ಸೋಮವಾರ, ಅಕ್ಟೋಬರ್ 02, 2006

ಹೊಸ ಗೆಳೆಯರೊಂದಿಗೆ ಜಲಪಾತಗಳಿಗೆ ಪ್ರಯಾಣ


ಧಾರವಾಡದ ಗಂಗಾಧರ್ ಕಲ್ಲೂರ್ ದಾಂಡೇಲಿ, ಆಣಶಿ, ಲೋಂಡಾ, ಖಾನಾಪುರ, ಕರ್ನಾಟಕ-ಗೋವಾ ಗಡಿ ಪ್ರದೇಶಗಳಲ್ಲಿ ಚಾರಣ ಕೈಗೊಳ್ಳುವುದರಲ್ಲಿ ಪ್ರಸಿದ್ಧರು. ನನಗೆ ಜಲಪಾತಗಳಲ್ಲಿ ಇರುವ ಆಸಕ್ತಿಯನ್ನು ಗಮನಿಸಿದ ಕಲ್ಲೂರ್, ತನ್ನ ಗೆಳೆಯ ವಿವೇಕ್ ಯೇರಿ ಇವರಿಗೆ ನನ್ನ ಪರಿಚಯ ಮಾಡಿಸಿದರು. ವಿವೇಕ್, ಉತ್ತರಕನ್ನಡ ಜಿಲ್ಲೆಯಲ್ಲಿರುವ ಜಲಪಾತಗಳನ್ನೆಲ್ಲಾ ಬಲ್ಲವರು ಮತ್ತು ಹೆಚ್ಚಿನ ಜಲಪಾತಗಳಿಗೆ ಚಾರಣ ಮಾಡಿರುವರು. ಸುಮಾರು ೨ ತಿಂಗಳುಗಳ ಕಾಲ ದೂರವಾಣಿಯಲ್ಲೇ ಮಾತು, ಜಲಪಾತಗಳ ವಿವರ, ಅಂಚೆ ಮೂಲಕ ಜಲಪಾತಗಳ ಲಿಸ್ಟ್ ಎಕ್ಸ್-ಚೇಂಜ್ ಇತ್ಯಾದಿ ನಡೆಯಿತು. ಮಳೆ ಸ್ವಲ್ಪ ಕಡಿಮೆ ಆದ ಕೂಡಲೇ ಕೂಡಿ ಒಂದು ಪ್ರಯಾಣ ಮಾಡೋಣ ಎಂದಿದ್ದ ವಿವೇಕ್, ಸೆಪ್ಟೆಂಬೆರ್ ೨ಕ್ಕೆ ದೂರವಾಣಿ ಕರೆ ಮಾಡಿ ೧೦ಕ್ಕೆ ಒಂದೆರಡು ಜಲಪಾತಗಳನ್ನು ಹುಡುಕಿಕೊಂಡು ಹೋಗುವ ಎಂದು ತಿಳಿಸಿದರು.

ಮೊದಲೇ ನಿರ್ಧರಿಸಿದಂತೆ ೧೦ನೇ ತಾರೀಕು ಮುಂಜಾನೆ ೭.೦೦ಕ್ಕೆ ಯಲ್ಲಾಪುರದ ಸಂಭ್ರಮ್ ಹೋಟೆಲಿನಲ್ಲಿ ಭೇಟಿಯಾದೆವು. ವಿವೇಕ್-ರೊಂದಿಗೆ ಡಾಕ್ಟರ್ ಗುತ್ತಲ್ ಮತ್ತು ಅಶೋಕ್ ಮನ್ಸೂರ್ ಇದ್ದರು. ಕಲ್ಲೂರ್ ಒಂದು ತಿಂಗಳ ಪ್ರಯಾಣಕ್ಕೆ ನೇಪಾಲಕ್ಕೆ ತೆರಳಿದ್ದರಿಂದ ಬಂದಿರಲಿಲ್ಲ. ಈ ನಾಲ್ಕು ಜನರದ್ದು ಒಂದು 'ಕೋರ್ ಟೀಮ್'. ಜತೆಯಾಗಿ ಹೊಸ ಚಾರಣಗೈಯುವ ಸ್ಥಳಗಳನ್ನು ಕಂಡುಹಿಡಿಯುವುದು ಇವರ ಹವ್ಯಾಸ. ಗುತ್ತಲ್-ರ ಯುನೊ ಕಾರಿನಲ್ಲಿ ಪ್ರಯಾಣ. ನನ್ನ ಹಾಗೂ ಅವರ ಆಸಕ್ತಿ 'ಚಾರಣ, ಪರಿಸರ, ಪ್ರಕೃತಿ' ಇಲ್ಲಿ ಮ್ಯಾಚ್ ಆಗುತ್ತಿದ್ದರಿಂದ ಮಾತುಕತೆ, ವಿಚಾರಗಳ ವಿನಿಮಯ, ಅಲ್ಲಿನ ಹಾಗೂ ಕರಾವಳಿ ಜಿಲ್ಲೆಗಳ ಕಾಡು ಬೆಟ್ಟಗಳ ಹೋಲಿಕೆ, ನಡೆಯುತ್ತಾ ಇತ್ತು.


ಅಂಗಡಿಯೊಂದರಲ್ಲಿ ವಿಚಾರಿಸಿದಾಗ ಯಾವುದೇ ಜಲಪಾತದ ಇರುವಿಕೆಯ ಬಗ್ಗೆ ತಿಳಿಯದು ಎಂದು ಅಲ್ಲಿದ್ದ ಊರಿನ ಕೆಲವರು ಅಭಿಪ್ರಾಯಪಟ್ಟರು. ನಂತರ ಅನಂತ ವೈದ್ಯರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದಾಗ ಅಲ್ಲೊಂದು ಸಣ್ಣ ಜಲಪಾತವಿರುವುದಾಗಿ ವೈದ್ಯರು ತಿಳಿಸಿದರು. ನಂತರ ನಾವು ತೆರಳಿದ್ದು ನೇರವಾಗಿ ವೈದ್ಯರ ಮನೆಗೆ. ೧೯೬೪ರಲ್ಲಿ ಕಟ್ಟಿದ ಭರ್ಜರಿ ಮನೆಯದು. ಮನೆಯೊಳಗಿನ ಮರದಿಂದ ಮಾಡಿದ ಬಾಗಿಲು ಹಾಗೂ ಕಿಟಕಿಗಳ ಮೇಲಿನ ಕೆತ್ತನೆ ಕೆಲಸ ಮೆಚ್ಚಬೇಕಾದ್ದು. ಮನೆ ಕಟ್ಟಿದ ಇಂಜಿನಿಯರ್, ಮೇಸ್ತ್ರಿ ಹಾಗೂ ಮ್ಯಾನೇಜರ್-ಗಳ ಹೆಸರುಗಳನ್ನು ಪ್ರಧಾನ ಬಾಗಿಲಿನ ಮೇಲ್ಗಡೆ ಕೆತ್ತಲಾಗಿತ್ತು. ನಾವೆಲ್ಲೂ ಕಂಡಿರದಂತಹ ವಿಶೇಷವದು. ಆಸರೆ (ಚಹಾ, ತಿಂಡಿ, ನೀರು) ಸ್ವೀಕರಿಸಿದ ಬಳಿಕ ಮನೆಯ ಹುಡುಗರಿಬ್ಬರು ನಮ್ಮೊಂದಿಗೆ ಮಾರ್ಗದರ್ಶಕರಾಗಿ ಬಂದರು.


ಸ್ವಲ್ಪ ದೂರದವರೆಗೆ ವಾಹನ ತೆರಳುವುದು. ಇಲ್ಲಿಂದ ಕೇವಲ ಅರ್ಧ ಗಂಟೆಯ ನಡಿಗೆ. ನಡುವೆ ಸಿಗುವ ಗ್ರಾಮಸ್ಥರು ನಿರ್ಮಿಸಿರುವ ಕಾಲುಸೇತುವೆ ವಿಶಿಷ್ಟವಾಗಿತ್ತು. ಮೊರು ಹಂತಗಳಿರುವ ಉದ್ದನೆಯ ಸೇತುವೆ ಇದು. ಮಧ್ಯದಲ್ಲಿರುವ ಎರಡು ಮರಗಳನ್ನು ಬಳಸಿ ಉಪಾಯವಾಗಿ ರಚಿಸಲಾದ ಈ ಕಾಲು ಸೇತುವೆ ನನಗೆ ಬಹಳ ಇಷ್ಟವಾಯಿತು.


ನಂತರ ಸಣ್ಣ ಕಾಲುವೆಯೊಂದನ್ನು ಹಿಂಬಾಲಿಸಿ ಸ್ವಲ್ಪ ಹೊತ್ತು ನಡೆದಾಗ ಸೂಸಬ್ಬಿ ಜಲಪಾತ ಪ್ರತ್ಯಕ್ಷ. ಬಿಳಿಹೊಳೆ ಸುಮಾರು ೩೦ ಅಡಿಗಳಷ್ಟು ಎತ್ತರದಿಂದ ೩ ಹಂತಗಳಲ್ಲಿ ವೈಯ್ಯಾರವಾಗಿ ಧುಮುಕುತ್ತಿತ್ತು. ನದಿಯಲ್ಲಿ ಸೆಳೆತ ಇದ್ದಿದ್ದರಿಂದ ನಾವ್ಯಾರೂ ನೀರಿಗಿಳಿಯಲಿಲ್ಲ. ನದಿ ತಿರುವೊಂದನ್ನು ಪಡಕೊಂಡ ಕೂಡಲೇ ಧುಮುಕುವುದರಿಂದ ಸ್ವಲ್ಪ ಹೆಚ್ಚಿನ ಆಕರ್ಷಣೆ ಈ ಜಲಧಾರೆಗೆ.

ಕಾಮೆಂಟ್‌ಗಳಿಲ್ಲ: