವರ ತಲುಪಿದೆವು. ಚಂದಾವರದಲ್ಲಿ ಸಂಜೆ ಕಳೆಯದೆ ೧೩ ವರ್ಷಗಳಾಗಿದ್ದವು. ಮರುದಿನ ಮುಂಜಾನೆ ೮.೩೦ಕ್ಕೆ ಚಂದಾವರದಿಂದ ಹೊರಟು ಜಲಧಾರೆ ಇರುವ ಹಳ್ಳಿ ತಲುಪಿದಾಗ ೧೦.೩೦ ಆಗಿತ್ತು. ಜಲಧಾರೆಗೆ ಹಾದಿ ಕೇಳಿ, ಕಣಿವೆಯಲ್ಲಿ ಇಳಿಯಲಾರಂಭಿಸಿದೆವು. ಸ್ವಲ್ಪ ದೂರ ತೆರಳಿದಾಗ ಸರಿಯಾದ ದಾರಿಯ ಬಗ್ಗೆ ಸಂಶಯ ಬಂದು ಮತ್ತೊಮ್ಮೆ ವಿಚಾರಿಸಿ ಬರೋಣವೆಂದು ಹಿಂದಿರುಗುವಾಗ ಸಿಕ್ಕಿದರು ಶಂಕರ ಹಾಗೂ ಈಶ್ವರ.

ಇಬ್ಬರನ್ನು ನಮ್ಮೊಂದಿಗೆ ಬರಲು ಕೇಳಿಕೊಂಡೆವು. ನಾವು ಕೆಳಗೆ ಇಳಿಯುತ್ತಿದ್ದ ದಾರಿಯೇ ಸರಿಯಾದ ದಾರಿಯಾಗಿತ್ತು. ಶಂಕರ ಹಾಗೂ ಈಶ್ವರ ಅದೇ ದಾರಿಯಲ್ಲಿ ನಮ್ಮಿಬ್ಬರನ್ನು ಕರೆದೊಯ್ದರು. ಕೆಲವು ಕಡೆ ವಾಟೆ (ಕಳಪೆ ಬಿದಿರು) ಗಿಡಗಳು ದಾರಿಗೆ ಅಡ್ಡವಾಗಿದ್ದವು. ಕತ್ತಿಯಿಂದ ದಾರಿ ಮಾಡುತ್ತಾ ಶಂಕರ ಮುನ್ನಡೆದ. ೧೫ ನಿಮಿಷದ ಇಳಿಜಾರಿನ ಹಾದಿಯಲ್ಲಿ ಜಾರಿ ಜಾರಿಕೊಂಡೇ ಕೆಳಗೆ ತಲುಪಿದೆವು. ಕಾಡಿನಲ್ಲಿ ತಾವು ಗುರುತಿಸಿಟ್ಟ ಕಾಡುತ್ಪತ್ತಿಯುಳ್ಳ ಮರಗಳನ್ನು ಬೇರೆಯವರು ಗುರುತಿಸುವ ಮೊದಲೇ ಅದರ ಉತ್ಪತ್ತಿಗಳನ್ನು ಶೇಖರಿಸುವ ಹೊಟ್ಟೆಪಾಡಿನ ಕೆಲಸವಿದ್ದುದರಿಂದ ನಮ್ಮನ್ನು ಕೆಳಗಿನವರೆಗೆ ದಾರಿ ಮಾಡಿಕೊಂಡು ತಲುಪಿಸಿ ಶಂಕರ ಮಾತು ಈಶ್ವರ ಹಿಂತಿರುಗಿದರು.

ಈ ಜಲಪಾತದಲ್ಲಿ ೪ ಹಂತಗಳಿವೆ. ಕಣಿವೆಯಲ್ಲಿ ಇಳಿದಾಗ, ಎರಡನೆ ಜಲಪಾತದ ಬುಡಕ್ಕೆ ಬಂದು ತಲುಪಿದೆವು. ಸ್ವಲ್ಪ ಮೇಲೆ ಒಂದನೆ ಹಂತ ಧುಮುಕುತ್ತಿತ್ತು. 1 ಮತ್ತು 2ನೇ ಹಂತಗಳ ಒಟ್ಟು ಎತ್ತರ ಸುಮಾರು ೧೫೦ ಅಡಿ ಇರಬಹುದು. ಮಾಧವ್, ಬಂಡೆಗಳನ್ನು ಆಧರಿಸಿ ನೇರವಾಗಿ ಹಿಮ್ಮುಖವಾಗಿ ಕೆಳಗಿಳಿದು 3ನೇ ಹಂತದ ಕೆಳಭಾಗಕ್ಕೆ ಬಂದರು. ನನಗೆ ಹಾಗೆ ಇಳಿಯಲು ಧೈರ್ಯ ಸಾಲದೆ ಬದಿಯಲ್ಲಿ ಕಾಡು, ಬಂಡೆಗಳ ನಡುವೆ ದಾರಿ ಮಾಡಿಕೊಂಡು, ಸುತ್ತು ಬಳಸಿ 3ನೇ ಹಂತದ ಕೆಳಭಾಗಕ್ಕೆ ಬಂದೆ. ಇದು ಸುಮಾರು ೩೫ ಅಡಿ ಎತ್ತರವಿದೆ. ನಂತರ ಮುಂದಿರುವ ನಾಲ್ಕನೇ ಹಂತ ಉಳಿದ 3 ಹಂತಗಳನ್ನು ಮೀರಿಸುವಷ್ಟು ಚೆನ್ನಾಗಿದೆ. ೧೦೦ ಅಡಿಯಷ್ಟು ಎತ್ತರವಿರುವ ಈ ಹಂತದ ಬುಡಕ್ಕೆ ತೆರಳಲು ಸರಿಯಾದ ದಾರಿ ಸಿಗಲಿಲ್ಲ. ಆಯಕಟ್ಟಿನ ಜಾಗವೊಂದರಲ್ಲಿ ಒಂದೆರಡು ಮರಗಳಿದ್ದಲ್ಲಿ ಹೇಗಾದರೂ ಮಾಡಿ ಇಳಿಯುತ್ತಿದ್ದೆವು. ಗಿಡ ಮರಗಳ ನಡುವೆಯಿಂದ ಈ ಹಂತದ ಚೆಲುವನ್ನು ಪಾರ್ಶ್ವದಿಂದ ನೋಡಿ ತೃಪ್ತಿಪಡಬೇಕಾಯಿತು. ಮಾಧವ್ ಆಚೀಚೆ ಓಡಾಡಿ ಬೇರಾವುದಾದರು ದಾರಿ ಇದೆಯೆ ಎಂದು ಸುಮಾರು ಹುಡುಕಾಡಿದರು. ಆದರೆ ನೋ ಯೂಸ್.

3ನೇ ಹಂತದ ಬುಡದಲ್ಲಿರುವ ವಿಶಾಲವಾದ ಬಂಡೆಯೊಂದರ ಮೇಲೆ ೧೫ ನಿಮಿಷ ವಿಶ್ರಾಂತಿ ಪಡೆದು, ಮೇಲಕ್ಕೆ ಬಂದೆವು. ಮೊದಲೆರಡು ಹಂತಗಳ ಬುಡದಲ್ಲಿ ಇನ್ನಷ್ಟು ಕಾಲ ವಿರಮಿಸಿದೆವು. ಪ್ರಶಾಂತವಾದ ಕಣಿವೆಯಲ್ಲಿ ನೀರಿನ ಭೋರ್ಗರೆತ ಬಿಟ್ಟು ಬೇರಾವ ಸದ್ದು ಇರಲಿಲ್ಲ. ನೀರವ ಮೌನದ ನಡುವೆ ನಮ್ಮಿಬ್ಬರ ಮಾತೇ ಕರ್ಕಶವೆನಿಸುತ್ತಿತ್ತು.

ಶುಕ್ರವಾರ, ಡಿಸೆಂಬರ್ 01, 2006

ಕರ್ನಾಟಕದ ಮುಕುಟಕ್ಕೆ ಪ್ರವಾಸ - ೩


ಕೋಟೆಯಿಂದ ಹೊರಬಂದು ಒಂದು ರಿಕ್ಷಾ ನಿಲ್ಲಿಸಿದೆ. 'ಅಶ್ತೂರ್-ಗೆ ಪಚಾಸ್ ರುಪ್ಯಾ ಆಗುತ್ತೆ ಸರ' ಆಂದ. ಅಲ್ಲಿಂದ ವಾಪಸ್ ಬೀದರ್ ಬರೊದಾದ್ರೆ? 'ಇನ್ನೊಂದು ಪಚಾಸ್ ರುಪ್ಯಾ ಆಗುತ್ತೆ ಸರ' ಅಂದ. ಅಶ್ತೂರ್-ನಲ್ಲಿರುವುದು ಬೀದರ್ ಆಳಿದ ಬಹಮನಿ ಸುಲ್ತಾನರ ಗೋರಿಗಳು. ಒಂಬತ್ತನೇ ಬಹಮನಿ ಸುಲ್ತಾನ ಒಂದನೇ ಶಿಯಾಬುದ್ದೀನ್ ಅಹ್ಮದ್ ಶಾ ವಾಲಿಯ ಗೋರಿಯಲ್ಲಿ ಪ್ರತಿ ವರ್ಷ ಊರುಸ್ ನಡೆಯುತ್ತದೆ. ಈತನನ್ನು ಹಿಂದುಗಳು 'ಅಲ್ಲಮ ಪ್ರಭು' ಎಂದು ಗುರುತಿಸಿ ಪೂಜಿಸುತ್ತಾರೆ. ಹನ್ನೊಂದನೇ ಬಹಮನಿ ಸುಲ್ತಾನ ಅಲ್ಲಾವುದ್ದೀನ್ ಹುಮಾಯೂನ್ ಝಾಲಿಮ್ ಶಾನ ಗೋರಿ ಮಿಂಚು ಹೊಡೆದು ಹಾನಿಗೊಳಗಾಗಿದ್ದರೂ, ತನ್ನ ಈಗಿನ ಅವತಾರದಲ್ಲಿ ಆಕರ್ಷಕವಾಗಿ ಕಾಣಿಸುತ್ತಿದೆ. ನನ್ನ ರಿಕ್ಷಾ ಚಾಲಕ ಮೊಹಮ್ಮದ್ ಸಮದ್-ನೊಂದಿಗೆ ಮಾತುಕತೆಗಿಳಿದು ನೋಡಬೇಕಾದ ಉಳಿದೆಲ್ಲಾ ಸ್ಥಳಗಳಿಗೂ ಕರೆದೊಯ್ಯುವಂತೆ ಒಪ್ಪಿಸಿದೆ.


ಅಶ್ತೂರ್ ಗೋರಿಗಳನ್ನು ನೋಡಿದ ಬಳಿಕ ಅಲ್ಲೇ ಸಮೀಪದಲ್ಲಿರುವ 'ಚೌಖಂಡಿ'ಗೆ ತೆರಳಿದೆ. ಇದು ೧೦ನೇ ಬಹಮನಿ ಸುಲ್ತಾನ ಎರಡನೇ ಅಲ್ಲಾವುದ್ದೀನ್ ಅಹ್ಮದ್ ಶಾ, ತನ್ನ ಧಾರ್ಮಿಕ ಗುರುವಾಗಿದ್ದ ಹಝ್ರತ್ ಖಲೀಲುಲ್ಲಾನಿಗೆ ಕಟ್ಟಿಸಿದ ಗೋರಿ. ಸುಲ್ತಾನರ ಗೋರಿಗಳಿಗಿಂತಲೂ ಇದು ಆಕರ್ಷಕವಾಗಿದೆ. ಗರ್ಭಗುಡಿಯಲ್ಲಿ ಖಲೀಲುಲ್ಲಾ ಮತ್ತು ಆತನ ಇಬ್ಬರು ಹೆಣ್ಣು ಮಕ್ಕಳ ಗೋರಿಯಿದ್ದರೆ, ಹೊರಗಡೆ ಆತನ ಎಲ್ಲಾ ಸಂಬಂಧಿಕರ ಗೋರಿಗಳಿವೆ. ಅಲ್ಲಿ ಒಂದು ಗೋರಿಯ ಬದಿಯಲ್ಲಿ ನಿಂತು ಇಬ್ಬರು ಹೆಂಗಸರು ಅಳುತ್ತಿದ್ದರೊ ಅಥವಾ ಪ್ರಾರ್ಥಿಸುತ್ತಿದ್ದರೊ ಎಂದು ತಿಳಿಯದೆ ಸಮದ್-ನಲ್ಲಿ ಕೇಳಿದಾಗ 'ಅವ್ರು ದುವಾ ಕೇಳಾಕ್-ಹತಾರ್ರೀ ಸರ' ಅಂದ. 'ದುವಾ ಅಲ್ಲಾಹ್-ನಲ್ಲಿ ಕೇಳಬೇಕಲ್ಲವೇ...ಈ ಗೋರಿಯ ಕೆಳಗಡೆ ಮಲಗಿದವನಲ್ಲಿ ಏನು ದುವಾ ಕೇಳೋದು' ಎಂದು ಕೇಳಿದರೆ ಸಮದ್-ನಲ್ಲಿ ಉತ್ತರವಿಲ್ಲ.

ಚೌಖಂಡಿಯ ಮೇಲೆ ತೆರಳಲು ಮೆಟ್ಟಿಲುಗಳನ್ನು ಹುಡುಕತೊಡಗಿದರೆ, ಸಿಗುತ್ತಲೇ ಇರಲಿಲ್ಲ. ಗರ್ಭಗುಡಿಗೆ ೩ ಸುತ್ತು ಹೊಡೆದರೂ ಮೆಟ್ಟಿಲುಗಳು ಸಿಗಲಿಲ್ಲ. ಹೊರಬಂದು ಚೌಖಂಡಿಗೆ ಸುತ್ತು ಹಾಕಿದರೂ ಮೆಟ್ಟಿಲುಗಳ ಪತ್ತೆ ಇಲ್ಲ. ಸಮದ್-ನನ್ನು ಕೇಳಿದರೆ 'ಪತಾ ನಹೀ ಸಾಬ್' ಎಂದು ಮೂರ್ಖ ನಗು ಕೊಟ್ಟ. ಈ ಮೆಟ್ಟಿಲುಗಳು ಮತ್ತೆ ವಿಸ್ಮಯವನ್ನುಂಟುಮಾಡಲಾರಂಭಿಸಿದವು. ಆಗ ಸಮದ್ ಅಲ್ಲೇ ಆಟವಾಡುತ್ತಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ಕೇಳಿದಾಗ, ಅವರು ಮೆಟ್ಟಿಲು ಇರುವ ಜಾಗ ತೋರಿಸಿದರು. ನಿಜಕ್ಕೂ ಅದ್ಭುತ! 'ಕತ್ತಲೆ ಇದೆ ಸರ, ಅಂಧೇರಾ, ನಾ ಬರಂಗಿಲ್ಲ ಸರ. ಅಂದರ್ ಬಾವ್ಲಿ ಅದಾವು ಸರ. ಆ ಬಾವ್ಲಿಗಳು ಕಾನ್ ಪಕಡ್ತೆ ಸಾಬ್' ಎಂದು ಮತ್ತೆ ಮೂರ್ಖನ ಹಾಗೆ ಸಮದ್ ತೊದಲಿದ. ನಾನು ಹುಂಬ ಧೈರ್ಯದಿಂದ 'ನೀ ಬರೋದಿದ್ರೆ ಬಾ' ಎಂದು ಕಡಿದಾಗಿ ಕೆತ್ತಿದ ಮೆಟ್ಟಿಲುಗಳನ್ನೇರಿದೆ. ಅದ್ಭುತವಾಗಿ ಕೆತ್ತಿದ ಮೆಟ್ಟಿಲುಗಳು. ಮೊದಲನೇ ಮಹಡಿ ತಲುಪಿ, ಹಿಂತಿರುಗಿ ನೋಡಿದರೆ, ಸಮದ್ ಎರಡೂ ಕಿವಿಗಳನ್ನು ಕೈಗಳಿಂದ ಮುಚ್ಚಿಕೊಂಡು ಬರುತ್ತಾ ಇದ್ದ! ಹಾಗೇ ಮೊದಲನೇ ಮಹಡಿಗೆ ಸುತ್ತು ಹಾಕುತ್ತಿರುವಾಗ, ತಾರಸಿಗೆ ತೆರಳುವ ಮೆಟ್ಟಿಲುಗಳು ಕಾಣಿಸಿದವು. ಕೆಳಗಿಳಿಯುವಾಗ ಮೆಟ್ಟಿಲುಗಳು ಸಿಗದೆ ಉಂಟಾದ ಗಾಬರಿ ನಂತರ, ಸಿಕ್ಕ ಮೇಲೆ ಇಳಿದು ಏರಿ ಮತ್ತೆ ಇಳಿದು ಉಂಟಾದ 'ಕನ್-ಫ್ಯೂಶನ್' ಹೇಳಿ ಪ್ರಯೋಜನವಿಲ್ಲ, ಅನುಭವಿಸಬೇಕು.


ನಂತರ ತೆರಳಿದ್ದು ನರಸಿಂಹ ಝರಣಿಗೆ. ಇದೊಂದು ಗುಹಾ ದೇವಸ್ಥಾನ. ನರಸಿಂಹ ದೇವರನ್ನು ಗುಹೆಯ ಒಳಗೆ ಗೋಡೆಯಲ್ಲಿ ಕೆತ್ತಲಾಗಿದೆ. ಆದರೆ ನರಸಿಂಹ ದೇವರ ದರ್ಶನ ಪಡೆಯಲು ೯೧ ಮೀಟರ್, ಪ್ರಾರಂಭದಲ್ಲಿ ಎದೆ ಮಟ್ಟಕ್ಕೆ ನಂತರ ಸೊಂಟ ಮಟ್ಟಕ್ಕಿರುವ ನೀರಿನಲ್ಲಿ ತೆರಳಬೇಕು. ಇದೊಂದು ಭೂಮಿಯ ಕೆಳಗಿರುವ ಕರ್ನಾಟಕದ ಏಕೈಕ (ಸಾಕ್ಷಿ ಆಧಾರಗಳಿಲ್ಲ) ತೊರೆ. ರವಿವಾರವಾದ್ದರಿಂದ ಭಕ್ತರ ಮಹಾಪೂರವೇ ಅಲ್ಲಿತ್ತು.


ನನಗೂ ಗುಹೆ ಒಳಗೆ ತೆರಳುವ ಆಸೆಯಿತ್ತು. ಆದರೆ, ದೇವರ ದರ್ಶನ ಪಡೆದು ಹೊರಬಂದವರನ್ನು ನೋಡಿ ಆ ಆಸೆಯನ್ನು ಕೈಬಿಟ್ಟೆ. ಹೆಂಗಸರು, ಗಂಡಸರು ಮತ್ತು ಮಕ್ಕಳು ಎಲ್ಲರೂ ತಲೆಯಿಂದ ಕಾಲಿನವರೆಗೆ ಪೂರ್ತಿಯಾಗೆ ಒದ್ದೆಯಾಗಿ ಗುಹೆಯಿಂದ ಹೊರಬರುತ್ತಿದ್ದರು. ಇನ್ನೂ ಸುಮಾರು ಸ್ಥಳಗಳನ್ನು ನೋಡುವುದು ಬಾಕಿ ಇದ್ದಿದ್ದರಿಂದ, ಮೈ ತೋಯಿಸಿಕೊಂಡು ದೇವರ ದರ್ಶನ ಮಾಡುವ ಮನಸ್ಸಾಗದೆ, ಗುಹೆಯ ದ್ವಾರದಿಂದಲೇ ನರಸಿಂಹ ದೇವರಿಗೆ ನಮಸ್ಕರಿಸಿ ಸಮದ್-ನ ರಿಕ್ಷಾಗೆ ಹಿಂತಿರುಗಿದೆ.


ನಂತರದ ಸರದಿ ಗುರು ನಾನಕ್ ಝೀರಾದ್ದು. ಸಿಖ್ ಗುರು, ಗುರು ನಾನಕ್-ರ ಬೀದರ್ ಭೇಟಿಯ ಸ್ಮಾರಕವಾಗಿ ಸ್ಥಾಪಿಸಲಾದ ಸಣ್ಣ ಗುರುದ್ವಾರ, ಇಂದು ಭವ್ಯವಾದ ಬಿಳಿ ಬಣ್ಣದ ಸುಂದರ ಗುರುದ್ವಾರವಾಗಿದೆ. ಶೂ ತೆಗೆದರೆ ಸಾಲದು ಸಾಕ್ಸ್ ಕೂಡಾ ತೆಗೆದು, ತಲೆಗೆ ರುಮಾಲೊಂದನ್ನು ಸುತ್ತಿ, ಮೆಟ್ಟಿಲುಗಳ ಮೊದಲೇ ಇದ್ದ ನೀರಿನಲ್ಲಿ ಕಾಲು ತೊಳೆದುಕೊಂಡೇ ನಾನು ಒಳಹೊಕ್ಕಬೇಕೆಂದು ಅಲ್ಲಿದ್ದವನೊಬ್ಬ ಒತ್ತಾ(ಸತಾ)ಯಿಸುತ್ತಿದ್ದ. ಪ್ರಥಮ ಬಾರಿಗೆ ಗುರುದ್ವಾರವೊಂದನ್ನು ಸಮೀಪದಿಂದ ನೋಡಿದೆ, ಒಳ ಹೊಕ್ಕಿದೆ. ನೀಡಿದ ಪ್ರಸಾದ ಮಾತ್ರ ಬಹಳ ರುಚಿಯಾಗಿತ್ತು. ನಾಚಿಕೆ ಬಿಟ್ಟು ಪ್ರಸಾದವನ್ನು ಮತ್ತೊಮ್ಮೆ ಕೇಳಿದೆ. ನಗುತ್ತಲೇ ಆತ ನೀಡಿದ. ಮತ್ತೆ ಕೇಳಬೇಕೆಂದು ಅನಿಸಿದರೂ, ಅಷ್ಟೂ ನಾಚಿಕೆ ಬಿಟ್ಟವನಾಗುವುದು ಬೇಡವೆಂದು ಸುಮ್ಮನುಳಿದೆ. ಯಾವಾಗಲೂ ಪ್ರಸಾದ ಹೀಗೆ ಮಾಡುತ್ತೀರಾ ಎಂದು ಕೇಳಿದಾಗ ಆತ ಹೌದೆಂದ. ಈ ಗುರುದ್ವಾರಕ್ಕೆ ಏನಿಲ್ಲವೆಂದರೂ ಪ್ರಸಾದ ತಿನ್ನುವುದಕ್ಕಾದರೂ ಹೋಗಲೇಬೇಕು.


ಗುರುದ್ವಾರದಿಂದ ಸಮದ್ ತೆರಳಿದ್ದು ಬಾರಿದ್ ಪಾರ್ಕಿಗೆ. ಆದರೆ ಪಾರ್ಕ್ ತೆರೆಯುವುದೇ ಸಂಜೆ ೫ ಗಂಟೆಗಾದ್ದರಿಂದ ಮತ್ತು ಸಮಯವಿನ್ನೂ ೪.೪೫ ಆಗಿದ್ದರಿಂದ, ಸಮದ್, ರಿಕ್ಷಾವನ್ನು ಪಾಪನಾಶ ಶಿವ ದೇವಸ್ಥಾನದತ್ತ ಓಡಿಸಿದ. ಬೀದರ್ ನಗರದ ಮಧ್ಯದಲ್ಲೇ ಒಂದು ಪ್ರಶಾಂತ ಕಣಿವೆಯಲ್ಲಿ ಪಾಪನಾಶ ಶಿವ ದೇವಸ್ಥಾನವಿದೆ. ಈ ದೇವಸ್ಥಾನದ ವೈಶಿಷ್ಟ್ಯವೆಂದರೆ, ಭಕ್ತರು ಗರ್ಭಗುಡಿಯ ಒಳಗೆ ಹೋಗಿ ಶಿವಲಿಂಗವನ್ನು ಮುಟ್ಟಿ ನಮಸ್ಕರಿಸಬಹುದು. ಶ್ರೀ ರಾಮನು ಲಂಕಾದಿಂದ ಹಿಂತಿರುಗುವಾಗ ಈ ಶಿವಲಿಂಗವನ್ನು ಪ್ರತಿಷ್ಠಾಪಿಸಿದನು ಎಂಬುದು ಪ್ರತೀತಿ. ಸರ್ಪಕಾವಲಿನ ಈ ಶಿವಲಿಂಗ ಬಹಳ ಸುಂದರವಾಗಿದೆ. ಬೀದರ್ ನಗರದಲ್ಲಿ ಇಂತಹ ಸುಂದರ ಸ್ಥಳ ಇರಬಹುದು ಎಂದು ಕಲ್ಪಿಸಿರಲಿಲ್ಲ.


ಮತ್ತೆ ಬಾರಿದ್ ಪಾರ್ಕಿಗೆ ಹಿಂತಿರುಗಿದೆ. ಈ ಸ್ಥಳವನ್ನು ಬೀದರ್ ನಗರಪಾಲಿಕೆ, ಒಂದು ಸುಂದರ ಉದ್ಯಾನವನವನ್ನಾಗಿ ಮಾರ್ಪಡಿಸಿ ಸಾರ್ವಜನಿಕರ ಭೇಟಿಗೆ ಅವಕಾಶ ನೀಡಿದೆ. ನನಗೆ ಎರಡನೇ ಕಾಸಿಮ್ ಬಾರಿದ್ ಶಾ ಹಾಗೂ ಅಲಿ ಬಾರಿದ್ ಶಾ ಇವರುಗಳ ಗೋರಿಗಳನ್ನು ನೋಡಬೇಕಿತ್ತು. ಇವೆರಡು ಬಾರಿದ್ ಪಾರ್ಕಿನಲ್ಲಿರಬಹುದೆಂದು ಒಳ ಹೊಕ್ಕರೆ ಅಲ್ಲಿ ಎರಡನೇ ಕಾಸಿಮ್ ಬಾರಿದ್-ನ್ ಮಡದಿ ಚಾಂದ್ ಬೀಬಿ ಹಾಗೂ ಸಂಸಾರದ ಇತರ ಸದಸ್ಯರ ಗೋರಿಗಳು ಮಾತ್ರ ಇದ್ದವು. ನಿರಾಸೆಯಿಂದ ಪಾರ್ಕಿನಿಂದ ಹೊರಬಂದಾಗ ದೂರದಲ್ಲಿ ಒಂದು ವಿಶಾಲವಾದ ತೋಪಿನ ಮತ್ತೊಂದು ತುದಿಯಲ್ಲಿ ಎರಡು ದೊಡ್ಡ ಗೋರಿಗಳು ಕಂಡವು. ಸಮದ್-ನಿಗೆ ಅಲ್ಲಿ ಒಯ್ಯಲು ಹೇಳಿದೆ. ಇಲ್ಲಿದ್ದವು ನಾನು ನೋಡಬೇಕೆಂದ ಎರಡು ಗೋರಿಗಳು. ಅದ್ಭುತವಾಗಿ ರಚಿಸಲಾಗಿರುವ ಈ ಎರಡು ಬಾರಿದ್ ಶಾಹಿ ವಂಶದ ಸುಲ್ತಾನರ ಗೋರಿಗಳು, ಬಹಮನಿ ಸುಲ್ತಾನರ ಗೋರಿಗಳನ್ನು ಮೀರಿಸಿ ನಿಂತಿವೆ. ಸಮೀಪದಲ್ಲೇ ಇತ್ತು ಸ್ಮಶಾನದ ಮಸೀದಿ.


ಮರಳಿ ವಸತಿಗೃಹಕ್ಕೆ ಬಂದಾಗ ಸಂಜೆ ೬.೩೦. ಮಧ್ಯಾಹ್ನ ೧.೩೦ರಿಂದ ಸಂಜೆ ೬.೩೦ರ ವರೆಗೆ ನನ್ನೊಂದಿಗಿದ್ದು ಸುಮಾರು ೪೦ ಕಿ.ಮಿ.ಗಳಷ್ಟು ದೂರ ರಿಕ್ಷಾ ಓಡಿಸಿದ ಸಮದ್ ಕೇಳಿದ್ದು ಕೇವಲ ೩೫೦ ರೂಪಾಯಿ.

೭.೦೦ ಗಂಟೆಗೆ ಬೀದರ್-ನಿಂದ ಬಸವಕಲ್ಯಾಣ ಬಸ್ಸಿನಲ್ಲಿ ಹೊರಟು ಹುಮ್ನಾಬಾದ್ ಮೂಲಕ ರಾತ್ರಿ ೯.೧೫ಕ್ಕೆ ಬಸವಕಲ್ಯಾಣ ತಲುಪಿ ಮತ್ತೊಂದು ವಸತಿಗೃಹಕ್ಕೆ ಹೊಕ್ಕು, ಜವಾರಿ ರೊಟ್ಟಿ, ಶೇಂಗಾ ಚಟ್ನಿ, ಮೊಸರು, ಬೆಂಡೆಕಾಯಿ ಪಲ್ಯಗಳ ಭರ್ಜರಿ ಊಟ ಮಾಡಿ ಪ್ರಯಾಣದ ಎರಡನೇ ದಿನ ಮುಗಿಸಿದಾಗಲೇ ನೆನಪು, ಮಧ್ಯಾಹ್ನ ಊಟಾನೇ ಮಾಡಲಿಲ್ಲ ಎಂದು.

ಮುಂದುವರಿಯುವುದು... ೪ನೇ ಭಾಗದಲ್ಲಿ.

ಒಂದನೇ ಭಾಗ ಇಲ್ಲಿದೆ. ಎರಡನೇ ಭಾಗ ಇಲ್ಲಿದೆ.